Home ವಿಶೇಷ ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆ ಮಂಗಳೂರು ಪುರ ಪ್ರವೇಶ: ಅದ್ದೂರಿ ಸ್ವಾಗತಕ್ಕೆ ಸಿದ್ಧತೆ

ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆ ಮಂಗಳೂರು ಪುರ ಪ್ರವೇಶ: ಅದ್ದೂರಿ ಸ್ವಾಗತಕ್ಕೆ ಸಿದ್ಧತೆ

0

ಮಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಂಗಳೂರು ಮಹಾನಗರ ಪಾಲಿಕೆ, ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಉಸ್ತುವಾರಿ ಸಮಿತಿ ಇವುಗಳ ಆಶ್ರಯದಲ್ಲಿ ಮಂಗಳೂರಿನ ಬಾವುಟ ಗುಡ್ಡೆಯಲ್ಲಿ ಸ್ಥಾಪನೆ ಗೊಳ್ಳಲಿರುವ ಸ್ವಾತಂತ್ರ್ಯ ಸೇನಾನಿ ರಾಮಯ್ಯ ಗೌಡರ ಕಂಚಿನ ಪ್ರತಿಮೆ ಆಗಸ್ಟ್‌ ೨೯ ರಂದು ವಾಹನ ಜಾಥಾದ ಮೂಲಕ ಮಂಗಳೂರು ನಗರವನ್ನು ಪ್ರವೇಶಿಸಲಿದೆ. ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಉಸ್ತುವಾರಿ ಸಮಿತಿಯು ಸರಕಾರಕ್ಕೆ ಮನವಿ ಮಾಡಿಕೊಂಡ ಮೇರೆಗೆ ಇದೀಗ ಸರಕಾರದಿಂದ ಅನುಮೋದನೆ ದೊರೆತಿದೆ. ಅಕ್ಟೋಬರ್‌ನಲ್ಲಿ ಪ್ರತಿಮೆ ಪ್ರತಿಷ್ಠಾಪನೆಗೊಳ್ಳಲಿದೆ.

ಪ್ರತಿಮೆಯನ್ನು ಆಂಧ್ರಪ್ರದೇಶದ ವಿಜಯವಾಡದಲ್ಲಿ ನಿರ್ಮಾಣಮಾಡಲಾಗಿದ್ದು ಅದು ೧೧ ಅಡಿ ಎತ್ತರವಿದೆ. ಬಂಗಾರದ ಬಣ್ಣದಿಂದ ಹೊಳೆಯುವ ಅದನ್ನು ಮಂಗಳೂರು ನಗರದ ಬಾವುಟ ಗುಡ್ಡೆಯ ಟಾಗೋರ್‌ಪಾರ್ಕ್‌ನಲ್ಲಿ ಸುಮಾರು ೨೨ ಅಡಿ ಎತ್ತರದಲ್ಲಿ ಪ್ರತಿಷ್ಠಾಪಿಸಲು ಸಕಲ ಸಿದ್ಧತೆಗಳು ನಡೆಯುತ್ತಿವೆ.ಇದಕ್ಕಾಗಿ ಮಂಗಳೂರು ಮಹಾನಗರ ಪಾಲಿಕೆಯ ಪ್ರೇಮಾನಂದ ಶೆಟ್ಟಿ ಸಂಸದ ನಳಿನ್‌ ಕುಮಾರ್‌ ಕಟೀಲ್‌, ಶಾಸಕರಾದ ವೇದವ್ಯಾಸ ಕಾಮತ್‌ ಹಾಗೂ ರಾಮಯ್ಯ ಗೌಡ ಸ್ಮಾರಕ ರಚನೆಯ ಉಸ್ತುವಾರಿ ಸಮಿತಿಯ ಅಧ್ಯಕ್ಷರಾದ ಕಿರಣ್‌ ಬುಡ್ಲೆಗುತ್ತು ಹಾಗೂ ಪದಾಧಿಕಾರಿಗಳು ಶ್ರಮಿಸುತ್ತಿದ್ದಾರೆ.

ಜಾಥಾ ಹಾದಿ
ಆಗಸ್ಟ್‌ ೨೭, ೨೦೨೨ ರಂದು ಮಂಡ್ಯದ ಆದಿಚುಂಚನ ಗಿರಿ ಕ್ಷೇತ್ರಕ್ಕೆ ತಲಪುವ ಪ್ರತಿಮೆ ಅಲ್ಲಿಂದ ೨೮ರಂದು ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿಗಳಿಂದ ಚಾಲನೆ ಪಡೆದು ಸಂಜೆ ಮಡಿಕೇರಿ ತಲಪಲಿದೆ. ೨೯ರಂದು ಸಂಪಾಜೆ, ಸುಳ್ಯ ಪೈಚಾರು, ಜಾಲ್ಸೂರು, ಕನಕಮಜಲು ಮಾರ್ಗದ ಮೂಲಕ ಪುತ್ತೂರು ತಲುಪಲಿದೆ. ಬಳಿಕ ಮುಂದೆ ಸಾಗಿ ಮಾಣಿ, ಬಿಸಿ ರೋಡ್‌, ಫರಂಗಿ ಪೇಟೆ ಮೂಲಕ ಹಾದು ಸಂಜೆ ಆರು ಗಂಟೆಗೆ ಮಂಗಳೂರಿನ ಬಾವುಟಗುಡ್ಡೆಗೆ ತಲಪಲಿದೆ. ಹಾದಿಯುದ್ದಕ್ಕೂ ಬೃಹತ್‌ವಾಹನ ಜಾಥಾ ನಡೆಯಲ್ಲಿದ್ದು ಜನರು ವಿಶೇಷವಾಗಿ ಸ್ವಾಗತ ಕೋರಲಿದ್ದಾರೆ.

ಭರದ ಸಿದ್ಧತೆ
ಪ್ರತಿಮೆಯನ್ನು ಅದ್ದೂರಿಯಾಗಿ ಸ್ವಾಗತಿಸಲು ಭರದ ಸಿದ್ಧತೆಗಳು ನಡೆಯುತ್ತಿವೆ. ವಾಹನ ಜಾಥಾ ಹಾದು ಬರುವ ಹಾದಿಯೆಲ್ಲಡೆ ಸ್ವಾಗತ ಕೋರುವ ಫ್ಲೆಕ್ಸ್‌ಗಳು, ಬೃಹತ್‌ ಗಾತ್ರದ ಹೋರ್ಡಿಂಗ್ ಗಳು ರಾರಾಜಿಸ ತೊಡಗಿವೆ. ಸಮುದಾಯದ ಪ್ರಧಾನ ಕೃಷಿಯಾಗಿರುವ ಅಡಿಕೆ ಮತ್ತು ಎಳನೀರಿನಿಂದ ಕೆಲವೆಡೆ ಅಲಂಕಾರ ಮಾಡಲು ಕೆಲಸಗಳು ನಡೆಯುತ್ತಿದೆ. ಸ್ಥಳೀಯ ಮಾಧ್ಯಮಗಳು ಕಾರ್ಯಕ್ರಮದ ನೇರ ಪ್ರಸಾರಕ್ಕೆ ಅಣಿಯಾಗಿವೆ. ಕಾರ್ಯಕ್ರಮದ ಸುಗಮ ಚಾಲನೆಗಾಗಿ ಸಮಾಜದ ಯುವ ಮುಖಂಡರು ಸ್ವಯಂಸೇವಕರ ದೊಡ್ಡ ಪಡೆಯನ್ನು ಕಟ್ಟಿದ್ದಾರೆ. ಸುಳ್ಯದ ಖಾಸಗಿ ಬಸ್‌ ನಿಲ್ದಾಣದಲ್ಲಿ ನೆಹರೂ ಸ್ಮಾರಕ ವಿದ್ಯಾಲಯದ ವಿದ್ಯಾರ್ಥಿಗಳಿಂದ ʼಅಮರ ಸುಳ್ಯ ಸ್ವಾತಂತ್ರ್ಯ ಹೋರಾಟʼದ ಕಿರು ನಾಟಕ ಪ್ರದರ್ಶನಕ್ಕೆ ತಾಲೀಮು ನಡೆಯುತ್ತಿದೆ.

ರು. ೪೦ ಲಕ್ಷ ವೆಚ್ಚದ ಪ್ರತಿಮೆ

ಮಹಾನಗರ ಪಾಲಿಕೆಯಿಂದ ರು ೩೦ ಲಕ್ಷ ಮತ್ತು ಕನ್ನಡ ಸಂಸ್ಕೃತಿ ಇಲಾಖೆಯಿಂದ ರು ೧೦ ಲಕ್ಷ ಸೇರಿದಂತೆ ಒಟ್ಟು ೪೦ ಲಕ್ಷ ವೆಚ್ಚದಲ್ಲಿ ಪ್ರತಿಮೆಯನ್ನು ನಿರ್ಮಿಸಲಾಗಿದೆ. ಪ್ರತಿಮೆಯನ್ನು ಆಂಧ್ರಪ್ರದೇಶದ ವಿಜಯವಾಡದಲ್ಲಿ ನಿರ್ಮಾಣಮಾಡಲಾಗಿದ್ದು ಅದು ೧೧ ಅಡಿ ಎತ್ತರವಿದೆ. ಬಂಗಾರದ ಬಣ್ಣದಿಂದ ಹೊಳೆಯುವ ಅದನ್ನು ಮಂಗಳೂರು ನಗರದ ಬಾವುಟ ಗುಡ್ಡೆಯ ಟಾಗೋರ್‌ಪಾರ್ಕ್‌ನಲ್ಲಿ ಸುಮಾರು ೨೨ ಅಡಿ ಎತ್ತರದಲ್ಲಿ ಪ್ರತಿಷ್ಠಾಪಿಸಲು ಸಕಲ ಸಿದ್ಧತೆಗಳು ನಡೆಯುತ್ತಿವೆ. ಪ್ರತಿಮೆ ಸ್ಥಾಪನೆಯಲ್ಲಿ ಸರಕಾರವೇ ಆಸಕ್ತಿ ವಹಿಸಿದ್ದು ಸಂಸದ ನಳಿನ್‌ ಕುಮಾರ್‌ ಕಟೀಲ್‌, ಶಾಸಕರಾದ ವೇದವ್ಯಾಸ ಕಾಮತ್‌, ಮಂಗಳೂರು ಮಹಾನಗರ ಪಾಲಿಕೆಯ ಪ್ರೇಮಾನಂದ ಶೆಟ್ಟಿ ಸೇರಿದಂತೆ ರಾಮಯ್ಯ ಗೌಡ ಸ್ಮಾರಕ ರಚನೆಯ ಉಸ್ತುವಾರಿ ಸಮಿತಿಯ ಅಧ್ಯಕ್ಷರಾದ ಕಿರಣ್‌ ಬುಡ್ಲೆಗುತ್ತು ಹಾಗೂ ಪದಾಧಿಕಾರಿಗಳು ಶ್ರಮಿಸುತ್ತಿದ್ದಾರೆ.

ಈ ಕಾರ್ಯಕ್ರಮದ ಔಚಿತ್ಯದ ಬಗ್ಗೆ ಸಮುದಾಯದ ಕೆ ಆರ್‌ ತೇಜ್‌ಕುಮಾರ್‌ ಮತ್ತು ಎ.ಕೆ ಹಿಮಕರ ಅವರನ್ನು ಪೀಪಲ್‌ ಮೀಡಿಯಾವು ಮಾತಾಡಿಸಿದಾಗ ʼಇತಿಹಾಸದ ಪುಟಗಳಲ್ಲಿ ಹೆಚ್ಚೇನೂ ಬೆಳಕು ಚೆಲ್ಲದ ಸುಳ್ಯದ ಮಹಾನ್‌ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರಿಗೆ ತಡವಾಗಿಯಾದರೂ ಐತಿಹಾಸಿಕ ಮಹತ್ವದ ಮನ್ನಣೆ ದೊರೆಯುತ್ತಿರುವುದು ಸಂತಸ ತಂದಿದೆʼ ಎಂದರು.

ʼ1837 ರಲ್ಲಿ ಬ್ರಿಟಿಷರ ವಿರುದ್ಧ ನಡೆದ ಅಮರ ಸುಳ್ಯ ಸಶಸ್ತ್ರ ಹೋರಾಟ ಪ್ರಥಮ ಸ್ವಾತಂತ್ರ್ಯ ಹೋರಾಟಕ್ಕಿಂತ ಇಪ್ಪತ್ತು ವರ್ಷ ಮೊದಲೇ ನಡೆದುದಾದರೂ ಇತಿಹಾಸದ ಕರಿನೆರಳಿನೆಡೆ ಅದು ಹುದುಗಿ ಹೋಗಿತ್ತು. ಬ್ರಿಟಿಷರಂತೂ ಅದೊಂದು ದರೋಡೆಯೆಂದು ಬಿಂಬಿಸಲು ಪ್ರಯತ್ನಿಸಿದ್ದರು. ಅಂತಹ ಕಾಲಘಟ್ಟದಲ್ಲಿ ಸಮಾನ ಮನಸ್ಕರೊಡನೆ ಮುಂಚೂಣಿಯಲ್ಲಿ ಕಾಣಿಸಿಕೊಂಡವರು ಕೆದಂಬಾಡಿ ರಾಮಯ್ಯಗೌಡರು. ತನ್ನ ಮಗನ ಮದುವೆಯೆಂಬ ನೆಪದಲ್ಲಿ ಸ್ವಸಾಮರ್ಥ್ಯದಿಂದ ಸುಳ್ಯದ ಉಬರಡ್ಕ ಗ್ರಾಮದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಜನರನ್ನು ಸೇರಿಸಿ ಪ್ರಾರಂಭಿಸಿದ ಹೋರಾಟ ಒಂದು ರೋಚಕ ಇತಿಹಾಸ. ಸುಳ್ಯದಿಂದ ಪ್ರಾರಂಭಗೊಂಡ ಈ ಹೋರಾಟದಲ್ಲಿ ಶನಿವಾರ ಸಂತೆಯ ಹೆಮ್ಮನಿಯ ಪುಟ್ಟ ಬಸಪ್ಪ ಎಂಬಾತನನ್ನು ಕೊಡಗಿನ ರಾಜ ವಂಶಸ್ಥನೆಂದು ಬಿಂಬಿಸಿ ಕಲ್ಯಾಣಸ್ವಾಮಿ ಎಂಬ ಹೆಸರಿತ್ತು ಆರಂಭಿಸಿದ ಯುದ್ದತಂತ್ರದ ರೂವಾರಿಯೇ ಕೆದಂಬಾಡಿ ರಾಮಯ್ಯ ಗೌಡ. ಸೂರ್ಯ ಮುಳುಗದ ನಾಡಿನ ಆಡಳಿತದ ಅಹಂಗೆ ಮೊದಲ ಹೊಡೆತ ಬಿದ್ದದ್ದೇ ಸುಳ್ಯದಿಂದ. ಮುಂದಿನ ಹದಿಮೂರು ದಿನಗಳ ಕಾಲ ಮಂಗಳೂರಿಂದ ಕೊಡಗಿನ ದ್ವಜದಡಿ ರಾಜ್ಯವನ್ನಾಳಿದ್ದು ಭಾರತದ ಚರಿತ್ರೆಯಲ್ಲೇ ಸುವರ್ಣಾಕ್ಷರಗಳಿಂದ ಬರೆದಿಡಬೇಕಾದ ಘಟನೆ. ಇಂತಹ ಚರಿತ್ರೆಯೊಂದರ ಹರಿಕಾರ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪುತ್ಥಳಿಯೊಂದು ಅಂದು ಹಾಲೇರಿಯ ಧ್ವಜವೇರಿಸಿದ ಮಂಗಳೂರಿನ ಬಾವುಟಗುಡ್ಡದಲ್ಲಿ ಪ್ರತಿಷ್ಠಾಪನೆಯಾಗುತ್ತಿದೆ. ಮರೆತೇ ಹೋದಂತಿದ್ದ ಇತಿಹಾಸವೊಂದರ ಸಮರವೀರ ಕೆದಂಬಾಡಿ ರಾಮಯ್ಯಗೌಡರಿಗೆ ತಡವಾಗಿಯಾದರೂ ಮನ್ನಣೆ ದೊರಕಿಸಿಕೊಟ್ಟ ಸರ್ವರಿಗೂ, ಸರಕಾರಕ್ಕೂ ಅಭಿನಂದನೆ ಹೇಳಲೇಬೇಕುʼ.


ಕೆ ಆರ್‌ ತೇಜಕುಮಾರ್‌
ಲೇಖಕರು, ಕೃಷಿಕರು, ಸುಳ್ಯ

ಬಹುಪಾಲು ಸುಳ್ಯದ ಅಸ್ಮಿತೆಯೆಂದೇ ಪರಿಗಣಿಸಬಹುದಾದ ಸಮರ ವೀರ ಕೆದಂಬಾಡಿ ರಾಮಯ್ಯ ಗೌಡರ ಪುತ್ಥಳಿ ಐತಿಹಾಸಿಕ ಮಹತ್ತ್ವದ ನೆಲೆ ಸೇರುವುದು ಖಚಿತವಾಗಿದೆ.
ಭಾರತದ ಸ್ವಾತಂತ್ರ್ಯದ ಅಮೃತ (75) ವರ್ಷದಲ್ಲಿ (2022) ಜನತೆಯ ಬಹು ಕಾಲದ ಕನಸೊಂದು ಈಡೇರುವಂತಾಗಿದೆ. ಅಮರ ಸುಳ್ಯದ ಸ್ವಾತಂತ್ರ್ಯ ಹೋರಾಟವು ಆರಂಭವಾದ ಸುಳ್ಯದ ಪಕ್ಕದಲ್ಲಿರುವ ಉಬರಡ್ಕ ಮಿತ್ತೂರಿನಲ್ಲಿ ಯುದ್ಧ ಸ್ಮಾರಕವೊಂದು ಈಗಾಗಲೇ ನಿರ್ಮಾಣವಾಗಿದೆ. ಸಂಶೋಧಕ ಕುಡೆಕಲ್ಲು ವಿದ್ಯಾಧರ ಬರೆದ ಅಮರ ಸುಳ್ಯದ ಸಶಸ್ತ್ರ ಹೋರಾಟ 1837 ಕೃತಿಯನ್ನು ಆಧರಿಸಿ ಕಲಾವಿದ ಎ ಕೆ ಹಿಮಕರ ರಚಿಸಿದ್ದ ರೇಖಾ ಚಿತ್ರಗಳನ್ನು ಸಿಮೆಂಟ್ ಮಾಧ್ಯಮದ ಉಬ್ಬು ಶಿಲ್ಪಗಳನ್ನಾಗಿ ಶಿಲ್ಪಿ ಮಹೇಶ್ ಬಾಯಾರು ನಿರ್ಮಿಸಿದ್ದಾರೆ. ಎರಡನೆಯದಾಗಿ ಇಲ್ಲಿಂದ ಹೊರಟ ದಂಡು ಮಂಗಳೂರಿನಲ್ಲಿದ್ದ ಬ್ರಿಟಿಷರನ್ನು ಓಡಿಸಿ ಬಾವುಟ ಗುಡ್ಡದಲ್ಲಿನ ಈಸ್ಟ್ ಇಂಡಿಯಾ ಕಂಪೆನಿಯ ಧ್ವಜವನ್ನು ಕಿತ್ತೆಸೆದು ತಮ್ಮದೇ ಸ್ವಾತಂತ್ರ್ಯದ ಧ್ವಜವನ್ನು ಹಾರಿಸಿದ ಸ್ಥಳದಲ್ಲಿಯೇ ಅಂದಿನ ಅಮರ ಸೇನೆಯ ಮಹಾದಂಡ ನಾಯಕ ಕೆದಂಬಾಡಿ ರಾಮಯ್ಯ ಗೌಡರ ಅಂದವಾದ ಶಿಲ್ಪವನ್ನು ನಿಲ್ಲಿಸಿ ಸ್ಮಾರಕವನ್ನಾಗಿಸುವುದು ಅರ್ಥಪೂರ್ಣ, ಶ್ಲಾಘನೀಯ ಮತ್ತು ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನಗೈದ ಜಿಲ್ಲೆಯ ಅಸಂಖ್ಯಾತ ಸ್ವಾತಂತ್ರ್ಯ ಪ್ರೇಮಿಗಳಿಗೆ ಸಲ್ಲಿಸುವ ಕೃತಜ್ಞತಾ ಪೂರ್ವಕ ಗೌರವವಾಗಿದೆ.

ಎ ಕೆ ಹಿಮಕರ
ಸಂಶೋಧಕ, ಸುಳ್ಯ.

You cannot copy content of this page

Exit mobile version