Home ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ ಲಖಿಂಪುರ್ ಖೇರಿ ಹಿಂಸಾಚಾರ ; ಆಶಿಶ್ ಮಿಶ್ರಾ ಬಿಡುಗಡೆ ಅರ್ಜಿ ತಿರಸ್ಕರಿಸಿದ ನ್ಯಾಯಾಲಯ

ಲಖಿಂಪುರ್ ಖೇರಿ ಹಿಂಸಾಚಾರ ; ಆಶಿಶ್ ಮಿಶ್ರಾ ಬಿಡುಗಡೆ ಅರ್ಜಿ ತಿರಸ್ಕರಿಸಿದ ನ್ಯಾಯಾಲಯ

0

ದೇಶಾದ್ಯಂತ ದೊಡ್ಡ ಮಟ್ಟದ ಸುದ್ದಿಯಾಗಿದ್ದ ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಸಲ್ಲಿಸಿದ್ದ ಬಿಡುಗಡೆ ಅರ್ಜಿಯನ್ನು ನ್ಯಾಯಾಲಯ ಸೋಮವಾರ ತಿರಸ್ಕರಿಸಿದೆ.

ಅಕ್ಟೋಬರ್ 3, 2021 ರಂದು ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಭುಗಿಲೆದ್ದ ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಆಶಿಶ್ ಮಿಶ್ರಾ ಪ್ರಮುಖ ಆರೋಪಿಯಾಗಿದ್ದಾರೆ. ಲಖಿಂಪುರ ಖೇರಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 9 ರಂದು ಬಂಧನಕ್ಕೊಳಗಾಗಿದ್ದ ಆಶಿಶ್ ಮಿಶ್ರಾ ಅವರಿಗೆ ಈ ವರ್ಷದ ಫೆಬ್ರವರಿಯಲ್ಲಿ ಜಾಮೀನು ನೀಡಲಾಗಿತ್ತು.

ಆದರೆ, ಇದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಏಪ್ರಿಲ್‌ನಲ್ಲಿ ಆಶಿಶ್ ಮಿಶ್ರಾ ಅವರ ಜಾಮೀನನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿತು. ಅಷ್ಟೆ ಅಲ್ಲದೆ ಒಂದು ವಾರದೊಳಗೆ ಶರಣಾಗುವಂತೆ ಆದೇಶಿಸಿತು.

ಆ ನಂತರ ಬಿಡುಗಡೆ ಕೋರಿ ಆಶಿಶ್ ಮಿಶ್ರಾ ಮೇಲ್ಮನವಿ ಸಲ್ಲಿಸಿದ್ದರು. ಇದೀಗ ಆಶಿಶ್ ಮಿಶ್ರಾ ಅವರ ಮೇಲ್ಮನವಿ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಇದೇ ಪ್ರಕರಣದ ಇತರ 13 ಆರೋಪಿಗಳ ಬಿಡುಗಡೆ ಅರ್ಜಿಯನ್ನೂ ಸಹ ನ್ಯಾಯಾಲಯ ತಿರಸ್ಕರಿಸಿದೆ. ಈ ಸಂಬಂಧ ಡಿಸೆಂಬರ್ 6 ರಂದು ಆಶಿಶ್ ಮಿಶ್ರಾ ಮತ್ತು ಇತರ ಆರೋಪಿಗಳ ವಿರುದ್ಧ ಆರೋಪ ಹೊರಿಸುವ ಸಾಧ್ಯತೆ ಇದೆ.

ಘಟನೆ ಹಿನ್ನೆಲೆ : ಅಕ್ಟೋಬರ್ 3ರಂದು ಮೂರು ವಾಹನಗಳ ಬೆಂಗಾವಲು ಎಸ್‌ಯುವಿ ವೇಗವಾಗಿ ಹರಿದ ಪರಿಣಾಮ ನಾಲ್ವರು ರೈತರು ಹಾಗೂ ಒಬ್ಬ ಪತ್ರಕರ್ತ ಮೃತಪಟ್ಟಿದ್ದರು. ಈ ವಾಹನಗಳಲ್ಲಿ ಒಂದು ಕೇಂದ್ರ ಸಚಿವ ಅಜಯ್ ಮಿಶ್ರಾ ಅವರಿಗೆ ಸೇರಿದ್ದಾಗಿತ್ತು. ಮಿಶ್ರಾ ಅವರ ಮಗ ಆಶಿಶ್ ಮಿಶ್ರಾ ವಿರುದ್ಧ ಘಟನೆಗೆ ಸಂಬಂಧಿಸಿದಂತೆ ಕೊಲೆ ಪ್ರಕರಣ ದಾಖಲಾಗಿ ಐದು ದಿನಗಳ ಬಳಿಕ ಅಕ್ಟೋಬರ್ 9 ರಂದು ಬಂಧಿಸಲಾಗಿತ್ತು.

ರೈತರ ಮೇಲೆ ಹರಿದ ಎಸ್‌ಯುವಿ ಒಳಗೆ ಆಶಿಶ್ ಕುಳಿತಿದ್ದರು ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಟಿಕೋನಿಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ನಾಲ್ವರು ರೈತರ ಮೇಲೆ ಕಾರು ಓಡಿಸಿದ ಎಸ್‌ಯುವಿ ಒಳಗೆ ಆಶಿಶ್ ಮಿಶ್ರಾ ಇದ್ದರು ಎಂದು ರೈತ ಸಂಘಟನೆಗಳು ಆರೋಪಿಸಿದ್ದರು. ಕೇಂದ್ರ ಸಚಿವರ ಪುತ್ರ ಈ ಆರೋಪವನ್ನು ನಿರಾಕರಿಸಿದ್ದರು.

ಈ ಆರೋಪಕ್ಕೆ ಸಂಬಂಧಿಸಿದಂತೆ ನಡೆದ ತನಿಖೆಯಲ್ಲಿ ಆಶಿಶ್ ಮಿಶ್ರಾ ಸೇರಿದಂತೆ ಒಟ್ಟು 13 ಆರೋಪಿಗಳ ಮೇಲೆ ಆರೋಪಪಟ್ಟಿ ಸಿದ್ದವಾಗಿದೆ.

You cannot copy content of this page

Exit mobile version