Home ಅಂಕಣ ಇದು ಪ್ರತಿರೋಧದ ಸಮಯ

ಇದು ಪ್ರತಿರೋಧದ ಸಮಯ

0

ಒಂದು ಎಂ ಎಲ್ ಸಿ ಸ್ಥಾನಕ್ಕೋ, ಒಂದು ನಿಗಮ ಮಂಡಳಿ ಸ್ಥಾನಕ್ಕೋ ತಮ್ಮನ್ನು ಶತಮಾನಗಳ ಕಾಲ ತುಳಿದವರ ಪದತಲದಲ್ಲಿಯೇ ಬಿದ್ದುಕೊಂಡು, ಮೇಲ್ಜಾತಿಯವರು ಹೊರಿಸಿದ ಚಡ್ಡಿಯನ್ನು ಹೊರುವ ಸ್ವಾಭಿಮಾನ ಶೂನ್ಯರಿರುವಾಗ, ಇನ್ನು ಶೋಷಿತರಿಗೆ ನ್ಯಾಯ ದೊರಕಿಸಿ ಕೊಡುವವರು ಯಾರು? ಇಂತಹ ಸವಾಲಿನ ಕಾಲದಲ್ಲಿಯೇ ಕರ್ನಾಟಕದಲ್ಲಿ ಮಹತ್ವದ  ‘ದಲಿತರ ಸಾಂಸ್ಕೃತಿಕ ಪ್ರತಿರೋಧ’ ಸಮಾವೇಶ ನಡೆಯುತ್ತಿದೆ. ಇನ್ನಷ್ಟೂ ವಿವರಗಳಿಗೆ ಓದಿ-ಶ್ರೀನಿ ಕಾಲಂ

ಅಂಗಳದಲ್ಲಿ ಬಂದು ಮುದುಡಿ ನಿಂತಿದ್ದ ಆ ಹುಡುಗನದು ಕುಳ್ಳಗಿನ ದೇಹ, ಸುಮಾರಾಗಿ ಕಪ್ಪಗಿನ ಬಣ್ಣ. ಹೊಟ್ಟೆ ತುಂಬ ತಿನ್ನಲು ಒಳ್ಳೆಯ ಆಹಾರ ಸಿಕ್ಕು ಬೆಳೆದವನಲ್ಲ ಎಂಬುದು ಮೊದಲ ನೋಟಕ್ಕೇ ತಿಳಿಯುವಂತ್ತಿತ್ತು.

“ಒಳಗೆ ಬಾ” ಎಂದೆ. ಅಳುಕುತ್ತ ಅಲ್ಲೇ ನಿಂತ. ಒಂದು ಹೆಜ್ಜೆಯನ್ನೂ ಮುಂದಿಡಲಿಲ್ಲ. “ಬಾರೋ… ಯಾಕೆ ಅಲ್ಲೇ ನಿಂತಿದ್ದಿ? ಹೆದರ ಬೇಡ ಬಾ…” ಎಂದು ಮತ್ತೆ ಹೇಳಿದ ಮೇಲೆ ಒಲ್ಲದ ಮನಸಿನಲ್ಲಿ ಬಂದು ಹೊಸಿಲು ದಾಟಿ ನಿಂತ. “ಸೋಫಾದ ಮೇಲೆ ಕುಳಿತುಕೋ…” ಎಂದೆ. ಅಂಜುತ್ತ, ಅಳುಕುತ್ತ ಕುಳಿತ. ಬರ ಬಾರದ ಜಾಗಕ್ಕೆ ಬಂದಿದ್ದೇನೆ ಎಂಬ ಭಾವ ಆತನ ಮುಖದಿಂದ ಇನ್ನೂ ಹೋಗಿರಲಿಲ್ಲ. ನಿಧಾನವಾಗಿ ಮಾತಿಗೆಳೆದೆ. ಒಂದು ವಾಕ್ಯದ ಪ್ರಶ್ನೆಗೆ ಒಂದು ಪದದ ಉತ್ತರ ಕೊಡುತ್ತಿದ್ದ. ಒಂದಷ್ಟು ಹೊತ್ತಿನ ಆತ್ಮೀಯ ಮಾತಿನ ನಂತರ ಕೊಂಚ ಸರಿಯಾದಂತೆ ಕಂಡ.

ಆತನ ಹೆಸರು ಸುಧೀರ. ಒಂದು ಹೊತ್ತಿಗೂ ಸರಿಯಾಗಿ ಉಣ್ಣಲು ಇರದಷ್ಟು ಕಡುಬಡವ, ಸಾಲದೆಂಬಂತೆ ದಲಿತ ಸಮುದಾಯಕ್ಕೆ ಸೇರಿದವ. ದಕ್ಷಿಣ ಕನ್ನಡ ಜಿಲ್ಲೆಯ ಒಂದು ಹಳ್ಳಿ ಮೂಲೆಯ ಹುಡುಗ. ತಂದೆ ತೀರಾ ಬೇಜವಾಬ್ದಾರ ಮನುಷ್ಯ. ಹಾಗಾಗಿ ಆತನ ತಾಯಿಯೇ ಬೀಡಿ ಕಟ್ಟಿ ಬಂದ ಸಂಪಾದನೆಯಲ್ಲಿ ಈ ಹುಡುಗನನ್ನು ಓದಿಸಿದ್ದು. ಓದುವುದರಲ್ಲಿ ತುಂಬಾ ಹುಷಾರಿನ ಹುಡುಗ. ಪಾಲಿಟೆಕ್ನಿಕ್ ಸೇರಲು ಮಂಗಳೂರಿಗೆ ಬಂದಿದ್ದ. ಆತನನ್ನು ಕರೆತಂದುದು ಒಂದು ಎನ್ ಜಿ ಒ ದಲ್ಲಿ ಕೆಲಸ ಮಾಡುತ್ತಿದ್ದ ನನ್ನಾಕೆ.

ಆತನಿಗೆ ಹಿಂದುಳಿದ ವರ್ಗಗಳ ಹಾಸ್ಟೆಲ್ ನಲ್ಲಿ ಅವಕಾಶ ಸಿಗುವವರೆಗೆ ನಮ್ಮಲ್ಲೇ ಇರಿಸಿಕೊಳ್ಳುವುದು ಎಂದು ನಿರ್ಧಾರವಾಗಿತ್ತು. ಊಟ ನಮ್ಮ ಮನೆಯಲ್ಲಿ, ಮಲಗುವುದು ನೆರೆಯ ನಮ್ಮ ಸ್ನೇಹಿತರೊಬ್ಬರ ಮನೆಯಲ್ಲಿ. ಆ ಹುಡುಗನಿಗೆ ನನ್ನಾಕೆ ಕರಿದ ಮೀನು ಇತ್ಯಾದಿ ಒಳ್ಳೆಯ ಊಟ ಬಡಿಸುತ್ತಿದ್ದಳು. ಹುಡುಗ ಹೊಟ್ಟೆ ತುಂಬ ತಿನ್ನುತ್ತಿದ್ದ. ಮೊದಲ ಬಾರಿಗೆ ಇಂತಹ ಊಟ ಮಾಡುತ್ತಿರುವುದೋ ಏನೋ; ಹಾಗಿತ್ತು ಆತನ ಖುಷಿ.

ಹೊಟ್ಟೆ ತುಂಬಿದಾಗಿನ ಖುಷಿಯ ಕ್ಷಣ

ಒಂದು ದಿನ ನನ್ನಾಕೆ ಆಫೀಸಿಗೆ ಹೋಗಿದ್ದಳು. ನಾನೊಬ್ಬನೇ ಮನೆಯಲ್ಲಿದ್ದೆ. ಮಧ್ಯಾಹ್ನದ ಹೊತ್ತು. ಸುಧೀರ ಪಾಲಿಟೆಕ್ನಿಕ್ ಕಾಲೇಜಿನಿಂದ ಬಂದಿದ್ದ. “ಊಟ ಮಾಡಿದ್ದಿಯಾ?” ಎಂದು ಕೇಳಿದೆ. ಇಲ್ಲ ಎಂದ. ನಾನೇನೋ ಕೆಲಸದಲ್ಲಿದ್ದೆ. “ಹೋಗು ಊಟ ಬಡಿಸಿಕೋ” ಎಂದೆ. ಆತ ತಬ್ಬಿಬ್ಬಾಗಿ ಬಿಟ್ಟ. ಆತನಿಗೆ ನಂಬಲೇ ಆಗಲಿಲ್ಲ. ಮನೆಯೊಳಗೆ ಬಿಟ್ಟುಕೊಂಡದ್ದೇ ದೊಡ್ಡದು, ಇನ್ನು ಅಡುಗೆ ಮನೆಗೆ ಹೋಗುವುದೇ? ಸಾಧ್ಯವೇ ಇಲ್ಲ ಎಂಬಂತಿತ್ತು ಆತನ ಮುಖಭಾವ. “ಹೋಗು ಮಾರಾಯ ಕುಕ್ಕರ್ ನಲ್ಲಿ ಅನ್ನ ಇದೆ, ಇನ್ನೊಂದು ಪಾತ್ರದಲ್ಲಿ ಸಾಂಬಾರ್ ಇದೆ,  ನಾನು ಬಂದು ಬಡಿಸಿಕೊಡಬಹುದು, ಆದರೆ ನಾನು ಒಂದು ಮುಖ್ಯ ಕೆಲಸದಲ್ಲಿದ್ದೇನೆ” ಎಂದು ಕೊಂಚ ಗದರಿದ ದನಿಯಲ್ಲಿಯೇ ಒತ್ತಾಯಿಸಿದ ಮೇಲೆ ಹಿಂಜರಿಕೆಯೊಂದಿಗೇ ಹೋಗಿ ಬಟ್ಟಲಿಗೆ ರಾಶಿ ಅನ್ನ ಬಡಿಸಿಕೊಂಡ. ಸಾಂಬಾರು ಹಾಕಿಕೊಂಡು ಹೊರ ಬಂದು ಊಟ ಮಾಡತೊಡಗಿದ. ಅನ್ನ ಮುಗಿಯುತ್ತಲೇ “ಹೋಗು ನಿನಗೆ ಬೇಕಷ್ಟು ಮತ್ತೆ ಹಾಕಿಕೋ” ಎಂದೆ. ಮೊದಲು ಹಾಕಿಕೊಂಡಿದ್ದಷ್ಟೇ ಅನ್ನ ಮತ್ತೆ ಹಾಕಿಕೊಂಡ, ಸಾಂಬಾರ್ ಸುರಿದುಕೊಂಡ. ಜೀವನದಲ್ಲಿ ಮೊದಲ ಬಾರಿಗೆ ಹೊಟ್ಟೆ ತುಂಬ ಊಟ ಮಾಡಿದ ಸಂತೃಪ್ತಿ ಮುಖದಲ್ಲಿ ಎದ್ದು ಕಾಣುತ್ತಿತ್ತು. ಅದೂ ಮನೆಯೊಳಗೇ ಬಿಟ್ಟುಕೊಳ್ಳದ ಮೇಲ್ಜಾತಿಯವರ ಅಡುಗೆ ಮನೆಗೇ ಹೋಗಿ ಒಬ್ಬ ಅಸ್ಪೃಶ್ಯ ದಲಿತ ಯುವಕ ತಾನೇ ಬಡಿಸಿ ಊಟ ಮಾಡುವುದೆಂದರೆ?!!

ನಾನು ಅವನತ್ತಲೇ ನೋಡುತ್ತ ಆತನ ಮುಖಭಾವ ಗಮನಿಸುತ್ತಿದ್ದೆ. ಹೊಟ್ಟೆ ತುಂಬ ಊಟ ಸಿಕ್ಕಾಗ ಇಷ್ಟೊಂದು ಸಮಾಧಾನವಾಗುವುದಾದರೆ ಆತನ ಇದುವರೆಗಿನ ಬದುಕು ಹೇಗಿರಬೇಡ?! ತುಂಬ ಯಾತನೆಯೆನಿಸಿತು. ನಾವು ಹೊತ್ತು ಹೊತ್ತಿಗೆ ಸಾಕಷ್ಟು ತಿನ್ನಲು ಸಿಗುವವರು, ಹಸಿವು ಎಂದರೆ ಏನೆಂದೇ ಅರಿಯದವರು, ಹೊರ ಜಗತ್ತೂ ಕೂಡಾ ಹಾಗೆಯೇ ಇದೆ ಎಂದುಕೊಂಡಿರುತ್ತೇವೆ. ಇಂತಹ ಮನಸ್ಥಿತಿಯ ಮೂಲಕವೇ ನಾವು ಜಗತ್ತನ್ನು ಅಳೆಯುತ್ತಾ ಬಡವರ ಬಗ್ಗೆ ಒಂದು ರೀತಿಯ ಅಸಹನೆಯನ್ನು ವ್ಯಕ್ತಪಡಿಸುತ್ತಿರುತ್ತೇವೆ. ನಾವು ಆಳುವವರಾದರೆ ನಮ್ಮ ಆಡಳಿತ ನೀತಿಗಳು ಕೂಡಾ ಈ ಬಡವರನ್ನು ಹೊರಗಿಟ್ಟೇ ರೂಪುಗೊಳ್ಳುತ್ತವೆ.

ಅಸ್ಪೃಶ್ಯತೆಯ ನೋವು ಅನುಭವಿಸಿದವರಿಗಷ್ಟೇ ಗೊತ್ತು

ದಲಿತರೂ ನಮ್ಮ ಹಾಗೆಯೇ ಮನುಷ್ಯರಲ್ಲವೇ? ಅವರನ್ನು ಮನೆಯಿಂದಾಚೆ ನಿಲ್ಲಿಸುವುದು ಯಾಕೆ? ಎಂದು ಕೇಳಿ. ಬಹಳ ಮಂದಿ ಹೇಳುವುದು ‘ನಾವು ಅವರನ್ನು ಒಳಗೆ ಬರಹೇಳಿದರೂ ಅವರು ಬರುವುದಿಲ್ಲ’ ಎಂದು. ಯೋಚನೆ ಮಾಡಿ, ಶತ ಶತಮಾನಗಳಿಂದ ನೀವು ಅವರನ್ನು ಕೇವಲ ಜಾತಿಯ ಕಾರಣಕ್ಕೆ ಅವರನ್ನು ಮನೆಯಿಂದಾಚೆ ಮಾತ್ರವಲ್ಲ ಊರಿನಿಂದಾಚೆ ನಿಲ್ಲಿಸಿದ್ದೀರಿ, ಅಸ್ಪೃಶ‍್ಯ ಮಾತ್ರವಲ್ಲ ಅದೃಶ್ಯರಾಗಿರುವಂತೆಯೂ ನೋಡಿಕೊಂಡಿದ್ದೀರಿ. ಅದೇ ಪರಿಸರದಲ್ಲಿ ಬೆಳೆದವರನ್ನು ಮನೆಯೊಳಗೆ ಬಾ ಎಂದು ಕರೆದರೆ ಒಮ್ಮಿಂದೊಮ್ಮೆಗೆ ಬರಲು ಅವರ ಮನಸು ಅಷ್ಟು ಸುಲಭದಲ್ಲಿ ಒಪ್ಪೀತೇ? ಎಂತಹ ಸ್ಥಿತಿಯಲ್ಲಿ ಈ ಸಮುದಾಯವನ್ನು ನಮ್ಮ ಸಮಾಜ ಇರಿಸಿತು! ಅದೂ ಶತ ಶತಮಾನಗಳ ಕಾಲ?! ಇನ್ನೊಬ್ಬರ ಹಸಿವನ್ನಾದರೂ ನಾವು ಅನುಭವಿಸಿ ತಿಳಿಯಬಹುದು. ಆದರೆ ಅವರ ಅಸ್ಪೃಶ್ಯತೆಯ ನೋವನ್ನು ಅರಿಯುವುದು ಸಾಧ್ಯವೇ? ಅದು ಅನುಭವಿಸಿದವರಿಗಷ್ಟೇ ಗೊತ್ತು, ಅಲ್ಲವೇ?

ಹಳ್ಳಿಯ ಮುಗ್ಧ ಹುಡುಗ ಸುಧೀರನಿಗೆ ಮಹಾನಗರದ ಜಗತ್ತು ತೀರಾ ಹೊಸದು; ಭಯ ಹುಟ್ಟಿಸುವಂಥದ್ದು. ಹಾಗಾಗಿ ಆತನಿಗೆ ಒಬಿಸಿ ಹಾಸ್ಟೆಲ್ ಗೆ ಹೊಂದಿಕೊಳ್ಳುವುದು ಬಹಳ ಕಷ್ಟವಾಯಿತು. ಎಲ್ಲವೂ ಸರಿಯಾಯಿತು ಎನ್ನುವಾಗ ಭಜನೆ, ಧಾರ್ಮಿಕ ಆಚರಣೆ ಅದು ಇದು ಎಂದು ಅಲ್ಲಿ ಈಗಾಗಲೇ ಬಲಕ್ಕೆ ವಾಲಿದ್ದ ಹುಡುಗರು ವಂತಿಗೆ ನೀಡಲು ಒತ್ತಾಯಿಸಿದರು. ಹತ್ತು ರುಪಾಯಿ ಇಲ್ಲದ ಹುಡುಗ ಐನೂರು ರುಪಾಯಿ ಎಲ್ಲಿಂದ ತರುವುದು? ಹಾಗೂ ಹೀಗೂ ಎರಡು ಸೆಮಿಸ್ಟರ್ ಓದು ಮುಗಿಸಿದ ಬಳಿಕ ಎಲ್ಲದಕ್ಕೂ ವಿದಾಯ ಹೇಳಿ ಊರಿಗೆ ಹೋಗಿಬಿಟ್ಟ. ಆದರೆ ಮೀಸಲಾತಿಯ ಆಧಾರದಲ್ಲಿ ಆತನಿಗೆ ಕೇಂದ್ರ ಸರಕಾರದ ಒಂದು ಇಲಾಖೆಯಲ್ಲಿ ಸಣ್ಣದೊಂದು ಕೆಲಸ ಸಿಕ್ಕಿತು. ಕೈಗೆ ಒಂದಿಷ್ಟು ಹಣ ಬರಲಾರಂಭಿಸಿತು. ಈಗ ತಾಯಿ, ಅಕ್ಕ, ತಮ್ಮನಿಗೆ ನೆರವಾಗುತ್ತಾ ತಕ್ಕಮಟ್ಟಿಗೆ ಉತ್ತಮ ಬದುಕನ್ನು ಸಾಗಿಸುತ್ತಿದ್ದಾನೆ.

ಈವತ್ತು ಮಾಧ್ಯಮಗಳಲ್ಲಿ, ವಿಶೇಷವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ನಡೆಯುವ ಚರ್ಚೆಯ ಸಂದರ್ಭದಲ್ಲಿ ಹೊಟ್ಟೆ ತುಂಬಿದ ಮತ್ತು ಸಾಮಾಜಿಕ ಏಣಿಶ್ರೇಣಿಯಲ್ಲಿ ಎತ್ತರದಲ್ಲಿರುವ  ಜಾತಿಯವರು “ಸುಮ್ಮನೆ ಜಾತಿಯ ವಿಷಯ ಯಾಕೆ ಇಲ್ಲಿ ತರುತ್ತೀರಿ?, ಜಾತಿ ಇಲ್ಲವೇ ಇಲ್ಲ, ಅಸ್ಪೃಶ‍್ಯತೆ ಆಚರಣೆಯಲ್ಲಿಲ್ಲ, ಜಾತಿ ಆಧಾರಿತವಾಗಿ ಮೀಸಲಾತಿ ತಪ್ಪು, ಮೆರಿಟ್ ಗೆ ಆದ್ಯತೆ ಕೊಡಬೇಕು” ಎಂಬೆಲ್ಲ ವಿತಂಡವಾದವನ್ನು ಮಂಡಿಸುವಾಗಲೆಲ್ಲ ನನಗೆ ಈ ದಲಿತ  ಹುಡುಗ ಸುಧೀರ ನೆನಪಾಗುತ್ತಾನೆ. ಸುಧೀರನ ಅಪ್ಪ ಅಮ್ಮ ಅನಕ್ಷರಸ್ಥರು. ಸುಧೀರ ಮತ್ತು ಆತನ ಅಕ್ಕ, ತಮ್ಮನೇ ಅವರ ಕುಟುಂಬದಲ್ಲಿ ಮೊದಲ ತಲೆಮಾರಿನ ವಿದ್ಯಾವಂತರು. ಒಂದೆಡೆಯಲ್ಲಿ ಅನಕ್ಷರತೆಯ ಪರಂಪರೆ, ಜತೆಯಲ್ಲಿ ಜಾತಿಯ ಅಸಾಧ್ಯ ಹೊರೆ. ಈ ಹುಡುಗನನ್ನು ಐದಾರು ತಲೆಮಾರುಗಳ ಶಿಕ್ಷಣ ಸಂಪನ್ನ ಸಮುದಾಯದ ಮಕ್ಕಳೊಂದಿಗೆ ಹೋಲಿಸಬಹುದೇ? ಇವರು ಹೇಳುವ ಮೆರಿಟ್ ಪ್ರಕಾರ ಅಳೆದರೆ ಅಲ್ಲಿ ಅವಕಾಶ ಪಡೆಯುವವರು ಯಾರು?

ಯು ಆರ್ ಅನಂತಮೂರ್ತಿಯವರು ಆಡುತ್ತಿದ್ದ ಒಂದು ಮಾತು ಯಾವಾಗಲೂ ನೆನಪಾಗುತ್ತಿದೆ. “ಈಗಿನ ಶಿಕ್ಷಣ ಪದ್ಧತಿ ಹೇಗಿದೆ ಎಂದರೆ ಅಲ್ಲಿ ಬ್ರಾಹ್ಮಣನ ಬುದ್ಧಿಮತ್ತೆಯ ಮೇಲೆ ದಲಿತ ಹುಡುಗನನ್ನು ಅಳೆದು ಆತ ಫೇಲು, ಆತ ‘ಕೆಲಸಕ್ಕೆ ಬಾರದವ’ ಎಂದು ತೀರ್ಮಾನಿಸಲಾಗುತ್ತದೆ. ಒಂದು ವೇಳೆ ದಲಿತನ ಕೌಶಲದ ಮೇಲೆ ಬ್ರಾಹ್ಮಣ ಹುಡುಗನನ್ನು ಅಳೆದರೆ ಆಗ ಶೂನ್ಯ ಅಂಕದೊಂದಿಗೆ ಫೇಲಾಗುವವರು ಯಾರು? ಈ ಅರ್ಥದಲ್ಲಿ ಇಡೀ ಶಿಕ್ಷಣ ವ್ಯವಸ್ಥೆ ಯಾರಿಗೆ ಅನುಕೂಲಕರವಾಗಿದೆ? ಇಷ್ಟಕ್ಕೂ ಈ ಮೆರಿಟ್… ಮೆರಿಟ್… ಎನ್ನುತ್ತಾರಲ್ಲಾ? ಮೆರಿಟ್ ಎಂದರೇನು? ಬಾಯಿಪಾಠ ಮಾಡಿ ಪರೀಕ್ಷೆಯ ದಿನ ಪೇಪರ್ ಮೇಲೆ ಅದನ್ನೇ ಕಕ್ಕಿ ನೂರಕ್ಕೆ ನೂರು ಅಂಕ ತೆಗೆದುಕೊಳ್ಳುವುದು ಮೆರಿಟ್ಟೇ? ಇತ್ತೀಚೆಗೆ ಫ್ರಾನ್ಸ್ ನ ಪ್ಯಾರಿಸ್ ನಲ್ಲಿ ಕೆಲಸ ಮಾಡುವ ಪ್ರೊಫೆಸರ್ ಒಬ್ಬರು ಸಿಕ್ಕರು. ಮಾತನಾಡುತ್ತಾ “ಫ್ರಾನ್ಸ್ ನಲ್ಲಿ ಭಾರತೀಯ ಶಿಕ್ಷಣದ ಬಗ್ಗೆ ಅಷ್ಟೊಂದು ಗೌರವವಿಲ್ಲ, ಇದಕ್ಕೆ ಕಾರಣ ಭಾರತದಲ್ಲಿ ಮಗ್ಗಿಂಗ್ ಗೆ (ಬಾಯಿಪಾಠ) ಹೆಚ್ಚಿನ ಆದ್ಯತೆ ನೀಡುವುದು” ಎಂದರು. ಇಂತಹ ಮೆರಿಟ್ ಮೇಲೆ ಎಲ್ಲವನ್ನೂ ನಿರ್ಧರಿಸಬೇಕೆಂದು, ಸಾಮಾಜಿಕ ಪರಿಸ್ಥಿತಿಯ ಇತಿಹಾಸ ಅರಿಯದ ಸಂವೇದನಾಹೀನರು ಹೇಳುತ್ತಿದ್ದಾರೆ.

ದಲಿತ ಮಾಡಿದ ಚಹಾ ಯಾರು ಕುಡಿಯುತ್ತಾರೆ?

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಇತ್ತೀಚೆಗೆ ಗುಜರಾತ್ ಚುನಾವಣಾ ಪ್ರಚಾರ ಸಮಯದಲ್ಲಿ “ ಮೋದಿಯವರೇ ನೀವು ಯಾವಾಗಲೂ ‘ನಾನು ಬಡವ, ನಾನು ಚಾ ಮಾರುತ್ತಿದ್ದೆ’ ಎನ್ನುತ್ತೀರಿ, ನಾನೂ ಬಡವನೇ ಆಗಿದ್ದೆ, ನೀವಾದರೋ ಚಹಾ ಮಾಡಿದರೆ ಅದನ್ನು ಕುಡಿಯುವವರಿದ್ದಾರೆ, ನಾನು ದಲಿತ ಸಮುದಾಯಕ್ಕೆ ಸೇರಿದವ, ನಾನು ಮಾಡಿದ ಚಹಾವನ್ನು ಯಾರು ಕುಡಿಯುತ್ತಾರೆ?” ಎಂದು ಜಾತಿ ಕ್ರೌರ್ಯದ ಅತ್ಯಂತ ವಾಸ್ತವಿಕ ಸಂಗತಿಯೊಂದರತ್ತ ನಮ್ಮ ಗಮನ ಸೆಳೆದರು. ಈವತ್ತು ಜಾತಿ ಶ್ರೇಣಿಯ ಏಣಿಯ ಮೇಲೆ ಮೇಲೆ ಏರಿದಂತೆ ಅವರ ಸಾಮಾಜಿಕ ಬಂಡವಾಳ ಹೆಚ್ಚುತ್ತಾ ಹೋಗುತ್ತದೆ. ಅವರು ಸಾಮಾಜಿಕವಾಗಿ ಹೆಚ್ಚು ಭಾಗ್ಯಶಾಲಿಗಳು ಎನಿಸಿಕೊಳ್ಳುತ್ತಾರೆ. ಪ್ರತಿಯೊಂದು ಜಾತಿಯೂ ಅದಕ್ಕಿಂತ ಕೆಳಗಿನ ಜಾತಿಯವರನ್ನು ಕೀಳಾಗಿ ನೋಡುತ್ತದೆ ಮತ್ತು ಅವರನ್ನು ಶೋಷಿಸುತ್ತದೆ. ಹೀಗಾಗಿಯೇ ಮೇಲಿನವರಿಗೆ ಜಾತಿ ಒಂದು ‘ವರ’ವಾದರೆ ಕೆಳಗಿನವರಿಗೆ ಅದೊಂದು ‘ಶಾಪ’. ಬ್ರಾಹ್ಮಣನೊಬ್ಬ ವಿಶೇಷ ಓದು ಇಲ್ಲದೆಯೂ ಪೌರೋಹಿತ್ಯ ನಡೆಸಿಯೋ, ಹೋಟೆಲ್ ಹಾಕಿಯೋ ಬದುಕಬಲ್ಲ. ಆದರೆ ದಲಿತನಿಗೆ ಇಂತಹ ಪ್ರಿವಿಲೇಜುಗಳು ಇವೆಯೇ? ಒಂದು ವೇಳೆ ದಲಿತನೊಬ್ಬ ಹೊಟೇಲು ಹಾಕಿದರೆ ಅಲ್ಲಿ ಯಾರು ಚಹಾ ಕುಡಿದಾರು? ಭಾರತದ ಈ ಜಾತಿ ತಾರತಮ್ಯದ ವಾಸ್ತವ ಅರಿಯದವರು ಮಾತ್ರ ‘ಇಲ್ಲಿ ಎಲ್ಲವೂ ಸರಿ ಇದೆ, ಜಾತಿಗೆ ಅದ್ಯತೆ ನೀಡಬೇಕಾಗಿಲ್ಲ, ಮೆರಿಟ್ಟನ್ನು ಮಾತ್ರ ಪರಿಗಣಿಸಬೇಕು’ ಎಂದಾರು.

ಮೀಸಲಾತಿ ಎಂಬ ಪರಿಕಲ್ಪನೆ ಬಂದುದೇ ಜಾತಿ ನೆಲೆಯಲ್ಲಿ ಶತ ಶತಮಾನಗಳ ಕಾಲ ಕೆಲವು ಸಮುದಾಯಗಳಿಗೆ ಆದ ಸಾಮಾಜಿಕ ಅನ್ಯಾಯವನ್ನು ಸರಿಪಡಿಸಲು. ಆ ವಂಚಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸಲು, ಅವರಿಗೆ ಪೂರ್ಣ ನ್ಯಾಯ ಕೊಡಿಸಲು ಸಾಧ್ಯವಿಲ್ಲ. ಅದು ತಕ್ಕ ಮಟ್ಟಿಗಾದರೂ ನ್ಯಾಯ ಕೊಡಿಸುವ ಒಂದು ಯತ್ನ ಅಷ್ಟೇ. ಮೀಸಲಾತಿ ಎಂಬುದು ಬಡತನ ನಿವಾರಣಾ ಕಾರ್ಯಕ್ರಮವಲ್ಲ. ಶೋಷಿತ ಸಮುದಾಯಗಳಿಗೆ ತಕ್ಕ ಮಟ್ಟಿಗಾದರೂ ಗೌರವದ ಬದುಕಿನ ಅವಕಾಶ ಕಲ್ಪಿಸಿಕೊಟ್ಟ ಈ ಮೀಸಲಾತಿಯನ್ನು ಇಲ್ಲವಾಗಿಸುವ ಯತ್ನಗಳು ಈಗಾಗಲೇ ಒಂದು ತಾರ್ಕಿಕ ಅಂತ್ಯವನ್ನು ಕಾಣುತ್ತಿರುವುದು ಸ್ಷಷ್ಟ.

ತಳಸಮುದಾಯದ ಮೀಸಲಾತಿಗೆ ಸಂಚಕಾರ ತರಲಾಗುತ್ತಿದೆ

ಒಂದೆಡೆಯಲ್ಲಿ ಮೀಸಲಾತಿಗೆ ಅವಕಾಶ ಇರುವ ಎಲ್ಲ ಜಾಗಗಳನ್ನೂ ಇಲ್ಲವಾಗಿಸಲಾಗುತ್ತಿದೆ. ಖಾಸಗೀಕರಣವಂತೂ ಮೀಸಲಾತಿಗೆ ಮರಣ ಶಾಸನವಾಗಿದೆ. ಖಾಸಗಿ ಅಂದ ಮೇಲೆ ಅಲ್ಲಿ ಸರಕಾರ ನಿಗದಿ ಪಡಿಸಿದ ಮೀಸಲಾತಿ ಅನುಸರಿಸ ಬೇಕಾಗಿಲ್ಲ. ಅನುಸರಿಸ ಬೇಕೆಂದಿದ್ದರೂ ಅಲ್ಲಿ ರಂಗೋಲಿಯ ಕೆಳಗೆ ತೂರುವ ಜಾಣ್ಮೆ ಈ ಬಂಡವಾಳಶಾಹಿಗಳಿಗೆ ಕರಗತ. ಇನ್ನೊಂದೆಡೆಯಲ್ಲಿ ಖಾಸಗೀಕರಣದ ಕಾರಣ ಸರಕಾರಿ ಉದ್ಯೋಗಗಳೇ ಇಲ್ಲವಾಗಿದೆ. ಇರುವ ಸರಕಾರಿ ಹುದ್ದೆಗಳನ್ನು ಭರ್ತಿ ಮಾಡುತ್ತಿಲ್ಲ, ಸಾರ್ವಜನಿಕ ವಲಯದ ಉದ್ಯಮಗಳನ್ನೆಲ್ಲ ಖಾಸಗಿಯವರಿಗೆ ಮಾರಿಯಾಗಿದೆ. ಇನ್ನೊಂದೆಡೆಯಲ್ಲಿ ಮೀಸಲಾತಿಗೆ ಆರ್ಥಿಕ ಸಾಮರ್ಥ್ಯವನ್ನೇ ಮಾನದಂಡ ಮಾಡುತ್ತಾ ಜಾತಿ ಆಧಾರಿತ ಮೀಸಲಾತಿಯನ್ನು ಇಲ್ಲವಾಗಿಸಲು ಹೆಜ್ಜೆ ಇರಿಸಿಯಾಗಿದೆ. ಜನರಲ್ ಮೆರಿಟ್ ಹೆಸರಿನಲ್ಲಿ 50% ಮೀಸಲಾತಿ ಅನುಭವಿಸುತ್ತಿದ್ದವರಿಗೆ ಈಗ ಹೆಚ್ಚುವರಿಯಾಗಿ 10% ಮೀಸಲಾತಿ ದೊರೆತಿದೆ!

ಇದರ ಅಂತಿಮ ಪರಿಣಾಮ ಏನು ಎಂಬ ಬಗ್ಗೆ ತಳಸಮುದಾಯಗಳು ತಲೆಕೆಡಿಸಿಕೊಂಡಂತೆ ಕಾಣಿಸುತ್ತಿಲ್ಲ. ಒಂದು ಎಂ ಎಲ್ ಸಿ ಸ್ಥಾನಕ್ಕಾಗಿಯೋ, ಒಂದು ನಿಗಮ ಮಂಡಳಿ ಸ್ಥಾನಕ್ಕಾಗಿಯೋ, ತಮ್ಮನ್ನು ಶತಮಾನಗಳ ಕಾಲ ತುಳಿದವರ ಪದತಲದಲ್ಲಿಯೇ ಬಿದ್ದುಕೊಂಡು, ಮೇಲ್ಜಾತಿಯವರು ಹೊರಿಸಿದ ಚಡ್ಡಿಯನ್ನು ಹೊರುವ ಸ್ವಾಭಿಮಾನ ಶೂನ್ಯರಿರುವಾಗ, ಇನ್ನು ಶೋಷಿತರಿಗೆ ನ್ಯಾಯ ದೊರಕಿಸಿ ಕೊಡುವವರಾದರೂ ಯಾರು? ಒಂದು ಕಾಲದಲ್ಲಿ ಕರ್ನಾಟಕದ ದಲಿತ ಚಳುವಳಿಯನ್ನು ಇಡಿಯ ದೇಶವೇ ಕುತೂಹಲದಿಂದ ನೋಡುತ್ತಿತ್ತು. ಐತಿಹಾಸಿಕ ಬೂಸಾ ಚಳುವಳಿ ನಡೆದುದು, ದಲಿತರು ಮಲ ಸುರಿದುಕೊಂಡು ರವಾನಿಸಿದ ಸಂದೇಶ ನಡೆದುದು ಕರ್ನಾಟಕದಲ್ಲಿ. ದಲಿತ ಸಂಘಟನೆಗಳು ಮತ್ತು ರೈತ ಸಂಘಟನೆಗಳು ಎದ್ದುವೆಂದರೆ ವಿಧಾನಸೌಧ ಗಡ ಗಡ ನಡುಗುತ್ತಿತ್ತು. ಅಂತಹ ದಲಿತ ಸಂಘಟನೆಗಳ ಒಗ್ಗಟ್ಟು ಏನಾಯ್ತು? ಸರಕಾರಗಳು ದಲಿತರಿಗೆ ನಿತ್ಯವೂ ನೂರಾರು ಅನ್ಯಾಯ ಮಾಡುತ್ತಿರುವಾಗಲೂ ಆ ಕಡೆಯಿಂದ ಕ್ಷೀಣ ದನಿಯೂ ಯಾಕೆ ಬರುತ್ತಿಲ್ಲ? ವ್ಯವಸ್ಥೆಯು ರೋಹಿತ್ ವೇಮುಲಾ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿದಾಗ, ಗುಜರಾತ್ ನ ಊನಾದಲ್ಲಿ ದಲಿತರ ಮೇಲೆ ಕಂಡು ಕೇಳರಿಯದ ಅಮಾನುಷ ಹಲ್ಲೆ ನಡೆದಾಗ, ಹಾತರಸ್ ದಲಿತ ಯುವತಿಯ ಮೇಲೆ ಅತ್ಯಾಚಾರ ನಡೆದು ಆಕೆಯ ಹತ್ಯೆ ನಡೆದಾಗ ದೇಶದ ಸರ್ವೋಚ್ಚ ದಲಿತರ ನಾಯಕಿ ಮಾಯಾವತಿ ಬೀದಿಗಿಳಿಯುತ್ತಾರೆ ಎಂದು ಜನ ನಿರೀಕ್ಷಿಸಿದ್ದರು. ಯಾಕೆ ಇದೆಲ್ಲ ಆಗಲಿಲ್ಲ? ಬಲಪಂಥೀಯ ಸರಕಾರ ಬಾಬಾಸಾಹೇಬರ ಸಂವಿಧಾನವನ್ನೇ ಇಲ್ಲವಾಗಿಸುವತ್ತ ಹೊರಟಿರುವಾಗ ಇವರೆಲ್ಲ ಏನು ಮಾಡುತ್ತಿದ್ದಾರೆ?

ಸಂವಿಧಾನ ಅಪಾಯದಲ್ಲಿದೆ

ಭಾರತದ ಸಂವಿಧಾನ ಎಂತಹ ಗಂಭೀರ ಅಪಾಯದಲ್ಲಿದೆ ಎಂಬ ಬಗ್ಗೆ ಚಿಂತಕ ಎ ನಾರಾಯಣ ಹೀಗೆ ಹೇಳುತ್ತಾರೆ, “ಸಂವಿಧಾನ ವಿರೋಧಿಗಳಿಗೆ ಮತ್ತು ಒಂದಲ್ಲ ಒಂದು ದಿನ ಅದನ್ನು ಬದಲಿಸಿಯೇ ತೀರುತ್ತೇವೆ ಅಂತ ಹೊರಟವರಿಗೆ ದೊಡ್ಡ ತೊಡಕಾಗಿರುವುದು ಈ ದೇಶದ ದಲಿತ ವರ್ಗ ಸಂವಿಧಾನದ ಜತೆಯಲ್ಲಿ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡಿರುವುದು. ದಲಿತ ರಾಜಕೀಯದ ಬಹುದೊಡ್ಡ ಐಕಾನ್ ಆಗಿರುವ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ಶಿಲ್ಪಿ ಆಗಿರುವ ಕಾರಣಕ್ಕೆ ಈ ದೇಶದಲ್ಲಿ ಉಳಿದೆಲ್ಲಾ ಜನಸಮುದಾಯಗಳಿಗಿಂತ ಹೆಚ್ಚಾಗಿ ಸಂವಿಧಾನವನ್ನು ಒಪ್ಪಿಕೊಂಡು ಅಪ್ಪಿಕೊಂಡು ಇರುವುದು ದಲಿತರು. ಅಂಬೇಡ್ಕರ್ ಅವರ ಮುಂದಾಳುತ್ವದಲ್ಲಿ ರೂಪುಗೊಂಡ ಸಂವಿಧಾನವನ್ನು ಏಕಾಏಕಿ ಕಿತ್ತು ಅದರ ಜಾಗದಲ್ಲಿ ಹೊಸತೊಂದು ಸಂವಿಧಾನ ತರುತ್ತೇವೆ ಅಂತ ನೇರವಾಗಿ ಮುಂದುವರಿದರೆ ಬಹುದೊಡ್ಡ ಮಟ್ಟಿಗೆ ದಲಿತರ ಕೋಪವನ್ನು ಎದುರಿಸಬೇಕಾಗುತ್ತದೆ  ಮತ್ತು ದಲಿತರ ಮತಗಳನ್ನು ಕಳೆದುಕೊಳ್ಳಬೇಕಾಗುತ್ತದೆ ಎನ್ನುವ ಅರಿವು ಸಂವಿಧಾನ ವಿರೋಧಿಗಳಿಗೆ ಇದೆ. ಹಾಗಾಗಿ ಈ ವಿಚಾರದಲ್ಲಿ ಬಹಳ ನಾಜೂಕಿನಿಂದ ಮುಂದವರಿಯುವುದರ ಜತೆಗೆ ದಲಿತರನ್ನು ಕೂಡಾ ನಿಧಾನವಾಗಿ ಈ ಉದ್ದೇಶಕ್ಕಾಗಿ ಒಲಿಸಿಕೊಳ್ಳುವ ಪ್ರಯತ್ನವೂ ನಡೆಯುತ್ತಿದೆ.  ದಲಿತ ರಾಜಕೀಯ ನಾಯಕರಿಗೆ ಆಯಕಟ್ಟಿನ ಹುದ್ದೆಗಳನ್ನು ಕೊಡುವಲ್ಲಿಂದ ಹಿಡಿದು, ಅಂಬೇಡ್ಕರ್ ಅವರ ಎಲ್ಲಾ ಸ್ಮಾರಕಗಳನ್ನು ಭವ್ಯವಾಗಿ ಪುನರ್ ನಿರ್ಮಾಣ ಮಾಡುವುದರಿಂದ ಹಿಡಿದು, ದಲಿತ-ಬುಡಕಟ್ಟು ಜನಾಂಗದ ಮಕ್ಕಳ ಮನಸ್ಸುಗಳನ್ನು ಶಾಲಾ ಹಂತದಿಂದಲೇ ‘ಧಾರ್ಮಿಕವಾಗಿ ಹದ’ಗೊಳಿಸಲು ತಮ್ಮದೇ ಶಾಲೆಗಳನ್ನು ತೆರೆಯುವುದರಿಂದ ಹಿಡಿದು ಎಲ್ಲವೂ ನಡೆಯುತ್ತಿದೆ. ಮೇಲ್ನೋಟಕ್ಕೆ ಇವೆಲ್ಲ ಸಹಜವಾದ  ಅಧಿಕಾರ ಹಂಚಿಕೆಯ ಮತ್ತು ಆಡಳಿತದ ಭಾಗ ಅಂತ ಅನ್ನಿಸ ಬಹುದು. ಆದರೆ ಇದರ ಹಿಂದೆ ಲೆಕ್ಕಾಚಾರ ಬೇರೆ ಇದ್ದಂತಿದೆ. ‘ದೊಡ್ಡ ಪ್ರಮಾಣದ ದಲಿತ ನಾಯಕ ವರ್ಗವನ್ನು ತಮ್ಮ ಕಡೆಗೆ ಒಲಿಸಿಕೊಂಡರೆ ಅಷ್ಟರ ಮಟ್ಟಿಗೆ ಸಂವಿಧಾನ ಬದಲಾವಣೆಗೆ ದಲಿತ ವರ್ಗದ ಪ್ರತಿರೋಧ ಕಡಿಮೆ ಆದಂತೆ ಆಗುತ್ತದೆ’ ಎನ್ನುವ ಲೆಕ್ಕಾಚಾರ ಅದು.  ಅಲ್ಲದೆ, ಸ್ವತಃ ಅಂಬೇಡ್ಕರ್ ಅವರೇ ಮುಂದಿನ ತಲೆಮಾರು ಬೇಕಾದರೆ ಸಂವಿಧಾನವನ್ನು ಬದಲಿಸಿಕೊಳ್ಳಲಿ ಎಂಬ ಅರ್ಥದ ಅಭಿಪ್ರಾಯ ವ್ಯಕ್ತಪಡಿಸಿದ್ದರು ಎಂದು ಜನರನ್ನು ನಂಬಿಸಲು ಅವರ ಬರಹ ಮತ್ತು ಭಾಷಣಗಳ ಕೆಲವು ಅಂಶಗಳನ್ನು ಸನ್ನಿವೇಶದಿಂದ ಪ್ರತ್ಯೇಕಿಸಿ ಎತ್ತಿತೋರಿಸುವ ಕೆಲಸವೂ ನಡೆದಿದೆ”.

ಸಂವಿಧಾನವನ್ನು ಈಗ ಉಳಿಸದಿದ್ದರೆ…

ಮತ್ತೆ ಸುಧೀರನ ವಿಷಯಕ್ಕೇ ಬರೋಣ. ಮೊದಲ ತಲೆಮಾರಿನ ಅಕ್ಷರಸ್ಥ ಸುಧೀರ ಯಾವ ಮೇಲ್ಜಾತಿಯವರಿಗೂ ಕಡಿಮೆಯಿಲ್ಲದಷ್ಟು ಬುದ್ದಿವಂತ. ಆತನ ಹಿರೀಕರಿಗೆ ಹಿಂದೆ ಜಾತಿ ಕಾರಣಕ್ಕೇ ಅವಕಾಶ ಇಲ್ಲವಾಗಿತ್ತು. ಆದರೆ ಭಾರತದ ಜಾತಿ ವಾಸ್ತವದ ಬಗ್ಗೆ ದೂರದೃಷ್ಟಿ ಹೊಂದಿದ್ದ ಬಾಬಾ ಸಾಹೇಬರ್ ಅವರು ಕೊಟ್ಟ ಸಂವಿಧಾನದಿಂದಾಗಿ ಈವತ್ತು ಸುಧೀರ ಒಳ್ಳೆಯ ಶಿಕ್ಷಣ ಪಡೆಯುವುದು ಸಾಧ‍್ಯವಾಗಿದೆ, ಉದ್ಯೋಗ ಪಡೆಯುವುದು ಸಾಧ್ಯವಾಗಿದೆ. ಇಂತಹ ಸಂವಿಧಾನವನ್ನೇ ತಿರಸ್ಕರಿಸಿ ಮತ್ತೆ ವರ್ಣಾಶ‍್ರಮದ ಧರ್ಮ ಆಧರಿತ ಸಂವಿಧಾನ ತರುವ ಯತ್ನ ಭರದಿಂದ ಸಿದ್ಧತೆ ನಡೆದಿದೆ. ಅದಕ್ಕೆ ಬೇಕಾದ ಮಾನಸಿಕ, ಬೌದ್ಧಿಕ, ಕಾನೂನಾತ್ಮಕ ಎಲ್ಲ ತಳಹದಿಯನ್ನೂ ಸಿದ್ಧಗೊಳಿಸಲಾಗುತ್ತಿದೆ. ನಮಗೆ ಸಮಾನತೆ, ಸಮಾನ ಹಕ್ಕು, ಘನತೆಯ ಬದುಕು ನೀಡಿದ ಸಂವಿಧಾನವನ್ನು ಈಗ ಉಳಿಸದಿದ್ದರೆ ಮುಂದೆ “ಮಿಂಚಿಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ” ಎಂದಾದೀತು. ಇಂತಹ ಸವಾಲಿನ ಕಾಲದಲ್ಲಿಯೇ ಕರ್ನಾಟಕದಲ್ಲಿ ಮಹತ್ವದ  ‘ದಲಿತರ ಸಾಂಸ್ಕೃತಿಕ ಪ್ರತಿರೋಧ’ ಸಮಾವೇಶ ನಡೆಯುತ್ತಿದೆ. ಇದೊಂದು ಆಶಾವಾದೀ ಬೆಳವಣಿಗೆ. ದಲಿತ ಶಕ್ತಿಗಳು ಒಂದುಗೂಡಿದರೆ ಸಾಧ್ಯವಾಗದ್ದು ಏನೂ ಇಲ್ಲ; ಯಾವ ಶಕ್ತಿಯೂ ಅದನ್ನು ಎದುರಿಸಿ ನಿಲ್ಲದು. ಅಂತಹ ಚಾರಿತ್ರಿಕ ಬೆಳವಣಿಗೆಗೆ ಈ ಸಮಾವೇಶ ಮುನ್ನುಡಿ ಬರೆಯುವಂತಾಗಲಿ ಎಂದು ಆಶಿಸೋಣ.

ಶ್ರೀನಿವಾಸ ಕಾರ್ಕಳ

ಚಿಂತಕರೂ, ಸಾಮಾಜಿಕ ಕಾರ್ಯಕರ್ತರೂ ಆಗಿರುವ ಇವರು ಸಾಹಿತ್ಯ ಕೃಷಿಯಲ್ಲೂ ತೊಡಗಿಕೊಂಡವರು.

You cannot copy content of this page

Exit mobile version