ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ವಾಹನ ರಹಿತ ವಲಯ ಎಂದು ಗುರುವಾರ ಘೋಷಿಸಿದ ಉತ್ತರ ಪ್ರದೇಶ ಆಡಳಿತವು, ವಿವಿಐಪಿ ಪಾಸ್ಗಳನ್ನು ರದ್ದು ಮಾಡಿದೆ. ಇಲ್ಲಿ ನಡೆದ ಕಾಲ್ತುಳಿತದಲ್ಲಿ ಕನಿಷ್ಠ 30 ಜನರು ಸಾವನ್ನಪ್ಪಿ, 60 ಜನರು ಗಾಯಗೊಂಡ ನಂತರ ಈ ಬೆಳವಣಿಗೆ ನಡೆದಿದೆ.
“ವಿವಿಐಪಿ ಪಾಸ್ಗಳನ್ನು ಹಿಂಪಡೆಯಲಾಗಿದೆ ಎಂದು ತಿಳಿಸಲಾಗಿದೆ, ಇನ್ನು ಮುಂದೆ ವಾಹನಗಳಿಗೆ ಅನುಮತಿ ಇಲ್ಲ,” ಎಂದು ಭದ್ರತಾ ಕರ್ತವ್ಯದಲ್ಲಿರುವ ಅಧಿಕಾರಿಯನ್ನು ಉಲ್ಲೇಖಿಸಿ ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಮೌನಿ ಅಮಾವಾಸ್ಯೆಯ ಸಂದರ್ಭದಲ್ಲಿ ಪವಿತ್ರ ಸ್ನಾನ ಮಾಡಲು ಹೆಚ್ಚಿನ ಸಂಖ್ಯೆಯ ಯಾತ್ರಾರ್ಥಿಗಳು ಆಗಮಿಸಿದ್ದರಿಂದ ಬುಧವಾರ ಮಧ್ಯರಾತ್ರಿ 1 ರಿಂದ 2 ಗಂಟೆಯ ನಡುವೆ ಕಾಲ್ತುಳಿತ ಸಂಭವಿಸಿದೆ.
ಭಕ್ತಾದಿಗಳ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಅಧಿಕಾರಿಗಳು ಇದೀಗ ಯಾತ್ರಾಸ್ಥಳಕ್ಕೆ ಹೋಗುವ ರಸ್ತೆಗಳನ್ನು ಏಕಮುಖವಾಗಿ ಮಾಡಿದ್ದಾರೆ.
ಫೆಬ್ರವರಿ 4 ರವರೆಗೆ ಪ್ರಯಾಗ್ರಾಜ್ ನಗರಕ್ಕೆ ಕಾರುಗಳು ಪ್ರವೇಶಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲು ನಿರ್ದೇಶನಗಳನ್ನು ನೀಡಲಾಗಿದೆ. ಹೆಚ್ಚುವರಿಯಾಗಿ, ಪಕ್ಕದ ಜಿಲ್ಲೆಗಳಿಂದ ಬರುವ ವಾಹನಗಳನ್ನು ಜಿಲ್ಲೆಯ ಗಡಿಗಳಲ್ಲಿ ನಿಲ್ಲಿಸಲಾಗುತ್ತಿದೆ.
ಗಂಗಾ, ಯಮುನಾ ಮತ್ತು ಪೌರಾಣಿಕ ಸರಸ್ವತಿ ನದಿಗಳು ಸಂಗಮಿಸುವ ಸಂಗಮ ಘಾಟ್ನಲ್ಲಿ ಭಕ್ತರ ಹರಿವನ್ನು ನಿರ್ವಹಿಸಲು ಮತ್ತು ಅವರು ಸ್ನಾನ ಮಾಡಿದ ನಂತರ ತಕ್ಷಣವೇ ಪ್ರದೇಶವನ್ನು ಖಾಲಿ ಮಾಡಿಸಲು ಹೆಚ್ಚಿನ ಸಂಖ್ಯೆಯ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಸಂಚಾರಕ್ಕೆ ಯಾವುದೇ ಅಡ್ಡಿಯಾಗದಂತೆ ಬೀದಿ ವ್ಯಾಪಾರಿಗಳಿಗೆ ಖಾಲಿ ಪ್ರದೇಶಗಳಿಗೆ ತೆರಳುವಂತೆ ಸೂಚಿಸಲಾಗಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಹೊಸ ನಿರ್ದೇಶನದ ಹಿನ್ನೆಲೆಯಲ್ಲಿ ವಾಹನಗಳಲ್ಲಿ ಆಗಮಿಸಿದ ಹಲವು ಯಾತ್ರಾರ್ಥಿಗಳನ್ನು ಜಿಲ್ಲಾ ಗಡಿಯಲ್ಲಿ ತಡೆದು, ನೂಕುನುಗ್ಗಲು ತಪ್ಪಿಸಲು ಭಕ್ತಾದಿಗಳಿಗೆ ಸಣ್ಣ ಸಣ್ಣ ಗುಂಪುಗಳಲ್ಲಿ ಬರಲು ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಇದು ನಿಯಂತ್ರಿತ ಬ್ಯಾಚ್ಗಳಲ್ಲಿ ಜನರು ಬರಲು ಅನುಮತಿಸುವ ಮೊದಲು ಈ ಪ್ರದೇಶದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಜನಸಂದಣಿ ಸೇರುತ್ತಿತ್ತು ಎಂದು ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಭಕ್ತಾದಿಗಳನ್ನು ಅನವಶ್ಯಕವಾಗಿ ನಿಲ್ಲಿಸದಂತೆ ನೋಡಿಕೊಳ್ಳಲು ಮುಖ್ಯಮಂತ್ರಿ ಆದಿತ್ಯನಾಥ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದು, ನಿರಂತರ ಜಾಗರೂಕತೆಯ ಅಗತ್ಯತೆ ಮತ್ತು ಮಾನವ ಸಂಚಾರದ ಸರಿಯಾದ ಹರಿವನ್ನು ಖಚಿತಪಡಿಸಿಕೊಳ್ಳಲು ಬ್ಯಾರಿಕೇಡ್ಗಳನ್ನು ಬಳಸಲು ಹೇಳಿದ್ದಾರೆ.