ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಮತ್ತು ಮುಂಬರುವ ಚುನಾವಣೆಗೆ ತನ್ನ ಪಾತ್ರ ಏನು ಎಂಬ ಬಗ್ಗೆ ಗೊಂದಲದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ತೊರೆಯುವ ನಿರ್ಧಾರಕ್ಕೆ ಮಾಜಿ ಸಂಸದರಾದ ಎಸ್.ಪಿ.ಮುದ್ದಹನುಮೇಗೌಡ ಬಂದಿದ್ದಾರೆ.
ಇಂದು ಬೆಳಿಗ್ಗೆ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರೊಂದಿಗಿನ ಮಾತುಕತೆ ನಂತರ ಮುದ್ದಹನುಮೇ ಗೌಡರು ಕಾಂಗ್ರೆಸ್ ಗೆ ರಾಜೀನಾಮೆ ನೀಡುವ ಬಗ್ಗೆ ಪ್ರಸ್ತಾಪಿಸಿದ್ದಾರೆ. ಕಾಂಗ್ರೆಸ್ ನಲ್ಲಿ ಎರಡು ಬಾರಿ ಅವಕಾಶ ವಂಚಿತರಾಗಿದ್ದ ಮುದ್ದಹನುಮೇ ಗೌಡರು ಮೂರನೇ ಬಾರಿಗೆ ಕುಣಿಗಲ್ ಕ್ಷೇತ್ರದ ಶಾಸಕ ಸ್ಥಾನದ ಆಕಾಂಕ್ಷಿ ಆಗಿದ್ದರು.
ಹಾಲಿ ಶಾಸಕರಾದ ಡಾ.ರಂಗನಾಥ್ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಹತ್ತಿರದ ಸಂಬಂಧಿಯಾದ ಕಾರಣ ಮುದ್ದಹನುಮೇಗೌಡರಿಗೆ ಮುಂದಿನ ಬಾರಿ ಟಿಕೆಟ್ ನೀಡಲು ನಿರಾಕರಿಸಿದ್ದಾರೆ ಎನ್ನಲಾಗಿದೆ. ಈ ಹಿಂದೆ ಮುದ್ದಹನುಮೇಗೌಡರು ರಾಜ್ಯಸಭಾ ಟಿಕೆಟ್ ಆಕಾಂಕ್ಷಿ ಆಗಿದ್ದರು. ಕೊನೆಯ ಕ್ಷಣದಲ್ಲಿ ಕಾಂಗ್ರೆಸ್ ನಿಂದ ಟಿಕೆಟ್ ವಂಚಿತರಾಗಿದ್ದರು. ನಂತರ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಗೆ ಮುದ್ದಹನುಮೇಗೌಡರ ಹೆಸರು ಮುಂಚೂಣಿಯಲ್ಲಿ ಇತ್ತು. ನಂತರ ಕಾಂಗ್ರೆಸ್ ಜೆಡಿಎಸ್ ಜಂಟಿ ಅಭ್ಯರ್ಥಿಯಾದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ ಕ್ಷೇತ್ರ ಬಿಡುವ ಕಾರಣ ಮತ್ತೆ ಮುದ್ದಹನುಮೇಗೌಡರು ಅವಕಾಶ ವಂಚಿತರಾಗಿದ್ದರು.
ಸಧ್ಯ ಈ ಎಲ್ಲಾ ಬೆಳವಣಿಗೆ ಆಧರಿಸಿ ಮುದ್ದಹನುಮೇಗೌಡ ರಾಜೀನಾಮೆ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ. ಅಲ್ಲದೇ ಮುಂದಿನ ಚುನಾವಣೆಗೆ ಕುಣಿಗಲ್ ಕ್ಷೇತ್ರದಿಂದಲೇ ಚುನಾವಣೆ ಸ್ಪರ್ಧಿಸುವುದು ಎಂದು ತಮ್ಮ ಆಪ್ತ ವಲಯದಲ್ಲಿ ಹೇಳಿಕೊಂಡಿದ್ದಾರೆ. ಕಾಂಗ್ರೆಸ್ ತೊರೆದ ಮೇಲೆ ಮುಂದೆ ಯಾವ ಪಕ್ಷ ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಮತ್ತೆ ಕಾಂಗ್ರೆಸ್ ಗೆ ಮರಳುವ ಪ್ರಶ್ನೆಯೇ ಇಲ್ಲ ಎಂಬಂತೆ ಯಾವ ರಾಜಿ ಸಂಧಾನಕ್ಕೂ ಬಾರದಂತೆ ಮುದ್ದಹನುಮೇಗೌಡರು ನಿರ್ಧರಿಸಿದ್ದಾರೆ.