“ಭೇಷಕ್ ತಮಾಷಾ ಟೈಗರ್ ನಿಶಾನಾ, ಟಿಪ್ಪುಸುಲ್ತಾನನ ಬಿರುದಾಯ್ತು | ಮಸಲತ್ ಮಾಡಿದ ಮೀರ್ ಸಾದಕ್ ನಿಗೆ, ದೇಶದ್ರೋಹಿ ಎಂಬ್ಹೆಸರಾಯ್ತು ||…” ವಿ.ಆರ್ ಕಾರ್ಪೆಂಟರ್ ಬರಹದಲ್ಲಿ
ಟಿಪ್ಪುವಿಗೆ ದ್ರೋಹ ಬಗೆದ ದಿವಾನ್ ಪೂರ್ಣಯ್ಯ, ಮೀರ್ ಸಾಧಕ್ಗಳ ಪಳೆಯುಳಿಕೆಗಳು ಇನ್ನೂ ಉಳಿದಿವೆ ಎಂಬುದಕ್ಕೆ ಕರ್ನಾಟಕ ಸಾಕ್ಷಿಯಾಗುತ್ತಿದೆ. ಇಲ್ಲದಿದ್ದರೆ, ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೂ ಮುನ್ನ ಬ್ರಿಟೀಷರ ಎದೆ ನಡುಗಿಸಿ, ತನ್ನ ಗರ್ಜನೆಯ ಛಾಪನ್ನು ದೇವನಹಳ್ಳಿಯಿಂದ ಚಿತ್ರದುರ್ಗದವರೆಗೆ, ಹಿಂದೂಪುರದಿಂದ ಮಧುರೈ ವರೆಗೆ ವಿಸ್ತರಿಸಿದ್ದ ಟಿಪ್ಪು ಇಂದು ವಿವಾದಾತ್ಮಕ ವ್ಯಕ್ತಿಯಾಗಿದ್ದಾನೆ. ಆತನಿಗೆ ಮೈಸೂರು ಹುಲಿ ಬಿರುದು ಕೊಟ್ಟಿದ್ದು ಯಾರು ಎಂಬ ಪ್ರಶ್ನೆಯನ್ನು ಪೂರ್ಣಯ್ಯನ ಪಳೆಯುಳಿಕೆಗಳು ಕೇಳುವಂತಾಗಿದೆ. ದುರಂತ ನೋಡಿ ಹೇಗಿದೆ…
ಇಂಥ ದುರಂತಗಳಿಗೆ ಸ್ಪಷ್ಟವಾದ ಮದ್ದನ್ನು ನಮ್ಮ ಜನಪದರು ಅಂದೇ ಅರೆದು ಕೊಟ್ಟು ಹೋಗಿದ್ದಾರೆ. ಇಂಥ ಹೀನ ಪ್ರಶ್ನೆಗಳು ಹುಟ್ಟಿದಾಗ ನಮ್ಮ ಜನಪದರು ಕೊಟ್ಟ ಮುಲಾಮನ್ನು ಹಚ್ಚಿ, ಆಗಲಿರುವ ಗಾಯವನ್ನು ಮೊದಲೇ ವಾಸಿ ಮಾಡಿಬಿಡಬೇಕು… ಅಲ್ವಾ?
ಹೌದು, ಗಾಯ ಕೀವುಗಟ್ಟಿ, ಅದು ಗ್ಯಾಂಗ್ರಿನ್ನೋ… ಮತ್ತಿನ್ನೊಂದೋ ಆಗುವ ಮೊದಲು ಸೂಕ್ತ ಔಷಧಿಯನ್ನು ಹುಡುಕಿ ಲೇಪಿಸಬೇಕು. ಅದನ್ನೇ ನಮ್ಮ ಜನಪದರು ಕೊಟ್ಟಿದ್ದಾರೆ. ಟಿಪ್ಪುವಿಗೆ ಮೈಸೂರು ಹುಲಿ ಎಂಬ ಬಿರುದು ಕೊಟ್ಟವರು ಯಾರು ಎಂಬ ವಿವಾದವನ್ನು ಜನಪದದ ಮೂಲಕವೇ ಹೊಡೆಯಬೇಕು. ಶ್ರೀರಾಮನನ್ನು ಮರ್ಯಾದಾ ಪುರುಶೋತ್ತಮ ಅಂದವರೇ ಟಿಪ್ಪುಗೆ ಮೈಸೂರು ಹುಲಿ ಅಂದರು!… ಹೌದು, ನೀವು ಭಾರತದ ಯಾವುದೇ ಮೂಲೆಗೆ ಹೋದರೂ ಅಲ್ಲೊಂದು ರಾಮನ ಕಥೆಯಿರುತ್ತದೆ. ಅಲ್ಲಿನ ಜನ ಅವರ ಕಲ್ಪನೆಗೆ ನಿಲುಕಿದಂತೆ ರಾಮನ ಕುರಿತು ಹಾಡು, ಕಥೆ, ಲಾವಣಿ ಕಟ್ಟಿ ಹಾಡುತ್ತಾರೆ. ವಾಲ್ಮೀಕಿ ಬರೆದ ರಾಮಾಯಣಕ್ಕೆ ಎಷ್ಟು ಮಹತ್ವ ಇದೆಯೋ ಅಷ್ಟೇ ಮಹತ್ವವನ್ನು ಉಳಿದ ನೂರಾರು ರಾಮಾಯಣಗಳಿಗೂ ಇರಬೇಕಿತ್ತು. ಬಟ್ ಅದಾಗಲಿಲ್ಲ… ಕಾರಣ ಕುತಂತ್ರ! ವಾಲ್ಮೀಕಿ ಮಹರ್ಷಿಯು ಎಂದೋ ಬರೆದಿಟ್ಟಿದ್ದ ರಾಮಾಯಣವನ್ನು ಮನುವಾದಿಗಳು ತಮಗೆ ಬೇಕಾದಂತೆ ಎಡಿಟ್ ಮಾಡಿ, ಅದೇ ಅಧಿಕೃತವೆಂದು ಬಿಂಬಿಸಿ ಅನೇಕ ಗೊಂದಲಗಳು, ಪ್ರಶ್ನೆಗಳು ಏಳುವಂತೆ ಮಾಡಿಬಿಟ್ಟಿದ್ದಾರೆ. ಪ್ರಜೆಗಳನ್ನು ಅಷ್ಟು ಚೆನ್ನಾಗಿ ಅರ್ಥ ಮಾಡಿಕೊಂಡು ಆದರ್ಶವಾದ ರಾಮರಾಜ್ಯ ಕಟ್ಟಿದ್ದ ಶ್ರೀರಾಮ ಶಂಭೂಕನ ತಲೆ ಕಡಿಯಲು ಹೇಗೆ ಸಾಧ್ಯ? ಹೆಣ್ಣು ಮಕ್ಕಳಿಗೆ ಗೌರವಯುತವಾದ ಸ್ಥಾನ ಕೊಟ್ಟಿದ್ದ ಶ್ರೀರಾಮಚಂದ್ರ ಶೂರ್ಪಣಕಿಯ ಮುಂದಲೆ ಮತ್ತು ಮೊಲೆ ಕತ್ತರಿಸಲು ಲಕ್ಷ್ಮಣನಿಗೆ ಆದೇಶ ಕೊಡುತ್ತಾನೆಂಬುದನ್ನು ನಂಬುವುದು ಹೇಗೆ? ಹೀಗಿರುವ ರಾಮನನ್ನು ಜನಪದರು ಮರ್ಯಾದಾ ಪುರುಶೋತ್ತಮ ಎಂದು ಯಾಕೆ ಕರೆಯುತ್ತಿದ್ದರು ಅಲ್ವ? ಅಸಲೀ ರಾಮ ಇದ್ದದ್ದೇ ಬೇರೆ, ಮನುವಾದಿಗಳು ಹೇಳುವ ರಾಮನೇ ಬೇರೆ… ಇಂಥ ಕುತಂತ್ರವನ್ನೇ ಈಗ ಟಿಪ್ಪು ವಿರುದ್ಧವೂ ಮಾಡಲು ಶುರುವಿಟ್ಟಿದ್ದಾರೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ…
ಹೌದು ಈ ಮನುವಾದಿಗಳು ಇಂದು ಜನರನ್ನು ಹಾದಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಸಾಥ್ ನೀಡುತ್ತಿರುವುದು ಮೇನ್ಸ್ಟ್ರೀಮ್ನಲ್ಲಿರುವ ಕೆಲವು ಟಿವಿ ಮಾಧ್ಯಮಗಳು. ಅವುಗಳು ಟಿಪ್ಪುವಿನ ನಿಜಾಂಶಗಳನ್ನು ಮುಚ್ಚಿಟ್ಟು, ಕೋಮುವಾದಿ, ಮನುವಾದಿಗಳು ಕೊಡುವ ಪ್ರೊಪೊಗಂಡಾದ ಟೂಲ್ಕಿಟ್ ಇಟ್ಟುಕೊಂಡು ಜನರ ಜ್ಞಾನಕ್ಕೆ ಮಂಕು ಬಡಿಸುತ್ತಿವೆ. ಆದರೆ, ಸತ್ಯ ಎಂಬುದು ಬೂದಿಮುಚ್ಚಿದ ಕೆಂಡದಂತಿರುತ್ತದೆ. ಅದಕ್ಕೆ ಅಗತ್ಯವಾದ ಗಾಳಿ ಎದ್ದಾಗ ಮತ್ತೆ ಪ್ರಜ್ವಲಿಸಲು ಶುರುವಾಗುತ್ತದೆ. ಅದರ ಅಗತ್ಯ ಈಗ ಎದ್ದಿದೆ. ಟಿಪ್ಪು ಯಾರೆಂದು ಕೇಳಿದವರಿಗೆ ಆತ ಮೈಸೂರು ಹುಲಿ ಎಂಬುದಕ್ಕಿಂತಲೂ ಬಹುಮುಖ್ಯವಾದ ಕೆಲವು ವಿಚಾರಗಳನ್ನು ಜನರಿಂದ, ಅವರು ಕಟ್ಟಿಕೊಟ್ಟಿರುವ ಲಾವಣಿಗಳಿಂದ ಮರೆಮಾಚಲು ಸಾಧ್ಯವೇ ಇಲ್ಲ…
ಈ ದೇಶದ ಪ್ರಪ್ರಥಮ ಸ್ವಾತಂತ್ರ್ಯ ಹೋರಾಟಗಾರ ಟಿಪ್ಪು ಸುಲ್ತಾನ್ ಮಾಡಿದ್ದೇನು ಗೊತ್ತ? 40,000 ಚದರ ಮೈಲಿ ಇದ್ದ ಮೈಸೂರು ಸಾಮ್ರಾಜ್ಯವನ್ನು 80,000 ಚದರ ಮೈಲಿ ವಿಸ್ತಾರ ಮಾಡಿದ್ದು ಈ ಟಿಪ್ಪು ಸುಲ್ತಾನ್. ಈಗಿನ ಕೆ.ಆರ್.ಎಸ್ ಜಲಾಶಯದ ನೀಲನಕ್ಷೆ ತಯಾರಿಸಿದ್ದು ಇದೇ ಟಿಪ್ಪು ಸುಲ್ತಾನ್… ದಕ್ಷಿಣ ಕರ್ನಾಟಕದ ದಲಿತ, ಶೂದ್ರರಿಗೆ ಮೊದಲಬಾರಿಗೆ ಉಚಿತವಾಗಿ ಭೂಮಿ ಹಂಚಿದವನು ಇದೇ ಟಿಪ್ಪು ಸುಲ್ತಾನ್… ದಲಿತರಿಗೆ ಸಾಮಾಜಿಕ ಬಹಿಷ್ಕಾರ ತಡೆದಿದ್ದು ಇದೇ ಟಿಪ್ಪು ಸುಲ್ತಾನ್… ದಲಿತ ಮಹಿಳೆಯರಿಗೆ ಮೊಲೆಗಂದಾಯ ವಿಧಿಸುತ್ತಿದ್ದ ಮನುವಾದಿಗಳ ಸೊಕ್ಕು ಮುರಿದು, ದೌರ್ಜನ್ಯವನ್ನು ತಡೆದದ್ದು ಇದೇ ಟಿಪ್ಪು ಸುಲ್ತಾನ್… ನಮ್ಮ ನಾಡಿಗೆ ರೇಷ್ಮೆ ಬೆಳೆ ತಂದು, ಲಕ್ಷಾಂತರ ರೈತರನ್ನು ಲಾಭದಾಯಕ ಕೃಷಿ ಮಾಡಲು ಸಾಧ್ಯ ಮಾಡಿದ್ದು ಇದೇ ಟಿಪ್ಪು ಸುಲ್ತಾನ್… ಮಸೀದಿ ಮುಂದೆ ದೇವಸ್ಥಾನ ಹಾಗೂ ದೇವಸ್ಥಾನದ ಮುಂದೆ ಮಸೀದಿ ನಿರ್ಮಿಸಿ ಕೋಮು ಸೌಹಾರ್ದತೆಗೆ ಉತ್ತಮ ಉದಾಹರಣೆ ನೀಡಿದ್ದು ಇದೇ ಟಿಪ್ಪು ಸುಲ್ತಾನ್… ಇದಕ್ಕೆ ಉದಾಹರಣೆ ಬೇಕಾದರೆ ಶ್ರೀರಂಗಪಟ್ಟಣ, ತಾಳವಾಡಿಗಳಲ್ಲಿರುವ ಮಂದಿರ ಮಸೀದಿಗಳನ್ನು ನೋಡುಬಹುದು… ಇಷ್ಟೇ ಅಲ್ಲದೆ, ನಂಜನಗೂಡಿನ ನಂಜುಂಡೇಶ್ವರ ದೇವಸ್ಥಾನದಲ್ಲಿ ಪಂಚಲಿಂಗ ಸ್ಥಾಪನೆ, ದೇವನಹಳ್ಳಿ ಕೋಟೆಯ ವೇಣುಗೋಪಾಲಸ್ವಾಮಿ, ಶೃಂಗೇರಿಯ ಶಾರದಾ ಪೀಠ, ತಮಿಳುನಾಡಿನ ನಾಮಕಲ್ ಕೋಟೆಯಲ್ಲಿರುವ ರಂಗನಾಥಸ್ವಾಮಿ ಮತ್ತು ನರಸಿಂಹಸ್ವಾಮಿ, ಬಾದಾಮಿಯ ಮಾತಾಪಿ, ಬೆಂಗಳೂರು ಕೋಟೆಯಲ್ಲಿರುವ ಗಣೇಶ ದೇವಸ್ಥಾನ ಮುಂತಾದವುಗಳ ಸ್ಥಾಪನೆಗೆ ಅಪಾರವಾದ ಹಣಕಾಸಿನ ನೆರವು ನೀಡಿದ್ದು ಕೂಡಾ ಇದೇ ಟಿಪ್ಪು ಸುಲ್ತಾನ್. ಹಾಗೆಯೇ, ವಿಶ್ವಕ್ಕೆ ಕ್ಷಿಪಣಿ ತಂತ್ರಜ್ಞಾನವನ್ನು ಪರಿಚಯಿಸಿ, ಅದರ ಮೂಲಕ ರಾಕೆಟ್ ತಯಾರಾಗುವುದಕ್ಕೆ ಕಾರಣೀಭೂತನಾದದ್ದು ಮೈಸೂರ್ ಹುಲಿ ಟಿಪ್ಪು ಸುಲ್ತಾನ್!

ಮರಾಠ ಹಿಂದುಗಳು ಕನ್ನಡ ಹಿಂದೂಗಳ ಪವಿತ್ರ ಸ್ಥಳವಾದ ಶೃಂಗೇರಿಯ ಶಾರದಾ ಪೀಠವನ್ನು ಧ್ವಂಸಗೊಳಿಸಿ ಲೂಟಿ ಮಾಡುತ್ತಿದ್ದಾಗ, ಅದರ ರಕ್ಷಣೆ ಮಾಡಿ, ಅದರ ದುರಸ್ತಿ ಕಾರ್ಯ ಮತ್ತು ಜೀರ್ಣೋದ್ಧಾರಕ್ಕೆ ಸಹಕಾರ ನೀಡಿದ್ದು ಟಿಪ್ಪು ಸುಲ್ತಾನ್… ಅಷ್ಟೇ ಅಲ್ಲ… ಯುದ್ಧದಲ್ಲಿ ಎದುರಾಳಿಗಳ ಹೆಣ್ಣು ಮಕ್ಕಳಿಗೆ ಮಾಡಿದ ದೌರ್ಜನ್ಯವನ್ನು ಖಂಡಿಸಿ, ತನ್ನದೇ ಸೈನ್ಯದಳ ಮುಖ್ಯಸ್ಥ ಮಕ್ಬೂಲ್ ಅಹ್ಮದ್ ನನ್ನು ಕೊಂದದ್ದು ಟಿಪ್ಪು ಸುಲ್ತಾನ್… ಯುದ್ಧದಲ್ಲಿ ಸೋತು, ಯುದ್ಧದ ವೆಚ್ಚವನ್ನು ಕಟ್ಟಿಕೊಡಬೇಕಾಗಿ ಬಂದಾಗ, ಹಣದ ಬದಲಿಗೆ ತನ್ನ ಮಕ್ಕಳನ್ನೇ ಅಡುವಿಟ್ಟಿದ್ದು ಟಿಪ್ಪು ಸುಲ್ತಾನ್… ಬ್ರಿಟಿಷ್ ಆಡಳಿತವನ್ನು ವಿರೋಧಿಸಿ 4 ಯುದ್ಧಗಳಲ್ಲಿ ಹೋರಾಡಿ, ಯುದ್ಧಭೂಮಿಯಲ್ಲೇ ಪ್ರಾಣಬಿಟ್ಟ ಏಕೈಕ ಅಪ್ಪಟ ಭಾರತೀಯ ರಾಜ ಟಿಪ್ಪು ಸುಲ್ತಾನ್… ಈಗ ಮೈಸೂರು ದಸರಾ ಶುರುವಾಗಿದೆ. ಈ ದಸರಾ ಹಬ್ಬವನ್ನು ನಾಡ ಹಬ್ಬವಾಗಿ ಘೋಷಿಸಿದ್ದು ಯಾರು ಗೊತ್ತೇನು? ಇದೇ ಟಿಪ್ಪು ಸುಲ್ತಾನ್! ಈಗ ನಿಮ್ಮ ಎದೆ ಮುಟ್ಟಿಕೊಂಡು ಹೇಳಿ, ಯಾರು ಈ ಟಿಪ್ಪು ಸುಲ್ತಾನ್? ಇಂಥ ಟಿಪ್ಪು ಸುಲ್ತಾನ್ ಬ್ರಿಟಿಷರ ಪಾದಸೇವೆ ಮಾಡಿಕೊಂಡಿದ್ದವರಿಗೆ ಪ್ರಿಯವಾಗಲು ಹೇಗೆ ಸಾಧ್ಯ? ಈ ಟಿಪ್ಪು ಇಂಥ ಜನಾನುರಾಗಿಯಾಗಿದ್ದ ಕಾರಣದಿಂದಲೇ ಜನಪದರು ತಮ್ಮ ಹಾಡುಗಳಲ್ಲಿ, ಲಾವಣಿಗಳಲ್ಲಿ ಟಿಪ್ಪುವನ್ನು ಕಟ್ಟಿಕೊಟ್ಟಿದ್ದಾರೆ…
ಭೇಷಕ್ ತಮಾಷಾ ಟೈಗರ್ ನಿಶಾನಾ
ಟಿಪ್ಪುಸುಲ್ತಾನನ ಬಿರುದಾಯ್ತು |
ಮಸಲತ್ ಮಾಡಿದ ಮೀರ್ ಸಾದಕ್ ನಿಗೆ
ದೇಶದ್ರೋಹಿ ಎಂಬ್ಹೆಸರಾಯ್ತು ||
ಟಿಪ್ಪು ತಂದೆಯು ಹೈದರಾಲಿಯು
ಮೈಸೂರ ಸೈನ್ಯದೊಳಿರುತಿದ್ದನು |
ಭೋಪರಿ ಶರ್ಯದಿ ದೇವನಹಳ್ಳಿ
ಮೇಣ್ ಚಿತ್ರದುರ್ಗವನ್ನು ಹಿಡಿದಿದ್ದನು ||
ಹೈದರ ಕಾಲದ ಮೈಸೂರು ದೇಶ
ಮೊದಲಿಗಿಂತ ಮುಂದೊರೆದಿತ್ತು |
ಹೈದರ ಆಲಿಗೆ ಖಾನ್ ಬಹದ್ದೂರ
ನವಾಬನೆಂಬುವ ಬಿರುದಿತ್ತು ||
ಅಪ್ಪ ಕಟ್ಟಿದ ಮೈಸೂರ ದೇಶ ದೊಡ್ಡದಿತ್ತಲ್ಲಾ |
ಟಿಪ್ಪುವಿನ ಕಾಲದೊಳು ಇನ್ನು ವಿಸ್ತರಿಸಿತಲ್ಲಾ ||
ಪದವಿಯೊ ಮೈಸೂರಿನ ಸುಲ್ತಾನ್ |
ಕದನದಿ ಮಂಗಳೂರ್ ಹಿಡಿದನು
ಕೈವಶ ಬೆದರಿತು ಲಂಡನ್ ||
ಮೈಸೂರು ಶಾಜಾನನ ಘರ್ಜನೆ ಕೇಳಿ ಲಂಡನ್
ಪಳುಗಳು ಬೆದರೊಯ್ತು |
ಮಸಲತ್ ಮಾಡಿದ ಮೀರ್ ಸಾದಕ್ ನಿಗೆ
ದೇಶದ್ರೋಹಿ ಎಂಬ್ಹೆಸರಾಯ್ತು||
(ಖ್ಯಾತ ಸಾಹಿತಿ, ವಿದ್ವಾಂಸ ಲಿಂಗದೇವರು ಹಳೆಮನೆ ಅವರು ಸಂಪಾದಿಸಿ 2003ರಲ್ಲಿ ಪ್ರಕಟಿಸಿದ ಧೀರ ಟಿಪ್ಪುವಿನ ಲಾವಣಿಗಳು ಕೃತಿಯಿಂದ ಆರಿಸಲಾದ ಪದ್ಯ)
ವಿ.ಆರ್.ಕಾರ್ಪೆಂಟರ್