ಮಾರ್ಚ್ 17 ರಂದು ನಗರದಲ್ಲಿ ಭುಗಿಲೆದ್ದ ಹಿಂಸಾಚಾರದಲ್ಲಿ ಭಾಗಿಯಾಗಿದ್ದಾನೆ ಎಂದು ಆರೋಪಿಸಿ ಫಾಹೀಮ್ ಖಾನ್ ಎಂಬ ವ್ಯಕ್ತಿಯ ಮನೆಯ ಭಾಗಗಳನ್ನು ನಾಗ್ಪುರದ ಅಧಿಕಾರಿಗಳು ಸೋಮವಾರ ಕೆಡವಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಅಲ್ಪಸಂಖ್ಯಾತರ ಪ್ರಜಾಸತ್ತಾತ್ಮಕ ಪಕ್ಷದ ನಾಯಕ ಖಾನ್ ಮತ್ತು ಇತರ ಐವರ ವಿರುದ್ಧ ದೇಶದ್ರೋಹ ಮತ್ತು ಘರ್ಷಣೆಗಳಿಗೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮದಲ್ಲಿ ತಪ್ಪು ಮಾಹಿತಿ ಹರಡಿದ ಆರೋಪ ಹೊರಿಸಲಾಗಿದೆ.
ಮಹಾರಾಷ್ಟ್ರದ ಛತ್ರಪತಿ ಸಂಭಾಜಿ ನಗರದಲ್ಲಿರುವ ಮೊಘಲ್ ಚಕ್ರವರ್ತಿ ಔರಂಗಜೇಬನ ಸಮಾಧಿಯನ್ನು ತೆಗೆದುಹಾಕಬೇಕೆಂದು ಒತ್ತಾಯಿಸಿ ಹಿಂದುತ್ವವಾದಿ ಗುಂಪುಗಳು ನಾಗ್ಪುರದಲ್ಲಿ ಪ್ರತಿಭಟನೆ ನಡೆಸಿದ ಕೆಲವೇ ಗಂಟೆಗಳ ನಂತರ ಹಿಂಸಾಚಾರ ಭುಗಿಲೆದ್ದಿತು .
“ಸರಿಯಾದ ತನಿಖೆ”ಯ ನಂತರ ಕೆಡವಲಾಗಿದೆ ಎಂದು ನಾಗ್ಪುರ ಮುನ್ಸಿಪಲ್ ಕಾರ್ಪೊರೇಷನ್ನ ಉಪ ಎಂಜಿನಿಯರ್ ಸುನಿಲ್ ಗಜ್ಭಿಯೆ ತಿಳಿಸಿದ್ದಾರೆ .
“ಅಕ್ರಮ ಕಟ್ಟಡ ನಿರ್ಮಾಣದ ಬಗ್ಗೆ ಬಂದ ದೂರನ್ನು ತನಿಖೆ ಮಾಡಲು ನಮಗೆ ಆದೇಶವಿತ್ತು. ನಾವು ಸರಿಯಾದ ತನಿಖೆ ನಡೆಸಿದ್ದೇವೆ. MRTP ಕಾಯ್ದೆಯ [1966 ಮಹಾರಾಷ್ಟ್ರ ಪ್ರಾದೇಶಿಕ ಮತ್ತು ಪಟ್ಟಣ ಯೋಜನಾ ಕಾಯ್ದೆ] ಸೆಕ್ಷನ್ 53(1) ರ ಪ್ರಕಾರ 24 ಗಂಟೆಗಳ ಕಾಲ ನೋಟಿಸ್ ನೀಡಲಾಗಿತ್ತು. ಅವಧಿ ಪೂರ್ಣಗೊಂಡ ತಕ್ಷಣ, ಈ ಕ್ರಮ ಕೈಗೊಳ್ಳಲಾಯಿತು,” ಎಂದು ಗಜ್ಭಿಯೆ ಹೇಳಿದ್ದಾರೆ.
ಭಾರತೀಯ ಕಾನೂನಿನಲ್ಲಿ ಶಿಕ್ಷೆಯ ಕ್ರಮವಾಗಿ ಆಸ್ತಿಯನ್ನು ಕೆಡವಲು ಅವಕಾಶ ನೀಡುವ ಯಾವುದೇ ನಿಬಂಧನೆಗಳಿಲ್ಲ. ಆದಾಗ್ಯೂ, ಭಾರತೀಯ ಜನತಾ ಪಕ್ಷ ಆಡಳಿತವಿರುವ ರಾಜ್ಯಗಳಲ್ಲಿ ಈ ಕರಾಳ ಪದ್ಧತಿ ಜಾರಿಯಲ್ಲಿದೆ.
ನವೆಂಬರ್ನಲ್ಲಿ ಸುಪ್ರೀಂ ಕೋರ್ಟ್, ಅಪರಾಧಗಳ ಆರೋಪ ಹೊತ್ತಿರುವ ವ್ಯಕ್ತಿಗಳ ಆಸ್ತಿಗಳನ್ನು ಶಿಕ್ಷಾರ್ಹ ಕ್ರಮವಾಗಿ ಕೆಡವುವುದನ್ನು ಕಾನೂನುಬಾಹಿರ ಎಂದು ತೀರ್ಪು ನೀಡಿತು. ಅಕ್ರಮ ಅತಿಕ್ರಮಣಗಳನ್ನು ತೆಗೆದುಹಾಕುವ ಮೊದಲು ಪ್ರಕ್ರಿಯೆಗಳನ್ನು ಅನುಸರಿಸಬೇಕು ಎಂದು ಅದು ಹೇಳಿತ್ತು.
“ಯಾರಾದರೂ ಅಂತಹ ಹಿಂಸಾಚಾರ ಮಾಡಿದರೆ ಅವರ ಮನೆಯ ಮೇಲೆ ಅಲ್ಲ, ಅವರ ಮೇಲೆಯೇ ಬುಲ್ಡೋಜರ್ ಹತ್ತಿಸಬೇಕು ” ಎಂದು ರಾಜ್ಯ ಸಚಿವ ಪ್ರತಾಪ್ ಸರ್ನಾಯಕ್ ವರದಿಗಾರರಿಗೆ ಹೇಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ .