Home ರಾಜ್ಯ ಹೊಸ ಜಾತಿ ಗಣತಿ ಸಂಪೂರ್ಣ ಪಾರದರ್ಶಕವಾಗಿರಲಿದೆ : ಡಿ.ಕೆ. ಶಿವಕುಮಾರ್

ಹೊಸ ಜಾತಿ ಗಣತಿ ಸಂಪೂರ್ಣ ಪಾರದರ್ಶಕವಾಗಿರಲಿದೆ : ಡಿ.ಕೆ. ಶಿವಕುಮಾರ್

0

ರಾಜ್ಯದಲ್ಲಿ ಹೊಸ ಜಾತಿ ಗಣತಿಯನ್ನು ಸಂಪೂರ್ಣ ಪಾರದರ್ಶಕವಾಗಿ, ಯಾವುದೇ ಸಂದೇಹಕ್ಕೆ ಅವಕಾಶ ನೀಡದಂತೆ ನಡೆಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಂಗಳವಾರ ತಿಳಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಡಿ ಕೆ ಶಿವಕುಮಾರ್, ದೆಹಲಿಯಲ್ಲಿ ಕಾಂಗ್ರೆಸ್‌ನ ಉನ್ನತ ನಾಯಕರೊಂದಿಗೆ ರಾಜ್ಯದ ವಿವಿಧ ವಿಷಯಗಳ ಕುರಿತು ಚರ್ಚಿಸಿದರು.

“ಹಿಂದಿನ ಜಾತಿ ಗಣತಿಯ ದತ್ತಾಂಶದ ನಿಖರತೆ ಕುರಿತ ಅನುಮಾನ ಮತ್ತು ಕೆಲವು ಸಮುದಾಯಗಳನ್ನು ಸರಿಯಾಗಿ ಎಣಿಸಿಲ್ಲ ಎನ್ನುವ ಆತಂಕಗಳನ್ನು ತೊಡೆದುಹಾಕಲು ನಿರ್ಧರಿಸಲಾಗಿದೆ. ಮನೆ-ಮನೆ ಭೇಟಿ ಮತ್ತು ಆನ್‌ಲೈನ್ ಸಮೀಕ್ಷೆಯ ಮೂಲಕ ಮತ್ತೊಮ್ಮೆ ವಿವರಗಳನ್ನು ಸಂಗ್ರಹಿಸಲಾಗುವುದು. ಈ ಸಂಪೂರ್ಣ ಪ್ರಕ್ರಿಯೆಯನ್ನು ಅತ್ಯಂತ ಪಾರದರ್ಶಕವಾಗಿ ನಡೆಸಲಾಗುವುದು” ಎಂದು ಎಐಸಿಸಿ ನಾಯಕರೊಂದಿಗಿನ ಸಭೆಯ ಬಳಿಕ ಡಿ ಕೆ ಶಿವಕುಮಾರ್ ಮಾಧ್ಯಮಗಳಿಗೆ ತಿಳಿಸಿದರು.

“ಜೂನ್ 12ರಂದು ನಡೆಯಲಿರುವ ಮುಂದಿನ ಕ್ಯಾಬಿನೆಟ್ ಸಭೆಯಲ್ಲಿ ಪುನರ್ ಜಾತಿ ಗಣತಿ‌ ಯೋಜನೆಯನ್ನು ಅಂತಿಮಗೊಳಿಸುವ ಉದ್ದೇಶವಿತ್ತು. ಹಿಂದಿನ ಗಣತಿಯ ಬಗ್ಗೆ ಹಲವು ಸಮುದಾಯಗಳು ವ್ಯಕ್ತಪಡಿಸಿರುವ ಆತಂಕಗಳನ್ನು ಗಮನದಲ್ಲಿಟ್ಟುಕೊಂಡು, ನಮ್ಮ ರಾಷ್ಟ್ರೀಯ ನಾಯಕರು ಜಾತಿ ಗಣತಿಯನ್ನು ಪುನಹ ನಡೆಸುವಂತೆ ಸೂಚಿಸಿದ್ದಾರೆ. ಈ ಪ್ರಕ್ರಿಯೆಯು ನ್ಯಾಯಯುತವಾಗಿರಬೇಕು ಮತ್ತು ಪಾರದರ್ಶಕವಾಗಿರಬೇಕು, ಇದು ಎಲ್ಲ ಸಮುದಾಯಗಳ ಆತಂಕಗಳನ್ನು ಇಲ್ಲವಾಗಿಸಬೇಕು ಎಂದು ಆದೇಶಿಸಿದ್ದಾರೆ” ಎಂದು ಅವರು ಹೇಳಿದರು.

“ನಮ್ಮ ಹಿರಿಯ ನಾಯಕರ ಈ ನಿರ್ಧಾರವು ಪ್ರತಿ ಕುಟುಂಬಕ್ಕೂ ಜಾತಿ ಗಣತಿಯಲ್ಲಿ ಗಣನೆಗೆ ಒಳಪಡುವ ಅವಕಾಶವನ್ನು ಒದಗಿಸುವ ಹೆಜ್ಜೆಯಾಗಿದೆ. ಎಲ್ಲ ಸಮುದಾಯಗಳ ನಾಯಕರು ಮತ್ತು ಸ್ವಾಮಿಗಳು ಈ ಗಣತಿಗೆ ಸಹಕಾರ ನೀಡಬೇಕೆಂದು ಮನವಿ ಮಾಡುತ್ತೇನೆ” ಎಂದು ಶಿವಕುಮಾರ್ ಮನವಿ ಮಾಡಿದರು.

ಹೊಸ ಜಾತಿ ಗಣತಿಯ ಬಗ್ಗೆ ಜನರು ಚಿಂತೆ ಮಾಡಬೇಕಿಲ್ಲ ಎಂದು ಭರವಸೆ ನೀಡಿದ ಉಪಮುಖ್ಯಮಂತ್ರಿ, “ಹಿಂದಿನ ಜಾತಿ ಗಣತಿಯ ಕುರಿತು ವ್ಯಕ್ತವಾದ ಎಲ್ಲ ಆತಂಕಗಳನ್ನು ಸರಿಪಡಿಸಲಾಗುವುದು. ರಾಜ್ಯದಿಂದ ಹೊರಗಿರುವ ಜನರಿಗೂ ಗಣನೆಗೆ ಒಳಪಡಲು ಆನ್‌ಲೈನ್ ಆಯ್ಕೆಯನ್ನು ನೀಡಲಾಗುತ್ತದೆ” ಎಂದು ತಿಳಿಸಿದರು.

2015ರಲ್ಲಿ ನಡೆದ ಜಾತಿ ಗಣತಿಯನ್ನು ಡಿ ಕೆ ಶಿವಕುಮಾರ್ ಸೇರಿದಂತೆ ಹಲವು ನಾಯಕರು ವಿರೋಧಿಸಿದ್ದರು ಮತ್ತು ಮರು ಗಣತಿಗೆ ಒತ್ತಾಯಿಸಿದ್ದರು.

You cannot copy content of this page

Exit mobile version