ಕೇಂದ್ರ ಹಣಕಾಸು ಸಚಿವೆ ಬುಧವಾರ ಮಂಡಿಸಿದ 2023-24ನೇ ಸಾಲಿನ ಬಜೆಟ್ನಲ್ಲಿ ಕೃಷಿ ಆಧಾರಿತ ಗ್ರಾಮೀಣ ಆರ್ಥಿಕತೆಗೆ ಹೆಚ್ಚು ಒತ್ತು ಕೊಡದೆ ಮೂಲ ಉತ್ಪಾದಕರ ಬದಲು ಎರಡನೇ/ ಮೂರನೇ ಹಂತದ ಮೌಲ್ಯವರ್ಧನೆಯ ಮಂದಿಗೆ ಸಹಾಯ ಮಾಡುವತ್ತ ಸರಕಾರದ ಧ್ಯಾನ ಇದೆ ಎಂದು ವಿಶ್ಲೇಷಿಸುತ್ತಾರೆ ಕೃಷಿ ತಜ್ಞ ಕೆ ಪಿ ಸುರೇಶ.
ಈ ಬಾರಿಯ ಬಜೆಟ್ಟಿನಲ್ಲಿ ಗ್ರಾಮೀಣ ಭಾರತ ನಿರ್ಲಕ್ಷ್ಯಕ್ಕೊಳಗಾಗಿದ್ದು, ಆದಾಯ ತೆರಿಗೆಯ ದ್ವಿಮುಖ ನೀತಿ ಇತ್ಯಾದಿ ಬಗ್ಗೆ ವಿವರಗಳು ಈಗಲೇ ಎಲ್ಲೆಡೆ ಪ್ರಸ್ತುತಿಯಾಗಿದೆ. ವಿಶೇಷ ಯೋಜನೆಗಳೆಂಬಂತೆ ಕೆಲವು ಹೈ ಲೈಟ್ ಆಗಿವೆ. ಇಡೀ ಬಜೆಟ್ ನೋಡಿದರೆ ಸರಕಾರದ ಸಿನಿಕತನ ಮತ್ತು ತಾನೇ ಸೃಷ್ಟಿಸಿದ ಆರ್ಥಿಕ ಉಸುಕು ಗುಂಡಿಯೊಳಗೆ ಇಷ್ಟಿಷ್ಟೇ ದೇಶವನ್ನು ಇಳಿಸುತ್ತಿರುವ ಬಗೆ ಢಾಳಾಗಿ ಗೋಚರಿಸುತ್ತದೆ. ಎಲ್ಲಾ ಸರಕಾರಗಳೂ ಬಲು ದೊಡ್ಡ ನೈತಿಕ ಧ್ಯೇಯೋದ್ದೇಶಗಳನ್ನು ಘೋಷಿಸಿಯೇ ಬಜೆಟ್ ಮಂಡನೆ ಮಾಡೋದು. ಬಜೆಟ್ ಅಷ್ಟೇ ಅಲ್ಲ, ಎಲ್ಲಾ ಭಾಷಣಗಳೂ. ಪ್ರಧಾನಿಯವರೇ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದಿರಲಿಲ್ಲವೇ? ಈ ಆದರ್ಶದ ಧ್ಯೇಯ ಮತ್ತು ಗುರಿ ಸರಕಾರದ ಉತ್ತರದಾಯಿತ್ವದ ಲಕ್ಷಣ.
ಈ ಕಾರ್ಯಕ್ರಮಗಳಿಗೊಂದು ಆರ್ಥಿಕ ಮಿತಿಯಿದೆ; ನಿಜ. ಆದರೆ ಇರುವ ಸಂಪನ್ಮೂಲಗಳಲ್ಲೇ ತನ್ನ ಆದ್ಯತೆ, ಕಾಳಜಿ ಮತ್ತು ಅಭಿವೃದ್ಧಿಯ ದೂರಗಾಮಿ ಫಲಿತಗಳು ಅನಾವರಣಗೊಳ್ಳಬೇಕು. ಈ ಬಜೆಟ್ ಜೊತೆಗೆ ಸರಕಾರ ಇನ್ನೊಂದು ದಾಖಲೆ ಬಿಡುಗಡೆ ಮಾಡುತ್ತೆ. ಯೋಜನೆ- ಫಲಿತಗಳ (output- outcome indicator) ದಾಖಲೆ ಅದು. ಇದರಲ್ಲಿ ಪ್ರತೀ ಯೋಜನೆಯ ಭೌತಿಕ ಪುರಾವೆ ಏನು? ದೂರಗಾಮಿಯಾಗಿ ಅದು ಏನು ಪರಿಣಾಮ ಬೀರುತ್ತದೆ ಎಂಬ ಸ್ಪಷ್ಟ ವಿವರ ಇರುತ್ತದೆ. ಇದನ್ನು ಗಮನಿಸಿದರೆ ಸರಕಾರದ ಬಹುತೇಕ ಯೋಜನೆಗಳ ಪೊಳ್ಳುತನ ಗೊತ್ತಾಗುತ್ತದೆ.
ಈ ಬಾರಿ ಗ್ರಾಮ ಭಾರತವನ್ನು ನಿರ್ಲಕ್ಷ್ಯ ಮಾಡಿದ ಹತ್ತೆಂಟು ಉದಾಹರಣೆಗಳು ಈ ಕಾಳಜಿ ರಹಿತ ನಿರ್ಲಕ್ಷ್ಯವನ್ನು ತೋರಿಸುತ್ತದೆ. ಜೊತೆಗೇ ಹೊಸ ಸಪ್ತರ್ಷಿ ಮುಂತಾದ ಯೋಜನೆಗಳ ಪೊಳ್ಳುತನವೂ ಬಯಲಾಗುತ್ತದೆ. ನಮ್ಮ ಕೃಷಿಯ ಸಮಸ್ಯೆ ಮೊದಲು ಉತ್ಪಾದಕತೆಯದ್ದು, ಎರಡನೆಯದು ಲಾಭದಾಯಕ ಬೆಲೆ, ಮೂರನೆಯದು ಸಾಗಣೆಯಲ್ಲಾಗುವ ನಷ್ಟ (ಇದು ಕೊಳೆವ ಕೃಷಿ ಉತ್ಪನ್ನಗಳಿಗೆ ಮಾತ್ರ ಅನ್ವಯ. ನಮ್ಮ ಬಹುತೇಕ ಬೆಳೆಗಳು ಧಾನ್ಯ, ಬೇಳೆಕಾಳು, ಎಣ್ಣೆಕಾಳು- ಇವೇನು ಕೊಳೆವ ವಸ್ತುಗಳಲ್ಲ. ಅವುಗಳ ಉತ್ಪಾದಕತೆ ಸುಧಾರಣೆಗೆ ಸಹಾಯ ಮತ್ತು ಬೆಲೆ ಬಂದಾಗ ಮಾರಲು ಬೇಕಾದ ದಾಸ್ತಾನು ಸಾಲ ದೊರೆತರೂ ರೈತ ಬದುಕಿ ಕೊಳ್ಳುತ್ತಾನೆ. ಇವೆರಡೂ ಸರಕಾರದ ಮಧ್ಯಸ್ಥಿಕೆಯಿಂದಷ್ಟೇ ಸಾಧ್ಯ. ಇಲ್ಲಿ ಹೆಗಲು ಜಾರಿಸಿಕೊಳ್ಳುವ ಸರಕಾರ ಸ್ಟಾರ್ಟ್ ಅಪ್ ಇತ್ಯಾದಿ ಮಾತಾಡುತ್ತದೆ. ಸಿರಿಧಾನ್ಯಗಳ ರಫ್ತು ಬಗ್ಗೆ ಮಾತಾಡುತ್ತದೆ. ಅರ್ಥಾತ್ ಸರಕಾರದ ಧ್ಯಾನ ಮೂಲ ಉತ್ಪಾದಕರ ಬದಲು ಎರಡನೇ/ ಮೂರನೇ ಹಂತದ ಮೌಲ್ಯವರ್ಧನೆಯ ಮಂದಿಗೆ ಸಹಾಯ ಮಾಡುವತ್ತ ಇದೆ. ಬುಡ ಗಟ್ಟಿಯಾದ ಮೇಲೆ ತಾನೇ ಇದು?
ಈ ಉಡಾಫೆ ಯಾವ ಮಟ್ಟಿಗಿದೆ ಎಂದರೆ ಯಾವನೋ ಒಬ್ಬ ಅಧಿಕಾರಿ ಘೋಷಿಸಬಹುದಾಗಿದ್ದ , “ರಾಜ್ಯ ರಾಜಧಾನಿಯಲ್ಲಿ ಒಂದು ಜಿಲ್ಲೆ ಒಂದು ಉತ್ಪನ್ನದ ಮಾಲ್” ಎಂಬ ಪಡಪೋಷಿ ಚಟುವಟಿಕೆ ಬಜೆಟ್ ಘೋಷಣೆಯಾಗುತ್ತದೆ. ಈ ಸಾಂಕೇತಿಕ ಮಳಿಗೆಗಳು, ಪ್ರದರ್ಶನಗಳು ಪ್ರೋತ್ಸಾಹಕ ಚಟುವಟಿಕೆಗಳೇ ಹೊರತು ಮೂಲ ಪ್ರೋತ್ಸಾಹ ಅಲ್ಲ. ಇಂಥಾ ಹತ್ತಾರು ಉದಾಹರಣೆಗಳನ್ನು ಈ ಬಜೆಟ್ಟಿನಿಂದ ಉದಾಹರಿಸಬಹುದು. ಬೇರು ಮಟ್ಟದಲ್ಲಿ ಇರುವ ಮುಖ್ಯ ಸಮಸ್ಯೆಗಳನ್ನು ನಿರ್ದಿಷ್ಟವಾದ ಪರಿಹಾರಗಳ ಮೂಲಕ ಬೆಸೆಯಬಹುದು. ಉದಾ: ಕೃಷಿಗೆ ಬೇಕಾದ ಒಳಸುರಿಗಳು, ಮಣ್ಣಿನ ಫಲವತ್ತತೆ ಹೆಚ್ಚಿಸುವ ಕಾರ್ಯಕ್ರಮ, ಉತ್ಪಾದನೆಯ ಮೇಲೆ ಅಡಮಾನ ಸಾಲ, ಮಾರುಕಟ್ಟೆ ಕುಸಿದಾಗ ಮಧ್ಯಪ್ರವೇಶ- ಹೀಗೆ. ಇಂತಹ ಯಾವುದರಲ್ಲೂ ಈ ಬಜೆಟ್ ಕಿಂಚಿತ್ತೂ ಗಂಭೀರವಾದ ಕಾರ್ಯಕ್ರಮಗಳನ್ನು ರೂಪಿಸಿಲ್ಲ. ಸಿರಿಧಾನ್ಯ- ಮಿಲ್ಲೆಟ್ ವರ್ಷ ಅಂತ ತಾರೀಫು ಮಾಡುತ್ತಾ ಹೈದರಾಬಾದಿನ ಕೇಂದ್ರ ಸಂಶೋಧನಾ ಸಂಸ್ಥೆಗೆ ಗರಿ ತೊಡಿಸುವ ಘೋಷಣೆ ಮಾಡಿದ್ದಾರೆ. ಈ ಕೇಂದ್ರದಿಂದ ಸಿರಿಧಾನ್ಯ ಬೆಳೆಯುವ ರೈತರಿಗೆ ಏನಾದರೂ ಅನುಕೂಲವಾಗಿದ್ದರೆ ನನ್ನಾಣೆ! ಇದೇ ವೇಳೆ ಕರ್ನಾಟಕ ಸರಕಾರ ಸಿರಿಧಾನ್ಯಕ್ಕಿದ್ದ ಪ್ರೋತ್ಸಾಹ ಧನವನ್ನು ೧೦ ಸಾವಿರದಿಂದ ೬ ಸಾವಿರಕ್ಕಿಳಿಸಿದೆ. ಇದು ಕೇಂದ್ರ ಸರಕಾರಕ್ಕೆ ಗೊತ್ತಿಲ್ಲವೇ? ಇನ್ನೊಂದೆಡೆ ಕಳೆದ ಸಾಲಿನಲ್ಲಿ ಮಾರುಕಟ್ಟೆ ಮಧ್ಯ ಪ್ರವೇಶಕ್ಕೆ ಕೇವಲ ೧೫೦೦ ಕೋಟಿ ಇಟ್ಟಿದ್ದರು. ಇದೇ ನಿರ್ಲಕ್ಷ್ಯದ ದ್ಯೋತಕವೆಂದು ಹೇಳಲಾಗಿತ್ತು. ಈ ಬಾರಿ ಈ ಅನುದಾನ ಶೂನ್ಯಕ್ಕಿಳಿದಿದೆ!
ಮೂಲ ಸಂರಚನೆಯ ಅಭಿವೃದ್ಧಿಗೆ ದಶಲಕ್ಷ ಕೋಟಿ ವಿನಿಯೋಗ ಎಂದು ಘೋಷಿಸಿದೆ. ಇದು ಮೂಲತಃ ಬೃಹತ್ ಹೆದ್ದಾರಿಗಳ ನಿರ್ಮಾಣಕ್ಕೆ ಹೋಗುತ್ತದೆ. ಈ ಹೆದ್ದಾರಿಗಳು ಸ್ಥಳೀಯ ಆರ್ಥಿಕತೆ ಮತ್ತು ಆರ್ಥಿಕ ಚಟುವಟಿಕೆಗಳ ಮೇಲೆ ಚಪ್ಪಡಿ ಎಳೆಯುವುದನ್ನು ಲೇಟೆಸ್ಟಾಗಿ ನೋಡಲು ಬೆಂಗಳೂರಿನಿಂದ ರಾಮನಗರ, ಚನ್ನಪಟ್ಟಣ, ಮದ್ದೂರು ಮಂಡ್ಯಗಳನ್ನು ನೋಡಬೇಕು! ಅರ್ಥಾತ್ ಇಡೀ ಕೇಂದ್ರ ಸರಕಾರದ ಲಕ್ಷ್ಯ ಆಧುನಿಕ ಮಾದರಿ ಗ್ರಾಹಕತೆ, ಅದರ ವರ್ತನೆಗಳನ್ನು ಪೋಷಿಸುವತ್ತ ಇದೆ. ಹೆದ್ದಾರಿ, ನಿಲುಗಡೆ ರಹಿತ ಪಯಣ, ರಫ್ತು, ಮಾಲ್, ಹೀಗೆ ಸರಕಾರದ ಧ್ಯಾನ ಅನಾವರಣಗೊಳ್ಳುತ್ತಾ ಹೋಗಿದೆ. ಇತ್ತ ಗ್ರಾಮೀಣ ಭಾರತ, ನಮ್ಮ ಸಣ್ಣ ಪಟ್ಟಣಗಳು ಕಸ ಕಡ್ಡಿ, ತ್ಯಾಜ್ಯ ತುಂಬಿ ವೃಣದಂತಾಗಲಿವೆ.
ಗ್ರಾಮ ಭಾರತ, ಅದರ ಕೃಷಿ, ಅಲ್ಲಿನ ವಲಸೆ ನಿಯಂತ್ರಣ, ಅಲ್ಲಿ ಗೃಹ ಕೈಗಾರಿಕೆಗೆ ಪ್ರೋತ್ಸಾಹ, ಹಾಗೇ ಸಣ್ಣ ಪಟ್ಟಣಗಳನ್ನು ಸಹನೀಯಗೊಳಿಸುವ ಬಗ್ಗೆ ಆದ್ಯತೆ ಕೊಟ್ಟಿದ್ದರೆ ಅವು ಚೇತರಿಸಿಕೊಂಡು ಸ್ವಯಂ ಮೇಲಿನ ಹಂತದ ಪೂರೈಕೆದಾರರಾಗಿ ಬೆಳೆಯುತ್ತಿದ್ದವು. ಇದಕ್ಕಾಗಿ ಶ್ಯಾಮಪ್ರಸಾದ್ ಮುಖರ್ಜಿ ರುರ್ಬನ್ ಮಿಶನ್ ಅಂತ ಒಂದಿದೆ. ಅದರ ಕತೆ ಏನಾಯಿತು ಎಂದು ಯಾರೂ ಕೇಳಿಲ್ಲ. ನಿರ್ಮಲಕ್ಕನವರಿಗೆ ಅದು ನೆನಪಾಗಿರಲಾರದು.
ಪ್ರತೀ ವರ್ಷ ಹಳೆಯದನ್ನು ಗುರಿ ಮುಟ್ಟಿಸುವ ಬದ್ಧತೆ ಇಲ್ಲದೆ ಮತ್ತೆ ಮತ್ತೆ ಗಮನ ಸೆಳೆಯುವ ಹೊಸದೇನನ್ನೋ ಘೋಷಿಸಿ ಪಾರಾಗುವ ಮನಃಸ್ಥಿತಿ ಈ ಸರಕಾರದ್ದಾಗಿದೆ. ಈ ಸ್ವಭಾವ ಇದ್ದರೆ ಒಂದು ದೊಡ್ಡ ಆದರ್ಶವಾಗಲೀ ಉತ್ತರದಾಯಿತ್ವದ ನೈತಿಕ ಪ್ರಜ್ಞೆಯಾಗಲೀ ಇರಲು ಸಾಧ್ಯವಿಲ್ಲ.
ಕೆ ಪಿ ಸುರೇಶ
ಕೃಷಿ ತಜ್ಞರು