Home Uncategorized ಮಂಜಿಲ್ಲದ ಬೆಟ್ಟಗಳು ನೀರಿಲ್ಲದ ತೊರೆಗಳು| ಭಾಗ 2

ಮಂಜಿಲ್ಲದ ಬೆಟ್ಟಗಳು ನೀರಿಲ್ಲದ ತೊರೆಗಳು| ಭಾಗ 2

0

ಜಗತ್ತಿನ ಅತಿ ಎತ್ತರದ ಗ್ಲೇಸಿಯರ್ ಎವರೆಸ್ಟ್ ಮೇಲೆಯೆ ಇರುವುದು. ತಾನು ರೂಪುಗೊಳ್ಳಲು ತೆಗೆದುಕೊಂಡ ಸಮಯಕ್ಕಿಂತ 80 ಪಟ್ಟು ವೇಗದಲ್ಲಿ ಈ ಗ್ಲೇಸಿಯರ್ ಕರಗುತ್ತಿದೆ. ಹವಾಮಾನ ಬದಲಾವಣೆಯ ಬಿಸಿ ಜಗತ್ತಿನಲ್ಲಿ ಇಷ್ಟೊಂದು ಎತ್ತರಕ್ಕೆ ತಲುಪಿರುವ ಬಗ್ಗೆ ನಾವು ಮಂಡೆ ಬಿಸಿ ಮಾಡಿಕೊಳ್ಳದೆ ಹೋದರೆ ಹೇಗೆ? ಕೆ ಎಸ್‌ ರವಿಕುಮಾರ್‌ ಬರೆದಿರುವ ಮಂಜಿಲ್ಲದ ಬೆಟ್ಟಗಳು ನೀರಿಲ್ಲದ ತೊರೆಗಳು ಲೇಖನದ ಎರಡನೇ ಭಾಗ ಓದಿ.

ಸೇತುವೆ ಕೆಳಗೆ ಮಂಜಿಲ್ಲ, ಬರಿಯ ಕಲ್ಲುಮಣ್ಣು

ನಮ್ಮ ಉತ್ತರ ತುದಿಯಲ್ಲಿರುವ ಲಡಾಖಿನಲ್ಲಿ ಒಮ್ಮೆ ಅಲೆದಾಡಿ ಬರೋಣ. ಅತಿ ಕಡಿಮೆ ಹಸಿರಿರುವ ಲಡಾಖನ್ನು ಎತ್ತರದ ಮರಳುಗಾಡು ಎಂದು ಕರೆಯುತ್ತಾರೆ. ಇಲ್ಲಿ ವರುಷಕ್ಕೆ ಸರಾಸರಿ 50 ಮಿ.ಮೀ. ಮಳೆಯಾಗುತ್ತದೆ. ಹೆಚ್ಚಿನ ಮಳೆ ಚಳಿಗಾಲದಲ್ಲಿ ಮಂಜಾಗಿ ಬಿದ್ದು ಗ್ಲೇಸಿಯರ್‌ಗಳಲ್ಲಿ ಸಂಗ್ರಹಗೊಂಡು ತೊರೆ ನದಿಗಳಿಗೆ ನೀರಾಗುತ್ತದೆ. ಕಳೆದ 30 ವರುಷಗಳಿಂದ ಮಳೆ, ಮಂಜು ಎರಡೂ ಕಮ್ಮಿಯಾಗುತ್ತಿವೆ. ಪ್ರತೀ ವರುಷಕ್ಕೆ ಚಳಿ ಕೊರೆಯುವ ಒಂದೊಂದು ದಿನ ಕಮ್ಮಿಯಾಗುತ್ತ ಕಳೆದ ಮೂರು ದಶಕಗಳಿಂದ ಚಳಿಗಾಲ ಕುಗ್ಗುತ್ತಿದೆ. ವರುಷದಲ್ಲಿ ದಕ್ಕುವ ಮೊಟಕು ಗಡುವಿನಲ್ಲೆ ಅಲ್ಪಸ್ವಲ್ಪ ಬೇಸಾಯ ಮಾಡುವ ರೈತರಿಗೂ, ಮನೆಬಳಕೆಗೂ ನೀರು ಸಿಕ್ಕುವುದು ತೊಡಕಾಗುತ್ತಿದೆ. ನೀರುಣಿಸುವ ತೊರೆಗಳು ಬೇಸಗೆಯಲ್ಲೆ ಬತ್ತಿಹೋಗಿ ಲಡಾಖಿನ ಮಂದಿ ಕಂಗಾಲಾಗುತ್ತಾರೆ. ಇಲ್ಲಿನ ನೀರಿನ ಮೂಲವೆಲ್ಲ ಗ್ಲೇಸಿಯರ್‍ಗಳು ಅಂದರೆ ಮಂಜುಹೊಳೆಗಳು. ಹೆಚ್ಚೆಚ್ಚು ಮಂಜು ಬಿದ್ದರೆ ಗ್ಲೇಸಿಯರ್‍ಗಳ ದಪ್ಪ ಹೆಚ್ಚುತ್ತದೆ. ಕಮ್ಮಿ ಬಿದ್ದರೆ ಗ್ಲೇಸಿಯರ್‍ಗಳು ತೆಳುವಾಗಿ ಬೇಗ ಕರಗಿಬಿಡುತ್ತವೆ. ಜಂಸ್ಕಾರ್ ಬೆಟ್ಟಸಾಲಿನಲ್ಲಿ ಗ್ಲೇಸಿಯರ್‍ಗಳು ವರುಷಕ್ಕೆ 117 ಸೆಂ.ಮೀ.ನಷ್ಟು thickness ಕಳೆದುಕೊಳ್ಳುತ್ತಿವೆ. ಲಡಾಖ್ ಬೆಟ್ಟಸಾಲಿನಲ್ಲಿ ವರುಷಕ್ಕೆ 46 ಸೆ.ಮೀ.ನಷ್ಟು thickness ಕಳೆದುಕೊಳ್ಳುತ್ತಿವೆ. ಈ ಪ್ರಮಾಣ ಮುಂದೆ ಮುಂದೆ ಹೆಚ್ಚುತ್ತಲೆ ಹೋಗುತ್ತದೆ. ಮಂಜು ಸಂಚಯಗೊಳ್ಳುವ ಗ್ಲೇಸಿಯರ್‍ಗಳು ವರುಷದಿಂದ ವರುಷಕ್ಕೆ ಬೆಟ್ಟಗಳ ನೆತ್ತಿಗೆ ಹತ್ತಿರವಾಗುತ್ತಿವೆ. ಹೆಸರುವಾಸಿ ಸುರು ಕಣಿವೆಯ ನುನ್ ಗ್ಲೇಸಿಯರ್ ಈಗಾಗಲೆ 500 ಮೀಟರ್ ಹಿಂಜರಿದಿದೆ. ಡ್ರುಂಗ್ ಡ್ರುಂಗ್ ಗ್ಲೇಸಿಯರ್ 1,000 ಮೀಟರ್ ಹಿಂಜರಿದಿದೆ. ಸುರು ನದಿಗೆ ಹರಿದು ಬರುವ ನೀರು ಕಡಿಮೆಯಾಗಿದೆ. ಸುರು ಸಿಂಧೂ ನದಿಯ ಉಪನದಿ. ಜನದಟ್ಟಣೆಯ ಲೇಹ್ ಪಟ್ಟಣದ ಸುತ್ತಮುತ್ತಲಿನ ಗ್ಲೇಸಿಯರ್‍ಗಳು ಕಾಣೆಯಾಗುತ್ತಿರುವುದು ಗಂಭೀರ ವಿಚಾರವಾಗಿದೆ. ಬೆಟ್ಟ ಏರುವ ಸಾಹಸಿಗಳು ಮೊದಲೆಲ್ಲ ಬಹು ಎಚ್ಚರಿಕೆಯಿಂದ ಗ್ಲೇಸಿಯರ್‍ಗಳ ಮೇಲೆ ನಡೆದು ಸಾಗಬೇಕಿತ್ತು (ಬದರಿನಾಥದಿಂದ ಆಚೆಗಿರುವ ಸಾತೋಪಂತ್ ಸರೋವರಕ್ಕೆ ನಾವು ಒಂದು ಅಪಾಯಕಾರಿ ಗ್ಲೇಸಿಯರ್ ಮೇಲೆ ಕೈಯಲ್ಲಿ ಜೀವ ಹಿಡಿದುಕೊಂಡು ಮೈಲಿಗಟ್ಟಲೆ ನಡೆದದ್ದನ್ನು ನೆನೆಸಿಕೊಂಡರೆ ಸುಡುಬಿಸಿಲಿನಲ್ಲೂ ಒಂದು ನಡುಕ ಮೈಯಲ್ಲಿ ಹರಿಯುತ್ತದೆ). ಈಗ ಅದೇ ಜಾಗದಲ್ಲಿ ಬಂಡೆಕಲ್ಲುಗಳ ಮೇಲೆ ಮತ್ತೆ ಮತ್ತೆ ಕಾಲು ಹೊಳಕಿಸಿಕೊಳ್ಳುತ್ತ ನಡೆಯಬೇಕಿದೆ. ಲೇಹ್ ಮತ್ತು ನುಬ್ರಾಗಳನ್ನು ಸೇರಿಸುವ ಜಗತ್ತಿನ ಅತಿ ಎತ್ತರದ ಮೋಟಾರ್ ರಸ್ತೆಯಾದ ಕಾರ್ದೊಂಗ್ಲಾದಲ್ಲಿ ಒಂದೆಡೆ ಭಾರೀ ಗ್ಲೇಸಿಯರ್ ಒಂದರ ಕಂದಕ (crevice) ದಾಟಲು ಸೇತುವೆ ನಿರ್ಮಿಸಲಾಗಿದೆ. ಈಗ ಈ ಗ್ಲೇಸಿಯರ್ ನಲ್ಲಿ ಮಂಜೂ ಇಲ್ಲ, ಅದು ಬಿರುಕುಬಿಟ್ಟು ರೂಪಿಸಿದ್ದ ಕಂದಕವೂ ಇಲ್ಲ. ಸೇತುವೆ ಕೆಳಗೆ ಬರಡು ಮಣ್ಣು, ನೊರಜುಗಲ್ಲುಗಳು, ಬಂಡೆಗಳನ್ನು ಕಾಣಬಹುದಾಗಿದೆ! ಲಡಾಖ್ ರಾಜ್ಯವೊ, ಕೇಂದ್ರಾಡಳಿತ ಪ್ರದೇಶವೊ ಎಂಬುದು ನಿಸರ್ಗಕ್ಕೆ ಮುಖ್ಯವಲ್ಲ. ಅದು ತನ್ನ ಹಲ್ಲೆಯನ್ನು ಅಡೆತಡೆಯಿಲ್ಲದೆ ಮುಂದುವರಿಸಿದೆ.

ಎವರೆಸ್ಟ್ ಏರಿದ ಬಿಸಿ

ಜಗತ್ತಿನ ಅತಿ ಎತ್ತರದ ಹೆಬ್ಬೆಟ್ಟ ಎವರೆಸ್ಟ್ ತನ್ನೊಡಲಿನಿಂದ ನಾವೆಲ್ಲ ತಲೆಕೆಡಿಸಿಕೊಳ್ಳಬೇಕಾದಂತ ಒಂದು ಸುದ್ದಿಯನ್ನು ತಲುಪಿಸಿದೆ. ಜಗತ್ತಿನ ಅತಿ ಎತ್ತರದ ಗ್ಲೇಸಿಯರ್ ಎವರೆಸ್ಟ್ ಮೇಲೆಯೆ ಇರುವುದು. ದಕ್ಷಿಣ ದಿಕ್ಕಿಗೆ 8020 ಮೀಟರ್ ಎತ್ತರದಲ್ಲಿ ಎವರೆಸ್ಟ್ ಮತ್ತು ಲ್ಹೋತ್ಸೆಗಳು ಕೂಡುವ ತಪ್ಪಲಿನಲ್ಲಿ ಇರುವ ಗ್ಲೇಸಿಯರ್ (South Col Glacier) ಅನ್ನು ವಿಜ್ಞಾನಿಗಳು ಅಧ್ಯಯನಕ್ಕೆ ಒಳಪಡಿಸಿದ್ದಾರೆ. 2019ರಲ್ಲಿ ಹದಿನೇಳು ಮಂದಿ ನೇಪಾಳಿ ವಿಜ್ಞಾನಿಗಳ ಜೊತೆ ICIMOD ನ ಇತರ ವಿಜ್ಞಾನಿಗಳು ಕೂಡಿ ನಡೆಸಿದ ಅಧ್ಯಯನದಿಂದ ಈ ಎತ್ತರದ ಗ್ಲೇಸಿಯರ್ ಎರಡು ಸಾವಿರ ವರ್ಷಗಳಷ್ಟು ಹಳೆಯದಾದ ತನ್ನ ಮಂಜನ್ನು ಕಳೆದ ಮುವತ್ತು ವರ್ಷಗಳಿಂದ ವರುಷಕ್ಕೆ ಸರಾಸರಿ ಎರಡು ಮೀಟರಿನಂತೆ ಕಳೆದುಕೊಳ್ಳುತ್ತಿದೆ. ತಾನು ರೂಪುಗೊಳ್ಳಲು ತೆಗೆದುಕೊಂಡ ಸಮಯಕ್ಕಿಂತ 80 ಪಟ್ಟು ವೇಗದಲ್ಲಿ ಈ ಗ್ಲೇಸಿಯರ್ ಕರಗುತ್ತಿದೆ. ಇದು ಹೀಗೆಯೆ ಮುಂದುವರೆದರೆ 2050ರ ಹೊತ್ತಿಗೆ ಗ್ಲೇಸಿಯರ್ ಪೂರ್ತಿ ನಾಪತ್ತೆಯಾಗಿ ಕಡಿದಾದ ಬಂಡೆಕಲ್ಲುಗಳು ಕಾಣಿಸಿಕೊಳ್ಳುತ್ತವೆ. ಬೆಟ್ಟ ಏರುವ ಸಾಹಸಿಗಳಿಗೆ ಇವು ಅಪಾಯಕಾರಿ ಎನಿಸುವಷ್ಟು ಅಡ್ಡಿಯಾಗಲಿವೆ. ಹೋಗಲಿ ಬಿಡಿ ಎವರೆಸ್ಟ್ ಏರದಿದ್ದರೆ ನಷ್ಟವೇನಿಲ್ಲ. ಆದರೆ ಹವಾಮಾನ ಬದಲಾವಣೆಯ ಬಿಸಿ ಜಗತ್ತಿನಲ್ಲಿ ಇಷ್ಟೊಂದು ಎತ್ತರಕ್ಕೆ ತಲುಪಿರುವ ಬಗ್ಗೆ ನಾವು ಮಂಡೆ ಬಿಸಿ ಮಾಡಿಕೊಳ್ಳದೆ ಹೋದರೆ ಹೇಗೆ?

ಲಡಾಖಿನ ಮುಂಜುಗುಪ್ಪೆಗಳು (Ice Stupas)

2013ರಲ್ಲಿ ಒಂದು ಕನಸಿನ ಯೋಜನೆಯನ್ನು ರೂಪಿಸಿ 2014ರ ಜನವರಿಯಲ್ಲಿ ಲಡಾಖಿನ ನೀರಿನ ಕೊರತೆಗೆ ಒಂದು ಪರಿಹಾರವನ್ನು ಕಾರ್ಯರೂಪಕ್ಕೆ ತಂದವರು ಇಂಜಿನಿಯರ್ ಸೊನಮ್ ವಾಂಗ್ಚುಕ್ (Byju’s ಅವರ ಜಾಹಿರಾತಿನಲ್ಲಿ ಆಗಾಗ್ಗೆ ಅವರನ್ನು ನೀವು ನೋಡಿರಬಹುದು). ನೆಲಕ್ಕೆ ಸಮನಾಂತರವಾಗಿ ಹರಡಿಬಿದ್ದ ಮಂಜಿನ ಹರವು ಸೂರ್ಯನ ಶಾಖಕ್ಕೆ ಹೆಚ್ಚು ತೆರೆದುಕೊಳ್ಳುತ್ತದೆ ಮತ್ತು ಅದು ಕರಗಿ ನೀರಾಗುವ ದರವೂ ಹೆಚ್ಚು. ಆದರೆ ನೆಲಕ್ಕೆ ಲಂಬಾಕಾರದಲ್ಲಿ ಪೇರಿಸಿಟ್ಟ ಮಂಜಿನ ಮೇಲೆ ಒಂದು ಸರ್ತಿಗೆ ಒಂದು ಬದಿಯನ್ನು ಮಾತ್ರ ಸೂರ್ಯನ ಶಾಖ ಸೋಕುವುದರಿಂದ ಮಂಜು ಹೆಚ್ಚುಕಾಲ ಗಟ್ಟಿಯಾಗಿ ಉಳಿದು ಕರಗುವಿಕೆ ನಿಧಾನವಾಗಿರುತ್ತದೆ. ಈ ವ್ಯತ್ಯಾಸವನ್ನು ಗುರುತಿಸಿ ಅದರ ತತ್ವದ ಮೇಲೆ ವಾಂಗ್ಚುಕ್ ಮಂಜುಗುಪ್ಪೆಗಳನ್ನು ನಿರ್ಮಿಸುವ ಹೊಸ ಆಲೋಚನೆಯನ್ನು ತಮ್ಮ ತಂಡದೊಂದಿಗೆ ಜಾರಿಗೊಳಿಸಲು ಮುಂದಾದರು. ಚಳಿಗಾಲದ ಮಂಜನ್ನು ಹಂತಹಂತವಾಗಿ ಪೇರಿಸುತ್ತ ಎರಡು ಮೂರು ಮಹಡಿ ಎತ್ತರದ ಗುಪ್ಪೆಗಳನ್ನು ಕಟೆದು ನಿಲ್ಲಿಸಿದರು. ಇವು ಬಹಳ ನಿಧಾನವಾಗಿ ಕರಗುತ್ತ ಬೇಸಗೆ ಮುಗಿಯುವವರೆಗೂ ತೊರೆಗಳಿಗೆ ನೀರನ್ನು ಸರಬರಾಜು ಮಾಡುತ್ತವೆ. ಅಗತ್ಯ ಬಿದ್ದರೆ ಕರಗಿದ ನೀರನ್ನು ಪುಟ್ಟ ಪುಟ್ಟ ಕೃತಕ ಕೊಳ ಗುಮ್ಮೆ ಬಾವಿಗಳಲ್ಲಿ ಅಲ್ಲಲ್ಲಿ ಸಂಗ್ರಹಿಸಿ ಬಳಸಬಹುದು. ಈ ವಿಧಾನದಿಂದ ರೈತರಿಗೆ ಮತ್ತು ಮನೆಬಳಕೆಗೆಂದು ತೊರೆ ನೀರು ಬಳಸುವ ಹಳ್ಳಿಯವರಿಗೆ ಬಹಳ ಅನುಕೂಲವಾಯಿತು. ಹಲವೆಡೆ ನೀರಿಲ್ಲದ ಹಳ್ಳಿ ಬಿಟ್ಟು ಗುಳೇ ಹೋಗಿದ್ದ ಲಡಾಖಿನ ಜನ ಮತ್ತೆ ತಮ್ಮ ಹಳ್ಳಿಗಳಿಗೆ ಮರಳ ತೊಡಗಿದರು. ಒಂದೊಂದು ಮಂಜುಗುಪ್ಪೆ ಅಥವಾ ಗೋಪುರವು ಲಕ್ಷ ಲಕ್ಷಗಟ್ಟಲೆ ಲೀಟರ್ ನೀರನ್ನು ಒದಗಿಸಬಲ್ಲುದು. ಇಂತಹ ನೂರಾರು ಗುಪ್ಪೆಗಳನ್ನು ನಿರ್ಮಿಸಿದರೆ ನೀರಿನ ಸಮಸ್ಯೆ ಬಹುತೇಕ ನಿವಾರಣೆಯಾದಂತೆ. ವಾಂಗ್ಚುಕ್ ಅವರ ಈ ಪ್ರಯೋಗ ಜಗತ್ತಿನ ಗಮನ ಸೆಳೆದಿದೆ. ಹಿಮಾಲಯದಂತೆ ನೀರಿನ ಕೊರತೆ ಎದುರಿಸುತ್ತಿರುವ ಬಹು ಎತ್ತರದ ಬೆಟ್ಟ ಸಾಲುಗಳ ಜನರಿಗೆ ಒಂದು ನಿರಾಳ ಪರಿಹಾರ ದೊರಕಿದಂತಾಗಿದೆ. ವಾಂಗ್ಚುಕ್ ಅವರನ್ನು ಹಲವು ಪ್ರಶಸ್ತಿ ಪುರಸ್ಕಾರಗಳು ಹಿಂಬಾಲಿಸುತ್ತಿವೆ. ರೇಮೊನ್ ಮ್ಯಾಗ್ಸೇಸೆ ಪ್ರಶಸ್ತಿಯ ನಂತರ ಬಹಳಷ್ಟು ಜಾಗತಿಕ ಪ್ರಶಸ್ತಿಗಳು ಅವರ ಪಾಲಾಗಿವೆ.

ಇಂಜಿನಿಯರಿಂಗ್ ಜಾಣ್ಮೆ

ಮಂಜುಗುಪ್ಪೆಗಳ ರಚನೆಯ ತಿರುಳನ್ನು ತಿಳಿಯುವುದು ಅಗತ್ಯವಿದೆ. ಮೇಲುನೋಟಕ್ಕೆ ಮಂಜುಗುಪ್ಪೆಗಳನ್ನು ಪೇರಿಸುವುದು ಬಹಳ ಸರಳ ಅನಿಸಬಹುದು. ಆದರೆ ಅದು ಹಾಗಿಲ್ಲ. ಗುಪ್ಪೆಗೆ ಬೇಕಾದ ನೀರಿನ ಪೊರೈಕೆಗೆ ಏರ್ಪಾಡು ಮಾಡಿಕೊಳ್ಳಬೇಕಾಗುತ್ತೆ. ಮೊದಲು ಒಂದು ಬೆಟ್ಟದ ತಪ್ಪಲಲ್ಲಿ ಗುಪ್ಪೆಗೆ ತಕ್ಕುದಾದ ಜಾಗವನ್ನು ಗುರುತಿಸಿಕೊಳ್ಳಲಾಗುತ್ತೆ. ಆ ಜಾಗದಲ್ಲಿ ಬಕ್‍ಥಾರ್ನ್ ಗಿಡ ಅಥವಾ ಪೊಪ್ಲಾರ್ ಮರದ ರೆಂಬೆಗಳಿಂದ ಅರೆಗೋಳಾಕೃತಿಯ geodesic ಹಂದರವನ್ನು ನಿರ್ಮಿಸಲಾಗುವುದು. ಈ ಆಕೃತಿಯನ್ನು ಪ್ಲಾಸ್ಟಿಕ್ ಮೀನಿನ ಬಲೆಯಲ್ಲಿ ಸುತ್ತಲಾಗುವುದು. ಚಳಿಗಾಲದಲ್ಲಿ ಬೆಟ್ಟದ ಇಳಿಜಾರಿನಲ್ಲಿ ಹರಿದು ಬರುವ ತೊರೆ ಅಥವಾ ಕರಗುತ್ತಿರುವ ಗ್ಲೇಸಿಯರ್‍ನ ನೀರಿಗೆ ದೊಡ್ಡ ಮುಖ್ಯ ಕೊಳವೆಯನ್ನು ಜೋಡಿಸಲಾಗುವುದು. ಈ ಕೊಳವೆ ಬೆಟ್ಟದ ತಪ್ಪಲಿನಗುಂಟ ಇಳಿದು ಅರೆಗೋಳಾಕೃತಿಯ ಮೂಲಕ ಸಾಗಿ ನೆಲಕ್ಕೆ ಲಂಬವಾಗಿ ನಿಲ್ಲುತ್ತದೆ. ಆಕಾಶಕ್ಕೆ ತೆರೆದುಕೊಂಡ ಅದರ ತುದಿಗೆ ಒಂದು ಸೂಸುಬಾಯಿ(nozzle)ಯನ್ನು ಬಿಗಿಯಾಗಿ ಕೂರಿಸಬೇಕು. ಅದು ಎಲ್ಲ ದಿಕ್ಕಿಗೂ ತೊರೆಯ ನೀರನ್ನು ಚಿಮ್ಮಿಸುತ್ತದೆ. ರಾತ್ರಿಯ ವೇಳೆ ಇನ್ನಷ್ಟು ತಾಪ ಕುಸಿದಾಗ ಕೊಳವೆಯಲ್ಲಿ ನೀರನ್ನು ಹರಿಸಲಾಗುತ್ತೆ. ಈ ನೀರು ಗುರುತ್ವದಿಂದ ವೇಗ ಪಡೆದು ಹರಿದುಬಂದು ಮೇಲಕ್ಕೆ ಚಿಮ್ಮಿ ಎಲ್ಲ ದಿಕ್ಕಿಗೂ ಒಮ್ಮೆಲೆ ಎರಚಲ್ಪಟ್ಟು ಹೆಪ್ಪುಗಟ್ಟಿ ಗುಪ್ಪೆಯಾಗುತ್ತದೆ. ಮುಖ್ಯ ಕೊಳವೆಗೆ ಸುತ್ತಲೂ ಹಲವು ಉಪಕೊಳವೆಗಳನ್ನು ಜೋಡಿಸಿ ಗುಪ್ಪೆಯ ಅಡ್ಡಳತೆ ಅಥವಾ ವ್ಯಾಸವನ್ನು ಹೆಚ್ಚಿಸಬಹುದು. ಕೊಳವೆಯ ಎತ್ತರಕ್ಕೆ ಅನುಗುಣವಾಗಿ ಎರಡು ಮೂರು ಮಹಡಿ ಎತ್ತರದ ಗುಪ್ಪೆಗಳನ್ನು ಎಬ್ಬಿಸಬಹುದು. ಈ ರೀತಿ ರೂಪುಗೊಂಡ ಮಂಜುಗುಪ್ಪೆಗಳು ಮೇ ತಿಂಗಳ ಬೇಸಗೆಯಲ್ಲಿ ತಾಪ 20 ಡಿಗ್ರಿ ಸೆಲ್ಸಿಯಸ್ ದಾಟಿದರೂ ಪೂರ್ತಿ ಕರಗದೆ ಉಳಿಯಬಲ್ಲವು. ಕಡಲ ಮಟ್ಟದಿಂದ ಸಾಮಾನ್ಯವಾಗಿ 2700 ಮೀಟರ್ ಎತ್ತರದಿಂದ ಮೇಲಕ್ಕೆ ಮಂಜುಗುಪ್ಪೆಗಳ ನಿರ್ಮಾಣ ಸಾಧ್ಯವಾಗುತ್ತದೆ.

ಲಡಾಖಿನಲ್ಲಿ ಈಗ ಪ್ರತೀವರುಷ ಮಂಜುಗುಪ್ಪೆ ನಿರ್ಮಿಸುವ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗುತ್ತೆ. ಹೊಸಹೊಸ ಬಗೆಯಲ್ಲಿ ಕಲಾತ್ಮಕವಾಗಿ ಮಂಜುಗುಪ್ಪೆ ಕಟ್ಟುವ ತಂಡಗಳಿಗೆ ಬಹುಮಾನ ಮತ್ತು ಪ್ರಚಾರವೂ ಇರುತ್ತದೆ. ಲಡಾಖಿನ ಎತ್ತರದ ಬೆಂಗಾಡಿನಲ್ಲಿ ಒಯಸಿಸ್ ಭಾವನೆ ಮೂಡಿಸುವ ಮಂಜುಗುಪ್ಪೆಗಳನ್ನು ನೋಡಲೆಂದೇ ಲಡಾಖಿಗೆ ಪ್ರವಾಸಿಗರು ಬರುವುದು ಶುರುವಾಗಿದೆ. ಮಂಜುಗುಪ್ಪೆಗಳಿರುವ ಹಳ್ಳಿಗಳೀಗ ಪ್ರವಾಸಿ ತಾಣಗಳಾಗಿವೆ. ಪ್ರವಾಸಿಗರಿಂದ ಸ್ಥಳೀಯರಿಗೆ ಕೊಂಚ ಆದಾಯವೂ ಸಿಗುತ್ತಿದೆ.

ಸ್ಥಳೀಯರ ನಡುವೆ ಒಂದು ಕಚ್ಚಾ ಅರಿಮೆಯಾಗಿ ಉಳಿದುಕೊಂಡಿದ್ದ ಮಂಜುಗುಪ್ಪೆಗಳಿಗೆ ಇಂಜಿನಿಯರಿಂಗ್ ಜಾಣ್ಮೆಯನ್ನು ಮೊದಲ ಬಾರಿಗೆ ಹೆಣೆದದ್ದು ಸೊನಮ್ ವಾಂಗ್ಚುಕ್ ಅವರ ಮಹತ್ತರ ಸಾಧನೆಯಾಗಿದೆ. ಈಗ ಜಗತ್ತಿನಲ್ಲಿ ವರುಷಕ್ಕೆ ತಾಪ ಏರಿಕೆಯ ಕಾರಣಕ್ಕೇ ಸರಾಸರಿ 1.2 ಟ್ರಿಲಿಯನ್ ಟನ್ನಿನಷ್ಟು ಶಾಶ್ವತ ಮಂಜು ಕರಗಿ ಹೋಗುತ್ತಿದೆಯೆಂದು ಅಂದಾಜಿಸಲಾಗಿದೆ. ಈ ಆತಂಕದ ಹಿನ್ನೆಲೆಯಲ್ಲಿ ಮಂಜುಗುಪ್ಪೆಗಳು ಆಶಾಕಿರಣಗಳೆನಿಸಿವೆ.

ಅಂದಹಾಗೆ ಮರೆಯದೆ ಹೇಳಬೇಕಾದ್ದಿದೆ, ನಮ್ಮ ಲಡಾಖಿನ ಈ ಮಂಜುಗುಪ್ಪೆಗಳ ಸೆಳೆತಕ್ಕೆ ದೂರದ ಚಿಲಿಯ ಜನರೂ ಸಿಲುಕಿರುವ ಸುದ್ದಿ ಬಂದಿದೆ. ಅಲ್ಲಿ ಹಾದುಹೋಗಿರುವ ಆಂಡಿಸ್ ಬೆಟ್ಟಗಳ ಸಾಲಿನಲ್ಲೂ ಗ್ಲೇಸಿಯರ್‍ಗಳು ಹಿಂಜರಿಯುತ್ತಿವೆ. ಅಲ್ಲಿನ ನಿವಾಸಿಗಳೂ ನೀರಿನ ಬವಣೆಗೆ ಎದುರಾಗಿದ್ದಾರೆ. ಎನ್ರಿಕ್ ಗೆಲೊನಾ ಎಂಬ ಪರಿಣಿತರೊಬ್ಬರ ನಿರ್ದೇಶನದಲ್ಲಿ ಯೋಜನೆ ರೂಪಿಸಿ ಮಂಜುಗುಪ್ಪೆಗಳನ್ನು ನಿರ್ಮಿಸಲಾಗುತ್ತಿದೆ. ಜನವಸತಿಗೆ ಸಮೀಪದ ಐವತ್ತು ಕಡೆ ಮಂಜುಗುಪ್ಪೆಗಳನ್ನು ನಿರ್ಮಿಸಿ 100 ಮಿಲಿಯನ್ ಲೀಟರಿನಷ್ಟು ನೀರನ್ನು ಸರಾಸರಿ ಒಂದು ಲಕ್ಷ ಮಂದಿಗೆ ಮೂರು ತಿಂಗಳ ಕಾಲ ಒದಗಿಸುವುದು ಈ ಯೋಜನೆಯ ಗುರಿಯಾಗಿದೆ. ಲಡಾಖಿನ ತಿಳುವಳಿಕೆ ಈಗ ಚಿಲಿಯನ್ನು ತಲುಪಿದೆ. ಯುರೋಪಿನ ಆಲ್ಪ್ಸ್ ಬೆಟ್ಟ ಸಾಲಿನಲ್ಲು ಮಂಜುಗುಪ್ಪೆಗಳನ್ನು ನಿರ್ಮಿಸಲಾಗುತ್ತಿದೆಯಂತೆ. ಕೆನಡಾ ಕೂಡಾ ಈ ಮಂಜುಗುಪ್ಪೆಗಳ ಬಗ್ಗೆ ಒಲವು ತೋರಿದೆಯೆಂದು ತಿಳಿದುಬಂದಿದೆ.

ತೊಡಕಿನ ನಡುವೆ ಪರಿಹಾರ ಹುಡುಕುವುದೇ ಜಾಣತನ. ಸವಾಲೆಸೆಯುವ ನಿಸರ್ಗದೊಳಗೆ ಪರಿಹಾರವೂ ಇರುತ್ತೆ. 

                                                  

ಕಿವಿಹಿಂಡುವ ಅಧಿಕಾರ

ಮಂಜುಗುಪ್ಪೆಗಳು ಸದ್ಯಕ್ಕಂತೂ ಲಡಾಖಿನ ಜನರಿಗೆ ಆಶಾಕಿರಣಗಳಾಗಿವೆ. ಆದರೆ ಹಿಮಾಲಯ ನೆಲೆಸಿರುವುದು ಭಾರತ ಮತ್ತು ಚೀನಾ ಎಂಬ ಎರಡು ದೊಡ್ಡ ದೇಶಗಳ ನಡುವೆ. ಈ ಎರಡೂ ದೇಶಗಳು ವಾತಾವರಣದ ಬಿಸಿಗೆ ಕಾರಣವಾಗಿರುವ ಕಾರ್ಬನ್ ಸೂಸುವಿಕೆಯ ಪ್ರಮಾಣದಲ್ಲಿ ಜಗತ್ತಿನಲ್ಲೆ ಮುಂಚೂಣಿಯಲ್ಲಿವೆ. ಈ ಸೂಸುವಿಕೆಯನ್ನು ಅವು ನಿಯಂತ್ರಿಸದೆ ಹೋದರೆ ಹಿಮಾಲಯ ಮತ್ತಷ್ಟು ಬಿಸಿಯಾಗುತ್ತದೆ. ಲಡಾಖಿ ಜನರ ಮಂಜುಗುಪ್ಪೆಗಳೂ ಸರಸರನೆ ಕರಗಿಹೋಗುವ ದಿನಗಳು ದೂರವಿರಲಾರವು. ಹಾಗಾಗದಿರಲಿ ಎಂಬುದು ನನ್ನ ಹಾರಯಿಕೆ. ಹಾರಯಿಸುವುದರ ಹೊರತಾಗಿ ಈ ಎರಡು ದೇಶಗಳ ಕಿವಿಹಿಂಡುವ ಅಧಿಕಾರ ಮತ್ತು ಅವಕಾಶ ಸಾಮಾನ್ಯನಾದ ನನಗಿಲ್ಲವಲ್ಲ.

ಉಳಿದ ಬಹುಪಾಲು ದೇಶಗಳು 2050ರ ಒಳಗಾಗಿ ಕಾರ್ಬನ್ ಸೂಸುವಿಕೆಯ ಪ್ರಮಾಣವನ್ನು ಸೊನ್ನೆಗಿಳಿಸುವ ಗುರಿಯನ್ನು ಪ್ರಕಟಿಸಿದ್ದರೆ ಚೀನಾ 2060ರ ಹೊತ್ತಿಗೆ ಸೊನ್ನೆಗೆ ತರಲು ಕಟಿಬದ್ಧ ಎಂದಿದೆ. ನಮ್ಮ ಭಾರತ 2070ರ ಹೊತ್ತಿಗೆ ತರುವೆನೆಂದು ಜಗತ್ತಿಗೆ ತಿಳಿಸಿದೆ. ಚೀನಾ ಮತ್ತು ಭಾರತಗಳು ತಮ್ಮ ಗುರಿ ತಲುಪುವ ಹೊತ್ತಿಗೆ ಹಿಮಾಲಯದಲ್ಲಿ ಮಂಜು ಉಳಿದಿರುತ್ತದೆಯೆ? ನಾನು ಕೇಳುತ್ತಿರುವ ಈ ಪ್ರಶ್ನೆ ಉತ್ತರಿಸಲಾಗದಂತಹ ಕಠಿಣ ಪ್ರಶ್ನೆಯೆ?

****

ರವಿಕುಮಾರ್ ಕೆ.ಎಸ್, ಹಾಸನ

ಲೇಖಕರು. ಮುಖ್ಯವಾಗಿ ವಿಜ್ಞಾನ ಬರಹಗಾರರು. ಪರಿಸರದ ಮೇಲೆ ವಿಶೇಷ ಆಸಕ್ತಿ. ಚಾರಣ ಹವ್ಯಾಸ.

ಮೊಬೈಲ್:‌ 9964604297

You cannot copy content of this page

Exit mobile version