(ಈ ವರೆಗೆ…)
ಮೇಸ್ತ್ರಿಯ ಪ್ರೀತಿಯ ಬಲೆಯೊಳಗೆ ಬಿದ್ದ ಲಕ್ಷ್ಮಿಯ ಅಮ್ಮ ಬಸುರಿಯಾಗುತ್ತಾಳೆ. ಆಗಲೇ ತಾನು ಮೋಸಹೋಗಿರುವುದು ತಿಳಿಯುತ್ತದೆ. ತುಂಬಿದ ಬಸುರಿ ಅನಾಥೆಯಾಗಿ ಹೆರುವ ಪರಿಸ್ಥಿತಿ ಎದುರಾಗುತ್ತದೆ. ಆ ಹೆಣ್ಣುಮಗುವಿಗೆ ತನ್ನಂತೆ ಕಷ್ಟ ಎದುರಾಗ ಬಾರದೆಂದು ಅದನ್ನು ಕೊಲ್ಲುವ ಮನಸು ಮಾಡಿದರೂ ಅದೃಷ್ಟವಶಾತ್ ಮಗು ಬದುಕಿ ಒಳ್ಳೆಯ ಮನೆ ಸೇರುತ್ತದೆ. ಆದರೆ ಅ ಮಗುವನ್ನು ಮರೆಯಲಾಗದೆ ಅದನ್ನೊಮ್ಮೆ ನೋಡುವ ಅಸೆಯಲ್ಲಿ ಹೇಗೋ ಲಕ್ಷ್ಮಿಯ ಮನೆಗೆ ಬಂದು ಅತ್ತು ಕರೆದು ಹೋಗುತ್ತಾಳೆ. ಈ ಕತೆ ಕೇಳಿ ಗಂಗೆಗೆ ಏನನ್ನಿಸಿತು? ಓದಿ.. ವಾಣಿ ಸತೀಶ್ ಅವರ ತಂತಿ ಮೇಲಣ ಹೆಜ್ಜೆಯ 14ನೇ ಕಂತು.
ಅನ್ಯಮನಸ್ಕಳಾಗಿ ಕುಳಿತ ಅಕ್ಕನನ್ನು ಬಿರುಸಾಗಿ ಅಲುಗಿಸಿದ ಗಂಗೆ, “ನೀನು ಹಂಗಂದಿದ್ದು ಸರಿಯೇನೆ ಅಕ್ಕ” ಎಂದು ಮತ್ತೆ ಕೇಳಿದಳು. ಇನ್ನೂ ವಾಸ್ತವಕ್ಕಿಳಿಯದ ಲಕ್ಷ್ಮಿ “ಏನಂತ ಅದ್ನವ್ವ ಗಂಗೂ” ಎಂದು ಕೇಳಿದಳು. “ಅಲ್ಲ ಅವಮ್ಮಂತವ ನಿನ್ನ ಜೊತೆ ಇದ್ದಿದ್ರೆ ಕೂಲಿನೋ ನಾಲಿನೋ ಮಾಡಿ ಸಾಕ್ತಿದ್ನಲ್ಲವ್ವ ಅಂದಲ್ಲ ಸರಿಯಾ. ನಿಂಗೆ ನಮ್ಮವ್ವ ಏನ್ ಕಮ್ಮಿ ಮಾಡಿತ್ತು ಅಂತ ಹಂಗ್ ಮಾತಾಡ್ದೆ ಹೇಳು” ಎಂದು ಹಠ ಹಿಡಿದವಳಂತೆ ಕೇಳಿದಳು ಗಂಗೆ.
ಅಲ್ಲಿಯವರೆಗೂ ತಟಸ್ಥಳಾಗಿ ಕುಳಿತಿದ್ದ ಲಕ್ಷ್ಮಿಯ ಒಳಗೆ ಜೀವ ಸಂಚಾರವಾದಂತಾಯಿತು. ತಂಗಿಯನ್ನು ತದೇಕ ಚಿತ್ತದಿಂದ ದೃಷ್ಟಿಸಿದಳು. ಗಂಗೆಯ ಉದ್ದನೆಯ ಚೂಪು ಮೂಗಿನ ಹೊಳ್ಳೆಗಳು ಕೋಪದಿಂದ ಹಿಗ್ಗುತ್ತಾ ಕುಗ್ಗುತ್ತಾ ನರ್ತಿಸುತ್ತಿದ್ದರೆ ಸಣ್ಣನೆಯ ತುಟಿಯಂಚುಗಳು ಹುಸಿ ಮುನಿಸಿನಿಂದ ಅತ್ತಿಂದಿತ್ತ ಇತ್ತಿಂದತ್ತ ಚಲಿಸುತ್ತಾ ಅಕ್ಕನ ಆ ಮಾತಿಗೆ ತನ್ನ ಅಸಮ್ಮತಿಯನ್ನು ವ್ಯಕ್ತ ಪಡಿಸುತ್ತಿತ್ತು. ತಂಗಿಯ ಮನಸ್ಸನ್ನು ಅರಿತ ಲಕ್ಷ್ಮಿ ಗೆ ಇದ್ದಕ್ಕಿದ್ದಂತೆ ಅವಳ ಮೇಲೆ ಮುದ್ದುಕ್ಕಿ ಬಂತು. ಇನ್ನಷ್ಟು ಹತ್ತಿರಕ್ಕೆ ಅವಳನ್ನು ಎಳೆದು ಹಣೆಯ ತುಂಬ ಲೊಚ ಲೊಚನೆ ಮುತ್ತಿಕ್ಕಿ ” ಬಜಾರ್ತನ ಮಾಡದು ಬುಟ್ಟು ನಿಂಗೇನು ಗೊತ್ತಾಗಕ್ಕಿಲ್ಲ ಅಂದ್ಕೊಂಡಿದ್ನಲ್ಲ ಗಂಗೂ.. ನಾನೆಂತ ದಡ್ಡ್ ಮುಂಡೆ ನೋಡು” ಎಂದು ಹೇಳಿದಳು. ಗಂಗೆ ಅಕ್ಕನ ಕೈ ಕೊಸರುತ್ತಾ “ಇದೆಲ್ಲಾ ಬ್ಯಾಡ ನಾನು ಕೇಳಿದ್ದುಕ್ಕೆ ಸರಿಯಾಗಿ ಉತ್ರ ಕೊಡು” ಎಂದು ಸರಿದು ಮಾರುದೂರ ಕೂತಳು.
ಮತ್ತೆ ಹಳೆಯ ನೆನಪುಗಳಿಗೆ ಜಾರಿದವಳಂತೆ ಅನ್ಯಮನಸ್ಕಳಾಗಿ ಮಾತು ಆರಂಭಿಸಿದಳು ಲಕ್ಷ್ಮಿ. “ಗಂಗೂ ನಾನು ಹಿಂಗ್ ಅಂತಿನಿ ಅಂತ ಬ್ಯಾಸರ ಮಾಡ್ಕೋ ಬ್ಯಾಡ. ನೀನೇ ಹೇಳು ಮಗ, ನಾನು ಈ ಮನೆಗೆ ಬಂದು ಏನ್ ಸುಖ ಪಟ್ಟೆ? ನಾಕ್ ಜನ್ದಂಗೆ ಬಿಡ್ಬೀಸಾಗಿ ತಲೆ ಎತ್ತಿ ಹೊರಗಿನ ಪ್ರಪಂಚ ಕಡ್ನಾ..? ಹೋಗ್ಲಿ ನನ್ನ ವಯಸ್ನವರಂಗೆ ಕನಸು ಕನವರಿಕೆ ಹಿಡ್ಕೊಂಡು ಜೀಕಾಡಿದ್ನಾ…? ಯಾವುದೊಂದು ಇಲ್ಲ ಮಗ. ಕೂತ್ರು ತಪ್ಪು ನಿಂತ್ರು ತಪ್ಪು ನಾನು ಚಂದಾಕಿ ಹುಟ್ಟಿರೋದು ಇನ್ನೊಂದು ದೊಡ್ದ್ ತಪ್ಪು ಅನ್ನೋ ಈ ಅಣ್ಣತಮ್ಮದಿರಿಗೆ ಅಂಜ್ಕೊಂಡೇ ಜೀವನ ಮಾಡಿದ್ದಾಯ್ತು. ನನ್ನ ಮೇಲೆ ಪ್ರಾಣನೇ ಮಡ್ಗಿರೋ ಈ ಅವ್ವ ಅಪ್ಪ ನನ್ನಿಂದ ಯಾವತ್ತು “ಅಯ್ಯೋ” ಅನ್ಕಾಬಾರದು ಅನ್ನೋ ಎಚ್ಚರದಲ್ಲೇ ಎಲ್ಲಾ ಸುಖ, ದುಃಖ, ಆಸೆ, ಕನುಸುಗಳುನ್ನ ನುಂಕೊಂಡೆ ಬಂದಿದ್ದಾಯ್ತು”ಎಂದು ಹೇಳುತ್ತೇಳುತ್ತಲೇ ಲಕ್ಷ್ಮಿ ಮೌನಕ್ಕೆ ಜಾರಿ ತುಸು ಹೊತ್ತು ಮೊಣಕಾಲಿನ ಒಳಗೆ ಮುಖ ಹುದುಗಿಸಿ ಕುಳಿತು ಬಿಟ್ಟಳು. ಅಕ್ಕನ ಮೌನ ಕಂಡು ತುಸು ಗಾಬರಿಯಾದ ಗಂಗೆ ಅಕ್ಕನನ್ನು ಮೃದುವಾಗಿ ಅಲುಗಿಸಿ ಏನಾಯಿತು ಎಂಬಂತೆ ಕಣ್ಣಿನ ಸನ್ನೆಯಲ್ಲಿಯೇ ಕೇಳಿದಳು. ತಂಗಿಯ ಮುಖವನ್ನೇ ದಿಟ್ಟಿಸಿದ ಲಕ್ಷ್ಮಿ” ಥೂ ನಾನೊಬ್ಳು ಹುಚ್ ಮುಂಡೆ…ಕುಟುಂಬ ಅಂದ್ಮೆಲೆ ಇದೆಲ್ಲ ಬತ್ತದೆ ಹೊಯ್ತದೆ ಬುಡ್ ಮಗ. ನನಗೆ ಜೀವ ಕೊಟ್ಟ ಈ ಮನೆ ಯಾವತ್ತು ದೊಡ್ದೆಯ” ಎಂದು ಹೇಳಿ ಏನೋ ಬಾರಿ ತಪ್ಪು ಮಾಡಿದವಳಂತೆ ಗೊಣಗಿ ಕೊಳ್ಳುತ್ತಾ ಎರಡು ಕೆನ್ನೆಗಳ ಮೇಲೂ ಪಟ ಪಟನೆ ಹೊಡೆದು ಕೊಂಡಳು. ಆದರೂ ಒಳ ಮನಸ್ಸು ಸಮಾಧಾನಗೊಳ್ಳದೆ ಚಡಪಡಿಸುತ್ತಲೇ ಇತ್ತು. ಏನೊಂದು ತಪ್ಪುಮಾಡದ ತನ್ನ ಹೆತ್ತವ್ವನ ಬಗ್ಗೆ ಈ ಪುಟ್ಟ ಗಂಗೆ ತಳೆದಿದ್ದ ತಾತ್ಸಾರದ ಭಾವ ಲಕ್ಷ್ಮಿಯ ಎದೆ ಹಿಂಡುವಂತೆ ಮಾಡಿತ್ತು.
ತಲೆತಗ್ಗಿಸಿ ಕುಳಿತ ಗಂಗೆಯ ತಲೆಯನ್ನು ಮೆಲ್ಲಗೆ ಮೇಲಕ್ಕೆತ್ತಿದ ಲಕ್ಷ್ಮಿ, “ಗಂಗೂ ನನ್ನ ಹೆತ್ತವ್ವ ನಿಜವಾಗ್ಲೂ ಕೆಟ್ಟೋಳಲ್ಲ ಮಗ ಎಂದಳು”. ಗಂಗೆ ಎತ್ತಿದ ಬಾಯಿಗೆ “ಹಂಗಲ್ದಿದ್ರೆ ಆ ಹೊಳೆ ತವ ನಿನ್ ಮೆಟ್ರೆ ಯಾಕ್ ಅಮುಕ್ತಿದ್ಲು ಮತ್ತೆ” ಎಂದು ಗಡುಸಾಗಿ ಕೇಳಿದಳು. ಪೆಚ್ಚಾದ ಲಕ್ಷ್ಮಿ ತುಸು ಸಾವರಿಸಿಕೊಂಡು “ಸಮಯ ಸಂದರ್ಭಗೊಳು ಮನುಸ್ರು ಕೈಲಿ ಏನೇನೋ ಮಾಡುಸ್ಬುಡ್ತವೆ ಗಂಗೂ. ಪಾಪ ಅವತ್ತು ಅವಳ ಬೆನ್ನ್ಗೆ ಯಾರಾದ್ರು ಇದ್ದು ದೈರ್ಯ ತುಂಬಿದ್ದಿದ್ರೆ ಹಂಗ್ ಮಾಡೋಳ ಹೇಳು. ಅಂಜ್ಕೊಂಡ್ ಬ್ಯಾರೆಯವರ ನೆಳ್ಳಲ್ಲೇ ಬದಿಕೊಂಡ್ ಬಂದ್ ಆ ಜೀವ, ಎಲ್ಲಾ ಆಸ್ರೆಯು ಕಿತ್ಕೊಕೊಂಡ್ ಹೋದ್ರೆ ಏನ್ ಮಾಡ್ಬೆಕು ಮಗ. ಪಾಪ ಅವತ್ತಿನ ಅವಳ ಪರಿಸ್ಥಿತಿ ಕಣ್ ಕಟ್ಟಿ ಕಾಡ್ನಲ್ಲಿ ಬುಟ್ಟಂಗಿತ್ತು. ನಾನು ಒಬ್ಬ ಹೆಣ್ಮಗಳಾಗಿ ಅಷ್ಟು ಅರ್ಥ ಮಾಡ್ಕಳ್ಳಿಲ್ಲ ಅಂದ್ರೆ ನಾನು ಮನ್ಸೆ ಹೆಂಗಾದನು ಗಂಗೂ. ಪಾಪ ಅವಳಿಗೂ ಮಾಡಿದ್ದು ತಪ್ಪು ಅನ್ಸಿ ಜೀವನುದುದ್ದುಕ್ಕೂ ಕೊರಿಕೊಂಡೆ ಬಂದವಳಲ್ಲ ಮಗ, ಅದುಕ್ಕಾದ್ರು ನಾವು ಚಮುಸ್ ಬುಡ್ಬೇಕು. ಯಾವುದುನ್ನು ಸಾದುಸ್ಕೊಂಡು ಕೂತ್ಕಬಾರದು. ನಾಳೆ ನಮಗೆ ಎಂತೆಂತ ಕಷ್ಟಗೊಳು ಎದ್ರಾಯ್ತವೋ ಯಾರಿಗೊತ್ತವ್ವ. ನನ್ನ ಮ್ಯಾಲೆ ಪಿರುತಿ ಇಲ್ದಿದ್ರೆ ಇಷ್ಟು ವರ್ಷ ಆದ್ಮೇಲೂ ನನ್ನ ಹುಡಿಕೊಂಡು ಬತ್ತಿದ್ಲಾ ಹೇಳು ?” ಎಂದು ನಿಟ್ಟುಸಿರು ಬಿಟ್ಟು ಭಾರವಾದ ತನ್ನ ಎದೆ ನೀವಿಕೊಳ್ಳುತ್ತಾ ಕಣ್ಮುಚ್ಚಿ ಕೂತಳು. ಸ್ವಲ್ಪ ಹೊತ್ತು ಇಡೀ ವಾತಾವರಣವೇ ಮೌನದಲ್ಲಿ ಅದ್ದಿ ಕೊಂಡು ಬಿಮ್ಮ್ ಎಂದಿತು. ಎದೆ ನೀವಿ ಕೊಳ್ಳುತ್ತಿದ್ದ ಅಕ್ಕನನ್ನು ಅನುಕಂಪದಿಂದ ನೋಡಿದ ಗಂಗೆ “ಹೋಗ್ಲಿ ಬುಡೇ ಅಕ್ಕ ಸುಸ್ತ್ ಮಾಡ್ಕಬ್ಯಾಡ. ನಾನು ಇನ್ಯಾವತ್ತು ಈ ಮಾತೆತ್ತದಿಲ್ಲ ಸರಿಯಾ” ಎಂದು ತಾನು ಕೂಡ ಅಕ್ಕನ ಎದೆ ಮೇಲೆ ಕೈಯಾಡಿಸ ತೊಡಗಿದಳು. ಪ್ರೀತಿಯಿಂದ ತಂಗಿಯ ಕೈ ಹಿಡಿದು ಮುತ್ತಿಕ್ಕಿದ ಲಕ್ಷ್ಮಿ “ನೀನು ಅಷ್ಟೆಯಾ ಮಗ ಹಟ್ಮಾರಿತನ ಬುಟ್ಟು ಜಾಣೆ ಆಗವ್ವ. ಎಲ್ಲಾಕು ಅವ್ವ ಅವ್ವ ಅಂತ ಅವ್ವುನ್ ಮ್ಯಾಲೆ ವರಿಕೊಂಡ್ ಕೂತ್ಕಬ್ಯಾಡ. ನನ್ನಂಗೆ ಮೆದುನೂ ಆಗಬ್ಯಾಡ ಧೈರ್ಯವಾಗಿ ಎಲ್ಲಾನೂ ಎದ್ರುಸೋದ್ ಕಲ್ತಕೊ ಬೇಕು ಮಗ” ಎಂದು ತಂಗಿಗೆ ಬುದ್ಧಿವಾದ ಹೇಳತೊಡಗಿದಳು.
ಡಿಸ್ಚಾರ್ಜಿನ ಎಲ್ಲಾ ಕೆಲಸ ಮುಗಿಸಿ ಒಳ ಬಂದ ಅಪ್ಪ “ಮುಗಿತೇನ್ರವ ಅಕ್ಕುಂದು ತಂಗಿದು ಮಾತುಕತೆ ಹೊಂಡನೇನು ಇನ್ನೂ” ಎಂದು ಕೇಳಿದ. ಈ ಗಳಿಗೆಗಾಗಿಯೇ ಕಾದು ಕುಳಿತವಳಂತೆ ಲಕ್ಷ್ಮಿ “ಹೊಂಡನ ಅಂತ ಕೇಳ್ತಿರಲ್ರಪ್ಪ ಮೊದ್ಲು ನನ್ನ ಈ ನರ್ಕುದ್ ಕೊಂಪೆಯಿಂದ ಆಚೆ ಕರ್ಕೊಂಡು ಹೋಗ್ಬುಟ್ರಪ್ಪ ಸಾಕು” ಎಂದು ಗಂಗೆಯ ಭುಜ ಹಿಡಿದು ಚಂಗನೆ ಮಂಚದಿಂದ ಕೆಳಗೆ ಹಾರಿ ನಿಂತಳು. ಅವಳ ಬಿರುಸಿಗೆ ಬೆಚ್ಚಿದ ಅಪ್ಪ ” ಬಿದ್ಗಿದ್ರೆ ಏನ್ ಗತಿ ಮಗ ಮೊದ್ಲೇ ಉಸಾರಿಲ್ಲ ಬ್ಯಾರೆ” ಎಂದು ಗದರಿದ. ಅಪ್ಪನ ಯಾವ ಗದರುವಿಕೆಗೂ ಸೊಪ್ಪು ಹಾಕದ ಲಕ್ಷ್ಮಿ ” ಅಯ್ಯೋ ನನಗೇನು ಆಗಕಿಲ್ಲ ಕಂತೆ ಮೊದ್ಲು ಮನೆ ಮಖಾ ತೋರ್ಸಿ ಎಲ್ಲ ಸರಿಯಾಯ್ತದೆ ಕಂತೆ” ಎಂದು ಕಾಲಿಗೆ ಚಪ್ಪಲಿ ಸಿಕ್ಕಿಸಿ ಹೊರ ನಡೆದಳು.
ಬೆಳಗ್ಗೆಯೇ ಎಲ್ಲಾ ಸಾಮಾನುಗಳನ್ನು ಕಟ್ಟಿ ಅಣಿಗೊಳಿಸಿದ್ದ ಅವ್ವ, ಗಿರಿಧರ ಮತ್ತು ಚಂದ್ರಹಾಸನ ಕೈಗೊಂದಿಷ್ಟು, ತಾನೊಂದಿಷ್ಟು ಸಾಮಾನುಗಳನ್ನು ಹಿಡಿದು ಹೊರಗೆ ನಿಲ್ಲಿಸಿದ್ದ ಎತ್ತಿನ ಗಾಡಿಯ ಕಡೆಗೆ ಹೆಜ್ಜೆ ಹಾಕಿದರು. ಸಂಭ್ರಮದಿಂದ ಗಾಡಿ ಏರಲು ಹೊರಟು ನಿಂತಿದ್ದ ಲಕ್ಷ್ಮಿಯನ್ನು ತಡೆದ ಅಪ್ಪ ” ಇದ್ಯಾಕ್ ಮಗ ಡಾಕ್ಟ್ರುಗೆ, ನರ್ಸ್ ಅಮ್ಮದಿರಿಗೆ ಹೇಳ್ದಂಗೆ ಹೊಂಟ್ಬುಟ್ಟಲ್ಲವ್ವ” ಎಂದು ಹೇಳಿ ಡಾಕ್ಟರ್ ಪೂವಯ್ಯನವರ ಕೋಣೆಗೆ ಲಕ್ಷ್ಮಿ ಯನ್ನು ಕರೆದು ಕೊಂಡು ಹೋದ. ಡಾಕ್ಟರ್ ರಿಗೆ ಎರಡು ಕೈಜೋಡಿಸಿ “ನಮುಸ್ಕಾರ ಸಾ..” ಎಂದು ನಗು ತುಳುಕಿಸಿದ ಲಕ್ಷ್ಮಿ “ಸಾಯ್ದೆ ಬದುಕಿದ್ರೆ ಇನ್ನೊಂದಪ್ಪ ಯಾವಾಗದ್ರು ನಮ್ಮಪ್ಪನ್ ಜೊತೆ ಬಂದು ನಿಮ್ಮುನ್ನ ಮಾತಾಡುಸ್ಕೊಂಡು ಹೋಯ್ತಿನಿ ಸಾ” ಎಂದಳು. ಕುರ್ಚಿಯಲ್ಲಿ ಕುಳಿತಿದ್ದ ಡಾಕ್ಟರ್ ಲಕ್ಷ್ಮಿಯ ಬಳಿ ಬಂದು “ನಿನಗೆ ಏನಾಗಿದೆ ಅಂತ ಸಾಯೋ ಮಾತಾಡ್ತಿಯಮ್ಮಾ. ನೋಡು ನನಗಿಂತಲೂ ಎಷ್ಟು ಆರೋಗ್ಯವಾಗಿದ್ದಿ” ಎಂದು ಪ್ರೀತಿಯಿಂದ ಲಕ್ಷ್ಮಿಯ ಭುಜ ತಟ್ಟಿ “ಮದುವೆಗೆ ಕರಿಯೋದನ್ನ ಮರಿಬಾರದು ಲಕ್ಷ್ಮಮಮ್ಮ ಒಳ್ಳೆಯದಾಗಲಿ ಹೋಗಿ ಬಾ” ಎಂದು ಹೇಳಿ ಕಳುಹಿಸಿದರು.
(ಮುಂದುವರೆಯುವುದು…)
ವಾಣಿ ಸತೀಶ್
ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದಿದ್ದಾರೆ. ಸದ್ಯ ತಿಪಟೂರಿನ ʼಭೂಮಿ ಥಿಯೇಟರ್ʼ ಹಾಗೂ ಶ್ರೀ ನಟರಾಜ ನೃತ್ಯ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.