ಬೆಂಗಳೂರು: ಅಬಕಾರಿ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಭಾರೀ ಭ್ರಷ್ಟಾಚಾರ ಮತ್ತು ಕಿಕ್ಬ್ಯಾಕ್ ಪ್ರಕರಣ ರಾಜ್ಯ ವಿಧಾನಮಂಡಲದ ಉಭಯ ಸದನಗಳಲ್ಲಿ ತೀವ್ರ ಕೋಲಾಹಲಕ್ಕೆ ಕಾರಣವಾಗಿದೆ. ಈ ಹಗರಣದ ಹೊಣೆ ಹೊತ್ತು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರು ತಕ್ಷಣವೇ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಪಟ್ಟು ಹಿಡಿದಿದ್ದಾರೆ.
ಸಚಿವರು ರಾಜೀನಾಮೆ ನೀಡಿದ ನಂತರವೇ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ವಿರೋಧ ಪಕ್ಷಗಳು ಸದನದಲ್ಲಿ ಪ್ರತಿಭಟನೆ ನಡೆಸಿದ್ದರಿಂದ, ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯು ದಿನದ ಮಟ್ಟಿಗೆ ಮೊಟಕುಗೊಂಡಿತು.
ಪೆನ್ಡ್ರೈವ್ ಬಾಂಬ್ ಸಿಡಿಸಿದ ಆರ್. ಅಶೋಕ್: ವಿಧಾನಸಭೆಯಲ್ಲಿ ನಿಲುವಳಿ ಸೂಚನೆಯ ಮೂಲಕ ವಿಷಯ ಪ್ರಸ್ತಾಪಿಸಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಅಬಕಾರಿ ಇಲಾಖೆಯಲ್ಲಿ ಬರೋಬ್ಬರಿ 4,000 ಕೋಟಿ ರೂ.ಗಳ ಅವ್ಯವಹಾರ ನಡೆದಿದೆ ಎಂದು ಗಂಭೀರ ಆರೋಪ ಮಾಡಿದರು. “ಈ ಹಗರಣದಲ್ಲಿ ಸ್ವತಃ ಅಬಕಾರಿ ಸಚಿವರು ಮತ್ತು ಅವರ ಪುತ್ರನ ಹೆಸರು ಕೇಳಿಬರುತ್ತಿದ್ದು, ಇದಕ್ಕೆ ಸಂಬಂಧಿಸಿದ ಎಲ್ಲಾ ಸ್ಫೋಟಕ ಮಾಹಿತಿಗಳು ಈ ಪೆನ್ಡ್ರೈವ್ನಲ್ಲಿವೆ,” ಎಂದು ಸದನದಲ್ಲಿ ಪೆನ್ಡ್ರೈವ್ ಹಾಗೂ ಕರಪತ್ರಗಳನ್ನು ಪ್ರದರ್ಶಿಸಿ ಚರ್ಚೆಗೆ ಅವಕಾಶ ಕೋರಿದರು.
ನಿಯಮ 69ರಡಿ ಚರ್ಚೆಗೆ ಸ್ಪೀಕರ್ ಒಲವು: ಆದರೆ, ಆರ್. ಅಶೋಕ್ ಅವರ ನಿಲುವಳಿ ಸೂಚನೆಯನ್ನು ಸ್ಪೀಕರ್ ಅವರು ತಿರಸ್ಕರಿಸಿದರು. ಬದಲಿಗೆ, ನಿಯಮ 69ರ ಅಡಿಯಲ್ಲಿ ಈ ವಿಷಯದ ಕುರಿತು ನಂತರದ ಚರ್ಚೆಗೆ ಅವಕಾಶ ನೀಡುವುದಾಗಿ ಪ್ರಕಟಿಸಿದರು. ಸ್ಪೀಕರ್ ಅವರ ಈ ನಿರ್ಧಾರಕ್ಕೆ ಬಿಜೆಪಿ ಸದಸ್ಯ ಸುನಿಲ್ ಕುಮಾರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
