ವ್ಯಾಪಕ ಹಿಂಸಾಚಾರದ ಬಳಿಕ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ ಶೇಖ್ ಹಸೀನಾ ಭಾರತಕ್ಕೆ ಬಂದಿದ್ದಾರೆ. ಅವರನ್ನು ಭಾರತದ ಭದ್ರತಾ ಸಲಹೆಗಾರ ಅಜಿತ್ ದೋವಲ್ ಭಾರತಕ್ಕೆ ಬರಮಾಡಿಕೊಂಡಿದ್ದಾರೆ.
ದೇಶ ತೊರೆದ ಶೇಖ್ ಹಸೀನಾ ಅವರನ್ನು ದೆಹಲಿಯ ಗಾಜಿಯಾಬಾದ್ ಬಳಿಯ ಹಿಂಡನ್ ವಾಯುನೆಲೆಯಲ್ಲಿ ಭೇಟಿಯಾದ ಅಜಿತ್ ದೋವಲ್, ಸೇನಾ ಮುಖ್ಯಸ್ಥರ ಮೂಲಕ ಸುರಕ್ಷಿತ ಸ್ಥಳಕ್ಕೆ ಕಳಿಸಿ ಕೊಡಲಾಗಿದೆ ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಬಾಂಗ್ಲಾದೇಶ ಭಾರತ ಗಡಿ ಭಾಗದಲ್ಲಿ ಕಟ್ಟೆಚ್ಚರದ ಭಿಗಿ ಭದ್ರತೆ ಮಾಡಲಾಗಿದೆ. ಯಾವುದೇ ಸಂದರ್ಭದಲ್ಲೂ ಹೆಚ್ಚುವ ಹಿಂಸಾಚಾರದ ಹಿನ್ನೆಲೆಯಲ್ಲಿ ಪರಿಸ್ಥಿತಿ ನಿಯಂತ್ರಿಸಲು ಭಾರತೀಯ ಸೇನೆಗೆ ಸೂಚಿಸಲಾಗಿದೆ.
ಸಧ್ಯ ಅಲ್ಲಿ ಅಧಿಕಾರ ವಹಿಸಿಕೊಂಡ ಸೇನಾ ಮುಖ್ಯಸ್ಥರು ಪರಿಸ್ಥಿತಿ ನಿಯಂತ್ರಿಸಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳುತ್ತಿರುವ ಬಗ್ಗೆ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬಾಂಗ್ಲಾದೇಶ ಸೇನಾ ಮುಖ್ಯಸ್ಥರು, “ಪ್ರಧಾನಿ ಹಸೀನಾ ರಾಜೀನಾಮೆ ನೀಡಿದ್ದಾರೆ, ದೇಶವನ್ನು ನಡೆಸಲು ಮಧ್ಯಂತರ ಸರ್ಕಾರ ರಚಿಸಲಿದ್ದೇವೆ. ನಾವು ದೇಶಕ್ಕೆ ಶಾಂತಿಯನ್ನು ಮರಳಿಸುತ್ತೇವೆ. ಹಿಂಸಾಚಾರವನ್ನು ನಿಲ್ಲಿಸುವಂತೆ ನಾವು ನಾಗರಿಕರನ್ನು ಕೇಳುತ್ತೇವೆ. ಕಳೆದ ಕೆಲವು ವಾರಗಳಲ್ಲಿ ನಡೆದ ಎಲ್ಲಾ ಹತ್ಯೆಗಳ ಬಗ್ಗೆ ನಾವು ತನಿಖೆ ನಡೆಸುತ್ತೇವೆ ಎಂದಿದ್ದಾರೆ.
ಶೇಖ್ ಹಸೀನಾ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ದೇಶ ಬಿಟ್ಟು ಹೊರಡುತ್ತಿದ್ದಂತೆಯೇ, ಬಾಂಗ್ಲಾದೇಶದ ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ಅವರು ಜೈಲಿನಲ್ಲಿರುವ ವಿರೋಧ ಪಕ್ಷದ ನಾಯಕಿ ಮತ್ತು ಮಾಜಿ ಪ್ರಧಾನಿ ಖಲೀದಾ ಜಿಯಾ ಅವರನ್ನು ಬಿಡುಗಡೆ ಮಾಡಲು ಆದೇಶಿಸಿದ್ದಾರೆ.
ಶೇಖ್ ಹಸೀನಾ ಅವರ ಪ್ರಬಲ ವಿರೋಧಿ ಎಂದು ಪರಿಗಣಿಸಲ್ಪಟ್ಟಿರುವ 78 ವರ್ಷದ ಖಲೀದಾ ಜಿಯಾ ಪ್ರಮುಖ ವಿರೋಧ ಪಕ್ಷವಾದ ಬಾಂಗ್ಲಾದೇಶ್ ನ್ಯಾಷನಲಿಸ್ಟ್ ಪಾರ್ಟಿಯ ಮುಖ್ಯಸ್ಥರಾಗಿದ್ದಾರೆ.
2018 ರಲ್ಲಿ, ಭ್ರಷ್ಟಾಚಾರದ ಆರೋಪದ ನಂತರ ಅವರನ್ನು ಜೈಲಿಗೆ ಹಾಕಲಾಯಿತು, ಇದು ರಾಜಕೀಯ ಪ್ರೇರಿತ ಎಂದು ಅವರು ಹೇಳಿದ್ದಾರೆ.