Home ಇನ್ನಷ್ಟು ಕೋರ್ಟು - ಕಾನೂನು ಇ ಡಿ ಕುರಿತ ನಮ್ಮ ಟೀಕೆಗಳು ವಾಸ್ತವಾಂಶಗಳನ್ನು ಆಧರಿಸಿವೆ: ಸುಪ್ರೀಂ ಕೋರ್ಟ್

ಇ ಡಿ ಕುರಿತ ನಮ್ಮ ಟೀಕೆಗಳು ವಾಸ್ತವಾಂಶಗಳನ್ನು ಆಧರಿಸಿವೆ: ಸುಪ್ರೀಂ ಕೋರ್ಟ್

0

ದೆಹಲಿ: ಜಾರಿ ನಿರ್ದೇಶನಾಲಯ (ಇಡಿ) ವಿರುದ್ಧ ಸುಪ್ರೀಂ ಕೋರ್ಟ್ ಮಾಡುವ ಯಾವುದೇ ಪ್ರತಿಕೂಲ ಮೌಖಿಕ ಹೇಳಿಕೆಗಳು ಸಂಪೂರ್ಣವಾಗಿ ನಿಷ್ಪಕ್ಷಪಾತವಾಗಿದ್ದು, ವಾಸ್ತವಾಂಶಗಳ ಆಧಾರದ ಮೇಲೆ ನೀಡಲಾಗಿದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಜಸ್ಟಿಸ್ ಬಿ.ಆರ್. ಗವಾಯ್ ಹೇಳಿದ್ದಾರೆ. ಇಂತಹ ಹೇಳಿಕೆಗಳು ಇಡಿಯ ಬಗ್ಗೆ ಸಾರ್ವಜನಿಕರಲ್ಲಿ ಮತ್ತು ನ್ಯಾಯಾಂಗ ವ್ಯವಸ್ಥೆಯಲ್ಲಿ ಕೆಟ್ಟ ಅಭಿಪ್ರಾಯ ಮೂಡಿಸುತ್ತವೆ ಎಂದು ಇಡಿ ಪರ ವಾದ ಮಂಡಿಸಿದ ವಕೀಲರ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಮುಖ್ಯ ನ್ಯಾಯಮೂರ್ತಿಗಳು ಸೋಮವಾರ ಈ ಹೇಳಿಕೆ ನೀಡಿದರು.

ಈ ಸಂದರ್ಭದಲ್ಲಿ ತಮಿಳುನಾಡು ಪರ ವಾದ ಮಂಡಿಸುತ್ತಿರುವ ಹಿರಿಯ ವಕೀಲ ಕಪಿಲ್ ಸಿಬಲ್ ಮಧ್ಯಪ್ರವೇಶಿಸಿ, ನ್ಯಾಯಾಲಯದ ಟೀಕೆಗಳ ಹೊರತಾಗಿಯೂ ಇಡಿಯ ಬಗ್ಗೆ ಸಾರ್ವಜನಿಕರಿಗೆ ಸ್ಪಷ್ಟವಾದ ಅರಿವಿದೆ ಎಂದು ಪ್ರತಿಕ್ರಿಯಿಸಿದರು. ನ್ಯಾಯಾಲಯ ಏನೇ ಹೇಳದೇ ಇದ್ದರೂ ಸಹ, ಇಡಿ ಬಗ್ಗೆ ಸಾರ್ವಜನಿಕರಲ್ಲಿ ಒಂದು ನಿರ್ದಿಷ್ಟ ಅಭಿಪ್ರಾಯವಿದೆ ಎಂದರು.

ತಮಿಳುನಾಡು ಮಾರ್ಕೆಟಿಂಗ್ ಕಾರ್ಪೊರೇಷನ್ ಕಚೇರಿಗಳ ಮೇಲೆ ಇಡಿ ದಾಳಿ ಮತ್ತು ಶೋಧಗಳನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಕೈಗೆತ್ತಿಕೊಂಡಿತ್ತು. ಏಪ್ರಿಲ್‌ನಲ್ಲಿ ಮದ್ರಾಸ್ ಹೈಕೋರ್ಟ್ ಈ ಶೋಧಗಳಿಗೆ ತಡೆ ನೀಡಲು ನಿರಾಕರಿಸಿದ ನಂತರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿತ್ತು.

ಮೇ 22ರಂದು ನಡೆದ ವಿಚಾರಣೆಯ ಸಮಯದಲ್ಲಿ, ಇಡಿ ತನಿಖೆಗಳನ್ನು ನಡೆಸುವಾಗ ಎಲ್ಲಾ ಮಿತಿಗಳನ್ನು ದಾಟುತ್ತಿದೆ ಎಂದು ಸಿಜೆಐ ಹೇಳಿದ್ದರು. “ರಾಜ್ಯ ಕಾರ್ಪೊರೇಷನ್ ವಿರುದ್ಧ ಇಡಿ ಕೈಗೊಂಡ ಕ್ರಮಗಳು ದೇಶದ ಒಕ್ಕೂಟ ವ್ಯವಸ್ಥೆಯ (federal system) ತತ್ವಗಳನ್ನು ಉಲ್ಲಂಘಿಸುತ್ತಿವೆ” ಎಂದು ಜಸ್ಟಿಸ್ ಗವಾಯ್ ಹೇಳಿದರು. “ಒಂದು ಕಾರ್ಪೊರೇಷನ್ ಹೇಗೆ ಅಪರಾಧದಲ್ಲಿ ಭಾಗಿಯಾಗಲು ಸಾಧ್ಯ?” ಎಂದು ಅವರು ಇಡಿ ಪರ ವಾದ ಮಂಡಿಸುತ್ತಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು ಅವರನ್ನು ಪ್ರಶ್ನಿಸಿದರು.

ತಮಿಳುನಾಡು ಮಾರ್ಕೆಟಿಂಗ್ ಕಾರ್ಪೊರೇಷನ್ ಪರವಾಗಿ ಹಿರಿಯ ವಕೀಲ ಮುಕುಲ್ ರೋಹ್ತಗಿ ಮಾತನಾಡಿ, ನೌಕರರ ಫೋನ್‌ಗಳನ್ನು ಕ್ಲೋನ್ ಮಾಡಲಾಗಿದೆ ಮತ್ತು ಆ ಫೋನ್‌ಗಳಲ್ಲಿ ಹಲವು ರಹಸ್ಯ ವಿಷಯಗಳಿರುತ್ತವೆ ಎಂದು ಹೇಳಿದರು.

You cannot copy content of this page

Exit mobile version