Home ಸಿನಿಮಾ ಪಂಪ ಹಾಡುಗಳು ಸಾಥ್ ನೀಡಿದ ಕನ್ನಡ ಕಟ್ಟಾಳುಗಳು..

ಪಂಪ ಹಾಡುಗಳು ಸಾಥ್ ನೀಡಿದ ಕನ್ನಡ ಕಟ್ಟಾಳುಗಳು..

0

ಆದಿಕವಿ ಪಂಪನ ಹೆಸರಿನಲ್ಲಿ  ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಒಳಗೊಂಡ ಚಿತ್ರವೊಂದು ನಿರ್ಮಾಣವಾಗಿದೆ.  ಬಹಳ ದಿನಗಳ ನಂತರ ಎಸ್.ಮಹೇಂದರ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ  ಈ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ಇತ್ತೀಚೆಗೆ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನೆರವೇರಿತು.

‘ಪಂಪ’ ಚಿತ್ರವನ್ನು ಟೋಟಲ್ ಕನ್ನಡ ಮಾಲೀಕರಾದ ವಿ.ಲಕ್ಷ್ಮಿಕಾಂತ್ ಅವರು ನಿರ್ಮಿಸಿದ್ದಾರೆ. ನಾದಬ್ರಹ್ಮ ಹಂಸಲೇಖ ಅವರ ಸಂಗೀತ ಮತ್ತು ಸಾಹಿತ್ಯ ಈ ಚಿತ್ರಕ್ಕಿದೆ. ಚಿತ್ರದ ನಾಯಕನಾಗಿ ಹರಹರ ಮಹಾದೇವ ಖ್ಯಾತಿಯ ಕೀರ್ತಿಭಾನು, ನಾಯಕಿಯಾಗಿ ಸಂಗೀತಾ ಶೃಂಗೇರಿ ನಟಿಸಿದ್ದಾರೆ.

ಕನ್ನಡಾಭಿಮಾನಿ ಪ್ರೊಫೆಸರ್ ಪಂಪ ಅವರ ಹತ್ಯೆಯಾದ ಮೇಲೆ ನಡೆಯೋ ಕುತೂಹಲಕಾರಿ ಘಟನೆಗಳೇ ಈ ಚಿತ್ರದ ಕಥಾವಸ್ತು. ಯಾರ ಮನಸ್ಸನ್ನೂ ನೋಯಿಸದ, ಪಂಪರನ್ನು ಕೊಲೆ ಮಾಡುವ ದ್ವೇಷ ಯಾರಿಗಿತ್ತು, ಇವರ ಹತ್ಯೆಯ ಹಿಂದೆ ಯಾವ ಹಿತಾಸಕ್ತಿಗಳು ಕಾರ್ಯನಿರ್ವಹಿಸಿದ್ದವು ಎಂಬುದನ್ನು ಚಿತ್ರದಲ್ಲಿ ಎಳೆಎಳೆಯಾಗಿ ಬಿಚ್ಚಿಡುವ ಪ್ರಯತ್ನವನ್ನು ನಿರ್ದೇಶಕ ಎಸ್. ಮಹೇಂದರ್ ಅವರು ಮಾಡಿದ್ದಾರೆ. ಹದಿಹರೆಯದ ಪ್ರೀತಿ-ಪ್ರೇಮ, ಭಾಷೆಯ ಮೇಲಿನ ಅಭಿಮಾನ ಮತ್ತು ದುರಭಿಮಾನ, ಹೋರಾಟ ಇದೆಲ್ಲವನ್ನೂ ಪಂಪನ ಮೂಲಕ ಹೇಳಿದ್ದಾರೆ.

ಹಾಡುಗಳ ಬಿಡುಗಡೆ ವೇದಿಕೆ ಕಾರ್ಯಕ್ರಮದಲ್ಲಿ ಕನ್ನಡ ಅಭಿವೃದ್ಧಿ ಪ್ರಾಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ, ಗಾಯಕ ರವೀಂದ್ರ ಸೊರಗಾವಿ, ಪತ್ರಕರ್ತ ಜೋಗಿ   ಅಲ್ಲದೆ ರಕ್ಷಣಾ ವೇದಿಕೆಯ ಪ್ರಮುಖರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಮೊದಲಿಗೆ ಮಾತನಾಡಿದ ನಾಗಾಭರಣ, ಕನ್ನಡದ ಕೆಲಸ ಅಂದ್ರೆ ಸುಲಭವಲ್ಲ; ನಿರಂತರವಾದ ಛಲ, ಸಾಧನೆ

ಬೇಕಾಗುತ್ತದೆ. ಟೋಟಲ್ ಕನ್ನಡದ ಲಕ್ಷ್ಮಿಕಾಂತ್ ಅವರು ಕನ್ನಡದ ಕೆಲಸವನ್ನು ಶ್ರದ್ಧೆ  ಮತ್ತು ಭಕ್ತಿಯಿಂದ ಮುಂದುವರೆಸುತ್ತಾ ಈಗ ಚಲನಚಿತ್ರ ಮಾಡಿದ್ದಾರೆ. ಕನ್ನಡ ಚಿತ್ರಗಳಿಗೆ ತನ್ನದೇ ಆದ ದೃಶ್ಯಪರಂಪರೆಯಿದೆ. ಈ ಚಿತ್ರದ ಹಾಡುಗಳು ನವಿರಾಗಿದ್ದು ಹೃದಯಕ್ಕೆ ತಟ್ಟುವಂತಿವೆ ಎಂದು ಹೇಳಿದರು.

ಚಿತ್ರದ ಕುರಿತು ಮಾತನಾಡಿದ ನಿರ್ದೇಶಕ ಮಹೇಂದರ್, ಪಂಪ ಒಂದು ಪೊಯಿಟಿಕ್ ಆಗಿರುವಂಥ ಮರ್ಡರ್ ಮಿಸ್ಟರಿ. ಜೊತೆಗೆ ಅದ್ಭುತವಾದ ಲವ್‌ಸ್ಟೋರಿ ಕೂಡ ಚಿತ್ರದಲ್ಲಿದೆ. ಪಾತ್ರಗಳು ನೈಜವಾಗಿರಬೇಕೆಂದು ಎಲ್ಲ ಪಾತ್ರಗಳಿಗೆ ಹೊಸ ಕಲಾವಿದರನ್ನೇ ಬಳಸಿಕೊಂಡಿದ್ದೇವೆ. ಒಂದಷ್ಟು ವಿಷಯಗಳು ನೇರವಾಗಿವೆ. ಹಳದಿ ಕಣ್ಣಿಂದ ಸಿನಿಮಾ ನೋಡಬಾರದು ಅಷ್ಟೇ. ಹಂಸಲೇಖಾ ಅವರ ಜೊತೆ 26 ಚಿತ್ರಗಳನ್ನು ಮಾಡಿದ್ದೇನೆ. ಇದು ಅವರದೇ ಸಂಗೀತನಾ ಎಂದು ಆಶ್ಚರ್ಯಪಡುವ ಹಾಗೆ ಈ ಚಿತ್ರದಲ್ಲಿ ಮ್ಯೂಸಿಕ್ ಮಾಡಿದ್ದಾರೆ ಎಂದರು.

ನಿರ್ಮಾಪಕ ಲಕ್ಷಿಕಾಂತ್ ಮಾತನಾಡಿ ಕನ್ನಡ ಸಾಹಿತ್ಯ, ಸಂಗೀತದ ಬಗ್ಗೆ ಆಸಕ್ತಿ ಬೆಳೆಸಿಕೊಂಡು ಬಂದ ನಾನು ಒಂದು ಸರಳವಾದ ಕಥೆ ಇಟ್ಟುಕೊಂಡು ಈ ಚಿತ್ರವನ್ನು ಮಾಡಿದ್ದೇನೆ. ಸೆ.9ಕ್ಕೆ ಬಿಡುಗಡೆ ಮಾಡುವ ಯೋಜನೆಯೂ ಇದೆ ಎಂದು ಹೇಳಿದರು. ಇನ್ನು ಈ ಚಿತ್ರಕ್ಕೆ ರಮೇಶ್‌ಬಾಬು ಅವರ ಛಾಯಾಗ್ರಹಣ, ಮೋಹನ್ ಕಾಮಾಕ್ಷಿ ಅವರ ಸಂಕಲನವಿದೆ. ರಾಘವ್ ನಾಯಕ್, ಅರವಿಂದ್, ಆದಿತ್ಯಶೆಟ್ಟಿ, ರೇಣುಕಾ, ರವಿಭಟ್, ಶ್ರೀನಿವಾಸಪ್ರಭು, ಪೃಥ್ವಿರಾಜ್ ಮತ್ತು ಚಿಕ್ಕಹೆಜ್ಜಾಜಿ ಮಹದೇವ್ ಇತರೆ ಪಾತ್ರಗಳಲ್ಲಿದ್ದಾರೆ.

You cannot copy content of this page

Exit mobile version