ಇದುವರೆಗೆ ಪಪ್ಪು ಎಂದು ಟ್ರೋಲ್ ಮಾಡಿದ ಜನರೂ ಒಳಗೊಳಗೇ ದಂಗಾಗಿ ಈ ಮನುಷ್ಯನ ಸಂಯಮ ನಿಷ್ಕಲ್ಮಷ ನಗು, ಮಗುವಿನ ಮುಗ್ಧತೆ, ಪ್ರೀತಿ,, ಗೌರವ ಘನತೆ ಎಂದೆಲ್ಲಾ ಮಾತಾಡುತ್ತಿದ್ದಾರೆಂದರೆ, ಇದು ಸ್ವತಃ ರಾಹುಲ್ ಗಾಂಧಿ ಗಳಿಸಿದ್ದು ಎನ್ನುತ್ತಾರೆ ಲೇಖಕಿ ಶಾಂತಾ ಕುಮಾರಿ
“ಮನುಷ್ಯರನ್ನು ಒಂದುಗೂಡಿಸುವುದು ಧರ್ಮವಲ್ಲ, ಒಂದು ಜನಾಂಗವಲ್ಲ, ಭಾಷೆಯಲ್ಲ, ಒಂದೇ ಆರ್ಥಿಕ ವ್ಯವಸ್ಥೆಯ ಬದ್ಧತೆಯೂ ಅಲ್ಲ, ಬದಲಾಗಿ ಪರಸ್ಪರ ಅನುಭವಗಳನ್ನು ಹಂಚಿಕೊಳ್ಳುವುದು. ಆಂತರಿಕ ಸಮಸ್ಯೆಗಳನ್ನು ರಾಜನೀತಿಯ ಮೂಲಕ ಬಗೆಹರಿಸಲು ಪ್ರಜ್ಞಾಪೂರ್ವಕವಾಗಿ ನಿರಂತರವಾಗಿ ಶ್ರಮಿಸುವುದು ಮಾತ್ರ ಮನುಷ್ಯರನ್ನು ಒಂದುಗೂಡಿಸಲು ಸಹಕರಿಸುತ್ತದೆ” ಭಾರತೀಯತೆ ಎನ್ನುವುದು ನಮ್ಮೆಲ್ಲ ಪಾರಂಪರಿಕ, ಧಾರ್ಮಿಕ, ಭಾಷಾ ಭಿನ್ನತೆಯನ್ನೂ ಮೀರಿ ಒಂದು ಗೂಡಿಸುತ್ತದೆ. ( ಇಂದಿರಾಗಾಂಧಿ- 1972 ಅಕ್ಟೋಬರ್ ನಲ್ಲಿ ಫಾರಿನ್ ಅಫೇರ್ಸ್ ಮ್ಯಾಗಝಿನ್ ನಲ್ಲಿ ಪ್ರಕಟಿತ ಲೇಖನದಲ್ಲಿ ಉಲ್ಲೇಖ)
ಅಜ್ಜಿಯ ಈ ಅರ್ಥಪೂರ್ಣ ಮಾತುಗಳನ್ನು ಮೊಮ್ಮಗ ರಾಹುಲ್ ಗಾಂಧಿ ಸರಿಯಾದ ರೀತಿಯಲ್ಲಿ ಅರ್ಥೈಸಿಕೊಂಡಂತಿದೆ. ದೇಶದ ನಾಯಕನಾಗಲು ಎಲ್ಲೋ ಪಟ್ಟದಲ್ಲಿ ಕುಳಿತು ಐಷಾರಾಮ ಜೀವನ ನಡೆಸುತ್ತಾ ರಾಜತಾಂತ್ರಿಕ ಹುನ್ನಾರಗಳನ್ನು ನಡೆಸುವುದಲ್ಲ, ದೇಶದ ಜನರ ಭಾವದೊಂದಿಗೆ ಮಿಳಿತವಾಗುವುದು ಎಂದು ಭಾವಿಸಿ ‘ಕೈ’ ಗೊಂಡ ರಾಹುಲ್ ಗಾಂಧಿಯ ಭಾವೈಕ್ಯತಾ ನಡೆ ಇವತ್ತಿನ ಜರೂರತ್ತು ಕೇವಲ ಕಾಂಗ್ರೆಸ್ ಪಕ್ಷದ ದೃಷ್ಟಿಯಿಂದಷ್ಟೇ ಅಲ್ಲ. ದೇಶದ ದೃಷ್ಟಿಯಿಂದ ಕೂಡಾ.

ಸೋನಿಯಾ ಗಾಂಧಿ ಕಣ್ಣೆದುರಿನಲ್ಲಿಯೇ ಎರಡೆರಡು ಜೀವಗಳು ಹತ್ಯೆಯಾಗಿದ್ದನ್ನು ನೋಡಿದ್ದಾರೆ. ಮಕ್ಕಳ ಹಿತದೃಷ್ಟಿಯಿಂದ ಅವರನ್ನು ಒಂದಷ್ಟು ಕಾಲ ದೇಶದಿಂದ ದೂರವೇ ಇಟ್ಟು ಕಾಪಾಡಿಕೊಳ್ಳುವುದು ಅವರಿಗೆ ಅನಿವಾರ್ಯವೇ ಆಗಿತ್ತು. ಭಾರತದ ನೆಲ, ಜಲ. ಪರಂಪರೆ ಇತಿಹಾಸ ಸಂಕಷ್ಟ ಸಮಸ್ಯೆ ಇವೆಲ್ಲವುಗಳಿಂದ ದೂರವೇ ಉಳಿದು ಬೆಳೆದ ರಾಹುಲ್ ಗಾಂಧಿಗೆ ಈ ನೆಲದ ರಾಜಕೀಯಕ್ಕೆ ತನ್ನನ್ನು ಒಗ್ಗಿಸಿಕೊಳ್ಳುವುದು ಸಾಹಸವೇ ಆಗಿತ್ತು. ಈ ಹಂತದಲ್ಲಿ ಆತ ರಾಜಕೀಯಕ್ಕೆ ಬಂದಾಗ ಕೆಲವೊಮ್ಮೆ ಅಸಂಬದ್ಧವಾಗಿ ಪ್ರಶ್ನಿಸಿ ಅಥವಾ ಮಾತನಾಡಿ ಮುಜುಗರಕ್ಕೊಳಗಾಗಿದ್ದು ಇದೆ. ಆದರೆ ವಿರೋಧ ಪಕ್ಷಗಳು ಅದನ್ನೇ ದೊಡ್ಡ ಅಸ್ತ್ರವಾಗಿಸಿಕೊಂಡು ಅವರನ್ನು ʼಪಪ್ಪುʼ ಎಂದು ಕರೆಯುತ್ತಾ ಪೆದ್ದನೆಂಬಂತೆ ಬಿಂಬಿಸಿ ಕಾಲೆಳೆಯಲು ಪ್ರಾರಂಭಿಸಿದವು. ಬಹುಶಃ ರಾಗಾರವರಷ್ಟು ಟ್ರೋಲ್ ಗೆ ಒಳಗಾದ ಮತ್ತೊಬ್ಬ ರಾಜಕೀಯ ವ್ಯಕ್ತಿ ಇಲ್ಲ ಅಂದರೂ ತಪ್ಪಾಗಲಾರದು. ಆದರೆ ನೆಹರೂ, ಇಂದಿರಾ, ರಾಜೀವ್ ಗಾಂಧಿಯಂತಹ ಧೀಮಂತ ವ್ಯಕ್ತಿತ್ವಗಳ ಜೀನ್ಸ್ ಅವರಲ್ಲಿ ಹರಿದು ಬಂದಿದೆ. ಅವರಿಗೆ ಸೋನಿಯಾರವರಂತಹ ದಿಟ್ಟ ಮತ್ತು ಸ್ಥಿರ ವ್ಯಕ್ತಿತ್ವ ಹೊಂದಿದ ತಾಯಿಯ ಮಾರ್ಗದರ್ಶನವಿದೆ. ಎಂದೇ ಅವರು ಸಂಯಮಗೆಡಲಿಲ್ಲ. ಹತಾಶರಾಗಲಿಲ್ಲ. ಮತ್ತೆ ಮತ್ತೆ ಮಾತಾಡಿದರು..ಈ ದೇಶದ ಸಂಸ್ಕೃತಿ ಮತ್ತು ಸಮಸ್ಯೆ ಅರಿಯಲು ಪ್ರಾಮಾಣಿಕ ಪ್ರಯತ್ನ ನಡೆಸಿದರು… ಪಪ್ಪು ಅಂದವರ ಮುಂದೆಯೇ” ಯುಗಪುರುಷನ ಯುಗಾರಂಭ” ಎನ್ನುವ ಹೃದಯಗೆದ್ದ ಮಾತುಗಳು ಕೇಳಿಬರುತ್ತಿವೆ ಈ ದಿನ.
ಬಿಜೆಪಿಗರಲ್ಲಿ ಭಾರತ್ ಜೋಡೊ ಯಾತ್ರೆ ನಡುಕ ಹುಟ್ಟಿಸಿದೆ ಎನ್ನುವುದನ್ನು ಅವರು ಟ್ವಿಟರ್ಗಳಲ್ಲಿ, ಸೋಷಿಯಲ್ ಮೀಡಿಯಾದಲ್ಲಿ ಮಾಡುತ್ತಿರುವ ಅವರ ವಿಚಲಿತ ಆರೋಪಗಳು ಹೇಳುತ್ತಿವೆ. ಸರ್ದಾರ್ ಪಟೇಲರೇ ಭಾರತವನ್ನು ಜೋಡಿಸಿದ್ದಾರೆ, ಈಗ ನೀವೇನು ಹೊಸದಾಗಿ ಜೋಡಿಸುವುದು ಎನ್ನುವ ಹಾಸ್ಯಾಸ್ಪದ ಹೇಳಿಕೆಗಳು ಅವರಿಂದ ಬರುತ್ತಿವೆ. ಆಗ ಸರ್ದಾರ್ ಪಟೇಲರು ಮಾಡಿದ್ದು ಭಾಷಾವಾರು ಪ್ರಾಂತ್ಯಗಳ ಪುನರ್ವಿಂಗಡಣೆ… ಅದು ಭೌತಿಕವಾದ ವಿಂಗಡಣೆ ಮತ್ತು ಜೋಡಣೆ!!! ಈಗ ಯಾತ್ರೆಯ ಉದ್ದೇಶ ಮಾನಸಿಕ ಜೋಡಣೆ.
ಧರ್ಮ ಜಾತಿ ಹಾಗೂ ಭಾಷೆಗಳ ಮೂಲಕ ಜನರನ್ನು ಒಡೆದು ಆಳುತ್ತಿರುವ ಇಂದಿನ ರೀತಿಯಿಂದ ಜನರ ಮನಸ್ಸು ಛಿದ್ರಛಿದ್ರವಾಗಿದೆ. ಆತಂಕಗೊಂಡಿದೆ. ಈ ಎಲ್ಲಾ ವಿಭಜಿತ ಮನಸುಗಳ ಮಾನಸಿಕ ಹಾಗೂ ಸಾಮಾಜಿಕ ಜೋಡಣೆ, ಭೀತಿಯಲ್ಲಿ ಬದುಕುತ್ತಿರುವ ಜನರಿಗೊಂದು ಆಶ್ವಾಸನೆ ಇವುಗಳು ಇಂದಿನ ತುರ್ತು.
ರಾಹುಲ್ ಗಾಂಧಿಯವರ ಈ ನಡೆ ಅವರನ್ನು ಪ್ರಧಾನ ಮಂತ್ರಿಯನ್ನಾಗಿ ಮಾಡುತ್ತಾ ಎನ್ನುವವರ ಪ್ರಶ್ನೆಗೆ ಇವತ್ತಿನ ಮಾಧ್ಯಮಗಳನ್ನು ಖರೀದಿಸಿ ಆಡಳಿತ ಪಕ್ಷ ನಡೆಸುವ ಚುನಾವಣಾ ಹುನ್ನಾರಗಳಲ್ಲಿ ಇತಿಹಾಸವನ್ನೇ ತಿರುಚಿ ಜನರನ್ನು ಭ್ರಮೆಗೊಳಪಡಿಸುತ್ತಿರುವ ಈ ಹೊತ್ತಿನಲ್ಲಿ ಗೆಲುವು ಸವಾಲಿನದು.. ಆದರೆ ಅಸಾಧ್ಯವಲ್ಲ!!
ಮುರಿದ ನಂಬಿಕೆ ಪ್ರೀತಿ ವಿಶ್ವಾಸವನ್ನು ಮರಳಿ ಜೋಡಿಸುವ ಈ ಯಾತ್ರೆ ಕಾಂಗ್ರೆಸ್ ಬಗ್ಗೆ ಜನ ಕಳೆದುಕೊಂಡ ವಿಶ್ವಾಸವನ್ನು ಮರಳಿ ಪಡೆಯುವ ಜಾತ್ರೆಯೂ ಆಗಬಹುದು. ಅದಕ್ಕೆ ಯಾತ್ರೆಯುದ್ದಕ್ಕೂ ಎಲ್ಲೆಲ್ಲೂ ಕೇಳಿಬರುತ್ತಿರುವ ʼಬಿಜೆಪಿ ಹಠಾವೊ, ದೇಶ್ ಬಚಾವೊʼ ಎಂಬ ಕೂಗು ಸಾಕ್ಷಿಯಾಗಿದೆ. ಪ್ರಧಾನಿ ಅಭ್ಯರ್ಥಿ ಎನ್ನುವುದನ್ನು ಜನರು ಮನಗಾಣತೊಡಗಿದ್ದಾರೆ ಎನ್ನುವುದು ಸತ್ಯ.
ದೇಶ ಸುತ್ತು ಕೋಶ ಓದು ಎನ್ನುವಂತೆ ಇವತ್ತು ರಾಹುಲ್ ರವರ ಈ ನಡೆ ಗಾಂಧೀಜಿಯವರ ದಂಡಿಯಾತ್ರೆಯನ್ನು ನೆನಪಿಸುತ್ತದೆ. ದಿನಕ್ಕೆ ಇಪ್ಪತೈದು ಕಿ.ಮಿ. ನಡೆಯುವ ರಾಹುಲ್ ರವರ ಮುಖದಲ್ಲಿ ಒಂದಿಷ್ಟೂ ದಣಿವಿಲ್ಲ. ಮಗುವಿನಂತಹ ಪರಿಶುದ್ಧ ನಗು! ಬಿದಿರಿನ ಬುಟ್ಟಿ ಹೆಣೆಯುವವರೊಂದಿಗೆ ಇದನ್ನು ಹೇಗೆ ಮಾಡುತ್ತೀರಿ ಎಂಬ ಬೆರಗು ಮಿಶ್ರಿತ ಪ್ರಾಮಾಣಿಕ ಪ್ರಶ್ನೆ. ಆಟೊ ಚಾಲಕರೊಂದಿಗೆ ನಡಿಗೆ… ಪುಟ್ಟ ಮಕ್ಕಳನ್ನು ಹಿಡಿದೆತ್ತಿ ಮುದ್ದು ಮಾಡಿ… ರೈತರೊಂದಿಗೆ ಊಟ ಮಾಡಿ ಕಬ್ಬು ಕಚ್ಚಿ ತಿಂದು ಎಲ್ಲವೂ ಸರಳ ಸಹಜ ಬೆರಗಿನೊಂದಿಗೆ! ಯಾವುದೋ ಯುವತಿ ಓಡಿಬಂದು ಆತನ ಕೈಹಿಡಿದು ಸಂತಸ ವ್ಯಕ್ತಪಡಿಸಬಲ್ಲಳು… ಮುಗ್ಧ ಮಗುವೊಂದು ಅಪ್ಪಿ ಹಿಡಿಯಬಲ್ಲದು… ಈ ನಡೆ ಧೀರ ನಡೆ… ಎರಡು ಹತ್ಯೆ ಕಂಡು ಆಘಾತವಾದ ಕುಟುಂಬದ ಯುವಕನೊಬ್ಬ ಇಷ್ಟು ಆರಾಮದಲ್ಲಿ ಕೇವಲ ಟೀಶರ್ಟ್ ಧರಿಸಿ (ಬುಲೆಟ್ ಪ್ರೂಫ್ ಅಲ್ಲ) ನಡೆಯಬಲ್ಲನಾದರೆ ಅದು ಧೀರ ನಡೆಯೇ… ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಇದೊಂದು ಐತಿಹಾಸಿಕ ನಡೆ..ಲ್ಯಾಂಡ್ ಮಾರ್ಕ್ ಆಗಬಹುದಾದ ಘಟನೆ. ಪ್ರತಿಯೊಬ್ಬರ ಬಾಯಲ್ಲೂ ಬರುತ್ತಿರುವ ಮಾತು ರಾಗಾ ಅಂದರೆ ಹಂಬಲ್, ಜಿನ್ಯೂನ್, ಡೌನ್ ಟು ಅರ್ಥ್, ಕಂಪ್ಯಾಶನೇಟ್, ಇನ್ ಸೈಟ್ ಫುಲ್ ಲೀಡರ್!!!. ಒಬ್ಬ ನಾಯಕನಾಗಲು ಜನರ ಇಂಥ ಅದ್ಭುತ ಭಾವಗಳು ಹೃದಯ ತುಂಬಿ ಬಂದ ಆಶೀರ್ವಾದ ಸಾಕಲ್ಲವೇ? ಈತ ಈಗ ಜನನಾಯಕನಾಗಿ ಬಿಂಬಿತವಾಗುತ್ತಿದ್ದಾರೆ. ಒಬ್ಬ ದೇಶದ ನಾಯಕನಾಗಿ ಚುನಾಯಿತನಾಗಲು ಚುನಾವಣಾ ತಂತ್ರಗಳಷ್ಟೇ ಜನರ ಎಮೋಷನ್ಸ್ ಗಳೂ ಮುಖ್ಯ. ಇವ ನಮ್ಮವ ಇವ ನಮ್ಮವ ಎನ್ನುವ ಭಾವ ಮುಖ್ಯ. ಕರ್ನಾಟಕದಲ್ಲಿ ದೇವನೂರು ಮಹಾದೇವ ಅವರು ರಾಹುಲರನ್ನು ಬರಮಾಡಿಕೊಂಡ ರೀತಿ ಕೇವಲ ಕಾಂಗ್ರೆಸ್ ಪಕ್ಷದ ಯಾತ್ರೆ ಅನಿಸದೆ ಇದೊಂದು ಸಮಾನ ಮನಸ್ಕರ ಯಾತ್ರೆ ಅನಿಸುವಂತೆ ಮಾಡಿತು.
ಖಂಡಿತಾ ಈ ನಡೆ ಕಾಂಗ್ರೆಸ್ ಕಳೆದುಕೊಂಡ ತನ್ನ ವರ್ಚಸ್ಸನ್ನು ಮತ್ತೆ ಪಡೆಯಲು ಒಂದು ಮೆಟ್ಟಿಲು ಏರಿದಂತೆ. ದೇಶ ಪರ್ಯಟನೆ ಮಾಡುತ್ತಾ ಜನರ ಬದುಕಿಗೆ ಹತ್ತಿರದಿಂದ ಸ್ಪಂದಿಸುವ ಮೂಲಕ ರಾಹುಲ್ ಗಾಂಧಿಯವರ ವ್ಯಕ್ತಿತ್ವ ತನ್ನ ಮೆರುಗನ್ನು ಸಾಣೆ ಹಿಡಿಯುವಂತಿದೆ. ಇದುವರೆಗೆ ಪಪ್ಪು ಎಂದು ಟ್ರೋಲ್ ಮಾಡಿದ ಜನರೂ ಒಳಗೊಳಗೇ ದಂಗಾಗಿ ಈ ಮನುಷ್ಯನ ಸಂಯಮ ನಿಷ್ಕಲ್ಮಷ ನಗು, ಮಗುವಿನ ಮುಗ್ಧತೆ,, ಪ್ರೀತಿ, ಗೌರವ ಘನತೆ ಎಂದೆಲ್ಲಾ ಮಾತಾಡುತ್ತಿದ್ದಾರೆಂದರೆ, ಇದು ಸ್ವತಃ ರಾಹುಲ್ ಗಾಂಧಿ ಗಳಿಸಿದ್ದು… ನಿರಂತರ ಶ್ರಮಕ್ಕೆ ಸೋಲಿಲ್ಲ… ಸಹನೆಯಂತಹ ಅಸ್ತ್ರ ಮತ್ತೊಂದಿಲ್ಲ… ಈ ಕ್ಷಣಕ್ಕೆ ನರೇಂದ್ರ ಮೋದಿಯವರನ್ನು ಸೋಲಿಸುವ ಒಬ್ಬ ಸಂತನಂತೆ ಆತ ಕಾಣಿಸಿದರೆ ಆಶ್ಚರ್ಯವಿಲ್ಲ. ಭಾರತ್ ಜೋಡೊ ಪರಸ್ಪರ ಮಾನವೀಯತೆ ಪ್ರೀತಿ ಬೆಸೆಯುವ ಯಾತ್ರೆಯಾಗಿ ಹತಾಶ ಮನಸುಗಳಿಗೆ ಆಶಾಕಿರಣವಾಗಿ ಕಾಣಿಸುತ್ತಿರುವುದಂತೂ ಹೌದ
(ಈ ಲೇಖನದಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳು ಲೇಖಕರದ್ದಾಗಿರುತ್ತದೆ.)
ಶಾಂತಾ ಕುಮಾರಿ
ಲೇಖಕರು.
🔸 ಗ್ರೂಪ್ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
https://chat.whatsapp.com/G94DLKaJrsBH07M7DvkqRo
ಇದನ್ನೂ ನೋಡಿ: ಶೋಭಕ್ಕ, ಸಿ.ಟಿ.ರವಿಯವರೇ ಈಗೇನ್ ಹೇಳ್ತೀರಾ? || ಸೂರ್ಯ ಮುಕುಂದರಾಜ್ ಪ್ರಶ್ನೆ
2017 ರಲ್ಲಿ ನಡೆದ ಪರೇಶ್ ಮೇಸ್ತ ಸಾವಿನ ಪ್ರಕರಣದ ಕುರಿತು ತನಿಖೆ ನಡೆಸಿದ ಸಿ ಬಿ ಐ ವರದಿ ನೀಡಿದೆ. ಅಂದು ಈ ಸಾವಿನ ಹೆಸರಿನಲ್ಲಿ ಲಾಭ ಮಾಡಿಕೊಂಡಿದ್ದವರು ಗಂಟಲು ಈಗ ಕಟ್ಟಿದಂತೆ ಕುಳಿತಿದ್ದಾರೆ. ನ್ಯಾಯವಾದಿ ಹಾಗೂ ಕೆಪಿಸಿಸಿಯ ವಕ್ತಾರ ಹಾಗೂ ಕಾನೂನು, ಮಾನವ ಹಕ್ಕುಗಳ ಮತ್ತು ಮಾಹಿತಿ ಹಕ್ಕು ವಿಭಾಗದ ಪ್ರಧಾನ ಕಾರ್ಯದರ್ಶಿ ಸೂರ್ಯ ಮುಕುಂದರಾಜ್ ಈ ಪ್ರಕರಣದ ಕುರಿತಂತೆ ಗಂಭೀರ ವಿಷಯಗಳನ್ನು ಇಲ್ಲಿ ಚರ್ಚಿಸಿದ್ದಾರೆ.
PEEPAL TV
https://www.facebook.com/peepaltvkannada/videos/636037751517856
ಈ ವಿಡಿಯೋ ಯೂಟ್ಯೂಬಿನಲ್ಲಿ ನೋಡಲು 👇🏼
https://youtu.be/e8-8cyA1TBU