ಕೆಂಪು ಕೋಟೆ ಸಮೀಪ ಸೋಮವಾರ ನಡೆದ ಭಾರಿ ಸ್ಫೋಟದ ಕುರಿತು ಚರ್ಚಿಸಲು ಕೇಂದ್ರ ಗೃಹ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿ (Parliamentary Standing Committee on Home Affairs) ನಿರಾಕರಿಸಿದೆ.
ಬುಧವಾರ ಇಲ್ಲಿ ಅಧ್ಯಕ್ಷ ರಾಧಾ ಮೋಹನ್ ದಾಸ್ ಅಗರ್ವಾಲ್ ಅವರ ಅಧ್ಯಕ್ಷತೆಯಲ್ಲಿ ಸಮಿತಿಯ ಸಭೆ ನಡೆಯಿತು. ಈ ಸಭೆಯಲ್ಲಿ ಕೆಂಪು ಕೋಟೆ ಸಮೀಪದ ಸ್ಫೋಟದ ಘಟನೆಯ ಪ್ರಸ್ತಾಪ ಬಂದಿತು. ಆದರೆ, ಈ ಬಗ್ಗೆ ಚರ್ಚಿಸಲು ಅಧ್ಯಕ್ಷರು ನಿರಾಕರಿಸಿದರು. ದೆಹಲಿ ಸ್ಫೋಟದಲ್ಲಿ 13 ಜನರು ಮೃತಪಟ್ಟ ವಿಷಯವನ್ನು ತೃಣಮೂಲ ಕಾಂಗ್ರೆಸ್ನ (TMC) ಸಂಸದರೊಬ್ಬರು ಪ್ರಸ್ತಾಪಿಸಿದರು.
ಅವರು ಗುಪ್ತಚರ ವೈಫಲ್ಯದ (Intelligence Failure) ಬಗ್ಗೆ ಕಳವಳ ವ್ಯಕ್ತಪಡಿಸಿದರು. ಆದರೂ, ಸಮಿತಿ ಅಧ್ಯಕ್ಷ ರಾಧಾ ಮೋಹನ್ ದಾಸ್ ಅವರು ಈ ವಿಷಯದ ಕುರಿತು ಚರ್ಚೆ ನಡೆಸಲು ನಿರಾಕರಿಸಿದರು. ಈ ಬಗ್ಗೆ ಸುಮೊಟೊ (suo motu) ಹೇಳಿಕೆ ನೀಡಲು ಸಹ ಅವರು ನಿರಾಕರಿಸಿದ್ದಾರೆ ಎಂದು ತಿಳಿದುಬಂದಿದೆ.
ಸಂಸದೀಯ ಸಮಿತಿಯು ಬುಧವಾರ ವಿಪತ್ತು ನಿರ್ವಹಣೆ (Disaster Management) ಕಾರ್ಯಸೂಚಿಯ ಮೇಲೆ ಸಭೆ ಸೇರಿತ್ತು. ಈ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ತಿಳಿಸಲು ಗೃಹ ಸಚಿವಾಲಯ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (NDMA), ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ (NIDM), ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (NDRF) ಅಗ್ನಿಶಾಮಕ ಸೇವೆಗಳು, ಸಿವಿಲ್ ಡಿಫೆನ್ಸ್ ಕ್ಯಾಂಪ್ ಮತ್ತು ಹೋಮ್ ಗಾರ್ಡ್ಸ್ ಡಿಜಿ (DG) ಗಳು ಹಾಜರಾಗಿದ್ದರು.
