ಹೆಣ್ಣು ಚೆಲುವಾಗಿ, ಹರವಾಗಿ ಮೈ ಹರಡಿಕೊಂಡು ನಳ ನಳಿಸಬಯಸುವ ಅಶೋಕ ವೃಕ್ಷವಿದ್ದಂತೆ. ಆಕಾಶದೆತ್ತರ ತಲೆ ಎತ್ತಿ ನಿಲ್ಲುವ ಬಯಕೆ , ಕನಸು ಆಕೆಯದು. ಆದರೆ ಇದನ್ನು ಸಮಾಜ ಇಷ್ಟಪಡುವುದಿಲ್ಲ. ಹೆಣ್ಣೆಂಬ ಅಶೋಕ ವೃಕ್ಷದ ಗೆಲ್ಲುಗಳನ್ನು ಸವರಿ, ತನಗೆ ಬೇಕಾದಂತಹ ವಿಕಾರ ರೂಪ ನೀಡಲು ಅದು ಸದಾ ಯತ್ನಿಸುತ್ತಲೇ ಇರುತ್ತದೆ ಎನ್ನುವುದನ್ನು ಈ ಕವಿತೆಯಲ್ಲಿ ಮನೋಜ್ಞವಾಗಿ ಕಟ್ಟಿಕೊಟ್ಟಿದ್ದಾರೆ ಸಬಿಹಾ ಭೂಮೀಗೌಡ
ನೋಡಲ್ಲಿ ಚೆಲುವಾಗಿ ಹರವಾಗಿ ಮೈಯ
ಹರಡಿಕೊಂಡು ನಳನಳಿಸುತಿದೆ ಅಶೋಕ!
ಏರಿದ್ದು ಸಾಕೆಂದು ಕತ್ತರಿಸಿ ಹೀಗಿಂದು
ರೂಪಿಸಿದೆ ನೋಡೀ ಲೋಕ!
ಎಂಥ ಅರಸಿಕಳು ನೀ
ಚೆಲುವಿಗೆ ಸೊಗಸಿಗೆ ಹೀಗೆ ಇಡಬಹುದೇ ಕೊಡಲಿ?
ಚೆಲುವಿನ ಮಾತಲ್ಲ ತೆಗಿ
ಯಾರು ತುಂಬಿದರು ಅದ
ಎಲ್ಲಿದೆಯದು, ನಿನ್ನದೇ
ಸುತ್ತ ನೋಡಿ ಕಲಿತದ್ದೇ ಮತ್ತಾರೋ ತುಂಬಿದ್ದೇ?
ಕಚಕಚನೆ ಕತ್ತರಿಸಿ
ಕೊಟ್ಟು ತನ್ನ ಕಲ್ಪನೆಯ
ವಿಕಾರವ ಆಕಾರವೆಂದರೆ
ಅಕ್ಕು ಅಕ್ಕು ಎನಬಹುದೇ
ಯಾರಿಗಾಗಿಯೋ ಯಾಕೆ ಅಶೋಕ
ಬಾಗಬೇಕು ತಲೆ ನೀಡಬೇಕು?
ತಂದೆಯಲ್ಲ ಎಲ್ಲಿಂದಲೋ ವಾದ
ನೆಮ್ಮದಿಯ ಕೆಡಿಸೋ ಸಂವಾದ
ಯಾಕೆ ಈ ಪರಿಯ ಗಲಿಬಿಲಿ
ಹೊರಳಿ ನೋಡೊಮ್ಮೆ
ಕೈ ತೋರಿದರೆ ಸಾಕು ಇರಬೇಕು
ಮನೆ ಒಳಗೋ ಹೊರಗೋ
ಬೀದಿಗೋ ಗಾದಿಗೋ ಒಪ್ಪಿದರೆ ಅನುಕ್ರಮಣ ಒಪ್ಪದಿರೆ ಅತಿಕ್ರಮಣ
ಸನ್ನೆಗಳ ಮೀರದಿರೆ ಒಂದು
ಮೀರಿದರೆ ಮತ್ತೊಂದು
ಗಡಿ ತೋರುವರು ಗುಳಿ ತೋಡುವರು
ಬಿದ್ದರೆ ನಗುವರು ಎದ್ದರೆ ಸಿಡಿವರು
ತಲೆಬಾಗಿ ನಡುಬಾಗಿ ಬಾಗುವುದೇ
ಹಿತವೆಂದು ಇಲ್ಲದಿರೆ ಹತವಾದೇವೆಂದು ತೊಟ್ಟು ಮೆರೆದುದ ಮರೆವುದೇ
ವಾದಕ್ಕೆ ವಾದವಲ್ಲಕ್ಕ
ತೋರಿ ಅಶೋಕದೊಳಗಿನ ಶೋಕವ
ಸುತ್ತಿನ ಖುಷಿಯ ಹೊತ್ತೊಯ್ದು
ಕುಕ್ಕರಿಸಿ ನೆಲಕೆ ನಮ್ಮ
ಹೀಗೆ ನಿಲಿಸಬಹುದೇ ಅಕ್ಕ
ಡಾ. ಸಬಿಹಾ ಭೂಮೀಗೌಡ
ಸ್ಪಷ್ಟ ಚಿಂತನೆ ಹಾಗೂ ಸ್ತ್ರೀವಾದಿ ನೋಟದಿಂದ ಕತೆ, ಕಾವ್ಯ, ಅಂಕಣ ಬರಹ, ವಿಮರ್ಶೆ, ಸಂಶೋಧನಾ ಲೇಖನ.. ಹೀಗೆ ಸೃಜನ ಶೀಲ ಮತ್ತು ಸೃಜನೇತರ ಪ್ರಕಾರಗಳೆರಡರ ಬರವಣಿಗೆಗಳಲ್ಲಿ ತೊಡಗಿಕೊಂಡವರು. ಸಮಾಜಮುಖಿ ಹೋರಾಟಗಳಲ್ಲೂ ಗುರುತಿಸಿಕೊಂಡವರು.