ವ್ಯವಸ್ಥಿತವಾಗಿ ನಡೆಯುತ್ತಿರುವ ಹೆಣ್ಣು ಮಕ್ಕಳ ಹತ್ಯೆ, ಭ್ರೂಣ ಹತ್ಯೆ, ಅನಕ್ಷರತೆ, ಕಿರುಕುಳ, ತಾರತಮ್ಯ, ಅವಮಾನ, ಅಗೌರವ, ಅತ್ಯಾಚಾರ ಮೊದಲಾದ ಅನ್ಯಾಯಗಳು ಹತೋಟಿಗೆ ಬರಬೇಕಾದರೆ ಹೆಣ್ಣು ಮಕ್ಕಳಿಗೆ ಬಾಲ್ಯದಿಂದಲೇ ತನ್ನ ಅಧಿಕಾರ, ಶಿಕ್ಷಣ, ಹಕ್ಕುಗಳ ಅರಿವು ಮೂಡಿಸಬೇಕು – ಆಯೇಷಾ ಝಬಿ, ಮೈಸೂರು.
ಹೆಣ್ಣು ಎಲ್ಲಿ ಆರಾಧಿಸಲ್ಪಡುತ್ತಳೊ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ. ಸ್ತ್ರೀಯರನ್ನು ಶಕ್ತಿ ಸ್ವರೂಪಿಯಾಗಿ ಆರಾಧಿಸಿದ ದೇಶ ನನ್ನದು ಆದರೆ ವಾಸ್ತವದಲ್ಲಿ ಭಾರತದ ಮಹಿಳೆಯರು ಅತ್ಯಂತ ಅಪಾಯಕಾರಿ ಸ್ಥಿತಿಯಲ್ಲಿದ್ದಾರೆ. ಅದಕ್ಕೆ ಕಾರಣ ಇತ್ತೀಚೆಗೆ ಹೆಚ್ಚುತ್ತಿರುವ ಮಹಿಳೆಯರ ಮೇಲಿನ ಅತ್ಯಾಚಾರಗಳು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯಗಳು. ನಾವು ಬ್ರಿಟಿಷ್ ಆಡಳಿತದಿಂದ ಮಾತ್ರ ಮುಕ್ತಿ ಹೊಂದಿದ್ದೇವೆಯೇ ಹೊರತು ನಮ್ಮ ದೇಶದಲ್ಲಿ ಇರುವ ಕಾಮುಕರಿಂದ, ನರ ಭಕ್ಷಕರಿಂದ ಇಂದಿಗೂ ಬಿಡುಗಡೆ ಪಡೆದಿಲ್ಲ. ಇತ್ತೀಚಿನ ದಿನಗಳಲ್ಲಂತು ತಂದೆ ಮಗಳ ಮೇಲೆ, ಅಣ್ಣ ತಂಗಿಯ ಮೇಲೆ, ಶಿಕ್ಷಕ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ನಡೆಸುತ್ತಿರುವುದು ಬಹಳ ಶೋಚನೀಯ. ಜಾಗತೀಕರಣದಿಂದ ಹೆಣ್ಣು ಅನೇಕ ಪ್ರಯೋಜನಗಳನ್ನು ಪಡೆದಿದ್ದರೂ ಆಕೆ ಶೋಷಣೆ, ವರದಕ್ಷಿಣೆ, ಅತ್ಯಾಚಾರಗಳಿಂದ ಮುಕ್ತವಾಗಿಲ್ಲ. ಬಾಹ್ಯಕಾಶ ವಿಜ್ಞಾನದಲ್ಲಿ ಮುಂಚೂಣಿಯಲ್ಲಿರುವ ಭಾರತ ಮಹಿಳಾ ಸುರಕ್ಷೆಯ ವಿಷಯದಲ್ಲಿ ಇಡೀ ವಿಶ್ವದ ಮುಂದೆ ತಲೆ ತಗ್ಗಿಸುವಂತಿದೆ. ಇಡೀ ದೇಶವನ್ನೇ ತಲ್ಲಣಗೊಳಿಸಿದ್ದ ಉತ್ತರ ಪ್ರದೇಶದ ಹತ್ರಾಸ್ನಲ್ಲಿ ನಡೆದಿದ್ದ ಗ್ಯಾಂಗ್ರೇಪ್ ಪ್ರಕರಣ ಎಲ್ಲರನ್ನು ತಲೆ ತಗ್ಗಿಸುವಂತೆ ಮಾಡಿತ್ತು. ಮಂಡ್ಯ ಜಿಲ್ಲೆಯಲ್ಲಿ ಮನೆಪಾಠಕ್ಕೆ ತೆರಳಿದ ಪುಟ್ಟ ಬಾಲಕಿಯ ಮೇಲೆ ಶಿಕ್ಷಕನಿಂದ ಅತ್ಯಾಚಾರ. ದೆಹಲಿಯಲ್ಲಿ ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಾಬಿಯ ಸೈಫಿ ಎಂಬ ಹೆಣ್ಣುಮಗಳ ಮೇಲೆ ಅತ್ಯಾಚಾರವೆಸಗಿ ಬರ್ಬರವಾಗಿ ಹತ್ಯೆ ಮಾಡಲಾಯಿತು. ಎಂಟು ವರ್ಷದ ಪುಟ್ಟ ಕಂದಮ್ಮ ಆಸಿಫಾಳ ಮೇಲೆ ನಾಲ್ವರು ಅಮಾನುಷವಾಗಿ ಅತ್ಯಾಚಾರ ಮಾಡಿ ಕೊಂದರು. ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಹಾಗೂ ತುಮಕೂರಿನಲ್ಲಿ ದನ ಮೇಯಿಸಲು ತೆರಳಿದ್ದ ಮಹಿಳೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಹೀಗೆ ಸಾಲು ಸಾಲಾಗಿ ದೌರ್ಜನ್ಯಗಳು ಮುಂದುವರಿಯುತ್ತಿವೆ.
ನಿರ್ಭಯ ಸಾಮೂಹಿಕ ಅತ್ಯಾಚಾರ ಪ್ರಕರಣದ ನಂತರದ 9 ವರ್ಷಗಳಲ್ಲಿ (2013-2021) ಸುಮಾರು 2.42ಲಕ್ಷ ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಒಂದು ದಿನಕ್ಕೆ 95 ಅತ್ಯಾಚಾರ ಪ್ರಕರಣಗಳು ನಡೆದರೆ, ಪ್ರತಿ ಗಂಟೆಗೆ 4 ಮಹಿಳೆಯರು ಅತ್ಯಾಚಾರಕ್ಕೊಳಗಾಗುತ್ತಿದ್ದಾರೆ ಎನ್ನುತ್ತವೆ ಅಂಕಿ ಅಂಶಗಳು. ಅತ್ಯಾಚಾರದಂತಹ ದಾರುಣ ಪ್ರಕರಣಗಳು ಬೆಳಕಿಗೆ ಬಂದಾಗ ಸಾರ್ವಜನಿಕ ಆಕ್ರೋಶ ಮುಗಿಲು ಮುಟ್ಟುವುದು ಸಹಜ. ಆದರೆ, ಆ ಆಕ್ರೋಶ ಸಾಂವಿಧಾನಿಕ ಚೌಕಟ್ಟಿನೊಳಗೆ ನಾವು ತರಬಹುದಾದ ಬದಲಾವಣೆಗಳ ಕುರಿತು ಚರ್ಚೆಗಳನ್ನು ಪ್ರಾರಂಭಿಸಬೇಕು. ಸಾಂವಿಧಾನಿಕ ಚೌಕಟ್ಟಿನ ಹೊರಗಡೆ ಇರುವ ಸುಲಭ ಹಾಗೂ ತಾತ್ಕಾಲಿಕ ಪರಿಹಾರಗಳಿಗೆ ಮೊರೆಹೋಗಿ, ಅವುಗಳು ಆ ಪ್ರಕರಣಗಳ ಮಟ್ಟಿಗೆ ತಕ್ಷಣಕ್ಕೆ ತರುವ ತೃಪ್ತಿಯನ್ನು ಸಂಭ್ರಮಿಸಿ, ಅಲ್ಲಿಗೆ ಇಡೀ ವಿಚಾರವನ್ನೇ ಬಿಟ್ಟುಬಿಡುವ ಸ್ಥಿತಿ ಸೃಷ್ಟಿಯಾಗಬಾರದು.
ಅತ್ಯಾಚಾರದಂತಹ ಸಮಸ್ಯೆಯೊಂದನ್ನು ಬಗೆಹರಿಸುವುದು ಸುಲಭದ ಕೆಲಸವಲ್ಲ. ಅದರ ಕುರಿತು ಸುದೀರ್ಘ ಚರ್ಚೆಗಳು ನಡೆಯುತ್ತಲೇ ಇರಬೇಕು. ಈ ಚರ್ಚೆಗಳು ರಾಜಕೀಯ, ಸಾಮಾಜಿಕ ಮತ್ತು ನ್ಯಾಯಾಂಗದ ಸುಧಾರಣೆಗಳನ್ನು ತರುವಲ್ಲಿ ಯಶಸ್ವಿಯಾಗಬೇಕು. ಇಲ್ಲದಿದ್ದರೆ ಇಂತಹ ಸಾರ್ವಜನಿಕ ಆಕ್ರೋಶಗಳಿಂದ ಯಾವುದೇ ಬದಲಾವಣೆ ಸಾಧ್ಯವಿಲ್ಲ, ಯಾವ ಸಮಸ್ಯೆಯೂ ಬಗೆ ಹರಿಯುವುದಿಲ್ಲ. ಎನ್ ಕೌಂಟರ್ ತರಹದ ಶಿಕ್ಷೆಗಳನ್ನು ಜನ ಇಷ್ಟರ ಮಟ್ಟಿಗೆ ಸ್ವಾಗತಿಸಿರುವುದಕ್ಕೆ ಎರಡು ಮುಖ್ಯ ಕಾರಣಗಳಿವೆ. ಒಂದನೆಯದಾಗಿ ಅತ್ಯಾಚಾರವನ್ನು ಬೇರೆಲ್ಲ ಅಪರಾಧಗಳಿಗಿಂತ ಹೆಚ್ಚು ಗಂಭೀರವಾಗಿ ಪರಿಗಣಿಸಿ ಅದಕ್ಕೆ ಬೇರೆ ಅಪರಾಧಗಳಿಗಿಂತ ಹೆಚ್ಚು ಕಠಿಣ ಶಿಕ್ಷೆಯನ್ನು ಅಪೇಕ್ಷಿಸುವುದು. ಎರಡನೆಯದಾಗಿ ಅತ್ಯಾಚಾರ ಎಸಗಿದವರಿಗೆ ನಮ್ಮ ನ್ಯಾಯಾಂಗ ವ್ಯವಸ್ಥೆ ತಕ್ಕ ಶಿಕ್ಷೆ ವಿಧಿಸಿ ನ್ಯಾಯವನ್ನು ಎತ್ತಿಹಿಡಿಯುತ್ತದೆ ಎಂಬ ನಂಬಿಕೆಯನ್ನು ಜನ ಕಳೆದುಕೊಂಡಿರುವುದು. ಇವೆರಡರ ಕುರಿತು ಗಂಭೀರವಾಗಿ ಚರ್ಚಿಸುವ ಅವಶ್ಯಕತೆ ಇದೆ.
ಪುರುಷ ಪ್ರಾಧಾನ್ಯವು ಸಮಾಜದ ಚಿಂತನೆಗಳನ್ನು, ವೈಯಕ್ತಿಕ ಚಿಂತನೆಗಳನ್ನು ಆಳುತ್ತದೆ. ಅವುಗಳ ಮೇಲೆ ಪರಿಣಾಮ ಬೀರುತ್ತದೆ. ಅತ್ಯಾಚಾರವನ್ನು ನಾವು ನೋಡುವ ದೃಷ್ಟಿಕೋನವೂ ಇದರಿಂದ ಹೊರತಾಗಿಲ್ಲ. ಅತ್ಯಾಚಾರಕ್ಕೊಳಗಾದ ಮಹಿಳೆಯ ಭವಿಷ್ಯವೇ ಹಾಳಾಯಿತೆಂದು ಸಮಾಜ ನಂಬುತ್ತದೆ. ಅವಳಷ್ಟೇ ಅಲ್ಲದೆ ಆಕೆಯ ಇಡೀ ಕುಟುಂಬದ ಹಾಗೂ ಸಮುದಾಯದ ಘನತೆ ಗೌರವವೇ ಮಣ್ಣು ಪಾಲಾಯಿತೆಂದು ನಿರ್ಧರಿಸಿ ಬಿಡುತ್ತದೆ. ಆದ್ದರಿಂದಲೇ ಬೇರೆ ಅಪರಾಧಗಳಿಗಿಂತ ಅತ್ಯಾಚಾರವನ್ನು ಜನ ಹೆಚ್ಚು ಗಂಭೀರವಾಗಿ ಪರಿಗಣಿಸಿ, ಅದರ ಬಗ್ಗೆ ಹೆಚ್ಚು ಆಕ್ರೋಶ ವ್ಯಕ್ತಪಡಿಸುವುದು.
ಕಾಮವಷ್ಟೇ ಅತ್ಯಾಚಾರಕ್ಕೆ ಕಾರಣವಾಗಿರುವುದಿಲ್ಲ. ಶತಮಾನಗಳಿಂದ ನಡೆಯುತ್ತಿರುವ ಸಾಮಾಜಿಕ ದಬ್ಬಾಳಿಕೆಯಿಂದ ಕ್ರಮೇಣ ಹೊರಬಂದು ಎಲ್ಲ ರೀತಿಯಲ್ಲೂ ಸಬಲರಾಗುತ್ತಾ ‘ಪುರುಷ ಪ್ರಧಾನ’ ವ್ಯವಸ್ಥೆಯನ್ನು ಪ್ರಶ್ನಿಸುತ್ತಿರುವ ಹೆಂಗಸರು ಬಹಳಷ್ಟು ಗಂಡಸರಲ್ಲಿ ಅಭದ್ರತೆ ಮೂಡಿಸುತ್ತಿದ್ದಾರೆ. ತೀವ್ರ ಅಭದ್ರತೆಯಿಂದ ಬಳಲುವ ಕೆಲವು ಗಂಡಸರು ಮಹಿಳೆಯರನ್ನು ಹತ್ತಿಕ್ಕಿ ತಮ್ಮ ಶಕ್ತಿ ಹಾಗೂ ಸಾಮಾಜಿಕ ಸ್ಥಾನ ಸ್ಥಾಪಿಸುವ ಸಲುವಾಗಿ ಅತ್ಯಾಚಾರ ಎಸಗುತ್ತಾರೆ. ಅತ್ಯಾಚಾರ ಎಸಗುವುದರಿಂದ ಮಹಿಳೆಯರನ್ನು ಹತ್ತಿಕ್ಕಬಹುದು ಎಂಬ ಆಲೋಚನೆ ಎಲ್ಲಿಂದಲೋ ಬರುವುದಲ್ಲ. ಅತ್ಯಾಚಾರ ಎಸಗುವವರು ನಮ್ಮ ಸಮಾಜದಲ್ಲಿಯೇ ಬದುಕುವವರು. ಅತ್ಯಾಚಾರವು ಹೆಣ್ಣಿನ ಘನತೆ ಗೌರವವನ್ನು ಶಾಶ್ವತವಾಗಿ ನಾಶ ಮಾಡಿಬಿಡುತ್ತದೆ ಎಂಬ ಸಾಮಾಜಿಕ ಪರಿಕಲ್ಪನೆಯೇ ಅವರ ಯೋಚನೆಯ ಹಿಂದಿರುವುದು. ಹೆಣ್ಣಿನ ಕುರಿತ ಸಾಮಾಜಿಕ ಚಿಂತನೆ ಬದಲಾದರೆ ಅತ್ಯಾಚಾರ ಪ್ರಕರಣಗಳ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸಬಹುದು.
ಹೆಣ್ಣು ಮೃದುವಾಗಿರಬೇಕು ಗಂಡು ಜೋರಾಗಿ ಇರಬೇಕು ಎಂಬ ವಿಚಿತ್ರ ಮಾತುಗಳು ಕೇಳಿ ಬರುತ್ತಿವೆ. ಆದರೆ ಈಗ ಕಾಲ ಬದಲಾಗಿದೆ. ತನ್ನ ಕೆಲಸ ಕಾರ್ಯ ತನ್ನ ಗೌರವವನ್ನು ಕಾಪಾಡಿಕೊಳ್ಳಲು ಹೆಣ್ಣು ಯಾವಾಗಲೂ ಮುಂದಾಗಬೇಕು. ಹೆಣ್ಣು ಎಂದು ಗೌರವ ಕೊಡುವುದಕ್ಕಿಂತ ಆಕೆಯೂ ಮನುಷ್ಯಳು ಎಂದು ಗೌರವಿಸುವ ಪದ್ಧತಿ ಶುರುವಾಗಬೇಕು. ಮಹಿಳೆಯರೆಂದರೆ ಕೀಳಾಗಿ ನೋಡುವ ಪ್ರವೃತ್ತಿ ಇಂದಿಗೂ ಕಡಿಮೆಯಾಗುತ್ತಿಲ್ಲ. ಮಹಿಳೆಯರು ರಾಜಕೀಯ, ಶಿಕ್ಷಣ, ಉದ್ಯೋಗ ಸಹಿತ ವಿವಿಧ ಕ್ಷೇತ್ರಗಳಲ್ಲಿ ಅವಕಾಶ ಗಳಿಸಿ ಗೌರವದ ಬದುಕು ನಡೆಸುವ ಅವಕಾಶ ಪಡೆದುಕೊಂಡರೂ ಶೋಷಣೆಗಳು ಮಾತ್ರ ಇನ್ನೂ ನಿಂತಿಲ್ಲ.
ಹುಟ್ಟಿದ 12 ಮಿಲಿಯನ್ ಹೆಣ್ಣು ಮಕ್ಕಳಲ್ಲಿ ಮೂರು ಮಿಲಿಯನ್ ಹೆಣ್ಣುಮಕ್ಕಳು ತಮ್ಮ 15ನೇ ಹುಟ್ಟುಹಬ್ಬವನ್ನು ಕಾಣುವುದಿಲ್ಲ. ಒಂದು ಮಿಲಿಯನ್ ಹೆಣ್ಣುಮಕ್ಕಳು ಹುಟ್ಟಿದ ಮೊದಲ ವರ್ಷದೊಳಗೆ ಕಾಣೆಯಾಗುತ್ತಾರೆ. ಪ್ರತಿ 6ನೇ ಹೆಣ್ಣು ತಾನು ಹೆಣ್ಣೆಂಬ ಕಾರಣಕ್ಕೆ ಕೊಲ್ಲಲ್ಪಡುತ್ತಾಳೆ. ಭಾರತದಲ್ಲಿ ನಿತ್ಯ 10 ದಲಿತ ಮಹಿಳೆಯರು ಅತ್ಯಾಚಾರಕ್ಕೊಳಗಾಗುತ್ತಾರೆ. ಮಹಿಳೆಯರ ಮೇಲೆ ಅತೀ ಹೆಚ್ಚು ದೌರ್ಜನ್ಯ ಪ್ರಮಾಣವನ್ನು ಹೊಂದಿರುವ ಅಸ್ಸಾಂ ರಾಜ್ಯದಲ್ಲಿ ಪ್ರತಿ ಲಕ್ಷ ಜನ ಸಂಖ್ಯೆಗೆ 117.8ರಷ್ಟು ಪ್ರಕರಣಗಳು ದಾಖಲಾಗಿವೆ. ಯು ಪಿ ಯಲ್ಲಿ ಅತೀ ಹೆಚ್ಚು ವರದಕ್ಷಿಣೆ ಪ್ರಕರಣಗಳು ದಾಖಲಾಗುತ್ತಿವೆ. ಮಹಿಳೆಯರ ಮೇಲೆ ಯು ಪಿ ಯಲ್ಲಿ ಈವರೆಗೂ 59,853 ವಿವಿಧ ರೀತಿಯ ದೌರ್ಜನ್ಯಗಳು ನಡೆದಿವೆ. 2019ರ ಅಂಕಿ ಅಂಶದ ಪ್ರಕಾರ 150 ಆಸಿಡ್ ದಾಳಿಗಳು ವರದಿಯಾಗಿವೆ.
ಮಹಿಳೆಯರ ಸಂರಕ್ಷಣೆಗೆ ಸರಕಾರ ಹಲವು ಕ್ರಮ, ಕಾಯ್ದೆಗಳನ್ನು ಕೈ ಗೊಂಡಿದೆ. ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ, ಗೆಳತಿ ವಿಶೇಷ ಚಿಕಿತ್ಸಾ ಘಟಕ, ಸಾಂತ್ವನ, ಸ್ವಾಧಾರ ಗೃಹ, ವರದಕ್ಷಿಣೆ ನಿಷೇಧ ಕಾಯ್ದೆ, ಹೀಗೆ ಹಲವಾರು ಕಾಯ್ದೆ, ವ್ಯವಸ್ಥೆಗಳು ಜಾರಿಯಲ್ಲಿದ್ದರೂ ಮಹಿಳೆಯರು ಶೋಷಣೆಯಿಂದ ಮುಕ್ತರಾಗಿಲ್ಲ. ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣಗಳಲ್ಲಿ ಆರೋಪಿಗಳು ಬಂಧಿತರಾದರೂ ಅವರಿಗೆ ಸರಿಯಾದ ಶಿಕ್ಷೆ ವಿಧಿಸುವಲ್ಲಿ ವಿಫಲವಾಗುತ್ತಿರುವುದು ಬಹಳ ಸ್ಪಷ್ಟವಾಗಿದೆ. ಅಂಕಿ ಅಂಶಗಳ ಪ್ರಕಾರ 1,300ಕ್ಕೂ ಹೆಚ್ಚಿನ ಶಂಕಿತರಲ್ಲಿ ಕೇವಲ ಆರು ಮಂದಿಗೆ ಮಾತ್ರ ಶಿಕ್ಷೆಯಾಗುತ್ತದೆ!
ದೌರ್ಜನ್ಯಗಳ ಸಂದರ್ಭದಲ್ಲಿ ಪೊಲೀಸರಿಗೆ ದೂರು ಕೊಡಲು ಮುಂದೆ ಬರುವ ಮಹಿಳೆಯರನ್ನೇ ಉನ್ನತ ಹುದ್ದೆಯಲ್ಲಿರುವ ರಾಜಕಾರಣಿಗಳು, ಪೊಲೀಸರು ಪ್ರಶ್ನಿಸುವ, ಸಂತ್ರಸ್ತೆ ಹೇಳಿದ್ದನ್ನು ನಂಬದೇ ಅವರ ನಡತೆಯನ್ನೇ ಪ್ರಶ್ನಿಸುವ ಧೋರಣೆ ಮಹಿಳೆಯರನ್ನು ಪೊಲೀಸ್ ಠಾಣೆಗಳಿಂದ ದೂರವಿಡುತ್ತದೆ. ಮಹಿಳೆಯರಿಗೆ ಸಂಬಂಧಿಸಿದ ವಿಚಾರಗಳನ್ನು ಹೇಗೆ ನಿಭಾಯಿಸಬೇಕೆಂಬ ತರಬೇತಿಯನ್ನು ಪೊಲೀಸರಿಗೆ ನೀಡಬೇಕಾದ ಜರೂರು ಇದೆ.
ಹೆಣ್ಣಿನ ವಿರುದ್ಧ ನಡೆಯುತ್ತಿರುವ ವ್ಯವಸ್ಥಿತ ಹೆಣ್ಣು ಮಕ್ಕಳ ಹತ್ಯೆ, ಅನಕ್ಷರತೆ, ಕಿರುಕುಳ, ತಾರತಮ್ಯ, ಅವಮಾನ, ಅಗೌರವ, ಅತ್ಯಾಚಾರ ಮೊದಲಾದ ಅನ್ಯಾಯಗಳು ಹತೋಟಿಗೆ ಬರಬೇಕಾದರೆ ಅವಳಿಗೆ ಬಾಲ್ಯದಿಂದಲೇ ತನ್ನ ಅಧಿಕಾರ, ಶಿಕ್ಷಣ, ಹಕ್ಕುಗಳ ಅರಿವು ಮೂಡಿಸಬೇಕು. ಧೈರ್ಯದಿಂದ ಎಲ್ಲವನ್ನು ಎದುರಿಸುವ ಶಕ್ತಿ ಬರುವಂತೆ ಪ್ರತಿಯೊಬ್ಬ ಹೆಣ್ಣುಮಗುವನ್ನು ಬೆಳೆಸಬೇಕು. ಖ್ಯಾತ ವಾಕ್ಯವೊಂದಿದೆ ‘ನಾನು ಹುಟ್ಟಿದಾಗ ಒಬ್ಬ ಹೆಂಗಸು ಕೈ ಹಿಡಿದು ಕೊಂಡವಳು, ಅವಳೇ ತಾಯಿ. ನನ್ನ ಜೋಪಾನ ಮಾಡಿ ನನ್ನ ಜೊತೆ ಆಟವಾಡುತಿದ್ದವಳು, ಅವಳೇ ಅಕ್ಕ. ನಾನು ಶಾಲೆಗೆ ಹೋಗುವಾಗ ಪಾಠ ಹೇಳಿ ಕೊಡುತ್ತಿದ್ದವಳು, ಅವಳೇ ಶಿಕ್ಷಕಿ. ಸದಾ ಸಹಾಯ ಮಾಡುತ್ತಾ ಗಂಡನ ಬೇಕು ಬೇಡಗಳನ್ನು ನೋಡಿಕೊಳ್ಳುತ್ತಾ ಪ್ರೀತಿ ಮಾಡುತ್ತಾ ಬಂದವಳು, ಅವಳೇ ಹೆಂಡತಿ. ಅಪ್ಪನಿಗೆ ಕಷ್ಟ ಬಂದಾಗ ಕಣ್ಣೀರು ಹಾಕಿದವಳು, ಅವಳೇ ಮಗಳು. ನಾವು ಸತ್ತಾಗ ಒಬ್ಬಳು ಜಾಗ ಕೊಟ್ಟಳು ಅವಳೇ ಭೂ ತಾಯಿ. ಹೀಗೆ ಜೀವನದ ಪ್ರತಿಯೊಂದು ಹಂತದಲ್ಲಿ ತನ್ನ ಪರಿಪೂರ್ಣ ಕರ್ತವ್ಯ ಮಾಡುವವಳು ಹೆಣ್ಣು. ಇಂತಹ ಹೆಣ್ಣಿಗೆ ಜಗತ್ತಿನಲ್ಲಿ ಅಪೂರ್ವ ಸ್ಥಾನ ಸಿಗಬೇಕಿದೆ.

ಆಯೇಷಾ ಝಬಿ
ಮೈಸೂರಿನವರಾದ ಇವರು ಮಹಿಳಾ ಹಕ್ಕುಗಳ ಹೋರಾಟಗಾರರು, ಹವ್ಯಾಸಿ ಬರಹಗಾರರು.