ನಾಗ್ಪುರ: ಸಾರ್ವಜನಿಕ ಆಡಳಿತವು ಶಿಸ್ತುಬದ್ಧವಾಗಿ ನಡೆಯಲು ಸರ್ಕಾರದ ವಿರುದ್ಧ ನ್ಯಾಯಾಲಯಗಳಲ್ಲಿ ಪ್ರಕರಣಗಳನ್ನು ದಾಖಲಿಸುವುದು ಅವಶ್ಯಕ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದರು.
ನಾಗ್ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಸರ್ಕಾರದ ವಿರುದ್ಧ ನ್ಯಾಯಾಲಯಗಳಲ್ಲಿ ಅರ್ಜಿಗಳನ್ನು ಸಲ್ಲಿಸುವ ಕೆಲವರು ಇರಬೇಕು. ಆಗ ಮಾತ್ರ ರಾಜಕಾರಣಿಗಳು ಶಿಸ್ತಿನ ರೀತಿಯಲ್ಲಿ ವರ್ತಿಸುತ್ತಾರೆ. ನ್ಯಾಯಾಲಯದ ಆದೇಶಗಳು ಸಚಿವರ ನಿರ್ಧಾರಗಳಿಗಿಂತ ಬಲವಾಗಿರುತ್ತವೆ ಎಂದರು.
ಜನಪ್ರತಿನಿಧಿಗಳು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗದಿದ್ದಾಗ ನ್ಯಾಯಾಲಯಗಳು ಆದೇಶಿಸಿದರೆ, ಸರ್ಕಾರಗಳು ಅವುಗಳನ್ನು ತಕ್ಷಣವೇ ಪಾಲಿಸಬೇಕಾಗುತ್ತದೆ” ಎಂದು ಗಡ್ಕರಿ ಹೇಳಿದರು.
ನ್ಯಾಯಾಲಯಗಳಲ್ಲಿ ಪ್ರಕರಣಗಳನ್ನು ಸಲ್ಲಿಸುವುದು ಕೇವಲ ಹಕ್ಕಲ್ಲ. ಸರ್ಕಾರಗಳು ಜವಾಬ್ದಾರಿಯುತವಾಗಿ ಮತ್ತು ಪಾರದರ್ಶಕವಾಗಿ ಕಾರ್ಯನಿರ್ವಹಿಸುವುದನ್ನು ಖಚಿತಪಡಿಸಿಕೊಳ್ಳಲು ಇದು ಸಮಾಜಕ್ಕೆ ಪ್ರಬಲ ಸಾಧನ. ಸಾರ್ವಜನಿಕ ಹಿತಾಸಕ್ತಿಗಳನ್ನು ರಕ್ಷಿಸಲು ನ್ಯಾಯಾಂಗವನ್ನು ಪರಿಣಾಮಕಾರಿಯಾಗಿ ಬಳಸಬೇಕು ಎಂದು ಗಡ್ಕರಿ ಸಲಹೆ ನೀಡಿದರು.