ಬೆಂಗಳೂರಿನ ಇಂದಿರಾ ನಗರದಲ್ಲಿನ ಸ್ಪಾ ಮಾಲಿಕರೊಬ್ಬರನ್ನು ಸುಲಿಗೆ ಮಾಡಲು ಪ್ರಯತ್ನಿಸಿದ ಆರೋಪದ ಮೇಲೆ ‘ರಾಜ್ ನ್ಯೂಸ್’ ಸುದ್ದಿವಾಹಿನಿ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಸೇರಿ ಇಬ್ಬರನ್ನು ಜೀವನ ಭೀಮಾ ನಗರ ಪೊಲೀಸರು ಬಂಧಿಸಿದ್ದಾರೆ.
ಈ ಕುರಿತು ಏಷ್ಯಾನೆಟ್ ಸುವರ್ಣ ವರದಿ ಪ್ರಕಟಿಸಿದ್ದು, ಖಾಸಗಿ ಸುದ್ದಿವಾಹಿನಿಯೊಂದರ ಸಿಇಒ ರಾಜಾನುಕುಂಟೆ ವೆಂಕಟೇಶ್ ಹಾಗೂ ನಿರೂಪಕಿ ದಿವ್ಯಾ ವಸಂತಾ ಸೋದರ ಸಂದೇಶ್ ಬಂಧಿತರಾಗಿದ್ದು, ಆರೋಪಿಗಳಿಂದ 3 ಮೊಬೈಲ್ ಜಪ್ತಿ ಮಾಡಲಾಗಿದೆ ಎಂದು ತಿಳಿಸಿದೆ.
ಈ ಘಟನೆ ಬೆಳಕಿಗೆ ಬಂದ ನಂತರ ಕಣ್ಮರೆಯಾಗಿರುವ ದಿವ್ಯಾ, ಸಚಿನ್ ಹಾಗೂ ಆಕಾಶ್ ಪತ್ತೆಗೆ ಪೊಲೀಸರು ಜಾಲವನ್ನು ಬೀಸಿದ್ದಾರೆ.
ಆರೋಪಿಗಳು ಇತ್ತೀಚೆಗೆ ಇಂದಿರಾನಗರದ 100 ಅಡಿ ರಸ್ತೆ 15ನೇ ಮುಖ್ಯರಸ್ತೆಯ ‘ಟ್ರಿ ಸ್ಟ್ರಾ ಅಂಡ್ ಬ್ಯೂಟಿ’ ಪಾರ್ಲರಿನ ವ್ಯವಸ್ಥಾಪಕ ಶಿವಶಂಕರ್ ಎನ್ನುವವರಿಗೆ ನೀವು ಪಾರ್ಲರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದೀರಿ ಎಂದು ಆರೋಪಿಸಿ ಹಣ ಸುಲಿಗೆ ಮಾಡಲು ಪ್ರಯತ್ನಿಸಿತ್ತು.
ಈ ಕುರಿತು ಮಾಹಿತಿ ಪಡೆದ ಪೊಲೀಸರು ತನಿಖೆ ನಡೆಸಿ ತಾಂತ್ರಿಕ ಮಾಹಿತಿ ಆಧರಿಸಿ ಸಿಇಒ ಸೇರಿ ಇಬ್ಬರನ್ನು ಬಂಧಿಸಿದ್ದಾರೆ.
ಈ ಹಿಂದೆ ಖಾಸಗಿ ವಾಹಿನಿಯೊಂದರಲ್ಲಿ ನಿರೂಪಕಿಯಾಗಿದ್ದ ದಿವ್ಯಾ ವಸಂತ ಅಮೂಲ್ಯ ಗರ್ಭಿಣಿಯಾದ ಸುದ್ದಿಯನ್ನು ಇದೊಂದು ರಾಜ್ಯವೇ ಖುಷಿಪಡುವ ಸುದ್ದಿ ಎಂದು ಘೋಷಿಸುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ಗೆ ಒಳಗಾಗಿದ್ದಳು. ಈಗ ಆರು ತಿಂಗಳ ಹಿಂದೆ ವಾಹಿನಿ ಕೆಲಸ ಬಿಟ್ಟ ಅವಳು ಸಾಮಾಜಿಕ ಜಾಲತಾಣ ಮತ್ತು ಟಿವಿ ವಾಹಿನಿಗಳ ಹಾಸ್ಯಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದಳು.
ಆದರೆ ಇದೆಲ್ಲದರಿಂದ ಸಿಗುವ ಸಂಪಾದನೆ ಆಕೆಗೆ ಸಾಲುತ್ತಿರಲಿಲ್ಲ. ಐಷಾರಾಮಿ ಜೀವನದ ಹಿಂದೆ ಬಿದ್ದಿದ್ದ ದಿವ್ಯಾ, ಸುಲಭವಾಗಿ ಹಣ ಸಂಪಾದಿಸಲು ಅಡ್ಡ ಮಾರ್ಗ ತುಳಿದು ಸಂಕಷ್ಟಕ್ಕೆ ತುತ್ತಾಗಿದ್ದಾಳೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ವೆಂಕಟೇಶ್ ತನ್ನದೇ ತಂಡದ ಹುಡುಗಿಯೊಬ್ಬಳನ್ನು ಮಸಾಜ್ ಪಾರ್ಲರಿಗೆ ಸೇರಿಸಿದ್ದ. ಹಾಗೆ ಆಕೆಯನ್ನು ಸೇರಿಸಲು ಹೋಗಿದ್ದ ಆತ ಅಲ್ಲಿ ಒಂದು ಕೆಮೆರಾವನ್ನೂ ಇಟ್ಟು ಬಂದಿದ್ದ. ನಂತರ ತಾನೇ ಆ ಹುಡುಗಿಯ ಬಳಿ ಮಸಾಜ್ ಮಾಡಿಸಿಕೊಂಡು ಅದರ ರೆಕಾರ್ಡಿಂಗ್ ಮಾಡಿದ್ದ. ಆ ವಿಡಿಯೋವನ್ನು ಪಾರ್ಲರ್ ಮಾಲಿಕರಿಗೆ ತೋರಿಸಿ ಅವರನ್ನು ಬ್ಲಾಕ್ ಮೇಲ್ ಮಾಡುವ ಮೂಲಕ 15 ಲಕ್ಷ ರೂಪಾಯಿಗಳಿಗೆ ಬೇಡಿಕೆ ಇಡಲಾಗಿತ್ತು. ನಂತರ 8 ಲಕ್ಷವನ್ನಾದರೂ ಕೊಡುವಂತೆ ಕೇಳಿದ್ದಾರೆ. ಆದರೆ ಇದಕ್ಕೊಪ್ಪದ ಮಾಲಿಕ ಪೊಲೀಸ್ ಕಂಪ್ಲೇಂಟ್ ಕೊಟ್ಟಿದ್ದಾರೆ. ಆಗ ಪೊಲೀಸರು ಈ ತಂಡವನ್ನು ಬಂಧಿಸಿದ್ದಾರೆ. ಉಳಿದವರಿಗಾಗಿ ಈಗ ಹುಡುಕಾಟ ನಡೆಯುತ್ತಿದೆ.