Home ರಾಜ್ಯ ದಕ್ಷಿಣ ಕನ್ನಡ ಪ್ರವೀಣ್‌ ನೆಟ್ಟಾರು  ಹತ್ಯೆ ಪ್ರಕರಣ: ಬಂಧಿತ ಆರೋಪಿಗಳನ್ನು  ಕರೆತಂದು ಸ್ಥಳ ಮಹಜರು ನಡೆಸಿದ ಪೊಲೀಸರು

ಪ್ರವೀಣ್‌ ನೆಟ್ಟಾರು  ಹತ್ಯೆ ಪ್ರಕರಣ: ಬಂಧಿತ ಆರೋಪಿಗಳನ್ನು  ಕರೆತಂದು ಸ್ಥಳ ಮಹಜರು ನಡೆಸಿದ ಪೊಲೀಸರು

0
ibtimes

ಮಂಗಳೂರು: ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ನಡೆದ ಬಿಜೆಪಿಯ ಯುವಮೋರ್ಚಾದ ಅಧ್ಯಕ್ಷ  ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಮೂವರು ಆರೋಪಿಗಳನ್ನು  ಬಂಧಿಸುವಲ್ಲಿ ಇಂದು ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳು ಹತ್ಯೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಸುಳ್ಯ ನಿವಾಸಿ  ಶಿಯಾಬುದ್ದಿನ್‌ ಆಲಿ(33) ರಿಯಾಜ್ ಅಂಕತಡ್ಕ(27) ಮತ್ತು  ಎಲಿಮಲೆಯ ಬಶೀರ್‌ (29)ಎಂಬುದಾಗಿ ಎಡಿಜಿಪಿ ಅಲೋಕ್‌ ಕುಮಾರ್‌ ಮಧ್ಯಾಹ್ನ ಪತ್ರಿಕಾಗೋಷ್ಟಿಯಲ್ಲಿ ಖಚಿತಪಡಿಸಿದ್ದಾರೆ. ಆರೋಪಿಗಳನ್ನು ಮಂಗಳೂರು ಸಮೀಪದ ತಲಪಾಡಿಯಲ್ಲಿ ಬಂಧಿಸಲಾಗಿತ್ತು. ಇದರೊಂದಿಗೆ ಬಂಧಿತರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ.

ಹತ್ಯೆ ಮಾಡಿದ ಬಳಿಕ ಆರೋಪಿಗಳು ತಲೆಮರೆಸಿಕೊಂಡಿದ್ದು ಆಗಾಗ ತಮ್ಮ ನೆಲೆಯನ್ನು ಬದಲಾಯಿಸುತ್ತಿದ್ದರು. ಅವರ ಶೋಧ ಕಾರ್ಯಕ್ಕೆ ವಿಶೇಷ ತಂಡವನ್ನು ರಚಿಸಲಾಗಿತ್ತು.  ಖಚಿತ ಮಾಹಿತಿಯ ಮೇರೆಗೆ ಇಂದು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದ್ದರು.

ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್‌ ವಶಕ್ಕೆ ಪಡೆದು ಮಹಜರು, ಕೊಲೆಗೆ ಬಳಸಿದ ಆಯುಧಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಬಳಿಕ ಎನ್‌ಐಎಗೆ ಹಸ್ತಾಂತರ ಮಾಡಲಾಗುವುದು ಎಂದು ಎಡಿಜಿಪಿ ಅಲೋಕ್‌ ಕುಮಾರ್‌ ಮಾಹಿತಿ ನೀಡಿದ್ದರು.

ಅದರಂತೆ ಇದೀಗ ಆರೋಪಿಗಳನ್ನು ಬೆಳ್ಳಾರೆಗೆ ಕರೆತಂದು ಮಹಜರು ನಡೆಸಲಾಗಿದೆ. ಬೆಳ್ಳಾರೆಯಲ್ಲಿ ಹತ್ಯೆ ನಡೆದ ಸ್ಥಳ, ಮತ್ತಿತರ ಕಡೆಗಳಿಗೆ ಆರೋಪಿಗಳನ್ನು ಕರೆತಂದು ತನಿಖೆ ನಡೆಸಲಾಗಿದೆ. ಕೊಲೆ ಪ್ರಕರಣದ ಪ್ರಮುಖ ಆರೋಪಿಗಳನ್ನು ಕರೆತರುತ್ತಿರುವ ಹಿನ್ನೆಲೆಯಲ್ಲಿ ಬಿಗು ಪೊಲೀಸ್‌ ಭದ್ರತೆ ಏರ್ಪಡಿಸಲಾಗಿತ್ತು.   

ಜುಲೈ 26 ರಂದು ರಾತ್ರಿ 8.30ಕ್ಕೆ ಬೈಕ್‌ನಲ್ಲಿ ಬಂದ ಅಪರಿಚಿತರು ಬೆಳ್ಳಾರೆಯ ಮಾಸ್ತಿಕಟ್ಟೆ ಎಂಬಲ್ಲಿ ದಾಳಿ ನಡೆಸಿ ತಲವಾರಿನಿಂದ ಪ್ರವೀಣ್‌ ಅವರನ್ನು ಹತ್ಯೆಗೈದು ಪರಾರಿಯಾಗಿದ್ದರು.

You cannot copy content of this page

Exit mobile version