ಬೆಂಗಳೂರು : ಪಿಟಿಸಿಎಲ್ ಕಾಯ್ದೆ ತಿದ್ದುಪಡಿಗೋಸ್ಕರ ಸೆಪ್ಟಂಬರ್ 13 ರಿಂದ ಸಂವಿಧಾನ ಸಂರಕ್ಷಣ ಮಹಾ ಒಕ್ಕೂಟ ನೇತೃತ್ವದಲ್ಲಿ ಫ್ರೀಡಂ ಪಾರ್ಕ್ನ ಬಳಿ ನಿರಂತರ ಅಹೋರಾತ್ರಿ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.

ಕಳೆದ ಕೆಲವು ತಿಂಗಳುಗಳ ಹಿಂದೆ ದುಂಡು ಮೇಜಿನ ಸಭೆಯಲ್ಲಿ ವಕೀಲ ಹರಿರಾಮ್, ಶ್ರೀ ಜ್ಞಾನಪ್ರಕಾಶ ಸ್ವಾಮೀಜಿಗಳು ಸೇರಿದಂತೆ ಹಲವರು ಪಿಟಿಸಿಎಲ್ ಕಾಯ್ದೆ ತಿದ್ದುಪಡಿ ಮಾಡುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದರು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರೆಗೆ ಭೂಮಿ ಪರಭಾರೆ ನಿಷೇಧ (ಪಿಟಿಸಿಎಲ್) ಕಾಯ್ಡೆ ಸಮಗ್ರ ತಿದ್ದುಪಡಿ ಬಗ್ಗೆ ಸರ್ಕಾರ ಈ ವರೆಗೂ ಯಾವುದೇ ರೀತಿಯ ಸ್ಪಷ್ಟ ನಿರ್ಧಾರ ತೆಗೆದುಕೊಂಡಿಲ್ಲ.ವಿಧಾನ ಮಂಡಲ ಅಧಿವೇಶನ ಪ್ರಾರಂಭವಾಗುವ ಮುನ್ನ ಪಿಟಿಸಿಲ್ ಕಾಯ್ದೆ ತಿದ್ದುಪಡಿಯ ಬಗ್ಗೆ ದೃಢ ನಿರ್ಧಾರ ತೆಗೆದುಕೊಳ್ಳದಿದ್ದರೆ ನಿರಂತರ ಹೋರಾಟ ಮಾಡುವಂತೆ ಕೆಲವು ಸಂಘಟನೆಗಳು ಸರ್ಕಾರಕ್ಕೆ ಹೇಳಿಕೆ ನೀಡಿತ್ತು.
ಇದೀಗ ವಿಧಾನ ಮಂಡಲ ಅಧಿವೇಶನ ಸೆಪ್ಟಂಬರ್ 12ಕ್ಕೆ ಪ್ರಾರಂಬವಾಗಿದ್ದರೂ ಪಿಟಿಸಿಎಲ್ ಕಾಯ್ದೆ ತಿದ್ದುಪಡಿ ಬಗ್ಗೆ ಸದ್ದು ಸುದ್ದಿ ಇಲ್ಲದಂತಾಗಿದೆ.ಈ ಕಾರಣ ಸಿಡಿದೆದ್ದ ಸಂಘಟನೆಗಳು, ಸಂವಿಧಾನ ಸಂರಕ್ಷಣ ಮಹಾ ಒಕ್ಕೂಟದ ನೇತೃತ್ವದಲ್ಲಿ ಸೆಪ್ಟಂಬರ್ 13 ರಿಂದ PTCL ಕಾಯ್ದೆ ತಿದ್ದುಪಡಿ ಆಗುವ ತನಕ ನಿರಂತರ ಅಹೋರಾತ್ರಿ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದಾರೆ.
ಸೆಪ್ಟಂಬರ್ 13 ಬೆಳಗ್ಗೆ 11 ಗಂಟೆಯಿಂದ ಫ್ರೀಡಂ ಪಾರ್ಕ್ನ ಬಳಿ ಏಳಿ ಎದ್ದೇಳಿ, ಸ್ವಾಭಿಮಾನದಿಂದ ಎದ್ದೇಳಿ, ನಮ್ಮ ಭೂಮಿ…ನಮ್ಮ ಹಕ್ಕು ಎಂಬ ಘೋಷಣೆಗಳು ಕೂಗುತ್ತಾ ಪ್ರತಿಭಟನೆ ಆರಂಭವಾಗಿದೆ.
ಈ ಪ್ರತಿಭಟನೆಯಲ್ಲಿ ಮೈಸೂರಿನ ಜ್ಞಾನ ಪ್ರಕಾಶ ಸ್ವಾಮೀಜಿಗಳು ಪಾಲ್ಗೊಳ್ಳಲಿದ್ದು ಹೋರಾಟದಲ್ಲಿ ಸಮಾನ ಮನಸ್ಕರು ಎಲ್ಲರೂ ಭಾಗವಹಿಸುವಂತೆ ಕರೆ ಕೊಟ್ಟಿದ್ದಾರೆ.