ಕಾಂತುಪೂಂಜಾ, ದೇವು ಪೂಂಜಾರಿಂದ ಹರೀಶ್ ಪೂಂಜಾ ಕಲಿಯಬೇಕಿರೋದೇನು?
ಮಹಿಳೆಯನ್ನು ವೇಶ್ಯಾವಾಟಿಕೆಗೆ ದೂಡುವ ವ್ಯಕ್ತಿಯನ್ನು ಕರಾವಳಿಯ ನೆಲದಲ್ಲಿ ಮೆರೆದಾಡಿಸಬಹುದೇ?
ಬೆಳ್ತಂಗಡಿಯ ಜನ ಸಿರಿ- ಜುಮಾದಿ ಹಾಕಿಕೊಟ್ಟ ನೈತಿಕತೆಯ ಗೆರೆಯನ್ನು ಮೀರಲಾರರು ಎಂಬ ನಂಬಿಕೆಯನ್ನು ನಿಜಗೊಳಿಸಬೇಕಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಅಕ್ಟೋಬರ್ 31 ರಂದು ನಡೆಯುವ ದೀಪಾವಳಿ ಹಬ್ಬದ ಗೋಪೂಜಾ ಕಾರ್ಯಕ್ರಮಕ್ಕೆ ಪುನೀತ್ ಕೆರೆಹಳ್ಳಿಯನ್ನು ಕರೆಸಲಾಗುತ್ತಿದೆ. ಶಾಸಕ ಹರೀಶ್ ಪೂಂಜಾ ಅವರೇ ಈ ಕಾರ್ಯಕ್ರಮದ ನೇತೃತ್ವ ವಹಿಸಿದ್ದು, ಈ ಹಿಂದೆ ವೇಶ್ಯಾವಾಟಿಕೆಯ ಆರೋಪಿಯಾಗಿದ್ದ ಪುನೀತ್ ಕೆರೆಹಳ್ಳಿಗೆ ಸ್ವಾಗತ ಕೋರುತ್ತಿದ್ದಾರೆ. ಇದು ಕರಾವಳಿಯ ಹಿಂದೂ ಧರ್ಮದ ನಡಾವಳಿಗೆ ವಿರುದ್ಧವಾಗಿರುವ ನಡೆ. ಹಿಂದೂ ಧರ್ಮದ ರಕ್ಷಕರು ಎಂದು ಸ್ವಯಂ ಘೋಷಿಸಿಕೊಂಡಿರುವ ವ್ಯಕ್ತಿ ಮತ್ತು ಸಂಘಟನೆಗಳು ಕರಾವಳಿಯ ‘ದೈವ ನಿಯಮ’ ಗಳಿಗೆ ವಿರುದ್ಧವಾಗಿ ನಡೆದುಕೊಳ್ಳಬಹುದೇ ?
ಪುನೀತ್ ಕೆರೆಹಳ್ಳಿಯನ್ನು ಅತಿಥಿಯಾಗಿ ಕರೆದಿರುವ ಹರೀಶ್ ಪೂಂಜಾರವರು ಅವರದ್ದೇ ಕ್ಷೇತ್ರ ವ್ಯಾಪ್ತಿಯ ಬೆಳ್ತಂಗಡಿಯ ವೇಣೂರಿನ ಅಜಿಲರು ಮತ್ತು ದೇವು ಪೂಂಜಾರ ಜನಪದ/ಇತಿಹಾಸವನ್ನು ನೆನಪಿಸಿಕೊಳ್ಳಬೇಕು. 1721 ರಿಂದ ನಾಲ್ಕನೇ ವೀರತಿಮ್ಮಣ್ಣಾಜಿಲರು ಬೆಳ್ತಂಗಡಿಯ ವೇಣೂರಿನಲ್ಲಿ ಆಳ್ವಿಕೆ ಮಾಡಿಕೊಂಡಿದ್ದರು. ತಿಮ್ಮಣ್ಣಾಜಿಲರಿಗೂ ಬಂಗರಾಜರಿಗೂ ಯುದ್ದವಾಗಿ ತಿಮ್ಮಣ್ಣಾಜಿಲರ ಸೇನಾಧಿಕಾರಿಯಾಗಿದ್ದ ದೇವುಪೂಂಜನು ಬಂಗರಾಜನ ಸೇನಾಧಿಪತಿಯಾದ ದುಗ್ಗಣ್ಣ ಕೊಂಡೆಯ ತಲೆ ಕಡಿದನು. ಆಗ ದೇವು ಪೂಂಜನಿಗೆ ಕೇವಲ 16 ವರ್ಷ. ಹಾಗಾಗಿ ಇಷ್ಟು ಕಿರಿಯ ವಯಸ್ಸಿನಲ್ಲಿ ಇಂತಹ ಪರಾಕ್ರಮಿಯಾದ ದೇವು ಪೂಂಜನನ್ನು ಸೇನಾಧಿಕಾರಿಯಾಗಿ ಮುಂದುವರೆಸಿದರೆ ತನಗೇ ಒಂದಲ್ಲಾ ಒಂದು ದಿನ ಸಂಚಕಾರ ಬರಬಹುದು ಎಂದುಕೊಂಡು ದೇವುಪೂಂಜನನ್ನು ತಿಮ್ಮಣ್ಣಾಜಿಲರು ದೂರವಿಟ್ಟರು. ಇದಾದ ಬಳಿಕ ದೇವುಪೂಂಜ ತಾಯಿಯ ಜೊತೆಗೂಡಿ ಬಂಟವಾಳದಲ್ಲಿ ವಾಸಿಸುತ್ತಿದ್ದನು. ಇದನ್ನು ತಿಳಿದ ಬಂಗರಾಜನು ದೇವುಪೂಂಜನನ್ನು ತನ್ನ ಸೇನಾಧಿಕಾರಿಯನ್ನಾಗಿ ನೇಮಿಸಿಕೊಂಡನು ಎಂದು ಇತಿಹಾಸ ಹೇಳುತ್ತದೆ. ಕಾಂತೇರಿ ಜುಮಾದಿಯ ಪಾಡ್ದನದಲ್ಲೂ ಈ ಅಂಶ ಬರುತ್ತದೆ. ಪಾಡ್ದನದಲ್ಲಿ ದೇವು ಪೂಂಜನು ಬಂಗರಾಜನ ವಿರುದ್ಧ ಯುದ್ದಕ್ಕೆ ಹೋಗುವಾಗ ಜುಮಾದಿಗೆ ಕೈಮುಗಿದು ಹೋಗಿರುತ್ತಾರೆ. ಆದರೆ ಯುದ್ದ ಗೆದ್ದ ಬಳಿಕ ಪೂಂಜ ಸೂಳೆ ಸಿದ್ದುವಿನ ಸಹವಾಸ ಮಾಡುತ್ತಾನೆ. ಸೂಳೆ ಸಿದ್ದುವಿನ ಸಹವಾಸ ಮಾಡಿದ ಪೂಂಜರಿಗೆ ಕಾಂತೇರಿ ಜುಮಾದಿಯು ಮರಣದ ಗಂಧ ನೀಡಿದರು ಎಂದು ಪಾಡ್ದನವು ಇತಿಹಾಸಕ್ಕೆ ಪೂರಕವಾಗಿ ಹೇಳುತ್ತದೆ.
ಹರೀಶ್ ಪೂಂಜರು ದೇವುಪೂಂಜನನ್ನು ಮರೆತರೂ ಕಾಂತು ಪೂಂಜನನ್ನು ಮರೆಯಬಾರದು. ಕಾಂತು ಪೂಂಜ ಕರಾವಳಿಯ ಆರಾಧ್ಯ ದೈವ ಸಿರಿಯ ಕೈ ಹಿಡಿದ ಗಂಡ. ಕರಾವಳಿಗೆ ಮಾತೃ ಮೂಲ ಸಂಸ್ಕೃತಿ ಬರಲು ಮುಖ್ಯ ಕಾರಣವೇ ಸಿರಿ ದೈವ. ತಂದೆ ಇದ್ದಾಗಲೇ ರಾಜ್ಯದ ಆಡಳಿತ ನೋಡಿಕೊಂಡಿದ್ದ ಸಿರಿ ಗರ್ಭಿಣಿಯಾಗುವಾಗ ಸೀರೆ ತರಲು ಹೋದ ಪೂಂಜ ಸೂಳೆಯ ಸಹವಾಸ ಮಾಡುತ್ತಾನೆ. ಸೂಳೆಯ ಸಹವಾಸ ಮಾಡಿದ್ದಾನೆ ಎಂದು ತಿಳಿದ ಸಿರಿಯು ತನ್ನ ಗಂಡ ಪೂಂಜ ನೀಡಿದ ಸೀರೆಯನ್ನು ಅಂಗಳಕ್ಕೆ ಬಿಸಾಡುತ್ತಾಳೆ. ಸಿರಿಯ ಮಹಾಕಾವ್ಯದಲ್ಲಿ ಇಡೀ ಕರಾವಳಿಯನ್ನು ರೂಪಿಸಿದ ಜನಪದ ಕಾನೂನಿನ ತಿರುಳಿದೆ. ಅಂತಿಮವಾಗಿ ಸೂಳೆಯ ಸಹವಾಸ ಮಾಡಿದ ಪೂಂಜನಿಗೆ ಸಿರಿ ವಿಚ್ಚೇಧನ ಕೊಡುತ್ತಾಳೆ. ಇದು ಬಹುಶಃ ಜಗತ್ತಿನ ಮೊದಲ ವಿಚ್ಚೇಧನ ಇರಬಹುದು. ಯಾವುದೇ ಗಂಡಸು ಯಾವುದೇ ಮಹಿಳೆಯನ್ನು ವೇಶ್ಯಾವಾಟಿಕೆ ಸೇರಿದಂತೆ ಯಾವುದೇ ರೀತಿಯಲ್ಲೂ ಶೋಷಣೆ ಮಾಡುವಂತಿಲ್ಲ, ಮಹಿಳೆ ಏಕಾಂಗಿಯಾಗಿ ರಾಜ್ಯ ಆಳಬಹುದು, ಹೆಣ್ಣು ಮದುವೆಯಾದರೂ ಇಚ್ಚಿಸಿದರೆ ತವರದಲ್ಲೇ ಉಳಿಯಬಹುದು, ಗಂಡನ ವರ್ತನೆಗಳು ಸಹ್ಯ ಅನ್ನಿಸದಿದ್ದರೆ ಸಹಿಸದೇ ವಿಚ್ಚೇದನೆ ಕೊಡಬಹುದು, ವಿಚ್ಚೇದನದ ಬಳಿಕ ಮತ್ತೊಂದು ಮದುವೆಯಾಗಬಹುದು ಎಂಬ ಕಾನೂನುಗಳನ್ನು ಜಾರಿಗೆ ತಂದ ಸ್ತ್ರೀವಾದಿ ದೈವ ನಮ್ಮ ಸಿರಿ.
ಅರಸೊತ್ತಿಗೆಯ ಕಾಲದಲ್ಲಿ ದಾಸಿಯರು, ವೇಶ್ಯಾವಾಟಿಕೆ ಎಂಬುದು ಅಪರಾಧ ಅಲ್ಲದ ಕಾಲದಲ್ಲೂ ಕರಾವಳಿಯ (ಕ್ರಾಂತಿಕಾರಿಗಳು) ದೈವಗಳು ಮಾತ್ರ ವೇಶ್ಯಾವಾಟಿಕೆಯ ವಿರುದ್ಧ ಇದ್ದವು ಎಂಬುದನ್ನು ಕರಾವಳಿಯ ಜನ ಅರ್ಥ ಮಾಡಿಕೊಳ್ಳಬೇಕು. ಕರಾವಳಿಯ ದೈವಗಳು ಎಂದರೆ ಸ್ವರ್ಗದಿಂದ ಇಳಿದು ಬಂದಿರುವ ದೇವರುಗಳಲ್ಲ. ನಮ್ಮ ನೆಲದಲ್ಲೇ ಬಾಳಿ ಬದುಕಿದ ಶೋಷಿತ ವರ್ಗದ ವೀರ ಪುರುಷ/ಮಹಿಳೆಯರು. ಹಾಗಾಗಿ ಅವರ ಮೇಲೆ ನಡೆದಿರುವ ಗಂಡಾಳ್ವಿಕೆಯ/ಅರಸೊತ್ತಿಗೆಯ ದೌರ್ಜನ್ಯ ಯಾವ ಹೆಣ್ಣಿನ ಮೇಲೂ ನಡೆಯಕೂಡದು ಎಂಬ ಕಾರಣಕ್ಕಾಗಿ ವೇಶ್ಯಾವಾಟಿಕೆಯಲ್ಲಿ ತೊಡಗಿರುವ ಪುರುಷನನ್ನು ದೈವ ಶಿಕ್ಷೆಗೆ ಒಳಪಡಿಸುತ್ತದೆ. ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಮಹಿಳೆಯನ್ನು ಸಂತ್ರಸ್ತಳನ್ನಾಗಿಯೇ ದೈವ ನೋಡುತ್ತದೆ. ನಾವು ಈ ಕಾನೂನನ್ನು ಅಳವಡಿಸಿಕೊಳ್ಳುವ ಶತಶತಮಾನಗಳ ಮೊದಲೇ ಇಂತದ್ದೊಂದು ಕಾನೂನನ್ನು ನಮ್ಮ ಕ್ರಾಂತಿಕಾರಿಗಳು ತುಳುನಾಡಿನಲ್ಲಿ ಪಾಡ್ದನಗಳ ಮೂಲಕ ಜಾರಿಗೆ ತಂದಿದ್ದರು.
ಕಾಂತು ಪೂಂಜಾ, ದೇವು ಪೂಂಜರಿಗೆ ದೈವಗಳು ನೀಡಿದ ಮರಣಗಂಧ ಕತೆ ಕೇಳಿದ ಬಳಿಕವಾದರೂ ಹರೀಶ್ ಪೂಂಜಾರವರು ಎಚ್ಚೆತ್ತುಕೊಳ್ಳಬೇಕು. ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ನೇತೃತ್ವದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಪುನೀತ್ ಕೆರೆಹಳ್ಳಿ ವಿರುದ್ಧ ಬೆಂಗಳೂರಿನ ಡಿ ಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ದಿನಾಂಕ 21.03.13 ರಂದು ಠಾಣಾ ಅಪರಾಧ ಸಂಖ್ಯೆ. 77,13 ಕಲಂ 3, 4, 5, 6, ಅನೈತಿಕ ವ್ಯವಹಾರ (ನಿಷೇದ) ಅದಿನಿಯಮದ ಅಡಿಯಲ್ಲಿ ‘ವೇಶ್ಯಾವಾಟಿಕೆ’ ಪ್ರಕರಣ ದಾಖಲಾಗಿದೆ. ಡಿ ಜೆ ಹಳ್ಳಿಯ ಫ್ಲ್ಯಾಟೊಂದರಲ್ಲಿ ಮಂಜುಳಾ ಮತ್ತು ಮದನ್ಮೋಹನ್, ಕೆರೆಹಳ್ಳಿ ಗ್ರಾಮದ ಪುನೀತ್ ಕುಮಾರ್, ಸಿ. ರವಿ, ಭರತ್, ಹೆಚ್.ಡಿ. ಚಂದ್ರಶೇಖರ್, ಜಿ.ಎಸ್. ಪುನೀತ್ ಕುಮಾರ್ ರವರು ಬೇರೆ ಬೇರೆ ಕಡೆಯಿಂದ ಕರೆಸಿಕೊಂಡು ಅವರಿಗೆ ಹಣದ ಆಸೆಯನ್ನು ತೋರಿಸಿ ಹುಡುಗಿಯರು ಅವರನ್ನು ವೇಶ್ಯಾವೃತ್ತಿಗೆ ಪ್ರಚೋದಿಸಿ ಈ ಹಣವನ್ನು ಸಂಪಾದನೆ ಮಾಡಿದರು. ಸದರಿ ಪ್ಲಾಟ್ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ ಆರೋಪಿಗಳೆಲ್ಲರೂ ಅರೆಬೆತ್ತಲಾಗಿ ಕಾರ್ಯಾಚರಣೆಯಲ್ಲಿ ತೊಡಗಿದ್ದು ಎಲ್ಲಾ ವ್ಯಕ್ತಿಗಳನ್ನು ಹಿಡಿದುಕೊಂಡು ಅವರೆಲ್ಲರನ್ನು ವಿವರವಾಗಿ ವಿಚಾರಣೆ ಮಾಡಿ ಆರೋಪಿಗಳ ಬಳಿ ಇದ್ದ ನಿರೋದ್ ಪ್ಯಾಕೆಟ್, ಹಣ, ಮೊಬೈಲ್, ಮೋಟಾರ್ ಬೈಕ್ ಗಳನ್ನು ವಶಪಡಿಸಿ ಕೊಳ್ಳಲಾಗಿದೆ ಎಂದು ಚಾರ್ಜ್ ಶೀಟ್ ಹೇಳಿದ್ದಾರೆ. ಪುನೀತ್ ಕೆರೆಹಳ್ಳಿ ಇದ್ದ ರೂಂ ಅನ್ನು ಪರಿಶೀಲಿಸಿದಾಗ ಆತನ ರೂಂನಲ್ಲಿ ವಿಧವೆಯೊಬ್ಬಳು ಇದ್ದಳು. ಹಾಸಿಗೆಯ ದಿಂಬಿನ ಕೆಳಗಡೆ ಒಂದು ಹೆರಿಟೇಚ್ ವೈನ್ ಬಾಟಲ್, ಒಂದು ಕಾಮಸೂತ್ರ ನಿರೋಧ್ ಪ್ಯಾಕೆಟ್ ಸಿಕ್ಕಿದ್ದು, ಆರೋಪಿ ಪುನೀತ್ ಕೆರೆಹಳ್ಳಿಯನ್ನು ಬಂಧಿಸಲಾಗಿದೆ ಎಂದು ಚಾರ್ಜ್ ಶೀಟ್ ಹೇಳಿದೆ.
ನ್ಯಾಯಾಲಯದಲ್ಲಿ ಆರೋಪ ಸಾಭೀತಾಗಬಹುದು ಅಥವಾ ಸಾಕ್ಷ್ಯಾಧಾರಗಳ ಕೊರತೆಯಿಂದ ಸಾಭೀತಾಗದೇ ಇರಬಹುದು. ಆದರೆ ಈ ರೀತಿ ಒರ್ವ ಮಹಿಳೆಯನ್ನು ವೇಶ್ಯಾವಾಟಿಕೆಗೆ ದೂಡುವ ವ್ಯಕ್ತಿಯನ್ನು ಕರಾವಳಿಯ ನೆಲದಲ್ಲಿ ಮೆರೆದಾಡಿಸಬಹುದೇ ? ದಕ್ಷಿಣ ಕನ್ನಡದ ನೆಲದಲ್ಲಿ ಬದುಕಿ ಕ್ರಾಂತಿಕಾರಿಗಳಾಗಿ ದೈವಗಳು ನಮಗೊಂದು ನೈತಿಕತೆಯ ಚೌಕಟ್ಟು ಹಾಕಿಕೊಟ್ಟಿದೆ. (ಅದು ಸನಾತನ ಧರ್ಮದ ನೈತಿಕತೆಯಲ್ಲ.) ಸ್ತ್ರೀಪರವಾದ, ಶೋಷಿತರ ಪರವಾದ ನೈತಿಕತೆಯ ಗೆರೆಯನ್ನು ದೈವಗಳು ನಮಗೆ ಹಾಕಿವೆ. ಆ ಗೆರೆಯನ್ನು ಹರೀಶ್ ಪೂಂಜಾರವರು ಮೀರುತ್ತಿದ್ದಾರೆ. ಹಾಗಂತ ಬೆಳ್ತಂಗಡಿಯ ಜನ ಸಿರಿ- ಜುಮಾದಿ ಹಾಕಿಕೊಟ್ಟ ನೈತಿಕತೆಯ ಗೆರೆಯನ್ನು ಮೀರಲಾರರು ಎಂಬ ನಂಬಿಕೆಯನ್ನು ನಿಜಗೊಳಿಸಬೇಕಿದೆ.