ರಾಯಚೂರು: ಇಲ್ಲಿಗೆ ಸಮೀಪದ ಹಟ್ಟಿ ಚಿನ್ನದ ಗಣಿಯಲ್ಲಿ ಶುಕ್ರವಾರ ಗಣಿಗಾರಿಕೆ ಕಂದಕದಲ್ಲಿ ಮಣ್ಣು ಕುಸಿದು 48 ವರ್ಷದ ಕಾರ್ಮಿಕ ಸಾವನ್ನಪ್ಪಿದ್ದು, ನಾಲ್ವರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಈ ಕಾರ್ಮಿಕರು ರಾತ್ರಿ ಪಾಳಿಯ ಕೆಲಸದಲ್ಲಿದ್ದಾಗ ಬೆಳಗಿನ ಜಾವ 3.30ಕ್ಕೆ ಈ ಘಟನೆ ಸಂಭವಿಸಿದೆ.
ಮೃತ ಕಾರ್ಮಿಕ ಮೌನೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅವಶೇಷಗಳಡಿ ಸಿಲುಕಿದ್ದ ಅವರ ದೇಹವನ್ನು ಹೊರತೆಗೆಯಲು ರಕ್ಷಣಾ ತಂಡವು ಬಹಳ ಕಷ್ಟಪಡಬೇಕಾಯಿತು.
ಗಾಯಾಳುಗಳನ್ನು ಚಿನ್ನದ ಗಣಿ ಬಳಿಯಿರುವ ಕಂಪನಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಬೆಂಗಳೂರಿಗೆ ಸಾಗಿಸಲಾಗಿದೆ.
ಮೃತ ಕಾರ್ಮಿಕರ ಕುಟುಂಬಕ್ಕೆ 50 ಲಕ್ಷ ಪರಿಹಾರ ನೀಡುವಂತೆ ಒತ್ತಾಯಿಸಿ ಸಂಬಂಧಿಕರು ಹಾಗೂ ಕಾರ್ಮಿಕ ಮುಖಂಡರು ಸ್ಥಳದಲ್ಲಿ ಪ್ರತಿಭಟನೆ ನಡೆಸಿದರು.
ಪರಿಹಾರ ನೀಡುವವರೆಗೆ ಮೃತ ಕಾರ್ಮಿಕನ ಮರಣೋತ್ತರ ಪರೀಕ್ಷೆಗೆ ಅವಕಾಶ ನೀಡುವುದಿಲ್ಲ ಎಂದು ಪ್ರತಿಭಟನಾಕಾರರು ಹೇಳಿದರು. ಇದರಿಂದ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.
ಹಟ್ಟಿ ಗೋಲ್ಡ್ ಮೈನ್ಸ್ ಕಂಪನಿ ಲಿಮಿಟೆಡ್ ಎಕ್ಸಿಕ್ಯೂಟಿವ್ ಡೈರೆಕ್ಟರ್, ಜನರಲ್ ಮ್ಯಾನೇಜರ್ ಹಾಗೂ ಇತರೆ ಅಧಿಕಾರಿಗಳು ದುರಂತ ನಡೆದ ಸ್ಥಳಕ್ಕೆ ಮತ್ತು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.