ಬೆಂಗಳೂರು: ರಾಜ್ಯದ ಜನತೆ ಗಣೇಶ ಚತುರ್ಥಿಯ ಸಂಭ್ರಮದಲ್ಲಿ ತೊಡಗಿಕೊಂಡಿದ್ದರೆ, ಟ್ವಿಟರ್ನಲ್ಲಿ ಪುನೀತ್ ಅಭಿಮಾನಿಗಳು ‘ಪುನೀತ್ ಚತುರ್ಥಿʼ ಹಮ್ಮಿಕೊಂಡಿದ್ದಾರೆ.
ಕರುನಾಡು, ಪುನೀತ್ ರಾಜಕುಮಾರ ಅವರನ್ನು ಕಳೆದುಕೊಂಡು 10 ತಿಂಗಳುಗಳೆ ಆಗಿವೆ. ಆದರೆ ಅವರ ನೆನಪಿನಲ್ಲಿ ಅಭಿಮಾನಿಗಳು ಒಳ್ಳೆಯ ಕೆಲಸಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ಈ ಮೂಲಕ ಅಪ್ಪು ಅಭಿಮಾನಿಗಳು ಪುನೀತ್ ಅವರನ್ನು ಸ್ಮರಿಸುತ್ತಿದ್ದರು. ಈ ಬಾರಿ ಗಣೇಶ ಚತುರ್ಥಿಗೆ ಅವರ ನೆನಪಲಿ ‘ ಪುನೀತ್ ಚತುರ್ಥಿ’ ಮಾಡುತ್ತಿದ್ದಾರೆ.
ಇಂದು ಮಧ್ಯಾಹ್ನದಿಂದ ಈ ಸುದ್ದಿ ವೈರಲ್ ಆಗಿದ್ದು, ಟ್ವಿಟರ್ನಲ್ಲಿ ಟ್ರೆಂಡಿಂಗ್ ಆಗಿದೆ. ಅಭಿಮಾನಿಗಳು ಪುನೀತ್ ಜೊತೆ ಗಣೇಶನ ಫೋಟೋವನ್ನು ಹಾಕಿ, ‘ಪುನೀತ್_ಚತುರ್ಥಿ’ ಎಂದು ಹ್ಯಾಶ್ ಟ್ಯಾಗ್ ಬಳಸಿ ಪುನೀತ್ ಅವರ ನೆನಪಲ್ಲಿ ಗಣೇಶಹಬ್ಬವನ್ನು ಆಚರಿಸಲು ನಿರ್ಧರಿಸಿದ್ದಾರೆ.
ಈ ಮೂಲಕ ಅಭಿಮಾನಿಗಳು ಪುನೀತ್ ರಾಜಕುಮಾರ ಅವರನ್ನು ಸ್ಮರಿಸುತ್ತಿದ್ದು ಈ ಅಭಿಯಾನದಲ್ಲಿ ಇತರರು ಕೂಡ ಪಾಲ್ಗೊಳ್ಳುವಂತೆ ಕರೆ ನೀಡಿದ್ದಾರೆ.
ಈ ವಿಷಯ ವೈರಲ್ ಆಗಿದ್ದೆ ತಡ, ಸಾವಿರಾರು ಅಭಿಮಾನಿಗಳು ಗೌರಿಪುತ್ರ ಗಣೇಶನ ಜೊತೆ ಅಪ್ಪು ಫೋಟೋ ಹಾಕಿ, ‘ಪುನೀತ್_ಚತುರ್ಥಿ’ ಎಂದು ಹ್ಯಾಶ್ ಟ್ಯಾಗ್ ಬಳಸುವ ಮೂಲಕ ಅವರನ್ನು ನೆನಪಿಸಿಕೊಳ್ಳೋಣ ಎಂದು ಟ್ವೀಟ್ ಮಾಡಿದ್ದಾರೆ.
ʼಎಲ್ಲಿ ನೋಡಿದರು ಗಣೇಶನ ಜೊತೆ ಅಪ್ಪು ಸರ್ ನೋಡಲು ಖುಷಿಯಾಗುತ್ತದೆ. ಕನ್ನಡಿಗರ ಮನೆ ಮನಗಳಲ್ಲೂ ಅಪ್ಪು ಸರ್ ಅಮರ. ಈ ಗಣೇಶ ಹಬ್ಬವನ್ನು ಪುನೀತ್ ಸರ್ ಗೆ ಅರ್ಪಿಸೋಣ. ಎಂದು #ಪುನೀತ್_ಚತುರ್ಥಿ #puneeth_chaturthi ಎಂಬ ಹ್ಯಾಶ್ ಟ್ಯಾಗ್ ಬಳಸಿ ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ತಮ್ಮ ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
ʼದೈವ ಲೀಲೆಯೋ ಕಾಣೆ, ಕರ್ಮ ಜಾಲವೋ ಕಾಣೆ, ಅಪ್ಪುವಿನಂತಹ ವ್ಯಕ್ತಿಯನು ಈ ಜಗದಲಿ ಕಾಣೆʼ ಎಂದು ನಿತಿನ್ ಅಪ್ಪು ಕೂಡ #ಪುನೀತ್_ಚತುರ್ಥಿ ಹ್ಯಾಶ್ ಟ್ಯಾಗ್ ಬಳಸಿ ಟ್ವೀಟ್ ಮಾಡಿದ್ದಾರೆ.