ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಹರ್ಯಾಣದ ರೋಹ್ಟಕ್ನಲ್ಲಿರುವ ಸುನಾರಿಯಾ ಜೈಲಿನಲ್ಲಿ ಕೊಲೆ ಮತ್ತು ಅತ್ಯಾಚಾರದ ಆರೋಪದ ಮೇಲೆ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ.
ಆತ ಈಗ ಮತ್ತೆ ಪೆರೋಲ್ ಮೇಲೆ ಜೈಲಿನಿಂದ ಹೊರಬಂದಿದ್ದಾನೆ. ಹೊರಬಂದ ನಂತರ, ರಾಮ್ ರಹೀಮ್ ಮತ್ತೊಮ್ಮೆ ಉತ್ತರ ಪ್ರದೇಶದ ಬಾಗ್ಪತ್ನಲ್ಲಿರುವ ಬರ್ನಾವಾ ಆಶ್ರಮದಲ್ಲಿ ಉಳಿಯಲಿದ್ದಾನೆ. ಆದರೆ ಈ ಬಾರಿ ರಾಮ್ ರಹೀಮನಿಗೆ ಪೆರೋಲ್ ನೀಡಿರುವವ ಸಮಯದ ಕುರಿತು ಪ್ರಶ್ನೆಗಳು ಎದ್ದಿವೆ. ಗುರ್ಮೀತ್ ರಾಮ್ ರಹೀಮ್ ಮೂಲತಃ ರಾಜಸ್ಥಾನದ ಶ್ರೀಗಂಗಾನಗರದ ಗುರುಸರ್ ಮೋಡಿಯಾ ಗ್ರಾಮದ ನಿವಾಸಿ.
ಗುರ್ಮೀತ್ ರಾಮ್ ರಹೀಮ್ ಹರ್ಯಾಣ ಮತ್ತು ಪಂಜಾಬ್ ಗಡಿಯಲ್ಲಿರುವ ರಾಜಸ್ಥಾನದ ಹಲವು ಜಿಲ್ಲೆಗಳಲ್ಲಿ ನೆಲೆಗಳನ್ನು ಹೊಂದಿದ್ದಾನೆ. ರಾಜಸ್ಥಾನದ ಶ್ರೀಗಂಗಾನಗರ, ಹನುಮಾನ್ಗಢ, ಚುರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಗುರ್ಮೀತ್ ರಾಮ್ ರಹೀಮ್ ಪ್ರಭಾವ ಹೆಚ್ಚಿದೆ. ಡೇರಾ ಸಚ್ಚಾ ಸೌದಾ ಆಶ್ರಮಗಳು ಬಹುತೇಕ ಎಲ್ಲ ಜಿಲ್ಲೆಗಳಲ್ಲಿವೆ. ಇಲ್ಲಿಆತ ದೊಡ್ಡ ಸಂಖ್ಯೆಯಲ್ಲಿ ಅನುಯಾಯಿಗಳನ್ನು ಹೊಂದಿದ್ದಾನೆ.
ಇದುವರೆಗೆ ದೊರೆತ ಪೆರೋಲ್ ರಜೆಗಳು
- ಗುರ್ಮೀತ್ ರಾಮ್ ರಹೀಮ್ ಆಗಸ್ಟ್ 25, 2017 ರಿಂದ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾನೆ. ಆತನಿಗೆ ಅಕ್ಟೋಬರ್ 24, 2020ರಂದು ಮೊದಲ ಬಾರಿಗೆ 24 ಗಂಟೆಗಳ ಪೆರೋಲ್ ನೀಡಲಾಯಿತು.
- 21 ಮೇ 2021ರಂದು, ಗುರ್ಮೀತ್ ರಾಮ್ ರಹೀಮ್ ತನ್ನ ಅನಾರೋಗ್ಯ ಪೀಡಿತ ತಾಯಿಯನ್ನು ಭೇಟಿ ಮಾಡಲು ಪೆರೋಲ್ ನೀಡಲಾಯಿತು.
- 7 ಫೆಬ್ರವರಿ 2022ರಂದು, ರಹೀಮ್ 21 ದಿನಗಳ ಪೆರೋಲ್.
- ಜೂನ್ 17, 2022ರಂದು 30 ದಿನಗಳ ಪೆರೋಲ್.
- 15 ಅಕ್ಟೋಬರ್ 2022ರಂದು 40 ದಿನಗಳ ಪೆರೋಲ್.
- 21 ಜನವರಿ 2023ರಂದು 40 ದಿನಗಳ ಪೆರೋಲ್.
- ಜುಲೈ 20, 2023ರಂದು 30 ದಿನಗಳ ಪೆರೋಲ್.
- ಗುರ್ಮೀತ್ ರಾಮ್ ರಹೀಮ್ ಜನ್ಮದಿನವಾದ 15 ಆಗಸ್ಟ್ 2023 ರಂದು ಪೆರೋಲ್ ನೀಡಲಾಯಿತು.
ಗುರ್ಮೀತ್ ರಾಮ್ ರಹೀಮನನ್ನು ಜೈಲಿನಿಂದ ಪೆರೋಲ್ ಮೇಲೆ ಕರೆತರುವ ಸಮಯದ ಬಗ್ಗೆ ಹಲವು ಬಾರಿ ಪ್ರಶ್ನೆಗಳು ಎದ್ದಿವೆ. ನವೆಂಬರ್ 25ರಂದು ರಾಜಸ್ಥಾನದಲ್ಲಿ ಮತದಾನ ನಡೆಯಲಿದೆ. ಅದಕ್ಕೂ 4 ದಿನಗಳ ಮೊದಲು ಗುರ್ಮೀತ್ ರಾಮ್ ರಹೀಮ್ ಗೆ ಮತ್ತೆ ಪೆರೋಲ್ ಸಿಕ್ಕಿದೆ. ಫೆಬ್ರವರಿ 2022ರಲ್ಲಿ ಪಂಜಾಬ್ ವಿಧಾನಸಭಾ ಚುನಾವಣೆಗೆ ಮುನ್ನ ಗುರ್ಮೀತ್ ರಾಮ್ ರಹೀಮ್ ಪೆರೋಲ್ ಪಡೆದ. ಇದಾದ ನಂತರ, ಹರಿಯಾಣ ಚುನಾವಣೆಯ ಸಂದರ್ಭದಲ್ಲಿಯೂ ಗುರ್ಮೀತ್ ರಾಮ್ ರಹೀಮ್ ಪೆರೋಲ್ ಮೇಲೆ ಹೊರಗಿದ್ದ. ಆತ ನಿರಂತರವಾಗಿ ಆನ್ ಲೈನ್ ಸತ್ಸಂಗ ಮಾಡುವ ಮೂಲಕ ತನ್ನ ಶಕ್ತಿ ಪ್ರದರ್ಶಿಸುತ್ತಿದ್ದಾನೆ. ಈ ಸಂದರ್ಭದಲ್ಲಿ ಸತ್ಸಂಗದಲ್ಲಿ ಹಲವು ಸರಪಂಚರು ಹಾಗೂ ಮಹಾನಗರ ಪಾಲಿಕೆ ಅಭ್ಯರ್ಥಿಗಳು ಪೂಜೆ ಸಲ್ಲಿಸುತ್ತಿರುವುದು ಕಂಡು ಬಂದಿತ್ತು.
ಚುನಾವಣೆಗೂ ಮುನ್ನ ಹರಿಯಾಣದ ಸಿರ್ಸಾದ ಆದಂಪುರ ಮತ್ತು ಎಲೆನಾಬಾದ್ ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಗುರ್ಮೀತ್ ರಾಮ್ ರಹೀಮ್ಗೆ ಪೆರೋಲ್ ನೀಡಲಾಗಿತ್ತು. ಗುರ್ಮೀತ್ ರಾಮ್ ರಹೀಮ್ 37 ತಿಂಗಳ ಶಿಕ್ಷೆಯ ಅವಧಿಯಲ್ಲಿ 9ನೇ ಬಾರಿಗೆ ಪೆರೋಲ್ ಮೇಲೆ ಜೈಲಿನಿಂದ ಹೊರಬರುತ್ತಿದ್ದಾನೆ. ರಾಜಸ್ಥಾನ ವಿಧಾನಸಭಾ ಚುನಾವಣೆಗೂ ಮುನ್ನ ಗುರ್ಮೀತ್ ರಾಮ್ ರಹೀಮ್ ಜೈಲಿನಿಂದ ಹೊರಬರಲು ನೀಡಿರುವ ಪೆರೋಲ್ ವಿಚಾರವನ್ನು ಹರಿಯಾಣ ಸರ್ಕಾರ ಮತ್ತೊಮ್ಮೆ ಪ್ರಸ್ತಾಪಿಸಿದೆ.
ನಮಗೆ ಚುನಾವಣೆಯಲ್ಲಿ ಪರೋಲ್ನ ಲಾಭವನ್ನು ಪಡೆಯುವ ಅಗತ್ಯವಿಲ್ಲ ಮತ್ತು ನಮ್ಮ ಸರ್ಕಾರ ಮಾಡಿದ ಕೆಲಸದ ಆಧಾರದ ಮೇಲೆ ನಾವು ಜನರ ಬಳಿಗೆ ಹೋಗುತ್ತೇವೆ ಆದ್ದರಿಂದ ನಮಗೆ ಯಾರ ಕರುಣೆಯೂ ಬೇಕಾಗಿಲ್ಲ ಎಂದು ಹರಿಯಾಣ ಕ್ಯಾಬಿನೆಟ್ ಸಚಿವ ಮೂಲ್ಚಂದ್ ಶರ್ಮಾ ಹೇಳಿದ್ದರು. ರಾಮ್ ರಹೀಮ್ಗೆ ಪೆರೋಲ್ ನೀಡುವುದು ನ್ಯಾಯಾಂಗದ ಆಡಳಿತಾತ್ಮಕ ವಿಷಯವಾಗಿತ್ತು. ಪೆರೋಲ್ಗೆ ನಿರ್ದಿಷ್ಟ ಮಾನದಂಡಗಳಿವೆ. ಅದರಂತೆ ಮಂಜೂರು ಮಾಡಲಾಗಿದೆ ಎಂದೂ ಅವರು ಹೇಳಿದ್ದರು.
ಪತ್ರಕರ್ತ ರಾಮಚಂದ್ರ ಛತ್ರಪತಿ ಹತ್ಯೆ ಪ್ರಕರಣದಲ್ಲಿ ಗುರ್ಮೀತ್ ರಾಮ್ ರಹೀಮ್ ಶಿಕ್ಷೆ ಅನುಭವಿಸುತ್ತಿದ್ದಾನೆ. ರಾಮಚಂದ್ರ ಛತ್ರಪತಿ ಪುತ್ರ ಅನ್ಶುಲ್ ಛತ್ರಪತಿ ಪದೇ ಪದೇ ಪೆರೋಲ್ ನೀಡುತ್ತಿರುವ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ರಾಮ್ ರಹೀಮ್ ಪೆರೋಲ್ ಪಡೆಯುತ್ತಿರುವುದು ನಮ್ಮ ವ್ಯವಸ್ಥೆಯ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ, ಇದು ಅತ್ಯಂತ ದುರದೃಷ್ಟಕರ, ಇದು ಪ್ರಜಾಪ್ರಭುತ್ವದ ಮುಖದ ಮೇಲೆ ಹೊಡೆದಂತಿದೆ ಎಂದು ಅವರು ಹೇಳಿದರು.
ನ್ಯಾಯಾಲಯದ ತೀರ್ಪನ್ನು ಲೆಕ್ಕಿಸದೆ ರಾಮ್ ರಹೀಮ್ ರೀತಿಯ ಕ್ರಿಮಿನಲ್ಲುಗಳು ಹೊರಬರುತ್ತಿರುವುದು ನಾಚಿಕೆಗೇಡಿನ ಸಂಗತಿ. ನಿಯಮಾನುಸಾರ ಪೆರೋಲ್ ನೀಡಲಾಗುತ್ತಿದೆ ಎಂದು ಸರ್ಕಾರದ ಆಡಳಿತ ಪದೇ ಪದೇ ಹೇಳುತ್ತಿದೆ. ಹಲವು ಕ್ರಿಮಿನಲ್ಗಳು ಮತ್ತು ಖೈದಿಗಳು ವರ್ಷಗಟ್ಟಲೆ ಜೈಲಿನಲ್ಲಿದ್ದಾರೆ. ಅವರಿಗೆ ಒಂದು ದಿನವೂ ಪೆರೋಲ್ ಸಿಕ್ಕಿಲ್ಲ. ಆದರೆ, ಗುರ್ಮೀತ್ ರಾಮ್ ರಹೀಮ್ ಜೈಲಿನಿಂದ ಬಿಡುಗಡೆಯಾಗುವ ಸಮಯದ ಬಗ್ಗೆ ಪ್ರತಿಪಕ್ಷಗಳು ಸಹ ಸಾರ್ವಜನಿಕವಾಗಿ ಮಾತನಾಡುವುದನ್ನು ನಿಲ್ಲಿಸಿವೆ ಎಂದು ಅವರು ಆರೋಪಿಸಿದ್ದಾರೆ.