ಮುಂಬೈ: ಹಿರಿಯ ಪತ್ರಕರ್ತ, ಕವಿ, ಚಿತ್ರಕಾರ, ಬಾಲಿವುಡ್ ನಿರ್ಮಾಪಕ ಮತ್ತು ಮಾಜಿ ಸಂಸದ ಪ್ರಿತೀಶ್ ನಂದಿ (73) ನಿಧನರಾಗಿದ್ದಾರೆ. ದಕ್ಷಿಣ ಮುಂಬೈಯಲ್ಲಿರುವ ತಮ್ಮ ಮನೆಯಲ್ಲಿ ಹೃದಯಾಘಾತದಿಂದ ಬುಧವಾರ ಅವರು ಕೊನೆಯುಸಿರೆಳೆದರು.
ಅವರು ಪ್ರಿತೀಶ್ ನಂದಿ ಕಮ್ಯುನಿಕೇಷನ್ಸ್ ಸಂಸ್ಥೆಯನ್ನು ಸ್ಥಾಪಿಸಿ ಅದರ ಮೂಲಕ ಚಮೇಲಿ, ಏಕ್ ಖಿಲಾಡಿ ಏಕ್ ಹಸೀನಾ ಮತ್ತು ಆಂಖೇ ರೀತಿಯ ಯಶಸ್ವಿ ಚಲನಚಿತ್ರಗಳು ಮತ್ತು ವೆಬ್ ಸರಣಿಗಳನ್ನು ನಿರ್ಮಿಸಿದ್ದರು.
ಬಿಹಾರದ ಭಾಗಲ್ಪುರದಲ್ಲಿ ಜನಿಸಿದ ಅವರು ದೂರದರ್ಶನ ಮಾಧ್ಯಮದಲ್ಲಿ ಹಾಗೂ ಪತ್ರಿಕೋದ್ಯಮದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ಅವರು ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಅವರು ವಿವಿಧ ಭಾಷೆಗಳಿಗೆ ಕಾವ್ಯವನ್ನು ಅನುವಾದಿಸಿದ್ದರು.
ಪ್ರಿತೀಶ್ 1998ರಿಂದ 2004 ರವರೆಗೆ ಶಿವಸೇನೆಯಿಂದ ರಾಜ್ಯಸಭೆಯ ಸದಸ್ಯರಾಗಿದ್ದರು. ಸಾಹಿತ್ಯ ಕ್ಷೇತ್ರದಲ್ಲಿನ ಸೇವೆಗಾಗಿ ಅವರಿಗೆ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಯೂ ದೊರಕಿದೆ.