ಮಣಿಪುರ ಹಿಂಸಾಚಾರದ ಹಿನ್ನೆಲೆಯಲ್ಲಿ ಅಲ್ಲಿನ ವಸ್ತುಸ್ಥಿತಿ ವೀಕ್ಷಿಸಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಮಣಿಪುರವನ್ನು ತಲುಪಿದ್ದಾರೆ. ಆದರೆ ಅವರ ಬೆಂಗಾವಲು ಪಡೆಯನ್ನು ಮಣಿಪುರದ ಬಿಷ್ಣುಪುರದಲ್ಲಿ ಮಣಿಪುರ ಪೊಲೀಸರು ತಡೆದಿದ್ದಾರೆ.
“ನಮ್ಮ ನಾಯಕರಾದ ರಾಹುಲ್ ಗಾಂಧಿಯವರು ಸಂತ್ರಸ್ತ ಜನರನ್ನು ಭೇಟಿ ಮಾಡಲು ಮಣಿಪುರದ ಇಂಪಾಲ್ ಗೆ ಭೇಟಿ ನೀಡುತ್ತಿದ್ದಾರೆಯೇ ಹೊರತು, ಬೇರಾವ ಉದ್ದೇಶವೂ ಇಲ್ಲ. ಇಂಪಾಲ್ ನ ದಾರಿಯಲ್ಲಿ ನಾವು ಸುಮಾರು 20-25 ಕಿಮೀ ಸಂಚರಿಸಿದ್ದೇವೆ ಆದರೆ ಎಲ್ಲಿಯೂ ರಸ್ತೆ ತಡೆ ಇರಲಿಲ್ಲ. ಆದರೆ ಇಂಪಾಲ್ ಗೆ 25 ಕಿಲೋಮೀಟರ್ ಇರುವಾಗಲೇ ಸ್ಥಳೀಯ ಪೊಲೀಸರು ರಾಹುಲ್ ಗಾಂಧಿ ಮತ್ತು ಅವರ ಬೆಂಗಾವಲು ಪಡೆಯನ್ನು ಅಡ್ಡಗಟ್ಟಿದ್ದಾರೆ. ಇದರ ಹಿಂದೆ ಯಾರ ಸೂಚನೆ ಇದೆ ಎಂಬುದು ನಮಗೆ ಗೊತ್ತಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ANI ಗೆ ತಿಳಿಸಿದ್ದಾರೆ.
ಕುಕಿ ಮತ್ತು ಮೈತಿ ಬುಡಕಟ್ಟು ಜನಾಂಗದವರ ನಡುವಿನ ದೊಡ್ಡ ಪ್ರಮಾಣದ ಘರ್ಷಣೆ, ಹಿಂಸಾಚಾರಕ್ಕೆ 50 ದಿನ ಕಳೆದಿದೆ. ಪರಿಸ್ಥಿತಿ ಉಲ್ಬಣಗೊಂಡ ನಂತರ ಮಣಿಪುರಕ್ಕೆ ಭೇಟಿ ನೀಡಿದ ಮೊದಲ ವ್ಯಕ್ತಿಯಾಗಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನಿಲ್ಲುತ್ತಾರೆ.
ಮಣಿಪುರದ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶನಿವಾರ, ಜೂನ್ 24 ರಂದು ನವದೆಹಲಿಯಲ್ಲಿ ಸರ್ವಪಕ್ಷ ಸಭೆಯನ್ನು ಆಯೋಜಿಸಿದ್ದರು. ಸಭೆಯ ನಂತರದ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿ “ಆಡಳಿತ ಪಕ್ಷವು ರಾಜ್ಯದಲ್ಲಿ ಉದ್ವಿಗ್ನತೆಯನ್ನು ಕಡಿಮೆ ಮಾಡಲು ತನ್ನ ಎಲ್ಲಾ ಪ್ರಯತ್ನಗಳನ್ನು ಮಾಡಲಿದೆ ಎಂದು ಹೇಳಿದ್ದರು. ಆದರೆ ‘ಆಡಳಿತಾರೂಢ ಬಿಜೆಪಿ ಪಕ್ಷ ನಮ್ಮ ಯಾವುದೇ ಸಲಹೆಗಳನ್ನು ಸ್ವೀಕರಿಸಲು ಸಿದ್ದವಾಗಿಲ್ಲ’ ಎಂದು ಕಾಂಗ್ರೆಸ್ ಪಕ್ಷ ಆ ದಿನದಲ್ಲೇ ಪ್ರತಿಕ್ರಿಯಿಸಿತ್ತು.
ಇನ್ನು ರಾಹುಲ್ ಗಾಂಧಿಯವರನ್ನು ಮಣಿಪುರಕ್ಕೆ ಭೇಟಿ ನೀಡದಂತೆ ತಡೆದಿರುವ ಮಣಿಪುರ ಸರ್ಕಾರ ಮತ್ತು ಪೊಲೀಸರ ವರ್ತನೆ ಬಗ್ಗೆ ಕಾಂಗ್ರೆಸ್ ಪಕ್ಷದ ರಾಷ್ಟ್ರಾಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು, “ರಾಹುಲ್ ಗಾಂಧಿಯವರು ಪರಿಹಾರ ಶಿಬಿರಗಳಲ್ಲಿ ನರಳುತ್ತಿರುವ ಜನರನ್ನು ಭೇಟಿ ಮಾಡಲು ಮತ್ತು ಕಲಹ ಪೀಡಿತ ರಾಜ್ಯದಲ್ಲಿ ಶಾಂತಿಸ್ಥಾಪನೆಯ ಉದ್ದೇಶದಿಂದ ಅಲ್ಲಿಗೆ ಹೋಗುತ್ತಿದ್ದಾರೆ. ಈ ಸಂದರ್ಭದಲ್ಲಿ ಮಣಿಪುರದ ಬಗ್ಗೆ ಮೌನ ಮುರಿಯಲು ಪ್ರಧಾನಿ ಮೋದಿ ತಲೆಕೆಡಿಸಿಕೊಂಡಿಲ್ಲ. ಅವರು ಇಲ್ಲಿ ಸಂಬಂಧವೇ ಇಲ್ಲದಂತಿದ್ದಾರೆ. ಈಗ, ಅವರ ಡಬಲ್ ಇಂಜಿನ್ ವಿನಾಶಕಾರಿ ಸರ್ಕಾರಗಳು ಶ್ರೀ ರಾಹುಲ್ ಗಾಂಧಿಯವರ ಸಹಾನುಭೂತಿಯ ಪ್ರಭಾವವನ್ನು ನಿಲ್ಲಿಸಲು ನಿರಂಕುಶಾಧಿಕಾರದ ವಿಧಾನಗಳನ್ನು ಬಳಸುತ್ತಿವೆ. ಇದು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ ಮತ್ತು ಎಲ್ಲಾ ಸಾಂವಿಧಾನಿಕ ಮತ್ತು ಪ್ರಜಾಪ್ರಭುತ್ವದ ಮಾನದಂಡಗಳನ್ನು ಛಿದ್ರಗೊಳಿಸುತ್ತದೆ. ಮಣಿಪುರಕ್ಕೆ ಶಾಂತಿ ಬೇಕು, ಸಂಘರ್ಷವಲ್ಲ.” ಎಂದು ಪ್ರತಿಕ್ರಿಯೆ ನೀಡಿದ್ದಾರೆ.