ಉತ್ತರ ಪ್ರದೇಶದ ಸಹರಾನ್ಪುರ ಜಿಲ್ಲೆಯಲ್ಲಿ ಭೀಮ್ ಆರ್ಮಿಯ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ರಾವಣ್ ಅವರ ಮೇಲೆ ಕೆಲವು ಶಸ್ತ್ರಸಜ್ಜಿತ ಅಪರಿಚಿತ ವ್ಯಕ್ತಿಗಳು ಗುಂಡು ಹಾರಿಸಿದ ಗಂಟೆಗಳ ನಂತರ, ಪೊಲೀಸರು ದಾಳಿಗೆ ಬಳಸಿದ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಬುಧವಾರ ತಡರಾತ್ರಿ ಮಿರಾಗ್ಪುರ ಗ್ರಾಮದಲ್ಲಿ ದಾಳಿಗೆ ಬಳಸಲಾಗಿದ್ದ ಸ್ವಿಫ್ಟ್ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ದಾಳಿಗೆ ಬಳಸಲಾದ ಕಾರಿನ ನಂಬರ್ ಪ್ಲೇಟ್ ಹರಿಯಾಣದಲ್ಲಿ ನೋಂದಣಿಯಾಗಿದೆ ಎಂದು ಉತ್ತರ ಪ್ರದೇಶದ ಪೊಲೀಸರು ತಿಳಿಸಿದ್ದಾರೆ.
ಸಿಸಿಟಿವಿ ಕ್ಯಾಮೆರಾಗಳ ಸಹಾಯದಿಂದ ಪೊಲೀಸ್ ಅಧಿಕಾರಿಗಳು ದಾಳಿಗೆ ಬಳಸಿದ ವಾಹನ ಪತ್ತೆ ಮಾಡಿದ್ದಾರೆ. ಕಾರು ನಿಲ್ಲಿಸಿದ್ದ ಮನೆಯ ಮಾಲಿಕನ ಪತ್ತೆ ಕೂಡಾ ಆಗಿದೆ. ಹಾಗೂ ಕಾರನ್ನು ಚಲಾಯಿಸಿದ ನಾಲ್ವರನ್ನು ಸಹ ಗುರುತಿಸಿದ್ದಾರೆ. ಆದರೆ ಪೊಲೀಸರಿಂದ ತಪ್ಪಿಸಿಕೊಳ್ಳಲು ತಮ್ಮ ಫೋನ್ ಸ್ವಿಚ್ ಆಫ್ ಮಾಡಿದ್ದರಿಂದ ಯಾರೊಬ್ಬರೂ ಕೂಡಾ ಪೊಲೀಸರ ಕೈಗೆ ಸಿಕ್ಕಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಪೊಲೀಸರು ಗ್ರಾಮದಲ್ಲಿ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಇದರ ನಡುವೆ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ರಾವಣ್ “ಇಂತಹ ಹಠಾತ್ ದಾಳಿಯನ್ನು ನಾನು ನಿರೀಕ್ಷಿಸಿರಲಿಲ್ಲ. ನನ್ನ ಸ್ನೇಹಿತರು, ಬೆಂಬಲಿಗರು ಮತ್ತು ದೇಶಾದ್ಯಂತದ ಇರುವ ನಮ್ಮ ಕಾರ್ಯಕರ್ತರಲ್ಲಿ ಶಾಂತಿ ಕಾಪಾಡುವಂತೆ ನಾನು ಮನವಿ ಮಾಡಲು ಬಯಸುತ್ತೇನೆ. ನಾವು ನಮ್ಮ ಹೋರಾಟವನ್ನು ಸಾಂವಿಧಾನಿಕವಾಗಿ ಮುಂದುವರಿಸುತ್ತೇವೆ. ಕೋಟ್ಯಂತರ ಜನರ ಪ್ರೀತಿ ಮತ್ತು ಆಶೀರ್ವಾದದಿಂದ ನಾನು ಚೆನ್ನಾಗಿದ್ದೇನೆ.” ಎಂದು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿರುವಾಗ ANI ಗೆ ತಿಳಿಸಿದ್ದಾರೆ