ಬೆಂಗಳೂರು : ನಟ ಶಂಕರ್ ನಾಗ್ ಅಭಿನಯದ ́ಗೀತಾʼ ಚಿತ್ರದಿಂದ ಈ ತನಕ ʼಸಂಜು ಮತ್ತು ಗೀತಾʼ ಎಂಬ ಹೆಸರು ಜನಪ್ರಿಯವಾಗಿದೆ. ಈಗ ಅದೇ ಹೆಸರಿನ ಚಿತ್ರವೊಂದು ನಿರ್ಮಾಣವಾಗುತ್ತಿದ್ದು, ಆರ್ ಕೆ ನಿರ್ದೇಶನದಲ್ಲಿ ಮೂಡಿಬರುತ್ತಿದೆ. ಈ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ನಡೆದಿದ್ದು, ಈ ಬಗ್ಗೆ ಸಿನಿಮಾ ತಂಡವು ಪತ್ರಿಕಾ ಗೋಷ್ಠಯಲ್ಲಿ ಮಾತನಾಡಿದ್ದಾರೆ.

ಇದೊಂದು ನವೀರಾದ ಪ್ರೇಮಕಥೆ. ಕುಟುಂಬ ಸಮೇತ ನೋಡಬಹುದಾದ ಉತ್ತಮ ಚಿತ್ರವಾಗಿದೆ. ಈ ಹಿಂದೆ ನನ್ನ ನಿರ್ದೇಶನದ ʼಕಾಣೆಯಾಗಿದ್ದಾಳೆʼ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ವಿನಯ್ ಕಾರ್ತಿಕ್ ಈ ಚಿತ್ರದಲ್ಲೂ ನಾಯಕನಾಗಿ ಅಭಿನಯಿಸಿದ್ದಾರೆ. ʼಮಂಗಳ ಗೌರಿʼ ಧಾರಾವಾಹಿಯಲ್ಲಿ ಅಭಿನಯಿಸಿದ್ದ ಸನ್ಮಿತ ಈ ಚಿತ್ರದ ನಾಯಕಿ. ರಾಘವೇಂದ್ರ ರಾಜಕುಮಾರ್ ಈ ಚಿತ್ರದಲ್ಲಿ ನಾಯಕಿಯ ತಂದೆ ಪಾತ್ರದಲ್ಲಿ, ಹಿರಿಯ ನಟಿ ಭವ್ಯ ನಾಯಕನ ತಾಯಿಯಾಗಿ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಸಾಹಿತಿ ದೊಡ್ಡರಂಗೇಗೌಡ , ಸ್ವಾತಿ ಸೇರಿದಂತೆ ಅನೇಕ ಕಲಾವಿದರು ನಮ್ಮ ಚಿತ್ರದ ತಾರಾಬಳಗದಲ್ಲಿದ್ದಾರೆ. ಮುಂದಿನ ವಾರದಿಂದ ಚಿತ್ರೀಕರಣ ಆರಂಭವಾಗಲಿದೆ ಎಂದು ನಿರ್ದೇಶಕ ಆರ್ ಕೆ ಮಾಹಿತಿ ನೀಡಿದರು.
ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ಹಾಗಾಗಿ ಚಿತ್ರದಲ್ಲಿ ಅಭಿನಯಿಸಲು ಒಪ್ಪಿದೆ ಎಂದರು ಹಿರಿಯ ನಟಿ ಭವ್ಯ ತಮ್ಮ ಅನಿಸಿಕೆ ಹೇಳಿದರು.
ʼನನಗೆ ಆರ್ ಕೆ ಅವರ ಜೊತೆ ಎರಡನೇ ಚಿತ್ರ. ರಾಘವೇಂದ್ರ ರಾಜಕುಮಾರ್, ಭವ್ಯ ಅವರಂತಹ ಹಿರಿಯ ನಟರೊಡನೆ ಅಭಿನಯಿಸುತ್ತಿರುವುದು ಖುಷಿಯಾಗಿದೆʼ ಎಂದು ನಾಯಕ ವಿನಯ್ ಕಾರ್ತಿಕ್ ಹೇಳಿದರು.
ʼನಾನು ಈ ಚಿತ್ರದಲ್ಲೂ ಹೆಣ್ಣಿನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದಾಗಿʼ ʼಮಹಾಭಾರತʼದ ರಾಘವೇಂದ್ರ ತಿಳಿಸಿದರು.
ನಿರ್ಮಾಪಕ ಸಂಜಯ್ ಮಾಗನೂರು ಹಾಗೂ ಸಂಗೀತ ನಿರ್ದೇಶಕ ಕೌಶಿಕ್ ಚಿತ್ರದ ಬಗ್ಗೆ ಮಾಹಿತಿ ನೀಡಿದ್ದು, ಛಾಯಾಗ್ರಾಹಕ ನಾಗರಾಜ್, ಸಂಕಲನಕಾರ ಶಿವರಾಜು ಮೇಹು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥತರಿದ್ದರು.