Home ಜನ-ಗಣ-ಮನ ಧರ್ಮ- ಸಂಸ್ಕೃತಿ “ಸನಾತನವಾದ“ ಸಣ್ಣತನದಿಂದ ಹೊರಬರಲಿ

“ಸನಾತನವಾದ“ ಸಣ್ಣತನದಿಂದ ಹೊರಬರಲಿ

0

ಚಾಮರಾಜನಗರದಲ್ಲಿ ದಲಿತ ಮಹಿಳೆ ನೀರು ಕುಡಿದಳೆಂದು ನೀರಿನ ಇಡೀ ಟ್ಯಾಂಕ್ ಖಾಲಿ ಮಾಡಿ ಅದನ್ನು ಗೋಮೂತ್ರದಿಂದ ತೊಳೆದಾಗ, ಕುದುರೆ ಏರಿದ ಎಂದು ದಲಿತ ಮದುಮಗನನ್ನು ಸವರ್ಣೀಯರು ಥಳಿಸಿದಾಗ, ಮೀಸೆ ಬಿಟ್ಟ ನೆಪಕ್ಕೆ ದಲಿತನನ್ನು ಕೊಂದಾಗ, ದಲಿತನ ಮೈಮೇಲೆ ಉಚ್ಚೆ ಹೊಯ್ದು ಅವಮಾನಿಸಿದಾಗ, ಮಲ ತಿನ್ನಿಸಿದಾಗ, ಅತ್ಯಾಚಾರಗಳು ನಡೆದಾಗ, ದೇವಸ್ಥಾನ ಪ್ರವೇಶಿಸಿದ ಎಂದು ಬಡಿದು ಕೊಲೆ ಮಾಡಿದಾಗ…. ಇಂತವಕ್ಕೆಲ್ಲ ಇದೀಗ ಉದಯನಿಧಿಯ ತಲೆಕಡಿಯಲು ಮತ್ತು ನಾಲಗೆ ಕತ್ತರಿಸಲು ಹೊರಟಂತವರು ಎಂದಾದರೂ ಮಾತನಾಡಿದ್ದುಂಟೇ..? – ಶಂಕರ್‌ ಸೂರ್ನಳ್ಳಿ

ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ರವರ ಪುತ್ರ ಉದಯನಿಧಿ ಸ್ಟಾಲಿನ್ ರವರ ಸನಾತನ ಧರ್ಮದ ಕುರಿತ ಹೇಳಿಕೆ ಇದೀಗ ಸಾಕಷ್ಟು ಪರ ವಿರೋಧಗಳ ಚರ್ಚೆಯನ್ನು ಹುಟ್ಟು ಹಾಕಿದೆ. ಮಲೇರಿಯಾ ಡೆಂಗ್ಯುವಿನಂತಹ ಮಹಾ ಮಾರಿಗೆ ಈ ಸನಾತನ ಧರ್ಮವನ್ನು ಹೋಲಿಸಿದ್ದ ಉದಯ ನಿಧಿಯವರ ತಲೆ ಕಡಿದವರಿಗೆ ಹತ್ತು ಕೋಟಿ ರೂ ಬಹುಮಾನವನ್ನೂ ಕೂಡ ಉತ್ತರ ಭಾರತದ ಸಂತ (?) ನೊಬ್ಬ ಘೋಷಿಸಿದ್ದ. ಅದೇ ರೀತಿ ಉದಯ ನಿಧಿಯ ನಾಲಗೆ ಕತ್ತರಿಸುವ ಹೇಳಿಕೆಯನ್ನೂ ನಾಯಕರೊಬ್ಬರು ಆಡಿದ್ದಾರೆ. ಈ ಕುರಿತಂತೆ ದೇಶದ ಹಲವೆಡೆ ಸಂಸದ ಉದಯನಿಧಿಯವರ ವಿರುದ್ಧ ಕೇಸು ಕೂಡ ದಾಖಲಾಗಿದೆ. ಏನೇ ಆದರೂ ಈ ಉದಯನಿಧಿಯವರ ಮೂಲಕ ಕೆಲ ಮಾಧ್ಯಮಗಳು ಮತ್ತು ರಾಜಕಾರಣಿಗಳ ರೊಟ್ಟಿ ಜಾರಿ ತುಪ್ಪದಲ್ಲಿ ಬಿದ್ದದ್ದಂತೂ ಹೌದು. ಇದನ್ನೇ ನೆಪವಾಗಿಟ್ಟುಕೊಂಡು ಜನರನ್ನು ಭಾವನಾತ್ಮಕವಾಗಿ  ಕೆರಳಿಸುವ ಪ್ರಯತ್ನಗಳು ಸಾಕಷ್ಟು ನಡೆದವು. ಅಷ್ಟಕ್ಕೂ ಈ ಸನಾತನದ ಮೂಲವಾದರೂ ಏನು?

ಅಷ್ಟಕ್ಕೂ ಈ ಸನಾತನದ ಮೂಲವಾದರೂ ಏನು?

ಭಾಷಾವಿಜ್ಞಾನದ ಪ್ರಕಾರ ಈ ಸನಾತನ ಎನ್ನುವುದು ದೊಡ್ಡದು-ಸಣ್ಣದು, ಹಳತು ಹೊಸತು, ಹಿರಿಯ-ಕಿರಿಯ ರೀತಿಯ ಒಂದು ಸಾಮಾನ್ಯ ವಿಶೇಷಣ ಪದವಷ್ಟೆ. ಶಾಶ್ವತವಾದದ್ದು, ಅನಾದಿ ಅನಂತತೆಯ ಕುರಿತಾದದ್ದು, ಪ್ರಚಲಿತ ಮತ್ತು ಪುರಾತನವಾದದ್ದು ಎಂಬ ಅರ್ಥದಲ್ಲಿ ಈ ಸನಾತನ ಪದ ಪ್ರಾಚೀನ ಸಾಹಿತ್ಯಗಳಲ್ಲಿ ಸಾಂದರ್ಭಿಕವಾಗಿ ಹಲವೆಡೆ ಬಳಕೆಯಾಗಿದೆ. ಅಷ್ಟೇ ಯಾಕೆ, ಈ ಸನಾತನ ಎಂಬ ಹೆಸರುಳ್ಳ ವ್ಯಕ್ತಿಗಳೂ ಕೂಡ ಪೌರಾಣಿಕ ಸಾಹಿತ್ಯದಲ್ಲಿ ಸಿಗುತ್ತಾರೆ. ಬ್ರಹ್ಮನ ಮಾನಸ ಪುತ್ರರಲ್ಲಿ ಸನಕ ಸನತ್ಕುಮಾರರಂತೆ ಸನಾತನ ಎನ್ನುವವನೂ ಕೂಡ ಒಬ್ಬ. ಶಿವಪುರಾಣದಲ್ಲೂ ಕೂಡ ಸನಾತನ ಎನ್ನುವ ಗಣಗಳ ನಾಯಕ ಶಿವದರ್ಶನಕ್ಕೆ ಬಂದ ಉಲ್ಲೇಖವಿದೆ. ಆದರೆ ಸನಾತನ ಹಾಗು ಆ ಹೆಸರಿಗೆ ಧರ್ಮದ ನಂಟನ್ನು ಅಂಟಿಸಿದ್ದು ಮಾತ್ರ ನಂತರದ ಬೆಳವಣಿಗೆಗಳಷ್ಟೆ.

ಒಂದು ಕಾಲದಲ್ಲಿ ಸಹ್ಯವಾಗಿ ಅಪ್ಪಿಒಪ್ಪಿಕೊಂಡಿದ್ದಂತಹ ’ಹಿಂದೂ” ಎನ್ನುವ ಪದ ಇತ್ತೀಚೆಗಿನ ದಿನಗಳಲ್ಲಿ ಅದು ಪರಕೀಯರು ಕೊಟ್ಟಂತಹ ಮ್ಲೇಚ್ಛ ಪದವಾಗಿ ಅನೇಕರಿಗೆ ಕಾಣಿಸಿದ್ದರಲ್ಲಿ ಅಚ್ಚರಿಯೇನೂ ಇಲ್ಲ. ಯಾಕೆಂದರೆ, ಹಿಂದಿನ ಸಾಮಾಜಿಕ ಅವಶ್ಯಕತೆಗಳೆನಿಸಿದ “ರೋಟಿ, ಕಪಡಾ ಔರ್ ಮಕಾನ್” (ಆಹಾರ, ಬಟ್ಟೆ ಮತ್ತು ಮನೆ) ಜಮಾನಾ ಇದೀಗ ಬದಲಾಗಿದ್ದು ಜನರ ಅದರಲ್ಲೂ ಯುವ ಪೀಳಿಗೆಯ ತಲೆಯಲ್ಲಿ ರೋಟಿ ಕಪಡಾ ಬದಲಿಗೆ ಧರ್ಮಾಧಾರಿತ ವಿಚಾರದ ಅಮಲನ್ನು ಹತ್ತಿಸಲಾಗಿದೆ. ಒಂದು ಕಾಲದ ಧರ್ಮಾಡಳಿತ (ಪುರೋಹಿತಶಾಹಿತ್ವ)ದ ತೀವ್ರ ಸಂತ್ರಸ್ಥರೆನಿಸಿದವರೂ ಕೂಡ ಇದೀಗ ಧರ್ಮವೇ ಎಲ್ಲಾ ಎಂಬಂತೆ ಮಾತನಾಡುತ್ತಿದ್ದಾರೆ. ಹಾಗಾಗಿ ಧರ್ಮದ ವಿಚಾರಗಳು ಕೊಡುವ ಟಿ ಆರ್‌ ಪಿಯಾಗಲೀ ಅದರಿಂದ ಬರಬಹುದಾದ ಓಟುಗಳಿಗಾಗಲೀ ಸದ್ಯಕ್ಕೆ ಅದರದ್ದೇ ಆದ ಹವಾ ಮತ್ತು ಮಾರುಕಟ್ಟೆ ಇದ್ದಿರುವುದು ಸ್ಪಷ್ಟ. ಈ ತನಕ ಸಹಜ ಎನ್ನುವಂತೆ ಚಾಲ್ತಿಯಲ್ಲಿದ್ದ ಹಿಂದೂ ಎನ್ನುವ ಪದ ಬಳಕೆಯ ಬದಲು ಇತ್ತೀಚೆಗಿನ ದಿನಗಳಲ್ಲಿ ಅದಕ್ಕೆ ಪರ್ಯಾಯವಾಗಿ ಸನಾತನ ಎನ್ನುವ ಪದಕ್ಕೆ ಹೆಚ್ಚು ಒತ್ತನ್ನು ನೀಡಲು ಪ್ರಯತ್ನಿಸಲಾಗುತ್ತಿದೆ.

ಹಿಂದೂ ಎನ್ನುವ ಪದವೇ ಪರಕೀಯವಾದದ್ದು

ಯಾವ ಹಿಂದೂ ಧಾರ್ಮಿಕ ಗ್ರಂಥಗಳಲ್ಲೂ ಕಾಣ ಸಿಗದ ಈ ಪದ ಪ್ರಾದೇಶಿಕ ಮೂಲದಿಂದ ಹುಟ್ಟಿಕೊಂಡಂತದ್ದು. ಅಷ್ಟೇ ಅಲ್ಲದೇ ಬಹಳ ಹಿಂದಿನಿಂದಲೂ ಚಾಲ್ತಿಯಲ್ಲಿದ್ದ ಈ ಪದವೂ ಕೂಡ ಶುದ್ಧ ರೂಪದಲ್ಲಿರದೇ ಮೂಲ ಸಿಂಧೂ ಪದದ ಅಪಭೃಂಶ ರೂಪದ್ದು. ಹಾಗಾಗಿ ಇತ್ತೀಚೆಗೆ ಸನಾತನ ಪದಬಳಕೆಯ ಬಗ್ಗೆ ಹೆಚ್ಚು ಒಲವನ್ನು ತೋರಲಾಗುತ್ತಿದೆ. ಹಾಗೆ ನೋಡಿದರೆ ಈ ಸನಾತನ ಎನ್ನುವ ಪದ ನಾವೀಗ ಕರೆಯಲ್ಪಡುವ ಹಿಂದೂ ಧರ್ಮದ ಮೂಲ ಹೆಸರೇ ? ಪ್ರಾಚೀನ ಧಾರ್ಮಿಕ ಸಾಹಿತ್ಯಗಳನ್ನು ಗಮನಿಸಿದರೆ ಕೇವಲ ಹಿಂದೂ ಸಾಹಿತ್ಯಗಳಷ್ಟೇ ಅಲ್ಲದೇ ಬೌದ್ಧ, ಜೈನ ಸಾಹಿತ್ಯಗಳಲ್ಲೂ ಕೂಡ ಈ ಸನಾತನ ಎನ್ನುವ ಪದದ ಬಳಕೆಯನ್ನು ಅಲ್ಲಲ್ಲಿ ಕಾಣಬಹುದು.

ಕೃತೇ ಚ ಪ್ರತಿಕರ್ತ್ವಮೇಷ ಧರ್ಮಾಃ ಸನಾತನಃ |

(ಯಾರಿಗಾದರೂ ಸಹಾಯ ಮಾಡಿದಲ್ಲಿ ಅದಕ್ಕೆ ಪ್ರತಿಯಾಗಿ ಸಹಾಯ ಮಾಡಿದಾತನಿಗೂ ಸಹಕಾರ ದೊರೆಯುವುದು ನಿಶ್ಚಿತ. ಇದು ಪ್ರಚಲಿತ ಧರ್ಮ) – ವಾಲ್ಮೀಕಿ ರಾಮಾಯಣ: ಸುಂದರಕಾಂಡ 1 ಪದ್ಯ 114.

ಅದ್ರೋಹ: ಸರ್ವಭೂತೇಷು ಕರ್ಮಣಾ ಮನಸಾ ಪತನ.

ಅನುಗ್ರಹಶ್ಚ ದಾನಂ ಚ ಸತತಂ ಧರ್ಮಃ ಸನಾತನಃ ||

(ಕಾಯಾ ವಾಚಾ ಮನಸಾ ಸಕಲ ಜೀವಿಗಳೊಂದಿಗೆ ಯಾವತ್ತೂ ದುಷ್ಕೃತ್ಯವನ್ನು ಮಾಡಬಾರದು ಮತ್ತು ಎಲ್ಲಾ ಜೀವಿಗಳಲ್ಲಿಯೂ ಕರುಣೆ ಮತ್ತು ಕೊಡುಗೈಯನ್ನು ತೋರಬೇಕು. ಇದು ಮಾನವ ಸಹಜ ಶಾಶ್ವತ ಧರ್ಮ.) – ಮಹಾಭಾರತ: ವನಪರ್ವ

ಸಚ್ಚಾ ವೇ ಅಮ್ತಾ ವಾಚಾ, ಧಮ್ಮೋ ಸನನ್ತನೋ।

ಸತ್ಯ ಮತ್ತು ಪರಿಶುದ್ಧವಾದ ಮಾತು, ಇದು ಸನಾತನ (ಶಾಶ್ವತ) ಧರ್ಮ – ಭೌದ್ಧರ ತ್ರಿಪಿಟಕ ಸುತ್ತಪಿಟಕ: ಖುದ್ದಕನಿಕಾಯ: ಸುಟ್ಟನಿಪಟ 3:3.

ತತ್ ಸರ್ವಪ್ರಯತ್ನೇ ರಕ್ಷಯೋ ಧರ್ಮಃ ಸನಾತನಃ ।

ಸರ್ವ ಪ್ರಯತ್ನಗಳ ಮೂಲಕ ಇಂತಹ ಸನಾತನ ಧರ್ಮವನ್ನು ರಕ್ಷಿಸಬೇಕು. – ಜೈನರ ಆದಿ ಪುರಾಣ 4:198.

ಇಲ್ಲಿ ಒಂದು ವಿಚಾರವನ್ನು ಮುಖ್ಯವಾಗಿ ಗಮನಿಸಬೇಕು. ಈ ಮಹಾಭಾರತ, ಗೀತೆ, ರಾಮಾಯಣಗಳಂತಹ ಪೌರಾಣಿಕ ಗ್ರಂಥಗಳಲ್ಲಿ ಉಲ್ಲೇಖವಾಗಿರುವ “ಧರ್ಮ’ ವೆಂದರೆ ಖಂಡಿತಾ ಮತ(ರಿಲೀಜನ್)ಗಳಲ್ಲ. ಯಾಕೆಂದರೆ, ಮುಸ್ಲಿಮ್, ಕ್ರಿಶ್ಚಿಯನ್ನರ ವಿಚಾರ ಇಂದಿನಂತೆ ಆಗಿನ ಭಾರತದಲ್ಲಿ ಇದ್ದಿರಲೇ ಇಲ್ಲ. ಇಲ್ಲಿನ ಆ ’ಧರ್ಮ” ಕೇವಲ ನಡೆ, ನುಡಿ, ಆಚಾರ, ವಿಚಾರ, ಮಾನವ ಸಹಜ ಪರಂಪರೆಗೆ ಸಂಬಂಧಿಸಿದ್ದವುಗಳಷ್ಟೆ. ಆದರೆ ಇಲ್ಲಿ ಉಲ್ಲೇಖಿತವಾದ ಧರ್ಮಗಳನ್ನ ಇವತ್ತಿನ ದಿನಗಳಲ್ಲಿ ರಿಲೀಜನ್ ಗಳೆಂದು ಬೇಕಂತಲೇ ತಿರುಚಿ ವಿಶ್ಲೇಷಿಸಲಾಗುತ್ತಿದೆ. ಉದಾಹರಣೆಗೆ ಗೀತೆಯಲ್ಲಿ ಬರುವ ಪ್ರಸಿದ್ಧವಾದ ಶ್ರೀಕೃಷ್ಣ ಅರ್ಜುನನಿಗೆ ಹೇಳಿದಂತಹ “ಸ್ವಧರ್ಮೇ ನಿಧನಂ ಶ್ರೇಯಃ ಪರಧರ್ಮ ಭಯಾವಹಃ“ ಆಗಲೀ ಮಹಾಭಾರತದಲ್ಲಿ ಬರುವ “ಧರ್ಮೋ ರಕ್ಷತಿ ರಕ್ಷಿತಃ“ ದಲ್ಲಾಗಲೀ ಮೂಲತಃ ಹೇಳುವುದು ಇಂದು ಉಲ್ಲೇಖಿಸಲ್ಪಡುವ ಧರ್ಮ (ರಿಲೀಜನ್) ಅಲ್ಲವೇ ಅಲ್ಲ. ಅದು ಹೇಳುವುದು ಕೇವಲ ಮಾನವನ ಗುಣ ಸ್ವಭಾವದ ಕುರಿತಂತೆ ಅಷ್ಟೆ. ಆದರೆ ಇಂದಿನ ತಿರುಚಲ್ಪಟ್ಟ ವ್ಯಾಖ್ಯಾನಗಳೇ ಬೇರೆ.

ನೀನು ಶಸ್ತ್ರವಿದ್ಯಾ ಪಾರಂಗತ. ಬಿಲ್ವಿದ್ಯೆಯಲ್ಲಿ ನಿನ್ನ ಮೀರುವವರೇ ಇಲ್ಲ. ಎಷ್ಟೋ ವೈರಿಗಳನ್ನು ನಿನ್ನ ಶಸ್ತ್ರ ವಿದ್ಯೆಯ ಪರಿಣತಿಯಿಂದ ಸದೆ ಬಡಿದಿರುವೆ ಅಂತಹ ವೀರನಾದ ನೀನೇ ಈ ರೀತಿ ಯುದ್ಧಕ್ಕೆ ಹಿಂಜರಿದರೆ ಹೇಗೆ? ನಿನ್ನ ಶೌರ್ಯವನ್ನು ಇಲ್ಲೀಗ ಪ್ರದರ್ಶಿಸು ಎನ್ನುವ ಅರ್ಥದಲ್ಲಿ ಅರ್ಜುನನಿಗೆ ಆತನಿಗೆ ತಕ್ಕ ’ಸ್ವಧರ್ಮ”ದ ಬಗ್ಗೆ ಗೀತೆಯಲ್ಲಿ ಶ್ರೀಕೃಷ್ಣ ಹೇಳಿದರೆ ಈಗ ಈ ಸ್ವಧರ್ಮೇ ನಿಧನಂ ಶ್ರೇಯಃ ಪರಧರ್ಮ ಭಯಾವಹಃ ಶ್ಲೋಕವನ್ನು ಕ್ರಿಶ್ಚಿಯನ್ನರ ಮತಾಂತರದ ವಿರುದ್ಧದ ಭಾಷಣಗಳಲ್ಲಿ ಸಾಮಾನ್ಯವಾಗಿ ಬಳಸಲಾಗುತ್ತಿದೆ. ಅದೇ ರೀತಿ, ಸುಪ್ರಸಿದ್ಧವಾದ ಧರ್ಮೋ ರಕ್ಷತಿ ರಕ್ಷಿತಃ ಸಹ ’ನಿನ್ನಯ ಒಳ್ಳೆಯ ಕಾರ್ಯಗಳು ಯಾವತ್ತಿಗೂ ನಿನ್ನನ್ನು ರಕ್ಷಿಸುತ್ತದೆ” ಎಂಬ ಭಾವಾರ್ಥವನ್ನ ಹೊಂದಿದೆಯೇ ಹೊರತು ಧರ್ಮವನ್ನು ಗುತ್ತಿಗೆ ಹಿಡಿದಂತೆ ಹೋರಾಡುತ್ತಿರಿ (ಅನ್ಯ ಧರ್ಮೀಯರ ವಿರುದ್ಧ) ನಿಮಗದು ಒಳ್ಳೆಯದು ಮಾಡುತ್ತದೆ ಎಂದಲ್ಲ. ಇದೇ ರೀತಿಯಲ್ಲಿ ಪುರಾಣ ಗ್ರಂಥಗಳಲ್ಲಿ ಉಲ್ಲೇಖವಾಗಿರುವ ’ಧರ್ಮ ಸನಾತನ”ವೂ ಕೂಡ ಯಾವುದೇ ಒಂದು ಧರ್ಮದ ಕುರಿತಂತೆ ಹೇಳಿದ್ದು ಖಂಡಿತಾ ಅಲ್ಲ. ಒಂದು ವೇಳೆ ಅದೇ ಆಗಿದ್ದಿದ್ದರೆ ಆಗ ಭಾರತದಲ್ಲಿದ್ದ ನಾಥ ಪರಂಪರೆ, ಜೈನ, ಬೌದ್ಧ, ಕಾಪಾಲಿಕ, ಗಾಣಪತ್ಯ, ಶಾಕ್ತ, ವೈದಿಕ ಅಲ್ಲದೇ ಅನೇಕ ಬುಡಕಟ್ಟು ಸಮುದಾಯಗಳಲ್ಲಿನ ಯಾವ ಪರಂಪರೆಯನ್ನು ಅದು ಸೂಚಿಸಬೇಕಿತ್ತು?

ಹಿಂದೂ ಪದವನ್ನು ಮುಸಲ್ಮಾನ ದೊರೆಗಳು ಸ್ಥಳೀಯ ಜನರನ್ನ ಗುರುತಿಸುವಲ್ಲಿ ಸಾರ್ವತ್ರಿಕವಾಗಿ ಬಳಸಿದರೆ (ಈ ದೇಶಕ್ಕೆ ಹಿಂದೂಸ್ಥಾನ ಎಂದು ಕರೆದವರೂ ಅವರೇ) ನಂತರ ಅಧಿಕಾರ ಹಿಡಿದ ಬ್ರಿಟಿಷರು ಅದನ್ನು ತಮ್ಮ ಆಡಳಿತ ಅನುಕೂಲತೆಗಾಗಿ ಮಾಡಿಕೊಂಡ ಸುಲಭದ ವರ್ಗೀಕರಣದ ನೆಪದಲ್ಲಿ ಮುಸ್ಲಿಮ್, ಕ್ರಿಶ್ಚಿಯನ್ ಧರ್ಮೀಯರನ್ನು ಹೊರತು ಪಡಿಸಿ ಬಹುತೇಕ ಎಲ್ಲಾ ಸಮುದಾಯವನ್ನು ಹಿಂದೂ ಸಮುದಾಯದ ಅಡಿಯಲ್ಲಿ ಅಧಿಕೃತವಾಗಿ ಸೇರಿಸಿ ಬಿಟ್ಟರು. ಅದೃಷ್ಟವಶಾತ್ ಇಲ್ಲಿನ ಜೈನ, ಬೌದ್ಧ, ಸಿಖ್ಖರಂತಹ ಕೆಲ ಧರ್ಮಗಳು ಹೀಗಿದ್ದೂ ಕೂಡ ಪ್ರತ್ಯೇಕವಾಗೇ ಗುರುತಿಸಿಕೊಳ್ಳುವಲ್ಲಿ ಯಶಸ್ವಿಯಾದವು. ವಾಸ್ತವದಲ್ಲಿ ಬ್ರಿಟಿಷರಿಗೂ ಸಹ ದೇಶದಲ್ಲಿದ್ದ ಸಾವಿರಾರು ಮತ ವಿಭಾಗಗಳನ್ನು ಸರಿಯಾಗಿ ವಿಂಗಡಿಸುವುದು ಸುಲಭದ ಮಾತೇನಲ್ಲ ಎಂಬ ಅರಿವಿತ್ತು. ಹಾಗಾಗಿ ಸಾರಾಸಗಟಾಗಿ ಬಹುಸಂಖ್ಯಾತ ಶೂದ್ರ ಪಂಗಡವನ್ನೂ ಸಹ ಸಂಬಂಧವೇ ಇರದ ವೈದಿಕ ಹಿನ್ನೆಲೆಯ ಹಿಂದೂ ಸಮುದಾಯದೊಳಗೆ ಧಾರ್ಮಿಕ ವರ್ಗೀಕರಣದ ನೆಪದಲ್ಲಿ ಸೇರಿಸಿಯೇ ಬಿಟ್ಟರು.

ಇದು ಬ್ರಿಟಿಷರು ಮಾಡಿದಂತಹ ತಪ್ಪು. ಈ ಕಾರಣಕ್ಕೆ ಇಂದಿಗೂ ಕೂಡ ಲಿಂಗಾಯತದಂತಹ ಕೆಲ ಸಮುದಾಯಗಳ ಪ್ರತ್ಯೇಕ ಧರ್ಮದ ಕೂಗು ಕೇಳಿಬರುವುದನ್ನ ಆಗಾಗ ನೋಡಿರುತ್ತೇವೆ. ಸಂಸದ ಉದಯನಿಧಿಯವರ ಮಾತಿನಲ್ಲೂ ಕೂಡ ಈ ರೀತಿ ವಿಭಿನ್ನ ಪರಂಪರೆಯ ದ್ರಾವಿಡ ಸಂಸ್ಕೃತಿಯೊಂದು ಮೇಲು ಕೀಳಿನ ವೈದಿಕ ಸಂಸ್ಕೃತಿಯೊಳಗೆ ಲೀನಗೊಂಡಿರುವ ಪ್ರಕ್ರಿಯೆಯ ಕುರಿತ ಅಸಹನೆಯನ್ನು ಗುರುತಿಸಬಹುದು.

ಸನಾತನ ಧರ್ಮ ಡೆಂಗ್ಯು ಮಲೇರಿಯಾದಂತೆ, ಅದನ್ನು ನಿರ್ಮೂಲನ ಮಾಡಬೇಕೆನ್ನುವ ಉದಯ ನಿಧಿಯವರ ಮಾತು ಕಟುವಾಗಿದ್ದಿರಬಹುದು. ಆದರೆ, ಇಂತಹ ಅಸಹನೆಯ ಮಾತುಗಳು ನಮ್ಮ ಧರ್ಮದೊಳಗಿಂದಲೇ ಯಾಕೆ ಹಿಂದಿನಿಂದ ಇವತ್ತಿನ ತನಕ ಬರುತ್ತಲೇ ಇವೆ? ಎಂಬುದನ್ನ ಸಂಬಂಧ ಪಟ್ಟ ಧಾರ್ಮಿಕ ಧುರೀಣರು, ತಲೆ ಕಡಿಯುವ ಸಂತರುಗಳು ವಿಶ್ಲೇಷಿಸಿ ಅವಲೋಕಿಸುವ ಬದಲು ಆತನ ತಲೆ ಕಡಿಯಿರಿ ಆತನ ನಾಲಗೆ ಕತ್ತರಿಸಿ ಎಂದರೆ ಅದರಿಂದ ಸನಾತನ ಧರ್ಮದ ಮುಖವಾಡ ಮತ್ತಷ್ಟು ಅನಾವರಣ ಗೊಳ್ಳುತ್ತದೆಯೇ ಹೊರತು ಉದಯನಿಧಿಯವರದ್ದಂತೂ ಖಂಡಿತಾ ಅಲ್ಲ.

ಚಾಮರಾಜನಗರದಲ್ಲಿ ದಲಿತ ಮಹಿಳೆ ನೀರು ಕುಡಿದಳೆಂದು ನೀರಿನ ಇಡೀ ಟ್ಯಾಂಕ್ ಖಾಲಿ ಮಾಡಿ ಅದನ್ನು ಗೋಮೂತ್ರದಿಂದ ತೊಳೆದಾಗ, ಕುದುರೆ ಏರಿದ ಎಂದು ದಲಿತ ಮದುಮಗನನ್ನು ಸವರ್ಣೀಯರು ಥಳಿಸಿದಾಗ, ಮೀಸೆ ಬಿಟ್ಟ ನೆಪಕ್ಕೆ ದಲಿತನನ್ನು ಕೊಂದಾಗ, ದಲಿತನ ಮೈಮೇಲೆ ಉಚ್ಚೆ ಹೊಯ್ದು ಅವಮಾನಿಸಿದಾಗ, ಮಲ ತಿನ್ನಿಸಿದಾಗ, ಅತ್ಯಾಚಾರಗಳು ನಡೆದಾಗ, ಮದುವೆ ಮನೆಯಲ್ಲಿ ಡಿಜೆ ಹಾಕಿದ್ದಕ್ಕೆ ಪೊಲೀಸ್ ದಾಳಿ ನಡೆಸಿದಾಗ, ದೇವಸ್ಥಾನ ಪ್ರವೇಶಿಸಿದ ಎಂದು ಬಡಿದು ಕೊಲೆ ಮಾಡಿದಾಗ, ಏನೂ ಅರಿಯದ ಮುಗ್ಧ ದಲಿತ ಮಗು ದೇಗುಲ ಪ್ರವೇಶಿಸಿತೆಂದು ಇಪ್ಪತ್ತೈದು ಸಾವಿರ ರೂ ದಂಡ ಹಾಕಿದಾಗ, ದಲಿತ ಕಾರ್ಯಕರ್ತೆ ಅಡುಗೆ ಮಾಡಿದಳೆಂದು ಹೆತ್ತವರ ಕುಮ್ಮಕ್ಕಿನಿಂದ ಶಾಲೆಯಲ್ಲಿ ಮಕ್ಕಳು ಊಟ ಮಾಡದೇ ಅನ್ನವನ್ನು ತಿರಸ್ಕಾರ ಮಾಡಿದಾಗ ಇಂತವಕ್ಕೆಲ್ಲ ಇದೀಗ ಉದಯನಿಧಿಯ ತಲೆಕಡಿಯಲು ಮತ್ತು ನಾಲಗೆ ಕತ್ತರಿಸಲು ಹೊರಟಂತವರು (ಸಾಮಾಜಿಕ ಜಾಲತಾಣಗಳಲ್ಲಿ ಉದಯ ನಿಧಿಯವರ ವಿರುದ್ಧ ಮುಗಿಬಿದ್ದವರೂ ಕೂಡ) ಎಂದಾದರೂ ಮಾತನಾಡಿದ್ದುಂಟೇ..? ಕತ್ತಿ ಹಿರಿದದ್ದುಂಟೇ..!?

ಮೊದಲು ಈ ಡೆಂಗ್ಯು ಮಲೇರಿಯಾಗಳ ಹೆಸರು ಯಾಕೆ ಸನಾತನದೊಂದಿಗೆ ಪ್ರಸ್ತಾಪಗೊಂಡಿತೆಂಬ ವಿಚಾರವನ್ನು ಶಾಂತವಾಗಿ ಕೂತು ಅವಲೋಕನ ಮಾಡಿ ನಂತರ ಕತ್ತಿಯೋ, ಕತ್ತರಿ ಮತ್ತೇನನ್ನೋ ಹಿಡಿದು ಹೊರಡುವುದುತ್ತಮ ಅಲ್ಲವೇ.

ಶಂಕರ್ ಸೂರ್ನಳ್ಳಿ

ಇದನ್ನೂ ಓದಿ- ಸನಾತನ ಧರ್ಮ ಮತ್ತು ಉದಯನಿಧಿ ಹೇಳಿಕೆ | ಶುದ್ಧಿಗೊಳ್ಳಬೇಕಾದವರು ಯಾರು?

You cannot copy content of this page

Exit mobile version