Home ಇನ್ನಷ್ಟು ಕೋರ್ಟು - ಕಾನೂನು ಚುನಾವಣಾ ಬಾಂಡ್‌ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ತಲುಪಿದ SBI, ಇದು ಮೋದಿ ಸರ್ಕಾರದ ಕಾಲ ಕಳೆಯುವ...

ಚುನಾವಣಾ ಬಾಂಡ್‌ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ತಲುಪಿದ SBI, ಇದು ಮೋದಿ ಸರ್ಕಾರದ ಕಾಲ ಕಳೆಯುವ ಆಟವೇ?

0

ಫೆಬ್ರವರಿ 15ರಂದು, ಸುಪ್ರೀಂ ಕೋರ್ಟ್ ತನ್ನ ಐತಿಹಾಸಿಕ ತೀರ್ಪಿನಲ್ಲಿ ರಾಜಕೀಯ ಪಕ್ಷಗಳಿಗೆ ಧನಸಹಾಯ ನೀಡಲು ತರಲಾದ ಚುನಾವಣಾ ಬಾಂಡ್ ಯೋಜನೆಯನ್ನು ಅಸಾಂವಿಧಾನಿಕ ಎಂದು ಘೋಷಿಸಿತು. ಆ ಬಾಂಡುಗಳನ್ನು ಖರೀದಿಸಿದ ಜನರು ಮತ್ತು ನಂತರ ಅವುಗಳನ್ನು ನಗದೀಕರಿಸಿದ ರಾಜಕೀಯ ಪಕ್ಷಗಳ ಬಗ್ಗೆ ಮಾರ್ಚ್ 6ರೊಳಗೆ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡುವಂತೆ ನ್ಯಾಯಾಲಯವು  ತನ್ನ ತೀರ್ಪಿನಲ್ಲಿ SBI ಬ್ಯಾಂಕಿಗೆ ಸೂಚಿಸಿತ್ತು.

ಈಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)  ಚುನಾವಣಾ ಬಾಂಡ್ ಪ್ರಕರಣದಲ್ಲಿ ಮಾರ್ಚ್ 6ರ ಗಡುವನ್ನು ವಿಸ್ತರಿಸುವಂತೆ ಕೋರಿ ಸುಪ್ರೀಂ ಕೋರ್ಟನ್ನು ಸಂಪರ್ಕಿಸಿದೆ. ಏಪ್ರಿಲ್ 12, 2019ರ  ನಂತರ ಖರೀದಿಸಿದ ಚುನಾವಣಾ ಬಾಂಡ್‌ಗಳ ಬಗ್ಗೆ ಚುನಾವಣಾ ಆಯೋಗಕ್ಕೆ  ಮಾಹಿತಿ ನೀಡುವಂತೆ  ಸುಪ್ರೀಂ ಕೋರ್ಟ್ SBIಗೆ ಸೂಚಿಸಿತ್ತು  ಮತ್ತು ಮುಂದಿನ ಒಂದು ವಾರದೊಳಗೆ ಅಂದರೆ ಮಾರ್ಚ್ 13ರೊಳಗೆ ಚುನಾವಣಾ ಆಯೋಗವು  ಅದನ್ನು ತನ್ನ ಅಧಿಕೃತ ವೆಬ್ಸೈಟಿನಲ್ಲಿ ಪ್ರಕಟಿಸಬೇಕು ಎಂದೂ ಹೇಳಿತ್ತು.

ಯಾವ ರಾಜಕೀಯ ಪಕ್ಷ ಮತ್ತು ಯಾವ ವ್ಯಕ್ತಿ ಅಥವಾ ಕಂಪನಿ ಚುನಾವಣಾ ಬಾಂಡ್‌ಗಳ ಮೂಲಕ ಎಷ್ಟು ದೇಣಿಗೆ ನೀಡಿದೆ ಎಂಬುದನ್ನು ಜನರು ತಿಳಿದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಬಯಸಿದೆ. ಆದರೆ ಇದು ಸದ್ಯದಲ್ಲಿ ಆಗುವಂತೆ ಕಾಣುತ್ತಿಲ್ಲ. ಇಂದು ಮಾರ್ಚ್‌ ತಿಂಗಳ 5ನೇ ದಿನ.  ಮಾರ್ಚ್ 6ರೊಳಗೆ SBI ಸಂಪೂರ್ಣ ಮಾಹಿತಿಯನ್ನು ನೀಡಬೇಕಾಗಿತ್ತು, ಆದರೆ ಈ ಮಾಹಿತಿಯನ್ನು ಸಂಗ್ರಹಿಸಲು ಸುಪ್ರೀಂ ಕೋರ್ಟ್ ನೀಡಿದ 3 ವಾರಗಳ ಸಮಯವು ಸಾಕಾಗುವುದಿಲ್ಲ ಎಂದು ಬ್ಯಾಂಕ್‌ ಹೇಳಿದ್ದು,  ಗಡುವನ್ನು ಜೂನ್ 30 ರವರೆಗೆ ವಿಸ್ತರಿಸಲು ಮನವಿ ಸಲ್ಲಿಸಿದೆ.

SBI ಹೇಳಿರುವ ಕಾರಣಗಳೇನು?

ಮೊದಲನೆಯದಾಗಿ, ಯಾರಿಗೆ ದೇಣಿಗೆಗಳ  ಮೊತ್ತವನ್ನು ನೀಡಲಾಗಿದೆಯೆನ್ನುವುದುನ್ನು ಪತ್ತೆಹಚ್ಚುವುದಕ್ಕೆ ಮತ್ತು ಹೊಂದಿಸುವುದಕ್ಕೆ ಸಮಯ ತೆಗೆದುಕೊಳ್ಳುತ್ತದೆ ಮತ್ತು ಒಂದು, ಇದು ತೊಡಕಿನ ಪ್ರಕ್ರಿಯೆಯಾಗಿರುವುದರಿಂದ,  ನ್ಯಾಯಾಲಯವು ಅದಕ್ಕೆ ಹೆಚ್ಚಿನ ಸಮಯವನ್ನು ನೀಡಬೇಕು ಎಂದು ಸ್ಟೇಟ್ ಬ್ಯಾಂಕ್ ಹೇಳುತ್ತದೆ.

SBI ಪ್ರಕಾರ, ಅದು 22,217 ಚುನಾವಣಾ ಬಾಂಡ್‌ಗಳನ್ನು ಡಿಕೋಡ್ ಮಾಡಬೇಕಾಗುತ್ತದೆ. ಇದಕ್ಕಾಗಿ, ಸ್ಟೇಟ್ ಬ್ಯಾಂಕ್ ಅವುಗಳನ್ನು ಡಿಕೋಡ್ ಮಾಡಬೇಕು, ಕಂಪೈಲ್ ಮಾಡಬೇಕು ಮತ್ತು ನಂತರ ಅವುಗಳನ್ನು ಹೊಂದಿಸಬೇಕು ಎಂದು ಹೇಳುತ್ತದೆ.

ಈ ರೀತಿಯಾಗಿ, ಒಟ್ಟು  44 ಸಾವಿರ 434 ದಾಖಲೆಗಳನ್ನು ಪರಿಶೀಲಿಸಬೇಕಾಗುತ್ತದೆ.  ಅಂತಹ 22 ಸಾವಿರ 217 ದಾಖಲೆಗಳಲ್ಲಿ ಬಾಂಡ್‌ಗಳನ್ನು ಖರೀದಿಸುವವರ ಬಗ್ಗೆ ಮಾಹಿತಿ ಇದ್ದರೆ, 22,217 ದಾಖಲೆಗಳಲ್ಲಿ ಆ ಬಾಂಡ್‌ಗಳನ್ನು ನಗದೀಕರಿಸಿದವರ ಮಾಹಿತಿಯಿದೆ.

ಬ್ಯಾಂಕ್‌ ನೀಡಿರುವ ಇನ್ನೊಂದು ಕಾರಣವೆಂದರೆ SBI ಹೇಳುವಂತೆ ಈ ಯೋಜನೆಯಡಿ ದಾನಿಗಳ ಹೆಸರನ್ನು ಅನಾಮಧೇಯವಾಗಿ ಇಡಲಾಗಿದೆ. ಅವರ ಹೆಸರುಗಳನ್ನು ಬಹಿರಂಗಪಡಿಸಲು ಬ್ಯಾಂಕ್‌ ಡಿಕೋಡಿಂಗ್‌ ಮಾಡಬೇಕಾಗುತ್ತದೆ. ಇದರ ನಂತರ ಆ ಬಾಂಡ್‌ಗಳನ್ನು ಪಡೆದ ಪಕ್ಷಗಳೊಡನೆ ಹೊಂದಿಸಿ ನೋಡುವುದು ಬಹಳ ಸಂಕೀರ್ಣ ಪ್ರಕ್ರಿಯೆ.

ಡಿಕೋಡಿಂಗ್ ಸಮಯದಲ್ಲಿ ಕೆಲವು ಪ್ರಾಯೋಗಿಕ ತೊಂದರೆಗಳನ್ನು ಉಲ್ಲೇಖಿಸಿ, SBI ಈ ಗಡುವನ್ನು  ಜೂನ್ 30ರವರೆಗೆ ವಿಸ್ತರಿಸಬೇಕೆಂದು ಸುಪ್ರೀಂ ಕೋರ್ಟ್ ಬಳಿ ಮನವಿ ಮಾಡಿದೆ.

ಸುಪ್ರೀಂ ಕೋರ್ಟಿಗೆ ಸಲ್ಲಿಸಲಾದ ಅರ್ಜಿಯಲ್ಲಿ SBI 2018ರ ಅರ್ಜಿಯ ಕುರಿತು ಮಾಹಿತಿ ನೀಡಿದ್ದು, ಈ ಯೋಜನೆಯನ್ನು ಜಾರಿಗೆ ತರುವ ಸಲುವಾಗಿ ಹೊಸ SOP ಸಿದ್ಧಪಡಿಸಲಾಗಿತ್ತು ಎಂದು ತಿಳಿಸಿದೆ. ಇದರ ಪ್ರಕಾರಣ ದೇಶದ 29 SBI ಶಾಖೆಗಳಲ್ಲಿ ಮಾತ್ರವೇ ಇದರ ಖರೀದಿ ಮತ್ತು ನಗದೀಕರಣ ಸಾಧ್ಯವಿದೆ.

ಸಮಸ್ಯೆಯಿರುವುದು ಇಲ್ಲಿಯೇ ಎನ್ನುತ್ತದೆ ಬ್ಯಾಂಕು. 29 ಶಾಖೆಗಳಲ್ಲಿ ಖರೀದಿ ಮತ್ತು ನಗದೀಕರಣವಾಗಿರು ಈ ಬಾಂಡ್‌ಗಳ ವಿವರ ಒಂದೇ ಶಾಖೆಯಲ್ಲಿ ಲಭ್ಯವಿಲ್ಲ. ಅಲ್ಲದೆ ಬಾಂಡ್‌ ಖರೀದಿ ಮತ್ತು ನಗದೀಕರಿಸಲಾದ ಮಾಹಿತಿಗಳನ್ನು ಬೇರೆ ಬೇರೆ ಕಡೆ ಇರಿಸಲಾಗಿದೆ. ಹೀಗಾಗಿ ಇವುಗಳನ್ನು ಡಿಕೋಡ್‌ ಮಾಡಿ ನಂತರ ಕಂಪೈಲ್‌ ಮಾಡಿ ಮತ್ತೆ ಹೋಲಿಸಿ ನೋಡುವುದು ಒಂದು ಸಂಕೀರ್ಣ ಪ್ರಕ್ರಿಯೆ ಎನ್ನುವುದು ಬ್ಯಾಂಕಿನ ವಾದ.

ನಾಲ್ಕನೆಯದಾಗಿ SBI ಇನ್ನೊಂದು ಅಡಚಣೆಯನ್ನುಸಹ ವಿವರಿಸಿದೆ. ಸ್ಟೇಟ್‌ ಬ್ಯಾಂಕ್‌ ಹೇಳುವಂತೆ ರಾಜಕೀಯ ಪಕ್ಷಗಳು ಬಾಂಡನ್ನು ನಗದೀಕರಿಸಿದ ಸಮಯದಲ್ಲಿ ಅದರ ಮೂಲ ಬಾಂಡ್‌ ಮತ್ತು ಪೇ ಇನ್‌ ಸ್ಲಿಪ್ಪನ್ನು ಮುಂಬೈ SBIಯ ಮುಖ್ಯ ಶಾಖೆಗೆ ಮುಚ್ಚಿದ ಲಕೋಟೆಯಲ್ಲಿ ಕಳುಹಿಸಲಾಗಿದೆ. ಇಲ್ಲಿ ಕೆಲವು ಮಾಹಿತಿಗಳು ಭೌತಿಕ ರೂಪದಲ್ಲಿದ್ದರೆ ಇನ್ನೂ ಕೆಲವು ಡಿಜಿಟಲ್‌ ರೂಪದಲ್ಲಿವೆ. ಬ್ಯಾಂಕಿಗೆ ಇವೆಲ್ಲವನ್ನೂ ಒಂದೆಡೆ ಸೇರಿಸಿ ಕಂಪೈಲ್‌ ಮಾಡಲು ಸಮಯ ಬೇಕಾಗುತ್ತದೆ ಎಂದು ಅದು ಹೇಳಿದೆ.

SBI ಅರ್ಜಿಗೆ ಬಂದ ಪ್ರತಿಕ್ರಿಯೆಗಳು

SBI ಸುಪ್ರೀಂ ಕೋರ್ಟಿನಲ್ಲಿ ಗಡುವನ್ನು ವಿಸ್ತರಿಸುವಂತೆ ಕೋರಿ ಅರ್ಜಿ ಸಲ್ಲಿಸಿದ ಕೂಡಲೇ, ಜಗದೀಪ್ ಛೋಕರ್ (ಎಡಿಆರ್ ಸ್ಥಾಪಕ ಸದಸ್ಯ) ಸಾಮಾಜಿಕ ಮಾಧ್ಯಮದ ಮೂಲಕ ಚುನಾವಣಾ ರಾಜಕೀಯದಲ್ಲಿ ಪಾರದರ್ಶಕತೆಗಾಗಿ ಕೆಲಸ ಮಾಡುವ ಸಂಸ್ಥೆಯಾದ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ (ಎಡಿಆರ್) SBI ಸಲ್ಲಿಸಿರುವ ಅರ್ಜಿಯನ್ನು ವಿರೋಧಿಸುತ್ತದೆ ಎಂದು ಹೇಳಿದರು. ಎಡಿಆರ್ ಚುನಾವಣಾ ಬಾಂಡ್‌ಗಳ ವಿರುದ್ಧ ಅತ್ಯಂತ ದಕ್ಷವಾಗಿ ಹೋರಾಡಿತು.

ಚುನಾವಣಾ ಬಾಂಡ್ ಯೋಜನೆಯ ವಿರುದ್ಧ ಸುಪ್ರೀಂ ಕೋರ್ಟಿನಲ್ಲಿ ಅರ್ಜಿದಾರರನ್ನು ಪ್ರತಿನಿಧಿಸಿದ ವಕೀಲ ಪ್ರಶಾಂತ್ ಭೂಷಣ್, SBI ಅರ್ಜಿಯ ಹಿಂದೆ ಮೋದಿ ಸರ್ಕಾರವಿದೆ ಎನ್ನುವ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಈ ಅರ್ಜಿಯನ್ನು ತಾನು ಈಗಾಗಲೇ ನಿರೀಕ್ಷಿಸಿದ್ದೆ ಎಂದು ಪ್ರಶಾಂತ್ ಭೂಷಣ್ ಹೇಳಿದ್ದಾರೆ.

ಎಲೆಕ್ಟ್ರೋಲ್‌ ಬಾಂಡ್‌ಗಳ ಮೂಲಕ ದಾನಿಯೊಬ್ಬರು ಎಷ್ಟು ದೇಣಿಗೆ ನೀಡಿದ್ದಾರೆನ್ನುವುದನ್ನು ಬಹಿರಂಗಪಡಿಸುವುದಕ್ಕೆ ಸಮಯ ಕೋರಿ ಮೋದಿ ಸರ್ಕಾರ SBI ಮೂಲಕ ಅರ್ಜಿ ಸಲ್ಲಿಸಿದೆ ಎಂದು ಪ್ರಶಾಂತ್‌ ಭೂಷಣ್‌ ಆರೋಪಿಸಿದ್ದಾರೆ.

ಭೂಷಣ್ ಅವರ ಪ್ರಕಾರ, ದಾನಿಗಳ ಪಟ್ಟಿ ಸಾರ್ವಜನಿಕವಾದರೆ, ಅನೇಕ ಲಂಚ ನೀಡಿ ಒಪ್ಪಂದಕ್ಕೆ ಸಹಿ ಹಾಕಿಸಿಕೊಳ್ಳುವವರು ಮತ್ತು ಅನುಕೂಲಗಳನ್ನು ಪಡೆಯುವವರ ಹೆಸರು ಬಹಿರಂಗವಾಗುತ್ತದೆ ಮತ್ತು ಸರ್ಕಾರವು ಇದಕ್ಕೆ ಹೆದರುತ್ತದೆ.

ಎಲೆಕ್ಟ್ರೋರಲ್‌ ಬಾಂಡ್‌ ಮತ್ತು ಸುಪ್ರೀಂ ಕೋರ್ಟ್‌ ತೀರ್ಪು

ಕಳೆದ ತಿಂಗಳು, ಐದು ನ್ಯಾಯಾಧೀಶರ ಸಂವಿಧಾನ ಪೀಠವು ಮೋದಿ ಸರ್ಕಾರದ ಮಹತ್ವಾಕಾಂಕ್ಷೆಯ ಚುನಾವಣಾ ಬಾಂಡ್ ಯೋಜನೆಯನ್ನು ಅಸಾಂವಿಧಾನಿಕ ಎಂದು ತಡೆಹಿಡಿದಿತ್ತು ಮತ್ತು ತಕ್ಷಣದಿಂದ ಜಾರಿಗೆ ಬರುವಂತೆ ತಡೆಹಿಡಿದಿತ್ತು. ಚುನಾವಣಾ ಬಾಂಡ್‌ ಎನ್ನುವುದು  2017ರಲ್ಲಿ  ಅಂದಿನ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ತಂದ ರಾಜಕೀಯ ಪಕ್ಷಗಳಿಗೆ ಚುನಾವಣಾ ಧನಸಹಾಯ ವ್ಯವಸ್ಥೆ.

ಈ ಯೋಜನೆಯಡಿ, ದಾನಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮೂಲಕವಷ್ಟೇ ಬಾಂಡ್ ಖರೀದಿಸಬಹುದು ಮತ್ತು ಅದನ್ನು ತಮ್ಮ ಆಯ್ಕೆಯ ಪಕ್ಷಕ್ಕೆ ನೀಡಬಹುದು. ಈ ಇಡೀ ಪ್ರಕ್ರಿಯೆಯಲ್ಲಿ, ದಾನಿಗಳ ಗುರುತನ್ನು ಗೌಪ್ಯವಾಗಿಡಲಾಗಿತ್ತು, ಆದರೆ ಇದು ಯಾವ ರೀತಿಯ ರಹಸ್ಯವೆಂದರೆ, ಯಾರು ಯಾರಿಗೆ ದಾನ ಮಾಡುತ್ತಿದ್ದಾರೆಂದು ಸರ್ಕಾರಕ್ಕೆ ತಿಳಿದಿರುತ್ತದೆ, ಆದರೆ ವಿರೋಧ ಪಕ್ಷಗಳು, ಪ್ರತಿಪಕ್ಷಗಳು ಮತ್ತು ಜನರಿಗೆ ಇದರ ಬಗ್ಗೆ ತಿಳಿಯುತ್ತಿರಲಿಲ್ಲ. ಇದರಿಂದಾಗಿ ಈ ಯೋಜನೆಯ ಕುರಿತು ಬಹಳಷ್ಟು ಪ್ರಶ್ನೆಗಳು ಎದ್ದಿದ್ದವು.

ನ್ಯಾಯಾಲಯವು ಈ ಕಾನೂನನ್ನು ಮಾಹಿತಿ ಹಕ್ಕು ಕಾಯ್ದೆಯ ಉಲ್ಲಂಘನೆ ಎಂದು ಪರಿಗಣಿಸಿತು ಮತ್ತು  2019ರ ನಂತರ  ಚುನಾವಣಾ ಬಾಂಡ್  ಮೂಲಕ ಯಾರು ಯಾರಿಗೆ ಎಷ್ಟು ದೇಣಿಗೆ ನೀಡಿದ್ದಾರೆ ಎಂಬುದನ್ನು ಮೂರು ವಾರಗಳಲ್ಲಿ ಬಹಿರಂಗಪಡಿಸುವಂತೆ ಕೇಳಿದೆ. ಸುಪ್ರೀಂ ಕೋರ್ಟ್ ತೀರ್ಪನ್ನು ವಿರೋಧ ಪಕ್ಷಗಳು ಬಹಿರಂಗವಾಗಿ ಸ್ವಾಗತಿಸಿವೆ.

ಎಲೆಕ್ಟ್ರೋರಲ್‌ ಬಾಂಡ್‌ ಬಂದ ನಂತರ ಎಲ್ಲ ಪಕ್ಷಗಳೂ ದೇಣಿಗೆ ಸ್ವೀಕರಿಸಿವೆಯಾದರೂ ಆಡಳಿತ ಪಕ್ಷವಾದ ಬಿಜೆಪಿ ಒಟ್ಟು ಮೊತ್ತದ ಶೇಕಡಾ 55ರಷ್ಟನ್ನು ದೇಣಿಗೆಯಾಗಿ ಸ್ವೀಕರಿಸಿದೆ ಎನ್ನುವುದು ವಿರೋಧ ಪಕ್ಷಗಳ ದೂರು.

ಮುಂದೇನು?

ಒಂದು ವೇಳೆ ಕೋರ್ಟ್‌ ನೀಡಿರುವ ಗಡುವನ್ನು ವಿಸ್ತಿರಿಸಿದರೆ ಅಷ್ಟು ಹೊತ್ತಿಗೆ ಲೋಕಸಭಾ ಚುನಾವಣೆ ಮುಗಿದಿರುತ್ತದೆ. ಆಗ ಹಣ ಯಾರ್ಯಾರಿಗೆ ಸಿಕ್ಕಿತ್ತು ಎನ್ನುವ ವಿವರ ಚುನಾವಣೆ ನಂತರವಷ್ಟೇ ತಿಳಿಯಲು ಸಾಧ್ಯ.

ಜೂನ್ 30ರೊಳಗೆ, ಭಾರತದಲ್ಲಿ ಲೋಕಸಭಾ ಚುನಾವಣೆಗಳು ಪೂರ್ಣಗೊಳ್ಳುತ್ತವೆ ಎಂಬುದನ್ನು ನೆನಪಿನಲ್ಲಿಡಿ, ಆದರೆ ಸುಪ್ರೀಂ ಕೋರ್ಟ್ ಈ ವಿವಾದಾತ್ಮಕ ಚುನಾವಣಾ ಬಾಂಡ್ ಯೋಜನೆಯನ್ನು ಸಾರ್ವತ್ರಿಕ ಚುನಾವಣೆಗೆ ಮುಂಚಿತವಾಗಿ ಇತ್ಯರ್ಥಪಡಿಸಲು ಬಯಸಿದೆ.

ಅದಕ್ಕಾಗಿಯೇ ಸುಪ್ರೀಂ ಕೋರ್ಟ್ ಕೂಡ ಕಳೆದ ತಿಂಗಳು ಐತಿಹಾಸಿಕ ತೀರ್ಪನ್ನು ನೀಡಿತು, ಆದರೆ ಸುಪ್ರೀಂ ಕೋರ್ಟ್ ತೀರ್ಪಿನೊಂದಿಗೆ  ಹೇಳಿದ ವಿಷಯಗಳು ಇಲ್ಲಿಯವರೆಗೆ ಇತ್ಯರ್ಥಗೊಂಡಿಲ್ಲ.

You cannot copy content of this page

Exit mobile version