ದಿಟ್ಟ ಪ್ರಾಮಾಣಿಕ ಪತ್ರಕರ್ತೆ, ಸ್ತ್ರೀವಾದಿ ಗೌರಿ ಲಂಕೇಶ್ ಅವರ ಹತ್ಯೆಯಾಗಿ ಇಂದಿಗೆ (ಸೆ.5, 2023) ಆರು ವರ್ಷ ಪೂರ್ತಿಯಾಗಿದೆ. ಗೌರಿ ಅಂದರೆ ಪ್ರೀತಿ, ತಾಯ್ತನ, ಹೋರಾಟ ಎಂದೇ ಗೌರಿಯನ್ನು ನೆನೆಯುವುದು ಹೆಚ್ಚು ಅರ್ಥಪೂರ್ಣ. ಈ ದಿನ ಅವರ ಆತ್ಮೀಯ ಒಡನಾಡಿಯಾಗಿದ್ದ ಡಾ. ಸಬಿಹಾ ಭೂಮೀಗೌಡ ಅವರು ಆಪ್ತವಾಗಿ ಗೌರಿ ಲಂಕೇಶ್ ಅವರೊಂದಿಗಿನ ಒಡನಾಟವನ್ನು ನೆನಪಿಸಿಕೊಂಡಿದ್ದಾರೆ.
2023 ರ ಸೆಪ್ಟೆಂಬರ್ 5 ಕ್ಕೆ ನಾವು ಗೌರಿಯನ್ನು ಕಳೆದುಕೊಂಡು ಆರು ವರ್ಷಗಳೇ ಆದವು. ನನ್ನ ಪ್ರಕಾರ ಗೌರಿಯ ನೆನಪುಗಳನ್ನು ಹಂಚಿಕೊಳ್ಳುವುದೆಂದರೆ ಅಮೂರ್ತಕ್ಕೆ ಮೂರ್ತರೂಪ ಕೊಡುವ ಪ್ರಯತ್ನದಂತೆ; ಕುರುಡರು ಆನೆ ಕಂಡು ವಿವರಿಸಿದಂತೆ; ಎಲ್ಲವೂ ಅವರವರ ಭಾವಕ್ಕೆ ತಕ್ಕಂತೆ, ಅವರವರ ತೆಕ್ಕೆಗೆ ದಕ್ಕಿದಂತೆ. ಆದರೆ ಅವಷ್ಟೇ ಅಲ್ಲ, ಅದರಾಚೆಗೆ ಗೌರಿಯ ವ್ಯಕ್ತಿತ್ವ ಗೋಚರಿಸುತ್ತದೆ. ನನ್ನ ಗ್ರಹಿಕೆಗೆ ಗೌರಿ ಲಂಕೇಶ್ ಎಟುಕಿದ್ದಾಳೆ ಎಂಬುದೇ ಅಹಂಕಾರ ಎನಿಸಿಬಿಡುವ ಸ್ಥಿತಿ ಇದು.
ಹಲವು ವರ್ಷಗಳ ಹಿಂದಿನ ನೆನಪು. ಮಂಗಳೂರಿನ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಲೆಂದು ಬಂದಿದ್ದ ಗೌರಿ ಲಂಕೇಶ್ ಅವರನ್ನು ಕುತೂಹಲ, ಆದರ, ಗೌರವಗಳ ಭಾವದಿಂದ ನಾನು ನೋಡುತ್ತಿದ್ದೆ. ಯಾರೋ ನನ್ನನ್ನು ಗೌರಿಗೆ ಪರಿಚಯಿಸಿದರು. ಅದನ್ನು ನನ್ನ-ಅವರ ಭೇಟಿ ಅನ್ನುವಂತೆಯೂ ಇಲ್ಲ, ಹೌದು ಅನ್ನುವಂತೆಯೂ ಅಲ್ಲ. ಬಾಬಾಬುಡನ್ಗಿರಿ ಹೋರಾಟ ಹಾಗೂ ಅನಂತರದ ಕೋಮುಸೌಹಾರ್ದ ವೇದಿಕೆಯ ಚಟುವಟಿಕೆಗಳಲ್ಲಿ ಭಾಗವಹಿಸಿದ್ದು ನನ್ನ ಮತ್ತು ಗೌರಿಯ ನಿಕಟ ಪರಿಚಯಕ್ಕೆ ನಾಂದಿಯಾಯಿತು. ಮುಂದೆ ಮಾನವ ಹಕ್ಕುಗಳ ಉಲ್ಲಂಘನೆಯಾದಾಗ ಅವಳ ಜೊತೆ ಸತ್ಯಶೋಧನಾ ತಂಡದ ಸದಸ್ಯಳಾಗಿ ಹೋದುದು ಮರೆಯಲಾಗದ ನೆನಪು.

ಗೌರಿಯ ಜೊತೆಗಿನ ಸಂವಾದ ಎಂದರೆ ಅದೊಂದು ಪ್ರವಾಸದಂತೆ. ಅಲ್ಲಿ ನಾನು ಕಂಡ, ಕೇಳಿದ, ಗ್ರಹಿಸಬಹುದಾದ ಸಂಗತಿಗಳಿದ್ದಂತೆ, ನನ್ನ ಎಲ್ಲೆ ದಾಟಿದ ಹತ್ತು ಹಲವು ವಿಷಯಗಳಿರುತ್ತಿದ್ದವು. ಸಪ್ತಸಾಗರದಾಚೆಗಿನ ನವನವೀನ ಸಂಗತಿಗಳು, ವ್ಯಕ್ತಿಗಳು, ಅವರ ಸಾಧನೆಗಳು ಹೀಗೇ… ವಿಚಾರ ಸ್ಫುರಿಸಿದಂತೆ ಅತ್ಯಂತ ವೇಗವಾಗಿ ಗೌರಿ ಮಾತಾಡುತ್ತಿದ್ದರೆ, ಅವಳ ಮಾತುಗಳನ್ನು ಗ್ರಹಿಸಲು ಓಡೋಡಿ ದಣಿಯುವ ಸಂದರ್ಭಗಳು ಇದ್ದವು. ಆ ದಣಿವಿನಲ್ಲಿ ಒಂದು ಖುಷಿ ಇತ್ತು. ಹೀಗಾಗಿ ಅವಳ ಜೊತೆಗಿನ ಸಂವಾದ ಎಂದರೆ ಅದೊಂದು ಸುಖಕರ, ಕುತೂಹಲಕರ, ರೋಮಾಂಚಕ ಅನುಭವ ನೀಡುವ ಪ್ರಯಾಣವಾಗಿರುತ್ತಿತ್ತು.
ಗೌರಿ ಒಂದು ಸೂಜಿಗಲ್ಲಾಗಿ ನಮ್ಮ ನಡುವೆ ಇದ್ದಳು. ತನ್ನ ಅಯಸ್ಕಾಂತೀಯ ಗುಣದಿಂದ ಎಲ್ಲರನ್ನೂ ತನ್ನೆಡೆ ತನ್ನ ಧ್ಯೇಯ, ಕಾಳಜಿ ಮತ್ತು ಕರ್ತೃತ್ವಶಕ್ತಿಯಿಂದ ಸೆಳೆಯುತ್ತಿದ್ದಳು. ಅದೇ ವೇಳೆಗೆ ತನ್ನ ಸಂಪರ್ಕಕ್ಕೆ ಬಂದವರ ಮೇಲೂ ಪ್ರಭಾವ ಬೀರಿ ಅವರೊಳಗೆ ಬಂಧುತ್ವದ ಬೆಸುಗೆಯನ್ನು ಹಾಕಿದ್ದಳು. ಆಕೆ ಬಿತ್ತಿದ ಪ್ರೀತಿಯ ಬೀಜ ಅಪಾರ. ಹೋದಲ್ಲೆಲ್ಲಾ ಅವಳದು ಇದೇ ಕಾಯಕ.
ಗೌರಿಯ ವ್ಯಕ್ತಿತ್ವದ ಅನನ್ಯತೆಗೆ ಹಲವು ಆಯಾಮಗಳಿವೆ. ಜೀವನಪ್ರೀತಿಗೆ ಇನ್ನೊಂದು ಹೆಸರು ಗೌರಿ ಲಂಕೇಶ್. ಗೌರಿಯ ಸರಳತೆ ಸೂಜಿಗಲ್ಲಿನಂತೆ ನನ್ನನ್ನು ಹತ್ತಿರ ಸೆಳೆಯುತ್ತಿತ್ತು. ಸ್ನೇಹದಲ್ಲಿ ಶಿಷ್ಟಾಚಾರದ ಸಂಬೋಧನಾ ಗೋಡೆಗಳನ್ನು ಆಕೆ ಪ್ರಜ್ಞಾಪೂರ್ವಕವಾಗಿ ಕೆಡವುತ್ತ, ಕೆಡವಿಸುತ್ತ ಸಾಗಿದವಳು. ಗೌರಿ, ಈಶಾ, ಇಂದಿರಾ ಲಂಕೇಶ್ ಮಂಗಳೂರಿಗೆ ಬಂದಾಗ ಅನುಕೂಲವಾದಾಗಲೆಲ್ಲ ನಮ್ಮ ಮನೆಯಲ್ಲಿ ಉಳಿಯುತ್ತಿದ್ದರು. ಮನೆ ಹರಟೆಕಟ್ಟೆ ಆಗುತ್ತಿತ್ತು. ನಗು-ತಮಾಷೆ-ಚಿಂತನೆ-ಮುಂದಿನ ಯೋಜನೆಗಳು ಹೀಗೆ ಹತ್ತಾರು ವಿಷಯಗಳ ವಿನಿಮಯವಾಗುತ್ತಿತ್ತು. ಇಂದಿರಾ ಲಂಕೇಶ್ ರಿಂದ ‘ಹುಳಿಮಾವು ಮತ್ತು ನಾನು’ ಬರಹದ ಯೋಜನೆ ಹುಟ್ಟಿದ್ದು ಅಂಥ ಒಂದು ಸಂದರ್ಭದಲ್ಲಿ. ಅರಿಲ್ ಅಪ್ಪಂದಿರ ದಿನಕ್ಕಾಗಿ ಬರೆದ ಲೇಖನವನ್ನು ತನ್ನ ಪತ್ರಿಕೆಯಲ್ಲಿ ಪ್ರಕಟಿಸಿ ಅದಕ್ಕೆ ‘ಅಪ್ಪ ಎಂಬ ಬೇತಾಳ’ ಹೆಸರಿಟ್ಟು ಕೀಟಲೆ ಮಾಡಿದ, ಭೂಮಿಯ “ಮಾರಿಕೋಣ” ಕತೆಯನ್ನು ಪ್ರಕಟಿಸಿ, ‘ನಿನ್ನ ಅನುಭವ ಶ್ರೀಮಂತವಾಗಿವೆ, ಬರೀಬೇಕು’ ಎಂದು ಒತ್ತಾಯಿಸಿದ ಗೌರಿ ಹೀಗೆ ಹೇಳಲು ಎಷ್ಟೊಂದು ಸಂಗತಿಗಳಿವೆ.
ಬಲು ಹಿಂದೆಯೇ ಓದಲು ಬಾರದ ವಯಸ್ಸಿನ ಈಶಾಗೆ ಅನೇಕ ಮೌಲಿಕ ವಿಚಾರಗಳನ್ನು ಓದಿ ಹೇಳುವುದಕ್ಕೆ ತನ್ನ ಸಮಯವನ್ನು ಮೀಸಲಿಡುತ್ತಿದ್ದ, ತನ್ನ ಕೆಲಸಗಳ ನಡುವೆ ಪ್ರಜ್ಞಾಪೂರ್ವಕವಾಗಿ ಬಿಡುವು ಮಾಡಿಕೊಂಡು ಊರು ಮತ್ತು ಜನ-ಜನಜೀವನವನ್ನು ಈಶಾಗೆ ತೋರಿಸುವ ಗೌರಿಯ ಕಾಳಜಿ ನನಗೆ ಮಾರ್ಗದರ್ಶಿ ಆಗಿದೆ. ಇಂಥದ್ದೇ ಒಂದು ಸಂದರ್ಭದಲ್ಲಿ ದಾರಿಮಧ್ಯೆ ಇಳಿದಿದ್ದಾಗ, ರೈಲು ಹೊರಟದ್ದು ಕಂಡು ಈಶಾಳನ್ನು ಎತ್ತಿಕೊಂಡು ಚಲಿಸುತ್ತಿದ್ದ ರೈಲಿಗೆ ತಾನು ಏರಿದ ಸನ್ನಿವೇಶವನ್ನು ಗೌರಿ ವಿವರಿಸಿದಾಗ, ಕೇಳುತ್ತಿದ್ದ ನಮಗೆಲ್ಲ ಗಾಬರಿಯಿಂದ ಮೈ ಜುಂ ಎಂದಿತ್ತು. ‘ಇನ್ನೆಂದೂ ಅಂಥ ದುಃಸಾಹಸ ಮಾಡುವುದಿಲ್ಲ’ ಎಂದು ನಮಗೆಲ್ಲ ಗೌರಿ ಮಾತು ಕೊಟ್ಟಿದ್ದು ಈಗ ನೆನಪಷ್ಟೆ.
‘ನಾನು ಚಿದೂ ಒಳ್ಳೆಯ ಸ್ನೇಹಿತರು, ಆದರೆ ಕೆಟ್ಟ ದಂಪತಿಗಳು’ ಎಂದು ನಗುನಗುತ್ತಲೇ ತನ್ನ ವಿಫಲ ದಾಂಪತ್ಯದ ಬಗ್ಗೆ ಹೇಳುತ್ತಿದ್ದ ಗೌರಿ, ಆ ಕುಟುಂಬದ ಬಗ್ಗೆ ಇಟ್ಟಿದ್ದ ಪ್ರೀತಿ, ವಿಶ್ವಾಸ ಮಾತ್ರ ಅನನ್ಯ. ಅವಳ ಕಾಲಾನಂತರ ಚಿದಾನಂದ ರಾಜಘಟ್ಟ ಅವರ ಮಡದಿ ಗೌರಿ ಕುರಿತು ಬರೆದ ಪತ್ರವನ್ನು ಓದಿದವರಿಗೆ ಇದು ಸ್ಪಷ್ಟವಾಗಿರುತ್ತದೆ. ಗೌರಿಗೆ, ಅವಳ ಬದುಕಿನ ಪ್ರೀತಿಗೆ ಯಾವ ಎಲ್ಲೆಗಳೂ ಇರಲಿಲ್ಲ. ಗೌರಿಯದು ‘ಸಂತತನ’ಕ್ಕೆ ಸಮೀಪದ ವ್ಯಕ್ತಿತ್ವವಲ್ಲದೆ ಬೇರೇನೂ ಅಲ್ಲ.
ತನ್ನ ಬಿಡುವಿಲ್ಲದ ದಿನಚರಿಯಲ್ಲಿಯೂ ಜಗತ್ತಿನ ಮೌಲಿಕ ಬರಹಗಾರರ ಕೃತಿಗಳನ್ನು, ಸ್ತ್ರೀವಾದಿ ನೆಲೆಯ ಬರಹಗಳನ್ನು ನಿಷ್ಠೆಯಿಂದ ಅನುವಾದ ಮಾಡಿದ ಗೌರಿಯ ಕೆಲಸದಲ್ಲಿ ಅವಳ ಬದ್ಧತೆ ನಿಚ್ಚಳವಾಗಿದೆ. ಮಮತಾ ಜಿ ಸಾಗರ, ಎಂ ಎಸ್ ಆಶಾದೇವಿ, ಗೌರಿ, ನಾನು ಒಟ್ಟು ಸೇರಿದಾಗ, ಲೇಖಕಿಯರ ಒಂದು ಸದೃಢ ಬಳಗ ಕಟ್ಟುವ ಕನಸು ಕಾಣುತ್ತಿದ್ದೆವು. ಇದಕ್ಕೆ ತಾತ್ವಿಕ ಒಪ್ಪಿಗೆ ಇದ್ದರೂ, ಎಲ್ಲರ ಒತ್ತಡದ ದಿನಚರಿಯಲ್ಲಿ ನಾವು ಕನಸಿದಂತೆ ಅದನ್ನು ಜಾರಿಗೆ ತರಲು ನಮಗೆ ಆಗಲಿಲ್ಲ.
2022 ರ ಸೆಪ್ಟೆಂಬರ್ 5 ರಂದು ಮೊದಲ ಬಾರಿಗೆ ಅವಳು ಕೊನೆಯದಾಗಿ ಮಲಗಿದ ಜಾಗಕ್ಕೆ ಹೋಗಿ ಬಂದೆ. ಮನಸ್ಸಿಗೆ ತುಂಬ ಕಷ್ಟವೆನಿಸಿತು. ಮಾತು ಬಾರದೆ ಕಣ್ಣು ತುಂಬಿಬಂತು. ಏನೆಲ್ಲ ಕನಸುಗಳನ್ನು ಕಟ್ಟಿಕೊಂಡಿದ್ದಳು! ತನ್ನ ನಂತರ ಪತ್ರಿಕೆ ಏನಾಗಬೇಕು ಎಂಬ ಬಗೆಗೂ ಅವಳು ಯೋಚಿಸಿದ್ದಳು. ಪತ್ರಿಕೆ ನಿಂತುಬಿಡಬಾರದು. ಒಂದು ಟ್ರಸ್ಟ್ ಮಾಡಬೇಕು. ಸಮಾನ ಮನಸ್ಕ ಗುಂಪು ತನ್ನ ನಂತರ ಅದನ್ನು ಮುನ್ನಡೆಸಬೇಕು ಎಂಬುದಾಗಿ ಆಗಾಗ ಹೇಳುತ್ತಿದ್ದಳು. ಇಲ್ಲೆಲ್ಲ ತನ್ನದೆಲ್ಲದರ ಕುರಿತು ಅವಳಲ್ಲಿ ಗಾಢವಾಗಿ ಪ್ರಕಟವಾಗುತ್ತಿದ್ದುದು ನಿರ್ಮಮಕಾರ. ಅವಳ ಕನಸನ್ನು ಅವಳ ಸಂಗಾತಿಗಳು ಹಲವು ಸಂಕಷ್ಟಗಳ ನಡುವೆಯೂ ಮುಂದುವರಿಸುತ್ತಿರುವುದು ಮಾತ್ರ ಸಮಾಧಾನದ ಸಂಗತಿ.
ಸಬಿಹಾ ಭೂಮೀಗೌಡ
ಲೇಖಕರು, ಸಾಮಾಜಿಕ ಹೋರಾಟಗಾರರು