ವಿವಿಧ ಸಾಮಾಜಿಕ ಜನಪರ ಸಂಘಟನೆಗಳ ನೇತೃತ್ವದಲ್ಲಿ ಶಿವಮೊಗ್ಗದಲ್ಲಿ “ನಮ್ಮ ನಡಿಗೆ ಶಾಂತಿಯ ಕಡೆಗೆ” ಸೌಹಾರ್ದ ಜಾಥಾ ಯಶಸ್ವಿಯಾಗಿ ನಡೆಯಿತು. ಶಿವಮೊಗ್ಗ ನಗರದ ಶಿವಮೊಗ್ಗ ಮೆಡಿಕಲ್ ಕಾಲೇಜು ಮುಂಭಾಗದಿಂದ ಜಾಥಾಗೆ ಚಾಲನೆ ನೀಡಲಾಯಿತು. ಅಲ್ಲಿಂದ ಬಿ.ಹೆಚ್ ರಸ್ತೆ, ಅಶೋಕ ವೃತ್ತದ ಮಾರ್ಗವಾಗಿ ಸೈನ್ಸ್ ಮೈದಾನಕ್ಕೆ ಜಾಥಾ ಬಂದು ತಲುಪಿತು.

ಇತ್ತೀಚಿನ ದಿನಗಳಲ್ಲಿ ಶಿವಮೊಗ್ಗ ಅಹಿತಕರ ಘಟನೆಗಳ ತಾಣದಂತಾಗಿ, ಕೋಮುಸೂಕ್ಷ್ಮ ನಗರಗಳ ಪಟ್ಟಿಗೆ ಸೇರುತ್ತಿರುವ ಹಿನ್ನೆಲೆಯಲ್ಲಿ ಶಾಂತಿ ಸೌಹಾರ್ದತೆ ಸಾಮರಸ್ಯ ಬಯಸುವ ಎಲ್ಲ ಧರ್ಮಗಳ ಮುಖಂಡರು ಒಗ್ಗೂಡಿ ಈ ಒಂದು ಜಾಥಾ ಆಯೋಜಿಸಿದ್ದರು..ಜಾಥಾದಲ್ಲಿ ಯಾವುದೇ ಪಕ್ಷ, ಸಂಘಟನೆಯ ಬಾವುಟ, ಬ್ಯಾಡ್ಜ್, ಟೋಪಿಗಳನ್ನು ನಿಷೇಧಿಸಲಾಗಿತ್ತು. ಅಂದಾಜು 8,000 ಮಂದಿ ಎಲ್ಲಾ ಧರ್ಮದ ಜನರು ಈ ಜಾಥಾಗೆ ಜೊತೆಯಾದದ್ದು ವಿಶೇಷ.

ಸಧ್ಯ ಎಲ್ಲರ ಉದ್ದೇಶ ಜಿಲ್ಲೆಯಲ್ಲಿ, ನಗರದಲ್ಲಿ ಶಾಂತಿ ನೆಲೆಸಬೇಕು. ಕೋಮು ಗಲಭೆ, ದ್ವೇಷ ರಾಜಕಾರಣಕ್ಕೆ ಅವಕಾಶ ಕೊಡಬಾರದು ಎಂಬುದಾಗಿತ್ತು. ಸಿರಿಗೆರೆ ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮಿ ಸೇರಿದಂತೆ ಮುಸ್ಲಿಂ, ಕ್ರೈಸ್ತ ಧರ್ಮಗುರುಗಳು ಹಾಗೂ ಶಿವಮೊಗ್ಗದ ವಿವಿಧ ಜನಪರ ಸಂಘಟನೆಗಳ ಪ್ರಮುಖರು ಈ ಜಾಥಾದ ನೇತೃತ್ವ ವಹಿಸಿದ್ದರು.
