ನವದೆಹಲಿ : ದೇಶದ ಇಂಧನ ಭದ್ರತೆ ಕುರಿತು ಆತಂಕ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (PM Modi) ಮಹತ್ವದ ಸಭೆ ನಡೆಸಿದ್ದಾರೆ. ಇರಾನ್ (Iran) , ಇಸ್ರೇಲ್ (Israel) ಹಾಗೂ ಅಮೆರಿಕ (America) ನಡುವಿನ ಉದ್ವಿಗ್ನತೆಯಿಂದ ಉಂಟಾಗಬಹುದಾದ ಎಲ್ಪಿಜಿ (LPG) ಕೊರತೆಯನ್ನು ಎದುರಿಸುವ ಕುರಿತು ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಮತ್ತು ವಿದೇಶಾಂಗ ಸಚಿವ ಎಸ್. ಜೈಶಂಕರ್ ಜೊತೆ ಮಹತ್ವದ ಚರ್ಚೆ ನಡೆಸಿದ್ದಾರೆ.
ಮಧ್ಯಪ್ರಾಚ್ಯ ಯುದ್ಧದ ಪರಿಣಾಮ ಭಾರತದಲ್ಲಿ ಅನಿಲ ಪೂರೈಕೆಗೆ ಅಡ್ಡಿಯಾಗುವ ಸಾಧ್ಯತೆ ಇರುವುದರಿಂದ ಕೇಂದ್ರ ಸರ್ಕಾರ ಮುನ್ನೆಚ್ಚರಿಕೆಯ ಕ್ರಮಗಳನ್ನು ಆರಂಭಿಸಿದೆ. ಗ್ರಾಹಕರಿಗೆ ತೊಂದರೆ ಆಗದಂತೆ ವಿಶೇಷ ಕಾರ್ಯತಂತ್ರವನ್ನು ಜಾರಿಗೊಳಿಸಲು ಮುಂದಾಗಿದೆ.
ಹಾರ್ಮುಜ್ ಜಲಸಂಧಿ ಮುಚ್ಚಲ್ಪಟ್ಟಿರುವುದೇ ಈ ಸಂಕಷ್ಟಕ್ಕೆ ಪ್ರಮುಖ ಕಾರಣವಾಗಿದೆ. ಅಮೆರಿಕ ಹಾಗೂ ಇಸ್ರೇಲ್ ಕೈಗೊಂಡ ದಾಳಿಗಳಿಗೆ ಪ್ರತಿಯಾಗಿ ಇರಾನ್ ಪ್ರತೀಕಾರ ಕ್ರಮ ತೆಗೆದುಕೊಂಡ ನಂತರ ಈ ಪ್ರಮುಖ ಸಾಗರ ಮಾರ್ಗದಲ್ಲಿ ತೈಲ ಸಾಗಾಟಕ್ಕೆ ಅಡಚಣೆ ಉಂಟಾಗಿದೆ.
ಭಾರತಕ್ಕೆ ಅಗತ್ಯವಿರುವ ಎಲ್ಪಿಜಿಯಲ್ಲಿ ಸುಮಾರು 62 ಶೇಕಡಾ ವಿದೇಶಗಳಿಂದ ಬರುತ್ತದೆ. ವಿಶೇಷವಾಗಿ ಸೌದಿ ಅರೇಬಿಯಾ ಸೇರಿದಂತೆ ಹಲವಾರು ದೇಶಗಳಿಂದ ಬರುವ 85–90 ಶೇಕಡಾ ಪೂರೈಕೆ ಇದೇ ಮಾರ್ಗವನ್ನು ಅವಲಂಬಿಸಿದೆ. ಹೀಗಾಗಿ ಸರ್ಕಾರ ಪರ್ಯಾಯ ಮೂಲಗಳನ್ನು ಹುಡುಕುವ ಜೊತೆಗೆ ಲಭ್ಯವಿರುವ ಸಂಗ್ರಹವನ್ನು ಎಚ್ಚರಿಕೆಯಿಂದ ಬಳಸುವ ನಿರ್ಧಾರ ಕೈಗೊಂಡಿದೆ.
