ಭಾರತದಲ್ಲಿ ಖಾಸಗಿ ಆಸ್ಪತ್ರೆಗಳು ಸ್ಪಷ್ಟವಾಗಿ ವ್ಯಾಪಾರಿ ಕೇಂದ್ರಗಳಾಗಿವೆ. ಹಾಗಾಗಿ ಕೆಲವು ಅನಿರೀಕ್ಷಿತ ಸಂದರ್ಭಗಳಲ್ಲಿ ಆಸ್ಪತ್ರೆ ಕಡೆಯಿಂದ ರೋಗಿಯ ಜೀವಹಾನಿ ಅಥವಾ ಇನ್ಯಾವುದೋ ಅನಾಹುತಗಳಾದಾಗ ರೋಗಿಯ ಸಂಬಂಧಿಗಳು ನಡೆಸುವ ನಿಂದನೆ ಮತ್ತು ಕೋಪೋದ್ರಿಕ್ತ ಹಲ್ಲೆಗೆ ಆಯಾ ಆಸ್ಪತ್ರೆಗಳೇ ಭದ್ರತೆ ಒದಗಿಸಿಕೊಳ್ಳಬೇಕು ಎಂದು ಸುಪ್ರೀಂಕೋರ್ಟ್ ಅಭಿಪ್ರಾಯ ಪಟ್ಟಿದೆ.
ದೆಹಲಿ ವೈದ್ಯಕೀಯ ಸಂಘ ಸುಪ್ರೀಂಕೋರ್ಟಿಗೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ಎಸ್.ಕೆ.ಕೌಲ್ ಮತ್ತು ಎ.ಎಸ್.ಓಕಾ ಅವರ ಜಂಟಿ ನ್ಯಾಯಪೀಠ ಈ ಮೇಲಿನಂತೆ ಅಭಿಪ್ರಾಯ ಪಟ್ಟಿದ್ದಾರೆ. ಕೋವಿಡ್ ನಂತಹ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಉದಾಹರಣೆಯಾಗಿಸಿ ಹೇಳುವುದಾದರೆ ಆಗ ಎಲ್ಲಾ ಆಸ್ಪತ್ರೆಗಳೂ ಒಂದು ರೀತಿಯ ಅಭದ್ರತೆಯಿಂದ ಕೂಡಿತ್ತು. ಯಾರ ಜೀವವೂ ಯಾರ ಕೈಯಲ್ಲೂ ಇರಲಿಲ್ಲ. ಅಂತಹ ಸಂದರ್ಭಗಳ ಹೊರತಾಗಿ ಖಾಸಗಿ ಆಸ್ಪತ್ರೆಗಳು ತಮ್ಮ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿಯ ಭದ್ರತೆಯನ್ನು ತಾವೇ ಮಾಡಿಕೊಳ್ಳಬೇಕು. ಬದಲಾಗಿ ಅದರ ಹೊರೆಯನ್ನು ಸರ್ಕಾರಕ್ಕೆ ಕೊಡಬಾರದು ಎಂಬುದಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಖಾಸಗಿ ಆಸ್ಪತ್ರೆ ಸಂಘಗಳ ಪರ ವಕೀಲರು ‘ಎಷ್ಟೋ ರಾಜ್ಯಗಳಲ್ಲಿ ಎಷ್ಟೋ ವೈದ್ಯರು ಹೊರಗಿನ ವ್ಯಕ್ತಿಗಳಿಂದ ಬೆದರಿಕೆಗಳನ್ನು ಎದುರಿಸುತ್ತಿದ್ದಾರೆ..’ ಎಂಬ ವಾದಕ್ಕೆ, ಅವರ್ಯಾರೂ ಯಾವುದೋ ಭಯೋತ್ಪಾದಕ ಸಂಘಟನೆಗಳವರಲ್ಲ, ಅಥವಾ ಅವರಿಗೂ ವೈದ್ಯರಿಗೂ ಯಾವುದೇ ವಯಕ್ತಿಕ ದ್ವೇಷವೂ ಇರುವುದಿಲ್ಲ. ರೋಗಿಗಳಿಗೆ ಹಾನಿಯಾದಾಗ ರೋಗಿಯ ಸಂಬಂಧಿಕರಾಗಿ ಅವರು ಕೋಪೋದ್ರಿಕ್ತರಾಗುವುದು ಸಹಜ ಪ್ರಕ್ರಿಯೆ. ಇದಕ್ಕೆ ಭದ್ರತೆಯನ್ನು ನೀವೇ ಒದಗಿಸಿಕೊಳ್ಳಬೇಕು ಎಂದು ನ್ಯಾಯಪೀಠ ಹೇಳಿದೆ.
ಇನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಇಲ್ಲಿಯವರೆಗೆ ಈ ರೀತಿಯ ಯಾವುದೇ ಗಂಭೀರ ಸಮಸ್ಯೆ ಎದುರಾಗಿಲ್ಲ. ಅವು ಸರಿಯಾಗಿ ತಮ್ಮ ಕಾರ್ಯ ನಿರ್ವಹಿಸುತ್ತಿವೆ. ಖಾಸಗಿ ಆಸ್ಪತ್ರೆಗಳ ಈ ದೂರಿಗೆ ಕೋರ್ಟ್ ಸರ್ಕಾರವನ್ನು ಮಧ್ಯೆ ತರಲು ಇಚ್ಛಿಸುವುದಿಲ್ಲ. ಇನ್ನು 2021 ರ ಜೂನ್ ನಲ್ಲೇ ಖಾಸಗಿ ಆಸ್ಪತ್ರೆಗಳು ಇಂತಹ ಸಂದರ್ಭಗಳಲ್ಲಿ ಯಾವ ರೀತಿಯ ಭದ್ರತೆ ತಗೆದುಕೊಳ್ಳಬೇಕು ಎಂಬ ನಿರ್ದೇಶನ ನೀಡಿದೆ. ಆ ತೀರ್ಪನ್ನು ಅನುಸರಿಸಿಯೇ ಖಾಸಗಿ ಆಸ್ಪತ್ರೆಗಳು ನಡೆದುಕೊಳ್ಳಬೇಕು ಎಂದು ದೆಹಲಿ ಖಾಸಗಿ ಆಸ್ಪತ್ರೆಗಳ ಸಂಘಕ್ಕೆ ತಿಳಿಸಿದೆ.