ಚುನಾವಣೆಗೂ ಮುನ್ನ ಸರ್ಕಾರಗಳು ಬೇಜವಾಬ್ದಾರಿಯಾಗಿ ಉಚಿತ ಯೋಜನೆಗಳನ್ನು (Freebies) ಘೋಷಿಸುವುದರ ಬಗ್ಗೆ ದೇಶದ ಸರ್ವೋಚ್ಚ ನ್ಯಾಯಾಲಯವು ಗುರುವಾರ ರಾಜ್ಯ ಸರ್ಕಾರಗಳನ್ನು ತೀವ್ರವಾಗಿ ಟೀಕಿಸಿದೆ. ಇಂತಹ ನಿರ್ಧಾರಗಳನ್ನು ಪ್ರಕಟಿಸುವ ಸಮಯ ಮತ್ತು ಅವುಗಳ ಹಿಂದಿನ ಆರ್ಥಿಕ ತರ್ಕವನ್ನು ನ್ಯಾಯಾಲಯವು ಪ್ರಶ್ನಿಸಿದೆ. ಸರ್ಕಾರದ ಬೊಕ್ಕಸದ ಮೇಲೆ ವಿಪರೀತ ಹೊರೆ ಹೇರುವ ಇಂತಹ ಬೇಜವಾಬ್ದಾರಿಯುತ ಉಚಿತಗಳ ಘೋಷಣೆಯು ಸರಿಯಲ್ಲ ಎಂದು ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ವಿಶೇಷವಾಗಿ, ತಮಿಳುನಾಡು ಸರ್ಕಾರವು ಇಷ್ಟು ಹಠಾತ್ತಾಗಿ ‘ಉಚಿತ ವಿದ್ಯುತ್’ ಯೋಜನೆಯನ್ನು ಏಕೆ ಘೋಷಿಸಿತು ಎಂದು ಪ್ರಶ್ನಿಸಿದೆ.
ಈ ಯೋಜನೆಯಿಂದಾಗಿ ವಿದ್ಯುತ್ ಸರಬರಾಜು ಕಂಪನಿಗಳು (ಡಿಸ್ಕಮ್ಗಳು) ಸುಂಕ ಮತ್ತು ಬಜೆಟ್ ಲೆಕ್ಕಾಚಾರಗಳನ್ನು ಸರಿಹೊಂದಿಸಲು ಸಾಧ್ಯವಾಗದೆ ಸಂಕಷ್ಟಕ್ಕೆ ಸಿಲುಕಿವೆ ಎಂದು ನ್ಯಾಯಾಲಯ ಹೇಳಿದೆ. ವಿದ್ಯುತ್ ತಿದ್ದುಪಡಿ ಕಾಯ್ದೆ 2024ರ ನಿಬಂಧನೆ 23 ಅನ್ನು ಸವಾಲು ಮಾಡಿ ತಮಿಳುನಾಡು ಪವರ್ ಡಿಸ್ಟ್ರಿಬ್ಯೂಷನ್ ಕಂಪನಿ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ, ನ್ಯಾಯಮೂರ್ತಿ ಜಾಯ್ಮಾಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿಪುಲ್ ಪಂಚೋಲಿ ಅವರನ್ನೊಳಗೊಂಡ ಪೀಠವು ವಿಚಾರಣೆ ನಡೆಸಿತು.
ಈಗಾಗಲೇ ಹಲವಾರು ರಾಜ್ಯ ಸರ್ಕಾರಗಳು ಆದಾಯದ ಕೊರತೆಯನ್ನು ಎದುರಿಸುತ್ತಿರುವುದನ್ನು ನಾವು ಗಮನಿಸಿದ್ದೇವೆ. ಯಾವುದೇ ಮುನ್ಸೂಚಿತ ಆರ್ಥಿಕ ಯೋಜನೆಯಿಲ್ಲದೆ ರಾಜ್ಯಗಳು ಈ ಸಬ್ಸಿಡಿ ಭರವಸೆಗಳನ್ನು ಹೇಗೆ ಈಡೇರಿಸುತ್ತವೆ ಎಂದು ಪೀಠವು ಪ್ರಶ್ನಿಸಿದೆ. ನಿಯಂತ್ರಣವಿಲ್ಲದೆ ನೀಡುವ ಇಂತಹ ಉಚಿತಗಳು ದೇಶದ ಆರ್ಥಿಕ ಅಭಿವೃದ್ಧಿಗೆ ಧಕ್ಕೆ ತರುತ್ತವೆ ಎಂದು ನ್ಯಾಯಾಲಯ ಎಚ್ಚರಿಸಿದೆ.
ಚುನಾವಣೆಗೆ ಮುನ್ನ ಅನೇಕ ರಾಜ್ಯಗಳು ಅನಿರೀಕ್ಷಿತವಾಗಿ ಹಲವು ಕಲ್ಯಾಣ ಯೋಜನೆಗಳನ್ನು ಘೋಷಿಸುವುದನ್ನು ನಾವು ನೋಡುತ್ತಿದ್ದೇವೆ. “ಒಂದು ವೇಳೆ ಜನರಿಗೆ ನೇರವಾಗಿ ನಗದು ವರ್ಗಾವಣೆ ಮಾಡುವ ಯೋಜನೆಗಳನ್ನು ಘೋಷಿಸಿದರೆ, ಅವರು ಮುಂದೆ ಕೆಲಸ ಮಾಡುತ್ತಾರೆಯೇ?” ಎಂದು ಪೀಠವು ಪ್ರಶ್ನಿಸಿದೆ. “ಸರ್ಕಾರವು ಉಚಿತ ಹಣದ ಜೊತೆಗೆ ಉಚಿತ ವಿದ್ಯುತ್ ಮತ್ತು ಇತರ ಸೌಲಭ್ಯಗಳನ್ನು ನೀಡಿದರೆ, ಅಂತಿಮವಾಗಿ ಆ ಭಾರವನ್ನು ಹೊರಬೇಕಾದವರು ಯಾರು?” ಎಂದು ಪ್ರಶ್ನಿಸಿದ ನ್ಯಾಯಾಲಯ, ಅಂತಿಮವಾಗಿ ಈ ಎಲ್ಲಾ ಉಚಿತಗಳ ಹೊರೆ ತೆರಿಗೆದಾರರ ತಲೆಯ ಮೇಲೆ ಬೀಳುತ್ತದೆ ಎಂದು ಅಭಿಪ್ರಾಯಪಟ್ಟಿದೆ.
ಉಚಿತಗಳ ಬಗ್ಗೆ ಮಾತನಾಡಿದ ಮುಖ್ಯ ನ್ಯಾಯಮೂರ್ತಿಗಳು, “ಚುನಾವಣೆಯ ಮುನ್ನವೇ ಈ ಉಚಿತಗಳನ್ನು ಏಕೆ ಘೋಷಿಸಲಾಗುತ್ತಿದೆ? ಎಲ್ಲಾ ರಾಜಕೀಯ ಪಕ್ಷಗಳು, ಸಮಾಜ ಸೇವಕರು ಮತ್ತು ಬುದ್ಧಿಜೀವಿಗಳು ಈ ಬಗ್ಗೆ ಪುನರ್ವಿಮರ್ಶೆ ನಡೆಸಬೇಕು. ಈ ಪದ್ಧತಿ ಇನ್ನು ಎಷ್ಟು ಕಾಲ ಮುಂದುವರಿಯಬೇಕು? ರಾಜ್ಯ ಸರ್ಕಾರಗಳು ತೀವ್ರ ಆರ್ಥಿಕ ಕೊರತೆಯಿಂದ ಬಳಲುತ್ತಿದ್ದರೂ ಉಚಿತಗಳನ್ನು ಮುಂದುವರಿಸುತ್ತಿವೆ. ಒಂದು ವೇಳೆ ನೀವು ವರ್ಷಕ್ಕೆ ಶೇಕಡಾ 25ರಷ್ಟು ಆದಾಯವನ್ನು ಪಡೆಯುತ್ತಿದ್ದರೆ, ಅದನ್ನು ರಾಜ್ಯದ ಅಭಿವೃದ್ಧಿಗೆ ಏಕೆ ಬಳಸಬಾರದು?” ಎಂದು ಕಟುವಾಗಿ ಪ್ರಶ್ನಿಸಿದ್ದಾರೆ.
