Home ಬ್ರೇಕಿಂಗ್ ಸುದ್ದಿ ತಿಹಾರ್ ಜೈಲಿಗೆ ತಹಾವುರ್ ರಾಣಾ ; ವಶಕ್ಕೆ ಪಡೆದ ಎನ್‌ಐಎ

ತಿಹಾರ್ ಜೈಲಿಗೆ ತಹಾವುರ್ ರಾಣಾ ; ವಶಕ್ಕೆ ಪಡೆದ ಎನ್‌ಐಎ

0

26/11 ಮುಂಬೈ ಭಯೋತ್ಪಾದಕ ದಾಳಿ ಪ್ರಕರಣದ ಆರೋಪಿ ತಹಾವುರ್ ರಾಣಾನನ್ನು ಗುರುವಾರ ವಿಶೇಷ ವಿಮಾನದ ಮೂಲಕ ದೆಹಲಿಗೆ ಕರೆತರಲಾಗಿದೆ. ಅಮೆರಿಕದಿಂದ ಗಡಿಪಾರುಗೊಂಡ ನಂತರ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಆತನನ್ನು ವಶಕ್ಕೆ ತೆಗೆದುಕೊಂಡಿದೆ.

ರಾಣಾ ವಿರುದ್ಧ ಕ್ರಿಮಿನಲ್ ಸಂಚು, ಭಾರತ ಸರಕಾರದ ವಿರುದ್ಧ ಸಮರ ಸಾರುವಿಕೆ, ಹತ್ಯೆ, ಫೋರ್ಜರಿ ಪ್ರಕರಣಗಳು ಮತ್ತು ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆಗೆ ಸಂಬಂಧಿಸಿದ ಆರೋಪಗಳನ್ನು ಹೊರಿಸಲಾಗಿದೆ. ಪ್ರಸ್ತುತ ಆತನನ್ನು ತಿಹಾರ್ ಜೈಲಿನಲ್ಲಿ ಇರಿಸಲಾಗಿದೆ.

ಭಾರತಕ್ಕೆ ಗಡಿಪಾರುಗೊಳಿಸುವ ಆದೇಶಕ್ಕೆ ತಡೆಯಾಜ್ಞೆ ನೀಡಬೇಕು, ಉದರಕ್ಕೆ ಸಂಬಂಧಿಸಿದ ಕಾಯಿಲೆ, ಪಾರ್ಕಿನ್ಸನ್ ರೋಗ ಸೇರಿದಂತೆ ವಿವಿಧ ವ್ಯಾಧಿಗಳಿಂದ ಬಳಲುತ್ತಿರುವುದರಿಂದ ಗಡಿಪಾರು ಮಾಡದಂತೆ ಅಮೇರಿಕಾ ಸರ್ವೋಚ್ಚ ನ್ಯಾಯಾಲಯಕ್ಕೆ ಕೋರಿದ್ದನು. ರಾಣಾನ ಮನವಿಯನ್ನು ಅಮೆರಿಕದ ಸರ್ವೋಚ್ಚ ನ್ಯಾಯಾಲಯ ತಿರಸ್ಕರಿಸಿದ ಬೆನ್ನಲ್ಲೇ ಎನ್‌ಐಎ ಹಾಗೂ ದೇಶದ ಬೇಹುಗಾರಿಕಾ ಸಂಸ್ಥೆ ‘ರಾ’ದ ಅಧಿಕಾರಿಗಳ ಜಂಟಿ ತಂಡವೊಂದು ರಾಣಾನನ್ನು ಕರೆತರಲು ಅಮೆರಿಕಕ್ಕೆ ತೆರಳಿತ್ತು.

ಪಾಕ್ ಮೂಲದ ಕೆನಡ ಪ್ರಜೆಯಾದ ರಾಣಾ ಮುಂಬೈ ಭಯೋತ್ಪಾದಕ ದಾಳಿಗಾಗಿ ಸಾಗಣೆ ಹಾಗೂ ಆರ್ಥಿಕ ಬೆಂಬಲವನ್ನು ಒದಗಿಸಿದ್ದನೆಂದು ಪ್ರಕರಣದ ಇನ್ನೋರ್ವ ಪ್ರಮುಖ ಆರೋಪಿ ಪಾಕ್ ಮೂಲದ ಅಮೆರಿಕನ್ ಉಗ್ರ ಡೇವಿಡ್ ಕೋಲ್‌ ಮ್ಯಾನ್ ಹ್ಯಾಡ್ಲಿ ಆಪಾದಿಸಿದ್ದನು.

ರಾಣಾ, ಡೇವಿಡ್ ಕೋಲ್ಮನ್ ಹ್ಯಾಡ್ಲಿ ಹಾಗೂ ಇತರ ಆರು ಮಂದಿ ಭಾರತದಲ್ಲಿ ಭಯೋತ್ಪಾದಕ ದಾಳಿಗೆ ಸಂಚುಹೂಡಿದ ಹಾಗೂ ಅವುಗಳನ್ನು ಕಾರ್ಯಗತಗೊಳಿಸಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆಂದು ರಾಷ್ಟ್ರೀಯ ತನಿಖಾ ಸಂಸ್ಥೆಯು 2011ರ ಡಿಸೆಂಬರ್‌ ನಲ್ಲಿ ಸಲ್ಲಿಸಿದ ದೋಷಾರೋಪ ಪಟ್ಟಿಯಲ್ಲಿ ಆರೋಪಿಸಿದೆ.

You cannot copy content of this page

Exit mobile version