ಮಹಿಳಾ ಪ್ರತಿಭಟನಾಕಾರರ ವಿರುದ್ಧ ಆಕ್ಷೇಪಾರ್ಹ ಹಾಗೂ ಅವಮಾನಕರ ಹೇಳಿಕೆ ನೀಡಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಕೇರಳದ ರಾಜಕೀಯ ವಿಶ್ಲೇಷಕ ಹಾಗೂ ಬಿಜೆಪಿ ಮಾಜಿ ಪದಾಧಿಕಾರಿ ಟಿ.ಜಿ. ಮೋಹನ್ದಾಸ್ ಅವರಿಗೆ ಸೋಮವಾರ ಜಾಮೀನು ದೊರೆತಿದೆ. ಭಾನುವಾರ ತಡರಾತ್ರಿ ಕೊಚ್ಚಿಯಲ್ಲಿರುವ ಅವರ ನಿವಾಸದಿಂದ ಅವರನ್ನು ಬಂಧಿಸಲಾಗಿತ್ತು. ತಿರುವನಂತಪುರದ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಪೋಲಿಸರ ವಶಕ್ಕೆ ನೀಡುವ ಮನವಿಯನ್ನು ತಿರಸ್ಕರಿಸಿ ಅವರಿಗೆ ಜಾಮೀನು ಮಂಜೂರು ಮಾಡಿದೆ.
ನಗರದ ಸೈಬರ್ ಪೋಲಿಸರು ಸೋಮವಾರ ಮೋಹನ್ದಾಸ್ ಅವರ ಬಂಧನವನ್ನು ಅಧಿಕೃತವಾಗಿ ದಾಖಲಿಸಿಕೊಂಡಿದ್ದರು. ಪೋಲಿಸರು ನ್ಯಾಯಾಲಯದಿಂದ ಅವರ ವಶವನ್ನು ಕೋರಿದ್ದರಾದರೂ, ನ್ಯಾಯಾಲಯ ಅದನ್ನು ಪುರಸ್ಕರಿಸಲಿಲ್ಲ. ಮೋಹನ್ದಾಸ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ಕಾಯ್ದೆಯಡಿ ದಂಗೆಗೆ ಪ್ರಚೋದನೆ, ಮಹಿಳೆಯರ ಘನತೆಗೆ ಧಕ್ಕೆ ತರುವುದು ಹಾಗೂ ಸಾರ್ವಜನಿಕ ಶಾಂತಿ ಭಂಗ ಉಂಟುಮಾಡುವ ಸುಳ್ಳು ಹೇಳಿಕೆಗಳನ್ನು ಹರಡುವಿಕೆ ಮುಂತಾದ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಹೇಳಿಕೆಗೆ ಬಿಜೆಪಿ ಅಸಮ್ಮತಿ, ಬಂಧನದ ಸಮಯದ ಬಗ್ಗೆ ಪ್ರಶ್ನೆ
ಟಿ.ಜಿ. ಮೋಹನ್ದಾಸ್ ಅವರು ಹಿಂದೆ ಕೇರಳ ಬಿಜೆಪಿಯ ಬೌದ್ಧಿಕ ಪ್ರಕೋಷ್ಟದ (Intellectual Cell) ಸಂಚಾಲಕರಾಗಿ ಸೇವೆ ಸಲ್ಲಿಸಿದ್ದರು. ಅವರ ಬಂಧನದ ನಂತರ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್, ಮೋಹನ್ದಾಸ್ ಅವರ ಹೇಳಿಕೆಗಳಿಗೆ ಪಕ್ಷ ಅಸಮ್ಮತಿ ಸೂಚಿಸುತ್ತದೆ ಎಂದಿದ್ದಾರೆ. ಮೋಹನ್ದಾಸ್ ಅವರ ಹೆಸರಿನಲ್ಲಿ ನೀಡಲಾದ ಹೇಳಿಕೆಗಳು ತಪ್ಪು ಅಥವಾ ಆಕ್ಷೇಪಾರ್ಹವಾಗಿದ್ದರೆ ಪಕ್ಷವು ಅದನ್ನು ಸಂಪೂರ್ಣವಾಗಿ ವಿರೋಧಿಸುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಆದರೆ, ರಾಜೀವ್ ಚಂದ್ರಶೇಖರ್ ಅವರು ಪೋಲಿಸದು ಅವರನ್ನು ಬಂಧಿಸಿದ ಸಮಯವನ್ನು ಪ್ರಶ್ನಿಸಿದ್ದಾರೆ. ಮಧ್ಯರಾತ್ರಿಯಲ್ಲಿ ನಡೆದಿರುವ ಈ ಬಂಧನದ ಕಾರ್ಯಾಚರಣೆಯನ್ನು ಬಿಜೆಪಿ ರಾಜಕೀಯ ಸೇಡಿನ ಕ್ರಮ ಎಂದು ಭಾವಿಸುತ್ತದೆ ಎಂದಿದ್ದಾರೆ. ಕೇರಳ ಸರ್ಕಾರವು ಹಲವು ವಿಚಾರಗಳಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಈ ಸಮಯದಲ್ಲಿ, ಸಾರ್ವಜನಿಕರ ಗಮನವನ್ನು ಬೇರೆಡೆಗೆ ಸೆಳೆಯಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಜುಲೈ 26 ರ ವೀಡಿಯೊದಲ್ಲಿ ಹೇಳಿಕೆ
ಮೋಹನ್ದಾಸ್ ಅವರು ಜುಲೈ 26 ರಂದು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ ವೀಡಿಯೊವೊಂದರಲ್ಲಿ ದೆಹಲಿಯ ಜಂತರ್ ಮಂತರ್ನಲ್ಲಿ ನಡೆಯುತ್ತಿರುವ ಯುವಕರ ಪ್ರತಿಭಟನೆಯನ್ನು ಉಲ್ಲೇಖಿಸಿದ್ದರು. ಆ ವೀಡಿಯೊದಲ್ಲಿ ಅವರು ಪ್ರತಿಭಟನೆಯನ್ನು ನಿಭಾಯಿಸುವ ಜವಾಬ್ದಾರಿಯನ್ನು ತಮಗೆ ನೀಡಿದ್ದರೆ ಜಂತರ್ ಮಂತರ್ ಪ್ರದೇಶದಲ್ಲಿ ಕರ್ಫ್ಯೂ ವಿಧಿಸುತ್ತಿದ್ದೆ ಎಂದು ಹೇಳಿದ್ದರು.
ಪ್ರತಿಭಟನಾಕಾರರಿಗೆ ಅಲ್ಲಿಂದ ಕಾಲಿಡಲು ಸೂಚಿಸಿ, ಧ್ವನಿವರ್ಧಕದ ಮೂಲಕ ಮೂರು ಬಾರಿ ಎಚ್ಚರಿಕೆ ನೀಡಲಾಗುತ್ತಿತ್ತು ಮತ್ತು ನಂತರ ಗುಂಡು ಹಾರಿಸಲಾಗುತ್ತಿತ್ತು ಎಂದು ಅವರು ಹೇಳಿದ್ದರು. ಕೆಲವರು ಸಾವನ್ನಪ್ಪಿ, ಇನ್ನು ಕೆಲವರು ಗಾಯಗೊಂಡ ನಂತರ ಕೆಲವೇ ಗಂಟೆಗಳಲ್ಲಿ ಪರಿಸ್ಥಿತಿ ಹತೋಟಿಗೆ ಬರುತ್ತದೆ ಎಂದೂ ಅವರು ಪ್ರತಿಪಾದಿಸಿದ್ದರು.
ಇದರ ಜೊತೆಗೆ ಮೋಹನ್ದಾಸ್ ಅವರು ಮಹಿಳಾ ಪ್ರತಿಭಟನಾಕಾರರ ವಿರುದ್ಧವೂ ತೀವ್ರ ಆಕ್ಷೇಪಾರ್ಹ ಮತ್ತು ಅವಮಾನಕರ ಹೇಳಿಕೆಗಳನ್ನು ನೀಡಿದ್ದರು ಎಂಬ ಆರೋಪವಿದೆ. ಈ ಹೇಳಿಕೆಗಳಿಗೆ ಸಂಬಂಧಿಸಿದಂತೆ ಸೈಬರ್ ಪೋಲಿಸರು ಜುಲೈ 29 ರಂದು ಎಫ್ಐಆರ್ ದಾಖಲಿಸಿಕೊಂಡಿದ್ದರು, ಆದರೆ ಬಂಧನದ ಕಾರ್ಯಾಚರಣೆಯನ್ನು ಆಗಸ್ಟ್ 9 ರಂದು ನಡೆಸಲಾಯಿತು.
ಸರ್ಕಾರದ ವಿರುದ್ಧ ಸಿಪಿಐ(ಎಂ) ವಾಗ್ದಾಳಿ
ಮೋಹನ್ದಾಸ್ ವಿರುದ್ಧ ಕ್ರಮ ಕೈಗೊಳ್ಳಲು ವಿಳಂಬ ಮಾಡಿದ್ದಕ್ಕೆ ವಿರೋಧ ಪಕ್ಷವಾದ ಸಿಪಿಐ(ಎಂ) ಕೇರಳ ಸರ್ಕಾರದ ವಿರುದ್ಧ ಪ್ರಶ್ನೆಗಳನ್ನು ಎತ್ತಿತ್ತು. ಈ ವಿಷಯದಲ್ಲಿ ಸರ್ಕಾರ ಮೃದು ಧೋರಣೆ ತಳೆದಿದೆ ಎಂದು ಪಕ್ಷ ಆರೋಪಿಸಿತ್ತು. ಇದರ ಬೆನ್ನಲ್ಲೇ ಭಾನುವಾರ ರಾತ್ರಿ ಪೋಲಿಸರು ಮೋಹನ್ದಾಸ್ ಅವರನ್ನು ಅವರ ಕೊಚ್ಚಿನ್ ನಿವಾಸದಿಂದ ಬಂಧಿಸಿದ್ದರು. ಆದರೆ, ಸೋಮವಾರ ನ್ಯಾಯಾಲಯದಿಂದ ಅವರಿಗೆ ಜಾಮೀನು ದೊರೆತಿದೆ.
