ನ್ಯಾಯಮೂರ್ತಿ ಹೇಮಂತ್ ಗುಪ್ತಾ ಮತ್ತು ನ್ಯಾಯಮೂರ್ತಿ ಸುಧಾಂಶು ಧುಲಿಯಾ ಅವರನ್ನು ಒಳಗೊಂಡ ಸುಪ್ರೀಂಕೋರ್ಟ್ ದ್ವಿಸದಸ್ಯ ನ್ಯಾಯಪೀಠ ನಾಳೆ ಹಿಜಾಬ್ ಕುರಿತಾದ ಮಹತ್ವದ ತೀರ್ಪನ್ನು ನೀಡುವ ಎಲ್ಲಾ ಸಾಧ್ಯತೆ ಇದೆ.
ಕರ್ನಾಟಕದ ಉಡುಪಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಿಂದ ಶುರುವಾದ ಹಿಜಾಬ್ ನ ಕಿಡಿ ಈಗ ಸುಪ್ರೀಂಕೋರ್ಟ್ ಅಂಗಳದಲ್ಲಿದೆ. ಹಿಂದೂಪರ ಸಂಘಟನೆಗಳ ಪೂರ್ವಯೋಜಿತ ಪ್ರತಿಭಟನೆ ಹಿನ್ನೆಲೆಯಲ್ಲಿ ಹಿಜಾಬ್ ದೇಶಾದ್ಯಂತ ದೊಡ್ಡ ಸುದ್ದಿ ಮಾಡಿತ್ತು. ಶಾಲೆ ಮತ್ತು ಕಾಲೇಜುಗಳಲ್ಲಿ ಹಿಜಾಬ್ ದರಿಸಲು ಅನುಮತಿ ಕೊಡಬಾರದು ಎಂದು ಹಿಂದೂಪರ ಸಂಘಟನೆಗಳು ಕಾಲೇಜಿನ ಆಡಳಿತ ಮಂಡಳಿಗೆ ಒತ್ತಾಯಿಸಿದ್ದರು.
ಅಲ್ಲಿಯವರೆಗೂ ಯಾವುದೇ ಸದ್ದು ಗದ್ದಲವಿಲ್ಲದೇ ನಡೆಯುತ್ತಿದ್ದ ಪ್ರಕ್ರಿಯೆಯ ಮಧ್ಯೆ ಹಿಂದೂಪರ ಸಂಘಟನೆಗಳು ಎಬ್ಬಿಸಿದ ಗೊಂದಲದ ನಡುವೆ ಕೆಲವು ವಿದ್ಯಾರ್ಥಿನಿಯರು ಕಾಲೇಜಿನಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದರು. ಇದು ನಂತರ ಅವರ ಪರೀಕ್ಷೆ ಬರೆಯುವುದನ್ನೂ ತಡೆಯುವ ಮಟ್ಟಕ್ಕೆ ಕಾವು ಪಡೆದುಕೊಂಡಿತು.
ಈ ಬಗ್ಗೆ ಕಾನೂನಾತ್ಮಕವಾಗಿ ನ್ಯಾಯ ಕೇಳಿಕೊಂಡು ಮುಸ್ಲಿಂ ವಿದ್ಯಾರ್ಥಿನಿಯರು ಕೋರ್ಟ್ ಮೊರೆ ಹೋಗಿದ್ದರು. ಕರ್ನಾಟಕ ಹೈಕೋರ್ಟ್ನಲ್ಲಿಯೂ ಈ ಬಗ್ಗೆ ವಿಚಾರಣೆ ನಡೆದು ಮಾ.15ರಂದು ವಿದ್ಯಾರ್ಥಿನಿಯವರ ಕೋರಿಕೆ ತಿರಸ್ಕರಿಸಿ, ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸಲು ಅವಕಾಶ ಇಲ್ಲ ಎಂದು ತೀರ್ಪು ನೀಡಿತ್ತು. ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ವಿಧ್ಯಾರ್ಥಿನಿಯರು ಸುಪ್ರೀಂಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.
ಸುಧೀರ್ಘ ವಿಚಾರಣೆ ನಂತರ ಅರ್ಜಿದಾರರ ಮತ್ತು ಪ್ರತಿವಾದಿಗಳ ವಕೀಲರ ವಾದಗಳನ್ನು ಆಲಿಸಿದ ಸುಪ್ರೀಂಕೋರ್ಟ್ ಹಿಜಾಬ್ ತೀರ್ಪನ್ನು ಕಾಯ್ದಿರಿಸಿದೆ. ಈ ತೀರ್ಪನ್ನು ಬಹುತೇಕ ನಾಳೆಯ ದಿನ ಪ್ರಕಟಿಸುವ ಸಾಧ್ಯತೆ ಇದೆ. ಮೇಲಾಗಿ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಹೇಮಂತ್ ಗುಪ್ತಾ ಅವರು ಅ.16 ರಂದು ನಿವೃತ್ತಿಯಾಗಲಿದ್ದಾರೆ. ಹೀಗಾಗಿ, ಬಹುತೇಕ ನಾಳೆಯೇ ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶದ ವಿರುದ್ಧ ಸಲ್ಲಿಸಲಾಗಿದ್ದ ಮೇಲ್ಮನವಿ ಅರ್ಜಿಗಳ ಬಗ್ಗೆ ತೀರ್ಪು ಪ್ರಕಟವಾಗಲಿದೆ.