Home ಸಿನಿಮಾ ಬಯಲು ಸೀಮೆ To ಪಶ್ಚಿಮ ಘಟ್ಟದ ಕಥೆ ; ಸಂದೇಶ್ ಶೆಟ್ಟಿ ಆಜ್ರಿ ನಿರ್ದೇಶನದ ಇನಾಮ್ದಾರ

ಬಯಲು ಸೀಮೆ To ಪಶ್ಚಿಮ ಘಟ್ಟದ ಕಥೆ ; ಸಂದೇಶ್ ಶೆಟ್ಟಿ ಆಜ್ರಿ ನಿರ್ದೇಶನದ ಇನಾಮ್ದಾರ

0

ಕನ್ನಡ, ಕನ್ನಡತನ ಎಂಬುದು ಸ್ವಾಭಿಮಾನಿ ಕನ್ನಡಿಗರ ಉಸಿರು. ಬಹುಶಃ ಕಾವೇರಿ, ಮಹದಾಯಿ ಹೀಗೆ ಈ ನಾಡಿನ ನೆಲ, ಜಲದ ವಿಚಾರ ಬಂದಾಗೆಲ್ಲ, ಸ್ವಾಭಿಮಾನಿ ಕನ್ನಡಿಗರು ಪ್ರದರ್ಶಿಸುವ ಒಗ್ಗಟ್ಟು ಬಹುಶಃ ದೇಶವೇ ಕಂಡು ಅರಿತ ವಿಚಾರ. ಬಹುಭಾಷಿಗರಿಗೆ ಅನ್ನ ಮತ್ತು ಆಶ್ರಯ ನೀಡಿದ ತಾಣ ಈ ನಾಡು. ಈ ನಿಟ್ಟಿನಲ್ಲಿ ಚಿತ್ರರಂಗದಲ್ಲೂ ಕೂಡ ಕನ್ನಡಿಗರನ್ನೇ ಕಟ್ಟಿಕೊಂಡು ಸಮಾಜಕ್ಕೊಂದು ಸಂದೇಶ ನೀಡಬಲ್ಲ ಚಿತ್ರ ಕಥೆಯನ್ನು ಹೆಣೆದು ಅದನ್ನು ಪರದೆ ಮೇಲೆ ತರಲು ಸಿದ್ಧರಾಗಿದ್ದಾರೆ ನಿರ್ದೇಶಕ ಸಂದೇಶ ಶೆಟ್ಟಿ ಆಜ್ರಿ.

ಹೌದು, ಬಹುಶಃ ಈ ಪ್ರಯತ್ನ ಚಿತ್ರರಂಗದಲ್ಲಿ ಈಗಾಗಲೇ ಆಗಿದೆ. ಆದರೆ ಆ ಪ್ರಯತ್ನದಲ್ಲಿ ಸಾಗಿದ ಕೆಲವೊಬ್ಬರಲ್ಲಿ ಸಂದೇಶ್ ಕೂಡ ಒಬ್ಬರು ಅಂತ ಹೇಳಿದರೆ ಅತಿಶಯೋಕ್ತಿಯಾಗಲಾರದು.

ಒಬ್ಬ ನಿರ್ದೇಶಕನಾಗಿ ಕೇವಲ ಆ‌್ಯಕ್ಷನ್ ಕಟ್ ಮಾತ್ರ ಹೇಳದೇ ತಾನೇ ಕಥೆ ಬರೆದು, ಆ ಕಥೆಗೊಂದು ಕಳೆಕಟ್ಟಿ ಅದನ್ನು ಪರದೆ ಮೇಲೆ ತರುವ ಪ್ರಯತ್ನದ ಜೊತೆಗೆ ತನ್ನದೆಯಾದ ತಂಡ ಕಟ್ಟಿಕೊಂಡು ಚಿತ್ರದ ಪ್ರಮೋಷನ್ ಗಾಗಿ ಹಗಲಿರುಳು ಶ್ರಮಿಸುತ್ತಿರುವ ಕನಸು ಕಂಗಳ ಕುವರ ಸಂದೇಶ್ ಶೆಟ್ಟಿ.

ಮೂಲತಃ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಆಜ್ರಿ ಗ್ರಾಮದ ಸಂದೇಶ, ನಿರ್ದೇಶನದ ಎರಡನೇ ಚಿತ್ರ ಇನಾಮ್ದಾರ. ಬಿಡುಗಡೆಗೂ ಮುನ್ನವೇ ಚಿತ್ರ ಈಗಾಗಲೇ ಸಾಕಷ್ಟು ಸದ್ದು ಮಾಡುತ್ತಿದೆ. ಚಿತ್ರದ ಸಿಲ್ಕು ಮಿಲ್ಕು ಸಾಂಗ್ ಮೀಲಿಯನ್ ಗಟ್ಟಲೆ ವಿವ್ ಆಗಿದ್ದು ಪಡ್ಡೆ ಹುಡುಗರ ನಿದ್ದೆಗೆಡೆಸಿದೆ. ಸಿಲ್ಕು ಯಾವಾಗ ತೆರೆಮೇಲೆ ಬರ್ತಾಳೋ ಅಂತ ಕುತೂಹಲ ಮೂಡಿಸಿದೆ.

ಕನ್ನಡದ ಕನ್ನಡಿಗರೇ ನಿರ್ಮಿಸಿರುವ ಇನಾಮ್ದಾರ್ ಚಿತ್ರ ಇನ್ನು ಕೆಲವೇ ದಿನಗಳಲ್ಲಿ ತೆರೆಯ ಮೇಲೆ ಬರಲಿದೆ. ಅಕ್ಟೋಬರ್ 5ರಂದು ಬೆಂಗಳೂರಿನಲ್ಲಿ ಬಹುಭಾಷೆಯಲ್ಲಿ ಟೀಸರ್ ಬಿಡುಗಡೆಯಾಗಿದ್ದು, ಉತ್ತಮ ಅಭಿಪ್ರಾಯ ಪಡೆದಿದೆ. ಟೀಸರ್ ಮೊದಲ ನೋಟಕ್ಕೆ ಅನುಭವೀ ತಂಡ ಕಟ್ಟಿ ಕೊಡುವಂತೆ ಭಾಸವಾದರೆ ಅತಿಶಯೋಕ್ತಿಯಲ್ಲ.

ಇದರ ಜೊತೆಗೆ ಅಕ್ಟೋಬರ್ 15ಬೆಳಗಾವಿಯಲ್ಲಿ ಚಿತ್ರದ ಧ್ವನಿ ಸುರಳಿ ಬಿಡುಗಡೆಯಾಗಲಿದೆ. ಅಷ್ಟಕ್ಕೂ ಸಿಲ್ಕು ಮಿಲ್ಕು ನೋಡಿದವರಿಗೆ ಚಿತ್ರದ ಸ್ಟೋರಿ ಏನು ಅಂದ್ರೆ? ಅದನ್ನು ಮಾತ್ರ ಸಸ್ಪೆನ್ಸ್ ಇಟ್ಟಿದೆ ಚಿತ್ರ ತಂಡ. ಇದು ಕಪ್ಪು ಬಿಳುಪಿನ ಬಣ್ಣ ಆಧರಿಸಿದ ಎರಡು ಜನಾಂಗೀಯ ಕಥೆ ಅನ್ನೋದು ಮಾತ್ರ ತಿಳಿದು ಬಂದಿದೆ.

ವಿಭಿನ್ನ ಕಥಾ ಹಂದರವಿದೆ ಎನ್ನಲಾದ ಇನಾಮ್ದಾರ್ ಚಿತ್ರ, ನಟ, ನಿರ್ದೇಶಕ ಸಂದೇಶ್ ಶೆಟ್ಟಿ ಆಜ್ರಿ ಅವರ ಕನಸಿನ ಕೂಸು ಎಂದರೆ ತಪ್ಪಾಗಲಾರದು. ಕತ್ತಲೆ ಕೋಣೆ ಎನ್ನುವ ವಿಭಿನ್ನ ಹಾರರ್ ಬೇಸ್ ಇರುವ ಸೈಂಟಿಫಿಕ್ ಥ್ರಿಲ್ಲರ್ ಚಿತ್ರವನ್ನು ತೆರೆಯ ಮೇಲೆ ತಂದಿದ್ದ ಸಂದೇಶ ಶೆಟ್ಟಿ ಆಜ್ರಿ, ಮೂರು ವರ್ಷಗಳ ಬ್ರೇಕ್ ನಂತರ ಭಾರೀ ತಯಾರಿಯೊಂದಿಗೆ ಇನಾಮ್ದಾರಿನಿಗೆ ಆ‌್ಯಕ್ಷನ್ ಕಟ್ ಹೇಳಿದ್ದಾರೆ.

ಇನಾಮ್ದರ್ ಚಿತ್ರದ ಮೂಲಕ ಚಿತ್ರ ರಸಿಕರಿಗೆ ವಿಭಿನ್ನವಾಗಿರುವ ಕಥೆಯನ್ನು ಮುಂದಿಡಲು ಬರುತ್ತಿದ್ದಾರೆ. ಬಹಳಷ್ಟು ಇಷ್ಟ ಪಟ್ಟು ಸಿದ್ದಪಡಿಸಿದ ಕಥೆಯನ್ನು ತೆರೆಯ ಮೇಲೆ ತರುವ ನಿಟ್ಟಿನಲ್ಲಿ ಬಯಲು ಸೀಮೆ ಯಿಂದ ಹಿಡಿದು ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ನಿರ್ದೇಶಕರ ಮಾರ್ಗದರ್ಶನದಲ್ಲಿ ಚಿತ್ರ ತಂಡ ಸಾಕಷ್ಟು ಶ್ರಮವಹಿಸಿದೆ. ನಿರ್ದೇಶಕರ ಆಸೆಗೆ ಮತ್ತು ಶ್ರಮಕ್ಕೆ ಪೂರಕವಾಗಿ ನಿರ್ಮಾಪಕ ನಿರಂಜನ್ ತಲ್ಲೂರ್ ಸಾಥ್ ನೀಡುವುದರ ಜೊತೆಗೆ ದಣಿವರಿಯದೇ ಕಾರ್ಯನಿರ್ವಹಿಸಿದ್ದಾರೆ.

ನಿರ್ದೇಶಕನ ಹಂಬಲಕ್ಕೆ ನಿರ್ಮಾಪಕನ ಬೆಂಬಲವಿದ್ದಾಗಲೇ ಅಲ್ಲವೆ ನಿರ್ದೇಶಕನಲ್ಲಿರುವ ಕ್ರೀಯಾಶೀಲತೆ ಇನ್ನಷ್ಟು ಜಾಗೃತವಾಗಲು ಸಾಧ್ಯ. ಈ ನಿಟ್ಟಿನಲ್ಲಿ ಸಂದೇಶಗೆ ಸಿಕ್ಕ, ನಿರ್ಪಾಕರು ಹಾಗೂ ನಟರ ತಂಡ ಸಮಾನ ಮನಸ್ಕರು ಮತ್ತು ಆಸಕ್ತರಿದ್ದ ಕಾರಣದಿಂದಲೇ ಒಂದು ಉತ್ತಮ ಚಿತ್ರ ನಿರ್ಮಿಸಲು ಸಾಧ್ಯವಾಗಿದೆ ಅಂತಾರೆ ತಂಡದ ಕೆಲವು ಸದಸ್ಯರು.

ಇನಾಮ್ದಾರ್ ಕಥೆಗೆ ಪೂರಕವಾದ ಫ್ರೇಮ್ ಮೂಲಕ ಕಣ್ಣಿಗೆ ಕಟ್ಟಿಕೊಡುವ ರೀತಿಯ ಚಿತ್ರಣ ಸೆರೆ ಹಿಡಿದಿರುವ ಕ್ಯಾಮೆರಾ ಮ್ಯಾನ್ ಮುರುಳಿ ಅವರು ಚಿತ್ರದ ಇನ್ನೊಂದು ಭಾಗವಾಗಿದ್ದಾರೆ. ಬಯಲುಸೀಮೆಯಿಂದ ಹಿಡಿದು ಪಶ್ವಿಮ ಘಟ್ಟದ ತಪ್ಪಲಿನ‌ ಕಾಡಿನಲ್ಲಿಯೂ ವಯಸ್ಸಿಗೆ ಮೀರಿದ ಉತ್ಸಾಹ ತೋರುತ್ತಾ, ಚಿತ್ರತಂಡವನ್ನು ಹುರಿದುಂಬಿಸಿ ಚಿತ್ರೀಕರಣ ಮಾಡಿ ಮುಗಿಸಿ ಈಗ ಒಂದು ಸಣ್ಣ ರಿಲೀಫ್ ಮೂಡಿನಲ್ಲಿದೆ ಚಿತ್ರತಂಡ. ಪ್ರೇಕ್ಷಕ ಮಹಾಪ್ರಭುಗಳು ಚಿತ್ರವನ್ನು ಇಷ್ಟಪಟ್ಟು ಪ್ರೋತ್ಸಾಹಿಸಿದರೆ ಸಾಕು ಅನ್ನೋ ಕುತೂಹಲವನ್ನು ಕಣ್ಣಿನಲ್ಲಿ ಹೊತ್ತು ಸಣ್ಣ ಯಶಸ್ಸಿನ ಕನಸ್ಸು ಸಂದೇಶದು. ಸಂದೇಶ ಅವರ ಈ ಜರ್ನಿಯಲ್ಲಿ ಶ್ರೇಯ ಮುರುಳಿ ಅವರ ಕಾರ್ಯ ಕೂಡ ಮೆಚ್ಚುವಂಥದ್ದು. ಗಂಡುಮೆಟ್ಟಿದ ನಾಡು ಬೆಳಗಾವಿಯ ಖಡಕ್ ಸ್ಟಾರ್ ರಂಜನ್ ಛತ್ರಪತಿ ಇನಾಮ್ದಾರ್ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಕಥೆಗೆ ಬೇಕಾದಂತೆ ತಮ್ಮ ಪ್ರತಿಭೆಯನ್ನು ಓರೆಗೆ ಹಚ್ಚಿದ್ದಾರೆ.‌ ಕುಡ್ಲದ ಬೆಡಗಿ ನಗುಮುಖದ ಸುಂದರಿ ಚಿರಶ್ರೀ ಅಂಚನ್ ಈಗಾಗಲೇ ಕನ್ನಡ, ತುಳು, ತಮಿಳು ಸಿನೆಮಾಗಳಲ್ಲಿ ನಾಯಕಿಯಾಗಿ ಮಿಂಚಿದ್ದು, ಸದ್ಯ ಇನಾಮ್ದಾರ್ ಸಿನೆಮಾದ ಹಿರೋಯಿನ್. ಈ ಮೂಲಕ ಚಿತ್ರದ ನಾಯಕಿಯಾಗಿ ಅಂಚನ್, ಕುಡ್ಲದ ಕಂಪು ಹರಿಸಿದ್ದಾರೆ.

ಚಿತ್ರದ ಮುಖ್ಯ‌ಭೂಮಿಕೆಯಲ್ಲಿ ಪ್ರಮೋದ್ ಶೆಟ್ಟಿ, ಶರತ್ ಲೋಹಿತಾಶ್ವ, ಅವಿನಾಶ್, ಎಂ.ಕೆ. ಮಠ ಅವರಂತ ಹಿರಿಯ ನಟರಿದ್ದು, ಕಾಂತಾರ ಖ್ಯಾತಿಯ ನಾಗರಾಜ್ ಬೈಂದೂರು, ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಛಾಪು ಮೂಡಿಸಿರುವ ಪ್ರಶಾಂತ್ ಸಿದ್ಧಿ, ರಘು ಪಾಂಡೇಶ್ವರ್, ಕರಣ್ ಕುಂದರ್, ಯಶ್ ಆಚಾರ್ಯ, ಹಾಲಂಬಿ ಅವರಂತ ಕರಾವಳಿಯ ಪ್ರತಿಭೆಗಳ ಸಮಾಗಮ ಚಿತ್ರದಲ್ಲಿ ನೋಡಬಹುದಾಗಿದೆ. ಚಿತ್ರಕ್ಕೆ ಆರ್.ಕೆ. ಮಂಗಳೂರು ಸಹಕಾರ ನೀಡಿದ್ದು, ಸಹ ನಿರ್ದೇಶನದಲ್ಲಿ ರಾಜ್ ಕೃಷ್ಣ ಮತ್ತು ಮಿಥುನ್ ತೀರ್ಥಹಳ್ಳಿ ಸಾಥ್ ನೀಡಿದ್ದಾರೆ. ಸನತ್ ಉಪ್ಪುಂದ, ಅನೀಶ್ ಡಿಸೋಜಾ, ನಾಗೇಶ್ ಮತ್ತಿತರರು ಸಹಕಾರ ನೀಡಿದ್ದಾರೆ. ಏನೇ ಆಗಲಿ ಕಲೆ ನಮ್ಮ ತನದ ಸ್ವಾಭಿಮಾನ. ಈ ನಿಟ್ಟಿನಲ್ಲಿ ಅಪ್ಪಟ ಕನ್ನಡಿಗರನ್ನು ಕಟ್ಟಿಕೊಂಡ ಚಿತ್ರತಂಡಕ್ಕೆ ಕನ್ನಡಿಗರಾದ ನೀವುಗಳು ಚಿತ್ರವನ್ನು ಕಣ್ತುಂಬಿಕೊಂಡು ಆಶೀರ್ವದಿಸಿದರೆ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಚಿತ್ರಗಳಿಗೆ ಪ್ರೋತ್ಸಾಹಿಸಿದಂತಾಗುತ್ತದೆ ಅನ್ನೋದು ನಿರ್ದೇಶಕ ಸಂದೇಶ್ ಅವರ ಮನವಿ.

ಬಯಲುಸೀಮೆಯ ಒಂದು ಜನಾಂಗ ಮತ್ತು ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಇನ್ನೊಂದು ಜನಾಂಗ ನಡುವೆ ನಡೆಯುವ ವರ್ಣ ಭೇದದ ಕಥೆಯ ಜೀವಾಳ. ಚಿತ್ರದುದ್ದಕ್ಕೂ ಪಶ್ಚಿಮ ಘಟ್ಟದ ತಪ್ಪಲಿನ ಸೌಂದರ್ಯ ಕಾಣಬಹುದಾಗಿದ್ದು, ಬಯಲು ಸೀಮೆಯ ಸೊಬಗು ಚಿತ್ರ ರಸಿಕರಿಗೆ ಮೆಚ್ಚಿಗೆಯಾಗಲಿದೆ. ಸದ್ಯ ಇನಾಮ್ದಾರ್ ಚಿತ್ರ ಚಿತ್ರೀಕರಣ ಸಂಪೂರ್ಣ ಮುಗಿದಿದ್ದು, ಇನ್ನು ಕೆಲವು ದಿನಗಳಲ್ಲಿ ಕರಾವಳಿ ಪ್ರತಿಭೆ ಸಂದೇಶ್ ಶೆಟ್ಟಿ ಆಜ್ರಿ ನಿರ್ದೇಶನದ ಎರಡನೇಯ ಚಿತ್ರ ತೆರೆಯ ಮೇಲೆ ಮೂಡಿಬರಲಿದೆ.

You cannot copy content of this page

Exit mobile version