Home ಬೆಂಗಳೂರು ಈ ಬಾರಿಯ ಮುಂಗಾರು, ಜೂನ್‌ಗೂ ಮೊದಲೆ ಕರ್ನಾಟಕಕ್ಕೆ ಮಳೆ

ಈ ಬಾರಿಯ ಮುಂಗಾರು, ಜೂನ್‌ಗೂ ಮೊದಲೆ ಕರ್ನಾಟಕಕ್ಕೆ ಮಳೆ

ಬೆಂಗಳೂರು : ಈ ಬಾರಿಯ ಮುಂಗಾರು ಋತುವಿನಲ್ಲಿ ವಾಡಿಕೆಗಿಂತಲೂ ಹೆಚ್ಚಿನ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆಯು ಏಪ್ರಿಲ್‌ನಲ್ಲೇ ಮುನ್ಸೂಚನೆ ಕೊಟ್ಟಿದೆ. ಜೂನ್‌ನಿಂದ ಸೆಪ್ಟೆಂಬರ್‌ವರೆಗೂ ನಾಲ್ಕು ತಿಂಗಳು ಮುಂಗಾರು ಋತುವಿನಲ್ಲಿ ಹೆಚ್ಚಿನ ಮಳೆಯು ಸುರಿಯುವ ಸಾಧ್ಯತೆ ಇದೆ. ಈ ಬಾರಿ ಶೇಕಡ 105ರಷ್ಟು ಮಳೆಯಾಗಲಿದೆ ಹಾಗೂ ಸರಾಸರಿ 87 ಸೆಂ.ಮೀ. ಮಳೆಯಾಗುವುದಾಗಿ ಅಂದಾಜಿಸಲಾಗಿದೆ. ಈ ಅವಧಿಯಲ್ಲಿ ರಾಜಸ್ಥಾನ, ಮಹಾರಾಷ್ಟ್ರ, ಮಧ್ಯಪ್ರದೇಶ, ಒಡಿಶಾ, ಛತ್ತೀಸಗಢ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಹಾಗೇ ಜಮ್ಮು ಮತ್ತು ಕಾಶ್ಮೀರ, ಲಡಾಖ್, ತಮಿಳುನಾಡು, ಬಿಹಾರ ಹಾಗೂ ಈಶಾನ್ಯ ರಾಜ್ಯಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಸುರಿಯುವ ಮುನ್ಸೂಚನೆ ಇದೆ.

ಇನ್ನೇನು ಕೆಲವು ವಾರಗಳಲ್ಲೇ ಬೇಸಿಗೆಯ ಕಾವು ತಣ್ಣಗೆ ಮಾಡಲು ಮುಂಗಾರು ಮಳೆಯ ಪ್ರವೇಶ ಆಗಲಿದೆ. 16 ವರ್ಷಗಳ ಬಳಿಕ ಈ ವರ್ಷ ಮುಂಗಾರು ಬಹಳ ಬೇಗನೆ ನೈರುತ್ಯ ಭಾಗಕ್ಕೆ ಬರುತ್ತಿದೆ. ಅಷ್ಟೇ ಅಲ್ಲದೇ, ಈ ಬಾರಿ ಹಿಂದಿನ ವರ್ಷಗಳಿಗಿಂತ ಮಳೆಯ ಅಬ್ಬರವು ಜೋರಾಗಿರುತ್ತದೆ. ಮುಂಗಾರು ಶೀಘ್ರ ಆಗಮನದ ಬಗ್ಗೆ ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ಕೊಟ್ಟಿದೆ. ನೈರುತ್ಯ ಮುಂಗಾರು ಸಾಮಾನ್ಯವಾಗಿ ಜೂನ್ 1ರ ಬಳಿಕ ಕೇರಳಕ್ಕೆ ಆಗಮಿಸುತ್ತಿತ್ತು. ಈ ಬಾರಿ ಅದಕ್ಕಿಂತಲೂ ನಾಲ್ಕು ದಿನ ಮುಂಚಿತವಾಗಿ, ಮೇ 27 ರಂದು ಕೇರಳ ಕರಾವಳಿಯನ್ನು ತಲುಪಲಿದೆ. ಈ ಸಲದ ಖಾರಿಫ್‌ ಬಿತ್ತನೆಯ ಋತುವಿನ ಮೇಲೆ ಒಳ್ಳೆಯ ಪರಿಣಾಮವು ಮುಂಗಾರು ಮಳೆಯಿಂದ ಆಗುವ ನಿರೀಕ್ಷೆ ಇದೆ.

ಕರ್ನಾಟಕದಲ್ಲಿ ಯಾವಾಗಿಂದ ಮುಂಗಾರು ಮಳೆ

ಈ ಬಾರಿ ಬೇಸಿಗೆಯಲ್ಲೂ ಆಗಾಗ್ಗೆ ಮಳೆಯ ಸಿಂಚನ ಕರ್ನಾಟಕದ ಹಲವು ಭಾಗಗಳಲ್ಲಿ ಆಗಿದೆ. ಬೇಸಿಗೆಯ ತಾಪವು ಮಳೆಯಿಂದಾಗಿ ಕಡಿಮೆಯಾಗಿದೆ. ಮೇ ಮೂರನೇ ವಾರ ಕೂಡ ರಾಜ್ಯದ ಹಲವು ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆ ಇರೋದಾಗಿ ಹವಾಮಾನ ಇಲಾಖೆಯು ಮುನ್ಸೂಚನೆ ಕೊಟ್ಟಿದೆ. ಈ ಮಳೆ ಮತ್ತು ಬಿಸಿಲಿನ ಆಟಗಳು ಮುಗಿಯೋಷ್ಟರಲ್ಲೇ ಕರ್ನಾಟಕಕ್ಕೆ ಮುಂಗಾರು ಪ್ರವೇಶ ಆಗಲಿದೆ. ಸಾಮಾನ್ಯವಾಗಿ ಕೇರಳಕ್ಕೆ ಮುಂಗಾರು ಪ್ರವೇಶ ಆಗಿ ಮೂರು ನಾಲ್ಕು ದಿನಗಳಲ್ಲೇ ಕರ್ನಾಟಕಕ್ಕೂ ಮಳೆಗಾಲ ಶುರುವಾಗುತ್ತೆ.

2024ರಲ್ಲಿ ಕರ್ನಾಟಕಕ್ಕೆ ಜೂನ್‌ 4 ರಂದು ಮುಂಗಾರು ಪ್ರವೇಶ ಆಗಿತ್ತು. ಈ ಬಾರಿ ಕೇರಳಕ್ಕೆ ಮೇ 27 ಕ್ಕೆ ಆಗಮಿಸುತ್ತಿದ್ದು, ಕರ್ನಾಟಕಕ್ಕೆ ಮೇ 30 ಅಥವಾ 31ಕ್ಕೆ ಪ್ರವೇಶ ಮಾಡುವ ನಿರೀಕ್ಷೆ ಇದೆ. ಅಂದರೆ, ರಾಜ್ಯಕ್ಕೆ ಸಾಮಾನ್ಯ ದಿನಗಳಿಗಿಂತ 5 ರಿಂದ 6 ದಿನ ಮುಂಚಿತವಾಗಿ ಮುಂಗಾರು ಆಗಮನವಾಗುವ ಸಾಧ್ಯತೆ ಇದೆ. 2009ರಲ್ಲಿ ಮೇ 23 ರಂದೇ ಮುಂಗಾರು ಕೇರಳವನ್ನು ಪ್ರವೇಶಿಸಿತ್ತು. ಅದು ಅತ್ಯಂತ ವೇಗವಾಗಿ ಬಂದ ಮಾನ್ಸೂನ್ ಆಗಿತ್ತು, ಹಾಗೂ ಆ ವರ್ಷ ಕರ್ನಾಟಕದಲ್ಲಿ ಉತ್ತಮ ಮಳೆಯಾಗಿತ್ತು. ಈ ಬಾರಿಯೂ ಶೀಘ್ರ ಮುಂಗಾರು ಪ್ರವೇಶ ಆಗ್ತಿರೋದ್ರಿಂದ ಈ ಸಲವೂ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ.

You cannot copy content of this page

Exit mobile version