ಇಂದು ಕ್ರೈಸ್ತ ಧರ್ಮಗುರು ಪೋಪ್ ಫ್ರಾನ್ಸಿಸ್ ಅವರ ಅಂತ್ಯಕ್ರಿಯೆ ವ್ಯಾಟಿಕನ್ ಸಿಟಿಯಲ್ಲಿ ನಡೆಯಲಿದೆ. ಈಸ್ಟರ್ ದಿನದಂದು ನಿಧನರಾದ ಪೋಪ್ ಫ್ರಾನ್ಸಿಸ್ ಅವರನ್ನು ಕ್ರೈಸ್ತ ವಿಧಿವಿಧಾನಗಳ ಪ್ರಕಾರ ಸೆಂಟ್ ಪೀಟರ್ಸ್ ಬ್ಯಾಸಿಲಿಕಾ ಎದುರು ಅಂತ್ಯಕ್ರಿಯೆ ನಡೆಯಲಿದೆ.
ವ್ಯಾಟಿಕನ್ ಸಿಟಿಯ ಸಮಯದ ಪ್ರಕಾರ 10.00 ಗಂಟೆಗೆ ಅವರ ಅಂತ್ಯಕ್ರಿಯೆ ನಡೆಯಲಿದ್ದು, ಜಾಗತಿಕ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಇಂದಿನವರೆಗೂ ಅವರ ಅಂತಿಮ ದರ್ಶನಕ್ಕೆ ಭಕ್ತಾದಿಗಳಿಗೆ ಅವಕಾಶ ನೀಡಲಾಗಿತ್ತು. ಭಾರತದಿಂದ ರಾಷ್ಟ್ರಪತಿ ದ್ರೌಪದಿ ಮುರ್ಮು, ಹಾಗೂ ರಾಜ್ಯ ಸರ್ಕಾರದ ಪರವಾಗಿ ಸಚಿವ ಕೆ.ಜೆ.ಜಾರ್ಜ್ ಮತ್ತು ಐವಾನ್ ಡಿಸೋಜಾ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಪೋಪ್ ಫ್ರಾನ್ಸಿಸ್ ಅವರು ಗಾಜಾ ಸೇರಿದಂತೆ ಪ್ರಪಂಚದಾದ್ಯಂತ ನಡೆಯುತ್ತಿರುವ ಸಂಘರ್ಷದ ಬಗ್ಗೆ ಹೇಳಿಕೆ ನೀಡಿ ಶಾಂತಿಗಾಗಿ ಕರೆ ನೀಡಿದರು. ಪೋಪ್ ಅವರ ನಿಧನಕ್ಕೆ ಭಾರತೀಯ ಗೃಹ ಸಚಿವಾಲಯವು 3 ದಿನಗಳ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಿದೆ. ಏಪ್ರಿಲ್ 22 ಮತ್ತು 23 ರಂದು ಮೊದಲ ಎರಡು ದಿನಗಳ ರಾಷ್ಟ್ರೀಯ ಶೋಕಾಚರಣೆ ನಡೆಯಲಿದ್ದು, ಮೂರನೇ ದಿನ ಅಂತ್ಯಕ್ರಿಯೆಯ ದಿನದಂದು ರಾಷ್ಟ್ರೀಯ ಶೋಕಾಚರಣೆ ನಡೆಯಲಿದೆ.