ಹಾಸನ : ಬೇರೆ ಬೇರೆ ಕ್ಷೇತ್ರಗಳಲ್ಲಿ ಎತ್ತರದ ಸಾಧನೆಗಳನ್ನು ಮಾಡುವವರಿದ್ದರೆ ಅವರು ಸರ್ಕಾರಿ ಶಾಲೆಗಳಲ್ಲಿ ಕನ್ನಡದ ಮಾಧ್ಯಮದಲ್ಲಿ ಓದುವವರಾಗಿರುತ್ತಾರೆ.ಎಂದು ಜಿಲ್ಲಾಧಿಕಾರಿ ಕೆ ಸತ್ಯಭಾಮ ಹೇಳಿದ್ದಾರೆ. ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ನಾಗರಿಕ ಸಮಿತಿ ಹಾಗೂ ವಿಶ್ವಪಥ ಬಳಗ ಗುರುವಾರ ಹಾಸನದ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿದ್ದ ಸರ್ಕಾರಿ ಶಾಲೆಗಳ ಸಬಲೀಕರಣ ಅಭಿಯಾನದಲ್ಲಿ ಮಾತನಾಡುತ್ತಿದ್ದ ಅವರು ಈ ಅಭಿಯಾನಕ್ಕೆ ಚಾಲನೆ ನೀಡಿದ ಪದ್ಮಶ್ರೀ ಪುರಸ್ಕೃತರು ದೇಶದ ಅತ್ಯಂತ ಹೆಮ್ಮೆಯ ಇಸ್ರೋ ಸಂಸ್ಥೆಯನ್ನು ಅಧ್ಯಕ್ಷರಾಗಿ ಮುನ್ನಡೆಸಿದ ಡಾಕ್ಟರ್ ಎ. ಎಸ್. ಕಿರಣ್ ಕುಮಾರ್ ಸರ್ ಅವರು ಹಾಸನದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿ ಆಗಿದ್ದವರು. ಇಂತಹ ಅನೇಕ ವಿಜ್ಞಾನಿಗಳು ಸಾಹಿತಿಗಳು ಮತ್ತಿತರ ಕ್ಷೇತ್ರಗಳ ಸಾಧಕರ ಹೆಸರು ಹೇಳಬಹುದು ಎಂದು ತಿಳಿಸಿದರು. ಸರ್ಕಾರಿ ಶಾಲೆಗಳಲ್ಲಿ ಓದಿದವರಿಗೆ ಸಮಸ್ಯೆಗಳನ್ನು ಎದುರಿಸುವ ಆತ್ಮವಿಶ್ವಾಸ ಹೆಚ್ಚು ಇರುತ್ತದೆ ಎಂದರು.ತಾವು ಜಿಲ್ಲೆಯ ನೂರಕ್ಕೂ ಅಧಿಕ ಸರ್ಕಾರಿ ಶಾಲೆಗಳನ್ನು ದಾನಿಗಳ ಮೂಲಕ ದುರಸ್ತಿ ಮಾಡಿಸಿ ಕೊಟ್ಟಿದ್ದಲ್ಲದೆ ಅಗತ್ಯ ಪೀಠೋಪಕರಣಗಳನ್ನು ಒದಗಿಸಿರುವದಾಗಿ ಅವರು ಹೇಳಿದರು. ಮನುಷ್ಯನಾಗಿ ಹುಟ್ಟಿದವನು ತನಗಾಗಿ ಬದುಕುವುದು ದೊಡ್ಡ ಸಂಗತಿಯಲ್ಲ ತಮ್ಮ ಜೀವನದಲ್ಲಿ ಸಮಾಜಕ್ಕಾಗಿ ಏನು ಕೊಡುಗೆ ಸಲ್ಲಿಸಿದೆವು ಎಂಬುದು ಬಹಳ ಮುಖ್ಯ ಎಂದು ತಿಳಿಸಿದ ಅವರು ತಾವು ಜಿಲ್ಲಾಧಿಕಾರಿಯಾಗಿ ಎಷ್ಟು ಉತ್ತಮ ಕೆಲಸಗಳನ್ನು ಮಾಡಿದ್ದರು ಪ್ರತಿನಿತ್ಯ ಇನ್ನಷ್ಟು ಮತ್ತಷ್ಟು ದೊಡ್ಡ ಕೆಲಸ ಮಾಡುವ ಕುರಿತು ಚಿಂತಿಸಿ ಕಾರ್ಯರೂಪಕ್ಕೆ ತರುತ್ತಿರುವುದಾಗಿ ವಿವರಿಸಿದರು.
ಲೋಕಸಭಾ ಸದಸ್ಯ ಶ್ರೇಯಸ್ ಪಟೇಲ್ ಅವರು ಮಾತನಾಡಿ ಸರ್ಕಾರಿ ಶಾಲೆಗಳ ಸಬಲೀಕರಣ ಅಭಿಯಾನವು ಅತ್ಯುತ್ತಮ ಯೋಜನೆಯಾಗಿದ್ದು ತಾವು ಜಿಲ್ಲಾ ಪಂಚಾಯಿತಿ ಸದಸ್ಯ ರಾಗಿದ್ದಾಗಿನಿಂದ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಶ್ರಮಿಸುತ್ತಿರುವುದಾಗಿ ಹೇಳಿದರು ರವೀಂದ್ರ ನಗರ ಶಾಲೆಗೆ ಒಂದು ಕೊಠಡಿ ನಿರ್ಮಿಸುವುದಾಗಿ ನಾಗರೀಕ ಸಮಿತಿಗೆ ಭರವಸೆ ನೀಡಿದ್ದೆ ಅದೇ ರೀತಿ ಆಡುವಳ್ಳಿ ಶಾಲೆಗೂ ಒಂದು ಕೊಠಡಿ ನಿರ್ಮಿಸಿ ಕೊಡುವುದಾಗಿ ವಾಗ್ದಾನ ಮಾಡಿದರು. ಸರ್ಕಾರಿ ಶಾಲೆಗಳ ಸಬಲೀಕರಣ ಆಗಲೇ ಬೇಕಾಗಿದೆ ಈ ಅಭಿಯಾನ ಆರಂಭಿಸಿದವರು ಅಭಿನಂದನೆಗೆ ಅರ್ಹರಾಗಿದ್ದಾರೆ ಎಂದು ತಿಳಿಸಿದರು. ಹಾಸನ ಮಹಾನಗರ ಪಾಲಿಕೆಯ ಮೇಯರ್ ಆದ ಚಂದ್ರೇಗೌಡರು ಒಂದು ಕೊಠಡಿ ನಿರ್ಮಿಸಿ ಕೊಡುವ ಘೋಷಣೆ ಮಾಡಿದರು. ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ. ಆರ್. ಪೂರ್ಣಿಮಾ ಅವರು ಮಾತನಾಡಿ ಶಾಲೆಗಳ ಅಭಿವೃದ್ಧಿಗಾಗಿ ತಾವು ಅನೇಕ ಕಂಪನಿಗಳ ಮುಖ್ಯಸ್ಥರನ್ನು ಸಂಪರ್ಕಿಸಿರುವುದಾಗಿಯೂ, ಇನ್ಫೋಸಿಸ್ ಸಂಸ್ಥೆ ಅವರು 9 ಶಾಲೆಗಳಿಗೆ ನೂತನವಾಗಿ ಕಟ್ಟಡ ನಿರ್ಮಿಸಿ ಕೊಡುವ ಭರವಸೆ ನೀಡಿದ್ದಾರೆಂದು ಹೇಳಿದರು. ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಪಿ.ಕೃಷ್ಣೇಗೌಡ ಅವರು ಮಾತನಾಡಿ ಸರ್ಕಾರಿ ಶಾಲೆಗಳ ಸಬಲೀಕರಣ ಅಭಿಯಾನವು ತುಂಬಾ ಅಪರೂಪದ ಕಾರ್ಯಕ್ರಮವಾಗಿದೆ ನಮ್ಮ ಹಳ್ಳಿಗಳ ಜನರು ದೇವಸ್ಥಾನಗಳ ನಿರ್ಮಾಣಕ್ಕೆ ನೀಡುತ್ತಿರುವ ಪ್ರಾಮುಖ್ಯತೆಯನ್ನು ಶಾಲೆಗಳಿಗೂ ನೀಡಿದರೆ ಜಿಲ್ಲೆಯ ಎಲ್ಲಾ ಸರ್ಕಾರಿ ಶಾಲೆಗಳನ್ನು ಉತ್ತಮ ಸ್ಥಿತಿಗೆ ತರುವುದು ದೊಡ್ಡ ಕೆಲಸವೇನು ಅಲ್ಲ ಎಂದು ತಿಳಿಸಿದರು. ತಮ್ಮ ಊರಾದ ಬಾಗುರಿನಲ್ಲಿ ಒಂದು ದೇವಸ್ಥಾನ ಕಟ್ಟಲು ಕೋಟಿ ರೂಗಳನ್ನು ಕೊಟ್ಟಿದ್ದಾರೆ ಇಂತಹ ದಾನಿಗಳು ಎಲ್ಲೆಲ್ಲೂ ಸಿಗುತ್ತಾರೆ ಎಂದವರು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಈ ಸಮಿತಿಯ ಸಂಚಾಲಕಿ ಹಾಗೂ ಸಾಹಿತಿ ರೂಪ ಹಾಸನ ಅವರು ಮಾತನಾಡಿ ಸರ್ಕಾರಿ ಶಾಲೆಗಳ ಸಬಲೀಕರಣ ಅಭಿಯಾನ ಬಹಳ ಜನಪ್ರಿಯ ಸ್ಪಂದನೆ ವ್ಯಕ್ತವಾಗುತ್ತಿದೆ. ನಾವು ಕೈಗೆತ್ತಿಕೊಂಡಿರುವ ರವೀಂದ್ರ ನಗರ ಹಾಗೂ ಆಡುವಳ್ಳಿ ಶಾಲೆಗಳಿಗೆ ಶಾಸಕ ಸ್ವರೂಪ್ ಅವರು ಆರು ಕೊಠಡಿಗಳನ್ನು ಹಾಗೂ ಜಿಲ್ಲಾಧಿಕಾರಿ ಸತ್ಯಭಾಮ ಅವರು ನಾಲ್ಕು ಕೊಠಡಿಗಳು, ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಬಿ..ಪಿ.ಕೃಷ್ಣೆಗೌಡರು ಒಂದು ಕೊಠಡಿ ಹಾಗೂ ನಗರಸಭಾ ಸದಸ್ಯರಾದ ವಾಸುದೇವ ಹಾಗೂ ಜೆ ಮಂಜುನಾಥ್ ಅವರು ಒಂದೊಂದು ಕೊಠಡಿ ಕಟ್ಟಿಸಿ ಕೊಡುವುದಾಗಿ ಭರವಸೆ ನೀಡಿದ್ದಾರೆ.ರವೀಂದ್ರನಗರ ಶಾಲೆಯ ಹೊಸ ಕಟ್ಟಡ ನಿರ್ಮಾಣ ಕಾರ್ಯ ಈಗಾಗಲೇ ಆರಂಭವಾಗಿದೆ ಎಂದು ವಿವರಿಸಿದರು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೃಷ್ಣೇಗೌಡ ಹಾಗೂ ಕಾರ್ಯದರ್ಶಿ ಡಾಕ್ಟರ್ ಲಕ್ಷ್ಮೀಕಾಂತ್ ಅವರು ಕಾರ್ಯಕ್ರಮದ ವೇದಿಕೆಯಲ್ಲಿ ರವೀಂದ್ರ ನಗರ ಶಾಲೆಯ ಮೊದಲ ಕಂತಾಗಿ ಒಂದು ಲಕ್ಷ ರೂಗಳನ್ನು ಸಮಿತಿಯ ಖಜಾಂಚಿ ರಾಮಚಂದ್ರ ಅವರಿಗೆ ನೀಡಿದರು. ಇದಕ್ಕೂ ಮುನ್ನ ಡಾಕ್ಟರ್ ಎ.ಎಸ್ ಕಿರಣ್ ಕುಮಾರ್ ಅವರು ಆಡುವಳ್ಳಿ ಶಾಲೆಯ ಆವರಣದಲ್ಲಿ ನಡೆದ ಸಮಾರಂಭದಲ್ಲಿ ನೂತನ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಶಿಲನ್ಯಾಸ ಮಾಡಿದರು. ಮಹಾನಗರ ಪಾಲಿಕೆಯ ಉಪಮೇಯರ್ ಹೇಮಲತ ಕಮಲ್ ಕುಮಾರ್ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಚಂದ್ರಶೇಖರ್ ಹಾಸನ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ, ನಗರ ಪಾಲಿಕೆ ಸದಸ್ಯರಾದ ಹೆಚ್. ಎಸ್. ವಾಸುದೇವ್,ಜೆ ಮಂಜುನಾಥ್,
ಹಾಸನ ವೈದ್ಯರ ಸಂಘದ ಅಧ್ಯಕ್ಷರಾದ ಡಾ. ಶ್ರೀರಂಗ ಡಾಂಗೆ ತೆರಿಗೆ ಸಲಹೆಗಾರರ ಸಂಘದ ಅಧ್ಯಕ್ಷ ಎಚ್. ಆರ್. ಶಿವಕುಮಾರ್ ಜಿಲ್ಲಾ ಹಿರಿಯ ನಾಗರಿಕ ವೇದಿಕೆಯ ಉಪಾಧ್ಯಕ್ಷೆ ಜಯಲಕ್ಷ್ಮಿ ರಾಜಣ್ಣ ಗೌಡ, ಸಾಮಾಜಿಕ ನಾಯಕ ಎಸ್. ಎಸ್. ಪಾಷಾ ಮತ್ತಿತರರು ಮುಖ್ಯ ಅತಿಥಿಗಳಾಗಿದ್ದರು. ವಿಶ್ವಪಥ ಬಳಗದ ಸಂಚಾಲಕ ಆರ್. ಪಿ. ವೆಂಕಟೇಶ್ ಮೂರ್ತಿ ಅವರು ಮಾತನಾಡಿ ಸರ್ಕಾರಿ ಶಾಲೆಗಳ ಸಬಲೀಕರಣ ಅಭಿಯಾನದ ಉದ್ದೇಶದ ಕುರಿತು ವಿವರಿಸಿದರು. ಈ ನಾಗರೀಕ ಸಮಿತಿಯ ಸಂಚಾಲಕ ಧರ್ಮೇಶ್ ಅವರು ಕಾರ್ಯಕ್ರಮ ನಿರೂಪಣೆ ಮಾಡಿದರು. ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷೆ ಚೈತ್ರ ನಾಯಕರ ಹಳ್ಳಿ ಸ್ವಾಗತಿಸಿದರು. ಬನುಮ ಗುರುದತ್ ಅವರು ಪ್ರಾರ್ಥನಾ ಗೀತೆ ಹಾಡಿದರು ವಿಶ್ವ ಪಥ ಬಳಗದ ಪಿ. ಪುರುಷೋತ್ತಮ್ ವಂದಿಸಿದರು. ಇದಕ್ಕೂ ಮುನ್ನ ಡಾಕ್ಟರ್ ಎ. ಎಸ್. ಕಿರಣ್ ಕುಮಾರ್ ಅವರು ಆಡುವಳ್ಳಿ ಶಾಲಾ ಆವರಣದಲ್ಲಿ ನೂತನ ಕೊಠಡಿಗಳ ನಿರ್ಮಾಣಕ್ಕೆ ಶಿಲನ್ಯಾಸ ನೆರವೇರಿಸಿದರು.ನಂತರ ಅವರು ರವೀಂದ್ರ ನಗರ ಶಾಲೆಯ ನೂತನ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ವೀಕ್ಷಿಸಿದರು. ಆಡುವಳ್ಳಿ ಶಾಲಾ ಸಮಿತಿಯ ಅಧ್ಯಕ್ಷ ವೆಂಕಟೇಶ್ ಮುಖ್ಯೋಪಾಧ್ಯಾಯರದ ತೇಜಸ್ವಿನಿ ರವೀಂದ್ರನಗರ ಶಾಲೆಯ ಮುಖ್ಯೋಪಾಧ್ಯಾಯರಾದ ಎಚ್ ಎಮ್ ಕುಮಾರಸ್ವಾಮಿ ಎರಡು ಶಾಲೆಗಳ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.