Home ಅಂಕಣ ಫ್ಯಾಸಿಸಂ ಕಡೆಗೆ: ಹಿಂದುತ್ವ ರಾಷ್ಟ್ರೀಯವಾದದ ನೆರಳಿನಲ್ಲಿ

ಫ್ಯಾಸಿಸಂ ಕಡೆಗೆ: ಹಿಂದುತ್ವ ರಾಷ್ಟ್ರೀಯವಾದದ ನೆರಳಿನಲ್ಲಿ

0
ಹಿಂದೂತ್ವವು ದೇಶಭಕ್ತಿಯ ರೂಪದಲ್ಲಿ ಪ್ರತಿಷ್ಠಾಪಿಸುವ ಫ್ಯಾಸಿಸಂಮುಖಿ ರಾಷ್ಟ್ರೀಯವಾದವು, ಭಾರತವನ್ನು ಹಿಂದೂ ರಾಷ್ಟ್ರವೆಂಬ ಕಲ್ಪನೆಯತ್ತ ಕೊಂಡೊಯ್ಯುವ ಮುನ್ಸೂಚನೆಯನ್ನು ನೀಡುತ್ತದೆ. ಈ ಉದ್ದೇಶ ಸಾಧನೆಗಾಗಿ, ದುರುದ್ದೇಶಪೂರಿತ ಕಾರ್ಯಾಚರಣೆಗಳ ಮೂಲಕ ರಾಜಕೀಯ ಸಮಾಜವನ್ನು ಧ್ರುವೀಕರಿಸುವ ಮತ್ತು ಕರ್ಮಠತನ ಜಾರಿಗೊಳಿಸುವ “ಡೀಪರ್‌ ಸ್ಟೇಟ್”ವೊಂದನ್ನು ಸ್ಥಾಪಿಸಲಾಗಿದೆ - ಅಂಗನಾ ಪಿ. ಚಟರ್ಜಿ

ಕಳೆದ ನೂರು ವರ್ಷಗಳ ಅವಧಿಯಲ್ಲಿ, ಭಾರತದಲ್ಲಿ ಅತಿರಾಷ್ಟ್ರೀಯತಾವಾದಿ ಮತ್ತು ಬಹುಸಂಖ್ಯಾತವಾದಿ ರಾಜ್ಯದ ಪರಿಕಲ್ಪನೆ ಹಾಗೂ ಅದರ ವ್ಯವಸ್ಥೆಯನ್ನು ಹೇರಲು, ಬಲಪಂಥದತ್ತ ಮುಖಮಾಡಿರುವ ವಿಶ್ವದಲ್ಲೇ ಬಹುಶಃ ಅತಿದೊಡ್ಡ ಸಂಘಟಿತ ವ್ಯವಸ್ಥೆಯೊಂದನ್ನು ಹಿಂದೂ ರಾಷ್ಟ್ರೀಯವಾದಿಗಳು ಕಟ್ಟಿಕೊಂಡಿದ್ದಾರೆ.

ಸಮಾಜ ಮತ್ತು ಸಂಸ್ಕೃತಿ, ಬಂಧುತ್ವ, ಭಿನ್ನತೆ, ಪರಿಷ್ಕರಣಾವಾದಿ ಇತಿಹಾಸ, ಸಿದ್ಧಾಂತ, ನೈತಿಕತೆ, ರಾಜಕೀಯ ಆರ್ಥಿಕತೆ ಮತ್ತು ರಾಷ್ಟ್ರೀಯ ಅಸ್ಮಿತೆಯ ಮೂಲಕ ತನ್ನ ಪ್ರಭಾವವನ್ನು ವಿಸ್ತರಿಸಿರುವ ಹಿಂದೂ ರಾಷ್ಟ್ರೀಯವಾದವು, ಜಾತಿ ವ್ಯವಸ್ಥೆಗೆ ಸಮ್ಮತಿ, ಕರ್ಮಠತನ, ಗಡಿಗಳನ್ನು ಅಪಾಯದ ವಲಯವಾಗಿ ಚಿತ್ರಿಸುವುದು ಹಾಗೂ ಅಅಲ್ಪಸಂಖ್ಯಾತ ಸ್ಥಾನಕ್ಕೆ ತಳ್ಳುವಂತಹ ಪ್ರಕ್ರಿಯೆಗಳ ಆಧಾರದಲ್ಲಿ ಬೃಹತ್ ಕಾರ್ಯಕರ್ತರ ಪಡೆಯೊಂದನ್ನು ನಿರ್ಮಿಸಿದೆ.

ಹಿಂದುತ್ವ ರಾಷ್ಟ್ರೀಯವಾದಿಗಳು ತಾವು ಚುನಾಯಿತ ಅಧಿಕಾರದಲ್ಲಿ ಇಲ್ಲದ ಕಾಲದಲ್ಲಿಯೇ ನಿರ್ದಿಷ್ಟ ಸಮುದಾಯಗಳನ್ನು ಮುಖ್ಯವಾಹಿನಿಯಿಂದ ದೂರವಿಡುತ್ತಾ, ತಮ್ಮನ್ನು ಸಂಘಟಿತಗೊಳಿಸುತ್ತಾ, ಸಾಮಾಜಿಕ ಭಹಿಷ್ಕಾರವನ್ನು ಹಾಕುತ್ತಾ ಸಮಾಜದ ಮೇಲೆ ನಿಯಂತ್ರಣವನ್ನು ಸಾಧಿಸುತ್ತಾ ಬಂದರು. ರಾಜಕೀಯ ಸಂಘರ್ಷಗಳು ಮತ್ತು ಅಸಮಾನತೆಯ ಮೂಲಕ ಬಹುಸಂಖ್ಯಾತವಾದಕ್ಕೆ ಬಲ ತುಂಬಿದರು. ಇದರ ಫಲವಾಗಿ 2014ರಲ್ಲಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಹಿಂದುತ್ವವಾದಿ ಬಲಪಂಥೀಯ ಸರ್ಕಾರವೊಂದು ದೇಶದ ಅಧಿಕಾರವನ್ನು ತನ್ನ ಕೈಗೆ ತೆಗೆದುಕೊಂಡಿತು.

ಹಿಂದೂ ರಾಷ್ಟ್ರೀಯವಾದದ ದಕ್ಷಿಣ ಏಷ್ಯಾ ಬ್ರಿಟಿಷ್ ಆಳ್ವಿಕೆಯಿಂದ ಕಳಚಿಕೊಳ್ಳುವುದಕ್ಕೂ ಹಿಂದಿನ, 1947ರಲ್ಲಿ ಭಾರತ ರಾಷ್ಟ್ರ-ರಾಜ್ಯವಾಗಿ ರೂಪುಗೊಳ್ಳುವುದಕ್ಕೂ ಬಹಳ ಹಿಂದಿನ ಇತಿಹಾಸವನ್ನು ಹೊಂದಿದೆ. 1915ರಲ್ಲಿ ಅಖಿಲ ಭಾರತ ಹಿಂದೂ ಮಹಾಸಭಾ ಸ್ಥಾಪನೆಯಾಯಿತು. ಸ್ಥಳ, ಇತಿಹಾಸ, ಭಾಷೆ ಮತ್ತು ಸಂಸ್ಕೃತಿಯ ಆಧಾರದ ಮೇಲೆ ಭಿನ್ನವಾಗಿದ್ದ ಹಿಂದೂಗಳನ್ನು ಒಗ್ಗೂಡಿಸುವುದು ಹಾಗೂ ಮುಸ್ಲಿಂ ಲೀಗ್ ಜೊತೆಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ವಿರುದ್ಧವೂ ಜನವಿರೋಧವನ್ನು ರೂಪಿಸುವುದು ಇದರ ಉದ್ದೇಶವಾಗಿತ್ತು.

ಹಿಂದೂ ರಾಷ್ಟ್ರೀಯವಾದದ ಪರಿಕಲ್ಪನಾತ್ಮಕ, ಸೈದ್ಧಾಂತಿಕ ಮತ್ತು ಭಕ್ತಿಪರ ನೆಲೆಯಾಗಿ “ಹಿಂದೂತನ” ಅಥವಾ “ಹಿಂದೂತ್ವ” (ಹಿಂದೂ ತತ್ತ್ವ) ರೂಪುಗೊಂಡಿತು. ಹಿಂದೂ ಮಹಾಸಭಾದ ಸ್ಥಾಪಕ ನಾಯಕರಲ್ಲಿ ಒಬ್ಬರಾದ ವಿನಾಯಕ ದಾಮೋದರ ಸಾವರ್ಕರ್ ಅವರು 1923ರಲ್ಲಿ ಇದಕ್ಕೆ ವ್ಯಾಖ್ಯಾನ ನೀಡಿದರು. “ಹಿಂದೂತ್ವ” ಎಂಬ ಶೀರ್ಷಿಕೆಯ ಕರಪತ್ರದಲ್ಲಿ ಸಾವರ್ಕರ್, “ಹಿಂದೂತ್ವ ಒಂದು ಪದವಲ್ಲ, ಅದು ಒಂದು ಇತಿಹಾಸ” ಎಂದು ಬರೆದರು.

ಹಿಂದೂತ್ವವನ್ನು ಸಂಘಟಿತವಾಗಿ ನಿರ್ವಹಿಸಲು, ಕಳೆದ ನೂರು ವರ್ಷಗಳಲ್ಲಿ ಹಲವಾರು ಸಂಘಟನೆಗಳು ಹುಟ್ಟಿಕೊಂಡವು. ಇವು ಒಟ್ಟಾಗಿ “ಸಂಘ ಪರಿವಾರ” ಎಂದು ಕರೆಯಲ್ಪಡುವ ಹಿಂದೂ ರಾಷ್ಟ್ರೀಯವಾದಿ “ಕುಟುಂಬ”ವನ್ನು ರೂಪಿಸಿವೆ. 1940ರ ದಶಕದ ವೇಳೆಗೆ, ಮುಂದೆ “ಭಾರತ” ಎಂದು ರೂಪುಗೊಂಡ ಪ್ರದೇಶದಾದ್ಯಂತ ಸಂಘ ಪರಿವಾರವು ವೇಗವಾಗಿ ವಿಸ್ತರಿಸಿತು. ತನ್ನ ಸಿದ್ಧಾಂತ ಮತ್ತು ಆಚರಣೆಗಳ ಮೂಲಕ ಕೇಂದ್ರಗಳನ್ನು ಸ್ಥಾಪಿಸುವುದು ಹಾಗೂ ಸಮುದಾಯದೊಳಗೆ ಜನರನ್ನು ಸಂಘಟಿಸುವ ಕಾರ್ಯವನ್ನು ಅದು ಕೈಗೊಂಡಿತು. ಅಸ್ಸಾಂನಂತಹ ಸಂಘರ್ಷಪೀಡಿತ ಪ್ರದೇಶಗಳಲ್ಲಿಯೂ, ವಸಾಹತು/ನವವಸಾಹತು ಆಡಳಿತದಲ್ಲಿದ್ದ ಕಾಶ್ಮೀರದಲ್ಲಿಯೂ ಈ ಚಟುವಟಿಕೆಗಳು ವಿಸ್ತರಿಸಿದವು.

ಸಂಘ ಪರಿವಾರದ ಪ್ರಮುಖ ಸಂಘಟನೆಗಳು ದೇಶಾದ್ಯಂತ ಕಚೇರಿಗಳನ್ನು ಹೊಂದಿದ್ದು, ಪ್ರತಿಯೊಂದು ಸಂಘಟನೆಯೂ ಕೆಲವೇ ಕೆಲವು ಡಜನ್‌ಗಳಿಂದ ಹಿಡಿದು ನೂರಾರು ಶಾಖೆಗಳನ್ನು ಹೊಂದಿವೆ. ಇವುಗಳ ಪೈಕಿ ಅತ್ಯಂತ ಪ್ರಮುಖವಾದದ್ದು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌ — ರಾಷ್ಟ್ರೀಯ ಸ್ವಯಂಸೇವಕರ ಸಂಘ)ವಾಗಿದ್ದು, ನರೇಂದ್ರ ಮೋದಿ ಅದರ ಪ್ರಮುಖ ಪ್ರತಿನಿಧಿಗಳಲ್ಲಿ ಒಬ್ಬರಾಗಿದ್ದಾರೆ.

1925ರಲ್ಲಿ ನಾಗಪುರದಲ್ಲಿ ಸ್ಥಾಪನೆಯಾದ ಆರ್‌ಎಸ್‌ಎಸ್‌, 1964ರಲ್ಲಿ ಮುಂಬೈನಲ್ಲಿ ಸ್ಥಾಪನೆಯಾದ ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ಜೊತೆಗೂಡಿ ಹಿಂದೂತ್ವದ ಸೈದ್ಧಾಂತಿಕ ಮತ್ತು ಸಾಂಸ್ಕೃತಿಕ ಕೇಂದ್ರಬಿಂದುವಾಗಿದೆ. ಇದರ ಸಂಸದೀಯ ರಾಜಕಾರಣದ ಪ್ರಮುಖ ಆಧಾರವಾಗಿರುವ ಭಾರತೀಯ ಜನತಾ ಪಕ್ಷ (ಬಿಜೆಪಿ) ಅಧಿಕೃತವಾಗಿ 1980ರಲ್ಲಿ ಸ್ಥಾಪನೆಯಾಯಿತು.

ಪ್ರಸ್ತುತ ಸಂಘ ಪರಿವಾರದ ಕಾರ್ಯಕರ್ತರ ಸಂಖ್ಯೆ 5ರಿಂದ 7 ಕೋಟಿಯಷ್ಟಿದೆ ಎಂದು ವರದಿಯಾಗಿದೆ. ಅದರ ಕಾರ್ಯಕರ್ತರು ಮತ್ತು ಸ್ವಯಂಸೇವಕರು ಸಂಘ ಪರಿವಾರದ ಒಂದು ಅಥವಾ ಅದಕ್ಕಿಂತ ಹೆಚ್ಚು ಸಂಘಟನೆಗಳೊಂದಿಗೆ ನಂಟು ಹೊಂದಿದ್ದಾರೆ. ದೇಶದ ಗ್ರಾಮೀಣ, ನಗರ ಮತ್ತು ನಗರಪರಿಸರದ ವಿಶಾಲ ಪ್ರದೇಶಗಳಲ್ಲಿ ಯುವಕರು ಹಾಗೂ ಸದಸ್ಯರನ್ನು ವ್ಯಾಪಕವಾಗಿ ನೇಮಕ ಮಾಡಿಕೊಳ್ಳುವ ಮತ್ತು ತರಬೇತಿಗೊಳಿಸುವ ಕಾರ್ಯ ನಡೆಯುತ್ತದೆ. ವಿಶೇಷ ಘಟಕಗಳಿಗೆ ಸೇರ್ಪಡೆಗೊಳ್ಳುವ ಸದಸ್ಯರಿಗೆ ನಾಯಕತ್ವ, ತಳಮಟ್ಟದಲ್ಲಿ ಜನರನ್ನು ಸಜ್ಜುಗೊಳಿಸುವುದು, ಹಿಂಸಾತ್ಮಕ ಆಂದೋಲನ ಮತ್ತು ಶಸ್ತ್ರಸಜ್ಜಿತ ಕಾರ್ಯಾಚರಣೆಗಳ ತರಬೇತಿ ನೀಡಲಾಗುತ್ತದೆ.

ಆರ್‌ಎಸ್‌ಎಸ್‌

ಆರ್‌ಎಸ್‌ಎಸ್‌ ಸಂಘ ಪರಿವಾರ ಮತ್ತು ಹಿಂದೂ ರಾಷ್ಟ್ರೀಯವಾದದ ಪ್ರಮುಖ ಶಿಲ್ಪಿಗಳಲ್ಲಿ ಒಂದಾಗಿದೆ. ವರದಿಗಳ ಪ್ರಕಾರ, ಈ ಸಂಘಟನೆ ದತ್ತಿ ಸಂಸ್ಥೆಯಾಗಿ ನೋಂದಾಯಿಸಿಕೊಂಡಿಲ್ಲ; ತೆರಿಗೆ ವಿನಾಯಿತಿ ಹೊಂದಿರುವ “ವ್ಯಕ್ತಿಗಳ ಸಂಘಟನೆ”ಯಾಗಿ ಕಾರ್ಯನಿರ್ವಹಿಸುತ್ತದೆ. ಸಂಘಟನೆಯೊಂದಿಗೆ ನಂಟು ಹೊಂದಿರುವ ಸ್ವಯಂಸೇವಕರು ಮತ್ತು ಸದಸ್ಯರು ದೈನಂದಿನ ಹಾಗೂ ದೊಡ್ಡ ಪ್ರಮಾಣದ ಹಿಂಸಾಚಾರವನ್ನು ಕಾರ್ಯರೂಪಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ವರದಿಯಾಗಿದೆ. 1947ರಿಂದ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಗಳ ವಿರುದ್ಧ ನಡೆದ ಸಂಘಟಿತ ರಾಜಕೀಯ ಹಿಂಸಾಚಾರದ ಪ್ರತಿಯೊಂದು ಘಟನೆಯಲ್ಲಿಯೂ ಅವರ ಛಾಪು ಕಂಡುಬರುತ್ತದೆ ಎಂದು ಹೇಳಲಾಗಿದೆ.

ಆರ್‌ಎಸ್‌ಎಸ್‌ನ ಆರಂಭಿಕ ಸೈದ್ಧಾಂತಿಕ ನಾಯಕರಲ್ಲಿ ಒಬ್ಬರಾದ ಎಂ.ಎಸ್. ಗೋಲ್ವಾಲ್ಕರ್‌ ನಾಜಿಗಳ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು: “ಜನಾಂಗದ ಮತ್ತು ಅದರ ಸಂಸ್ಕೃತಿಯ ಶುದ್ಧತೆಯನ್ನು ಕಾಪಾಡಿಕೊಳ್ಳಲು, ಸೆಮಿಟಿಕ್ [sic] ಜನಾಂಗಗಳಾದ ಯಹೂದಿಗಳನ್ನು ದೇಶದಿಂದ ಶುದ್ಧೀಕರಿಸುವ ಮೂಲಕ ಜರ್ಮನಿ ಜಗತ್ತನ್ನೇ ಬೆಚ್ಚಿಬೀಳಿಸಿತು. ಜನಾಂಗೀಯ ಹೆಮ್ಮೆ ತನ್ನ ಅತ್ಯುನ್ನತ ರೂಪದಲ್ಲಿ ಇಲ್ಲಿ ವ್ಯಕ್ತವಾಯಿತು.”

ಅವರು ಮುಂದುವರಿದು, “ಹಿಂದೂಯೇತರರು… ಹಿಂದೂ ರಾಷ್ಟ್ರಕ್ಕೆ ಸಂಪೂರ್ಣವಾಗಿ ಅಧೀನರಾಗಿ ಈ ದೇಶದಲ್ಲಿ ಉಳಿಯಬಹುದು; ಯಾವುದೇ ಹಕ್ಕುಗಳನ್ನು ಕೇಳದೆ, ಯಾವುದೇ ಸವಲತ್ತುಗಳಿಗೆ ಅರ್ಹರಾಗದೆ… ನಾಗರಿಕ ಹಕ್ಕುಗಳಿಗೂ ಸಹ ಅರ್ಹರಾಗದೆ” ಇರಬೇಕು ಎಂದು ಬರೆದಿದ್ದರು.

ಆರ್‌ಎಸ್‌ಎಸ್‌ನೊಂದಿಗೆ ಗುರುತಿಸಿಕೊಳ್ಳುವವರ ವ್ಯಾಪ್ತಿ, ಅದರ ಮಿತವಾದ ಮೌಲ್ಯಗಳನ್ನು ಅನುಷ್ಠಾನಗೊಳಿಸುವ “ಮೃದು” ರಾಷ್ಟ್ರೀಯವಾದಿಗಳಿಂದ ಹಿಡಿದು, ಅದರ ಅತ್ಯಂತ ನಿರಂಕುಶ ತತ್ವಗಳನ್ನು ಪ್ರತಿಬಿಂಬಿಸುವ ಉಗ್ರವಾದಿಗಳವರೆಗೆ ವಿಸ್ತರಿಸಿದೆ. ಒಟ್ಟಾರೆಯಾಗಿ, ಇವರು ಅಸಮಾನತೆ, ಭಿನ್ನಾಭಿಪ್ರಾಯ, ಸಾಮಾಜಿಕ ವಿಘಟನೆ ಮತ್ತು ಹಿಂದಿನ ವಿಭಜನೆಗಳ ಗಾಯಗಳ ಮೇಲೆ ರಾಜಕೀಯವಾಗಿ ಲಾಭ ಪಡೆಯುತ್ತಾರೆ. ಧರ್ಮ ಮತ್ತು ಸೇರಿದವರ ಗುರುತಿನ ನಡುವಿನ ಬಿರುಕುಗಳನ್ನು ಆಯುಧವನ್ನಾಗಿ ಬಳಸಿಕೊಂಡು, ಸಮುದಾಯಗಳು, ನೆರೆಹೊರೆಯವರು ಮತ್ತು ಬಂಧುಗಳ ನಡುವೆ ವಿಭಜನೆ ಮೂಡಿಸಿ ಅವರನ್ನು ಹಿಂಸೆಗೆ ಗುರಿಪಡಿಸುತ್ತಾರೆ.

ಇಂದು ಆರ್‌ಎಸ್‌ಎಸ್‌ನ ಸದಸ್ಯರಲ್ಲಿ ವಿದ್ಯಾರ್ಥಿಗಳು, ತಂತ್ರಜ್ಞಾನ ಕ್ಷೇತ್ರದ ಉದ್ಯೋಗಿಗಳು, ಶಿಕ್ಷಕರು, ಎಂಜಿನಿಯರ್‌ಗಳು, ಬ್ಯಾಂಕರ್‌ಗಳು, ರಾಜಕಾರಣಿಗಳು, ರೈತರು, ಉದ್ಯಮಿಗಳು, ವೈದ್ಯಕೀಯ ವೃತ್ತಿಪರರು, ಶಾಸಕರು, ಗೃಹಿಣಿಯರು, ದಿನಗೂಲಿ ಕಾರ್ಮಿಕರು ಮತ್ತು ವಿಜ್ಞಾನಿಗಳು ಸೇರಿದ್ದಾರೆ.

ಆರ್‌ಎಸ್‌ಎಸ್‌ನ ತಳಮಟ್ಟದ ಕಾರ್ಯಕರ್ತರಿಗೆ ಹಿಂದೂತ್ವದ ಸಿದ್ಧಾಂತ ಮತ್ತು ಅದರ ರಾಜಕೀಯ ಆಶಯಗಳನ್ನು ಬೆಂಬಲಿಸುವ ಚಟುವಟಿಕೆ ಹಾಗೂ ಸಂಘಟನಾ ಕಾರ್ಯಗಳ ತರಬೇತಿ ನೀಡಲಾಗುತ್ತದೆ. ಸರ್ಕಾರ, ಆಡಳಿತಶಾಹಿ, ಶಿಕ್ಷಣ, ರಾಜ್ಯದ ಭದ್ರತಾ ಪಡೆಗಳು, ಶಾಸನ ಮತ್ತು ನ್ಯಾಯಾಂಗವನ್ನು ನಿಯಂತ್ರಿಸುವ ಹಾಗೂ ಮರುರೂಪಿಸುವ ಉದ್ದೇಶದೊಂದಿಗೆ ಈ ಚಟುವಟಿಕೆಗಳನ್ನು ನಡೆಸಲಾಗುತ್ತದೆ. ಸಾಮೂಹಿಕ ಹಿಂಸಾಚಾರ ಮತ್ತು ಹತ್ಯಾಕಾಂಡಗಳ ಕುರಿತ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು, ಆರ್‌ಎಸ್‌ಎಸ್ ತನ್ನ ಕಾರ್ಯಕರ್ತರ ಯಾವುದೇ ಅಧಿಕೃತ ಪಟ್ಟಿ ಅಥವಾ ನೋಂದಣಿ ಕಾಯ್ದುಕೊಳ್ಳುವುದಿಲ್ಲ ಎಂದು ಹೇಳಿಕೊಂಡಿದೆ ಎಂದು ವರದಿಯಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ, ಹಿಂದೂ ರಾಷ್ಟ್ರೀಯವಾದಿಗಳು ತಮ್ಮ ಆರ್‌ಎಸ್‌ಎಸ್‌ ಸಂಬಂಧವನ್ನು ಬಹಿರಂಗವಾಗಿ ಘೋಷಿಸಿಕೊಂಡಿದ್ದು, ಅಂತಹ ಸಂಬಂಧವನ್ನೇ ಜನರನ್ನು ಒಗ್ಗೂಡಿಸುವ ಘೋಷಣೆಯಾಗಿ ಬಳಸಿಕೊಂಡಿದ್ದಾರೆ.

ಆರ್‌ಎಸ್‌ಎಸ್‌ ಮುಖ್ಯವಾಗಿ ಅರೆಸೈನಿಕ ಚಟುವಟಿಕೆಗಳ ಅಭಿವೃದ್ಧಿ ಹಾಗೂ ಸಾಂಸ್ಕೃತಿಕ ಏಕರೂಪತೆಯನ್ನು ಉತ್ತೇಜಿಸುವ ಚಟುವಟಿಕೆಗಳ ಮೇಲೆ ಕೇಂದ್ರೀಕರಿಸಿತ್ತು ಎಂದು ಆರೋಪಿಸಲಾಗಿದೆ. ಅದು ಬ್ರಿಟಿಷರೊಂದಿಗೆ ಸಹಕಾರದ ಸಂಬಂಧವನ್ನೂ ಬೆಳೆಸಿಕೊಂಡು, ವಸಾಹತುಶಾಹಿ ವಿರೋಧಿ ಚಳವಳಿಯಿಂದ ತನ್ನನ್ನು ಪ್ರತ್ಯೇಕಿಸಿಕೊಂಡಿತು. 1946ರಲ್ಲೇ ಮೂವರು ಕಾರ್ಯಕರ್ತರು ಅಸ್ಸಾಂ ಪ್ರಾಂತ್ಯಕ್ಕೆ ತೆರಳಿ ಆರ್‌ಎಸ್‌ಎಸ್‌ನ ಶಾಖೆಗಳನ್ನು ಸ್ಥಾಪಿಸಲು ಮುಂದಾದರು. 1983ರಲ್ಲಿ ಅಸ್ಸಾಂನ ನೆಲ್ಲಿಯಲ್ಲಿ ಬಾಂಗ್ಲಾ ಮೂಲದ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಹತ್ಯಾಕಾಂಡ ನಡೆಯಿತು. 2016ರ ವೇಳೆಗೆ ಅಸ್ಸಾಂನ 672 ಸ್ಥಳಗಳಲ್ಲಿ ಆರ್‌ಎಸ್‌ಎಸ್‌ನ 830 ಕೇಂದ್ರಗಳಿದ್ದವು ಎಂದು ವರದಿಯಾಗಿದೆ.

ಆರ್‌ಎಸ್‌ಎಸ್‌ನ ಸದಸ್ಯರಾಗಿದ್ದ ನಾಥೂರಾಮ್ ಗೋಡ್ಸೆ 1948ರ ಜನವರಿಯಲ್ಲಿ ಎಂ.ಕೆ. ಗಾಂಧಿಯವರನ್ನು ಹತ್ಯೆಗೈದರು. ಬಳಿಕ ಗೋಡ್ಸೆ ತಾನು ಆರ್‌ಎಸ್‌ಎಸ್‌ ತೊರೆದಿದ್ದಾಗಿ ಹೇಳಿಕೊಂಡಿದ್ದರೂ, ದಾಖಲೆಗಳು ಅದಕ್ಕೆ ವಿರುದ್ಧವಾದ ಸಂಗತಿಯನ್ನು ಸೂಚಿಸುತ್ತವೆ ಎಂದು ವರದಿಯಾಗಿದೆ.

1948ರಲ್ಲಿ ಭಾರತ ಸರ್ಕಾರ ಆರ್‌ಎಸ್‌ಎಸ್‌ ಮೇಲೆ ನಿಷೇಧ ಹೇರಿತು ಮತ್ತು 20,000 ಸದಸ್ಯರನ್ನು ಬಂಧಿಸಿತು. 1949ರಲ್ಲಿ ನಿಷೇಧವನ್ನು ತೆರವುಗೊಳಿಸಲಾಯಿತು. 1975ರಿಂದ 1977ರವರೆಗೆ ಇಂದಿರಾ ಗಾಂಧಿ ಸರ್ಕಾರ ಹೇರಿದ್ದ ರಾಷ್ಟ್ರೀಯ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಆರ್‌ಎಸ್‌ಎಸ್‌ ಮೇಲೆ ಮತ್ತೆ ನಿಷೇಧ ಹೇರಲಾಯಿತು. 1977ರಲ್ಲಿ ರಚನೆಯಾದ ಜನತಾ ಪಕ್ಷದ ಮೈತ್ರಿಕೂಟವು ಚುನಾವಣೆಯಲ್ಲಿ ಗೆದ್ದು, ಅದೇ ವರ್ಷ ತುರ್ತು ಪರಿಸ್ಥಿತಿಯನ್ನು ಅಂತ್ಯಗೊಳಿಸಿತು. ಜೊತೆಗೆ ಆರ್‌ಎಸ್‌ಎಸ್‌ ಮೇಲಿನ ನಿಷೇಧವನ್ನೂ ಹಿಂಪಡೆಯಿತು.

ಆರ್‌ಎಸ್‌ಎಸ್‌ನ ನೇತೃತ್ವದಲ್ಲಿ ಹಿಂದೂ ಬಲಪಂಥವು ರಾಷ್ಟ್ರೀಯ ಸಂಸ್ಕೃತಿಯ ರೂಪುಗೊಳಿಸುವಿಕೆಯಲ್ಲಿ ತನ್ನ ಪಾತ್ರವನ್ನು ವ್ಯವಸ್ಥಿತಗೊಳಿಸಿಕೊಂಡಿತು. ಧರ್ಮ ಮತ್ತು ಸರ್ಕಾರದ ನಡುವಿನ ಸಂವಿಧಾನಾತ್ಮಕ ಪ್ರತ್ಯೇಕತೆಯನ್ನು ದುರ್ಬಲಗೊಳಿಸುವುದು ಇದರ ಉದ್ದೇಶವಾಗಿತ್ತು. ಬಹುಸಂಖ್ಯಾತವಾದ ಮತ್ತು ಬಹುಸಂಖ್ಯಾತವಾದಿ ದೇಶದ ಪರಿಕಲ್ಪನೆ ಹಾಗೂ ತನ್ನ ಉದ್ದೇಶವನ್ನು ಬಲಪಡಿಸಲು ಸಂಘಟನೆಯು ರಾಷ್ಟ್ರೀಯತಾವಾದಿ ಉನ್ಮಾದವನ್ನು ಪ್ರಚೋದಿಸಿತು.

ಬ್ರಿಟಿಷರು ಬಲವಂತವಾಗಿ ಹೇರಿದ ‘ಹಿಂದೂ-ಮುಕ್ತೀಕರಣ’ಕ್ಕೆ ಪ್ರತಿಯಾಗಿ ಹಿಂದೂತ್ವೀಕರಣವನ್ನು ಆರ್‌ಎಸ್‌ಎಸ್‌ ರೂಪಿಸಿತು. ಹಿಂದೂಗಳನ್ನೇ “ಭಾರತ”ಕ್ಕೆ ಸಮಾನವೆಂದು ಪರಿಗಣಿಸುವ ಮೂಲಕ, ಹಿಂದೂ-ಭಾರತೀಯ ಅಸ್ಮಿತೆಯನ್ನು ಸ್ಥಾಪಿಸಿ ಸ್ವಚ್ಚಗೊಳಿಸುವ/ಪವಿತ್ರಗೊಳಿಸುವ ಹಿಂಸೆಯನ್ನು ಧಾರ್ಮಿಕಗೊಳಿಸುವುದನ್ನು ಅಗತ್ಯ ಸಾಧನವಾಗಿ ಸಾಮಾನ್ಯೀಕರಿಸಿತು. ಜಾತೀಯತೆ, ಪ್ರತ್ಯೇಕೀಕರಣ ಮತ್ತು ದಮನವು ಆದಿವಾಸಿಗಳು, ದಲಿತರು ಹಾಗೂ ಧಾರ್ಮಿಕ “ಇತರರು”ರೊಂದಿಗೆ ಸಂಘ ಪರಿವಾರ ನಡೆಸಿಕೊಂಡ ರೀತಿಯಲ್ಲಿ ಆಳವಾಗಿ ಬೇರೂರಿದ್ದವು. ಇವರಿಗೆ ಉದ್ಯೋಗ, ಶಿಕ್ಷಣ ಸಂಸ್ಥೆಗಳು, ದೇವಾಲಯಗಳು ಮತ್ತು ಸಾಮಾಜಿಕ ಕಾರ್ಯಕ್ರಮಗಳಿಗೆ ಪ್ರವೇಶ ನಿರಾಕರಿಸಲಾಯಿತು.

1984ರ ವೇಳೆಗೆ, ಹಿಂದೂ ದೇವತೆಯಾದ ರಾಮನಿಗೆ ದೇವಾಲಯವನ್ನು ಪ್ರತಿಷ್ಠಾಪಿಸುವ ಉದ್ದೇಶದಿಂದ ಅಯೋಧ್ಯೆಯ ಬಾಬರಿ ಮಸೀದಿಯನ್ನು ತೆರವುಗೊಳಿಸಿ ಧ್ವಂಸಗೊಳಿಸುವ ಚಳವಳಿಗೆ ವಿಶ್ವ ಹಿಂದೂ ಪರಿಷತ್‌ ನೇತೃತ್ವ ನೀಡಿತು. ಇದೇ 1984ರಲ್ಲಿ, ಹಿಂದೂ ರಾಷ್ಟ್ರೀಯವಾದದ ಉಗ್ರ ಘಟಕವೆಂದು ಆರೋಪಿಸಲಾದ ಬಜರಂಗ ದಳವೂ ಸ್ಥಾಪನೆಯಾಯಿತು.

1984ರ ಅಕ್ಟೋಬರ್‌ನಲ್ಲಿ, ಇಂದಿರಾ ಗಾಂಧಿಯವರ ಹತ್ಯೆಯ ನಂತರದ ಬೆಳವಣಿಗೆಗಳ ಸಂದರ್ಭದಲ್ಲಿ, ದೆಹಲಿಯಲ್ಲಿ ಸಿಖ್ ಸಮುದಾಯಗಳನ್ನು ಹಿಂದೂ ರಾಷ್ಟ್ರೀಯವಾದಿ ಗುಂಪುಗಳು ಗುರಿಯಾಗಿಸಿಕೊಂಡವು. ಇದರ ಪರಿಣಾಮವಾಗಿ ಮಹಿಳೆಯರ ಮೇಲೆ ವ್ಯಾಪಕ ಲೈಂಗಿಕ ಹಿಂಸಾಚಾರ ನಡೆಯಿತು, ಖಾಸಗಿ ಆಸ್ತಿಪಾಸ್ತಿಗಳನ್ನು ಧ್ವಂಸಗೊಳಿಸಲಾಯಿತು ಮತ್ತು 2,733ಕ್ಕೂ ಹೆಚ್ಚು ಸಿಖ್ಖರನ್ನು ಹತ್ಯೆಗೈಯಲಾಯಿತು.

(ಅನುವಾದಕರ ಅಭಿಪ್ರಾಯ: 1984ರಲ್ಲಿ ದೆಹಲಿಯಲ್ಲಿ ನಡೆದ ಸಿಖ್ ವಿರೋಧಿ ಹಿಂಸಾಚಾರವು ಮುಖ್ಯವಾಗಿ ಕಾಂಗ್ರೆಸ್‌ನ ನಾಯಕರು, ಕಾರ್ಯಕರ್ತರು ಮತ್ತು ಸರ್ಕಾರಿ ವ್ಯವಸ್ಥೆಯ ವೈಫಲ್ಯಗಳಿಗೆ ಸಂಬಂಧಿಸಿದ ಘಟನೆ ಎಂದು ದಾಖಲಾಗಿದ್ದರೂ, ಆರ್‌ಎಸ್‌ಎಸ್‌ ಮತ್ತು ಬಿಜೆಪಿಯೊಂದಿಗೆ ನಂಟು ಹೊಂದಿದ್ದ ಕೆಲವರ ಮೇಲೂ ಕೆಲವು ಪ್ರಕರಣಗಳಲ್ಲಿ ಹಿಂಸಾಚಾರದಲ್ಲಿ ಭಾಗಿಯಾಗಿರುವ ಅಥವಾ ಆರೋಪಿತರಾಗಿರುವ ಆರೋಪಗಳು ಕೇಳಿಬಂದಿದ್ದವು. ಆದರೆ, ಆರ್‌ಎಸ್‌ಎಸ್‌ ಒಂದು ಸಂಘಟನೆಯಾಗಿ ಈ ಹತ್ಯಾಕಾಂಡಗಳನ್ನು ಯೋಜಿಸಿತ್ತು ಅಥವಾ ನಿರ್ದೇಶಿಸಿತ್ತು ಎಂಬುದನ್ನು ನಾನಾವತಿ ಆಯೋಗವು ಹೇಳುವುದಿಲ್ಲ.)

ಈ ಭೀಕರ ಘಟನೆಗಳ ಬಳಿಕ ಸಂಘ ಪರಿವಾರದಿಂದ ಮತ್ತಷ್ಟು ಸಾಮೂಹಿಕ ಹಿಂಸಾಚಾರಗಳು ನಡೆದವು. 1992–1993ರ ಅವಧಿಯಲ್ಲಿ ಅಂದಾಜು 2 ಲಕ್ಷ ಹಿಂದೂತ್ವ ಕಾರ್ಯಕರ್ತರು ಬಾಬರಿ ಮಸೀದಿಯನ್ನು ಗುರಿಯಾಗಿಸಿಕೊಂಡು ಅದನ್ನು ಧ್ವಂಸಗೊಳಿಸಿದರು. ಇದರಿಂದ ದೇಶಾದ್ಯಂತ ಮುಸ್ಲಿಮರ ವಿರುದ್ಧ ಹಿಂಸಾಚಾರ ಭುಗಿಲೆದ್ದಿತು. 1998–1999ರಲ್ಲಿ ಗುಜರಾತ್ ಸೇರಿದಂತೆ ಇತರ ಪ್ರದೇಶಗಳಲ್ಲಿಯೂ ಕ್ರೈಸ್ತ ವಿರೋಧಿ ಹಿಂಸಾಚಾರ ತೀವ್ರಗೊಂಡಿತು.

ಗುಜರಾತ್, ಒಡಿಶಾ, ಮುಜಫ್ಫರ್‌ನಗರ

2002ರ ಮಾರ್ಚ್‌ನಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಗುಜರಾತ್‌ನಲ್ಲಿ ಅಧಿಕಾರದಲ್ಲಿದ್ದಾಗ, ಗೋಧ್ರಾ ಪಟ್ಟಣದಲ್ಲಿ ರೈಲಿನ ಬೆಂಕಿ ಅವಘಡದಲ್ಲಿ ಹಿಂದೂ ಯಾತ್ರಿಕರು ಮೃತಪಟ್ಟರು. ಇದರ ಬೆನ್ನಲ್ಲೇ ಭುಗಿಲೆದ್ದ ಭಾರೀ ರಾಜಕೀಯ ಹಿಂಸಾಚಾರದಲ್ಲಿ, ಹಿಂದೂ ರಾಷ್ಟ್ರೀಯವಾದಿ ಸಶಸ್ತ್ರ ಗುಂಪುಗಳು ಗುಜರಾತಿನಾದ್ಯಂತ ಮುಸ್ಲಿಮರ ಮೇಲೆ ದಾಳಿ ನಡೆಸಿದವು. ಜನರನ್ನು ಗುರಿಯಾಗಿಸಿ ಹಲ್ಲೆ, ಆಸ್ತಿಗಳ ಮೇಲೆ ದಾಳಿ, ದರೋಡೆ, ಹಿಂಸೆ, ಅತ್ಯಾಚಾರ ಮತ್ತು ಸಾಮೂಹಿಕ ಅತ್ಯಾಚಾರ, ಮನೆ-ಆಸ್ತಿಗಳಿಗೆ ಬೆಂಕಿ ಹಚ್ಚುವುದು, ಗುಂಪು ಹತ್ಯೆ ಹಾಗೂ ವೈಯಕ್ತಿಕ ಮತ್ತು ಸಾಮೂಹಿಕ ಹತ್ಯೆಗಳನ್ನು ನಡೆಸಲಾಯಿತು. ಇದರ ಪರಿಣಾಮವಾಗಿ ಮುಸ್ಲಿಂ ಸಮುದಾಯಗಳು, ನೆರೆಹೊರೆಗಳು ಮತ್ತು ಅವರ ಬದುಕಿನ ಸಾಮಾಜಿಕ ಜಾಲವೇ ಛಿದ್ರಗೊಂಡಿತು. ನಂತರ ನಡೆದ ತನಿಖೆಗಳು 2002ರ ಹತ್ಯಾಕಾಂಡವನ್ನು ಪೂರ್ವಯೋಜಿತವಾಗಿ ರೂಪಿಸಲಾಗಿತ್ತು ಎಂಬುದನ್ನು ದೃಢಪಡಿಸಿದವು.

2003ರ ವೇಳೆಗೆ, ಒಡಿಶಾವನ್ನು “ಮುಂದಿನ ಗುಜರಾತ್” ಆಗಿ ಮರುರೂಪಿಸುವ ಉದ್ದೇಶದಿಂದ ಸಂಘ ಪರಿವಾರವು ಜನರನ್ನು ಸಂಘಟಿಸಿತು. 2002ರ ಅಕ್ಟೋಬರ್‌ನಲ್ಲಿ ಬಾಲಸೋರ್ ಜಿಲ್ಲೆಯ ಶಿವಸೇನೆಯ ಘಟಕವೊಂದು ಯುವಕರಿಗೆ ತರಬೇತಿ ನೀಡಲು ಮೊದಲ ಹಿಂದೂ “ಆತ್ಮಹತ್ಯಾ ದಳ”ವನ್ನು ರಚಿಸಿರುವುದಾಗಿ ಘೋಷಿಸಿತ್ತು ಎಂದು ವರದಿಯಾಗಿದೆ. 2009ರ ವೇಳೆಗೆ, ಒಡಿಶಾದಲ್ಲಿ ಆರ್‌ಎಸ್‌ಎಸ್‌ 6,000 ಕೇಂದ್ರಗಳನ್ನು ನಡೆಸುತ್ತಿದ್ದು, ಅದರ ಕಾರ್ಯಕರ್ತರ ಪಡೆ 1.75 ಲಕ್ಷದಷ್ಟಿತ್ತು ಎಂದು ವರದಿಯಾಗಿದೆ.

2006ರ ವೇಳೆಗೆ, ಆರ್‌ಎಸ್‌ಎಸ್‌ ಸೇರಿದಂತೆ ಸಂಘ ಪರಿವಾರದ ಸಂಘಟನೆಗಳು ಒಡಿಶಾದ 30 ಜಿಲ್ಲೆಗಳ ಪೈಕಿ 25 ಜಿಲ್ಲೆಗಳಲ್ಲಿ ಸಕ್ರಿಯವಾಗಿದ್ದವು.

2006ರ ಫೆಬ್ರವರಿಯಲ್ಲಿ, ವಿಎಚ್‌ಪಿ 13 ಅಂಶಗಳ ಘೋಷಣಾಪತ್ರವನ್ನು ಪ್ರಕಟಿಸಿತು. ಮುಂದೆ ಸಂಭವಿಸಿದ ಹಲವು ಬೆಳವಣಿಗೆಗಳ ಮುನ್ಸೂಚನೆಯಂತಿದ್ದ ಈ ಘೋಷಣೆಯಲ್ಲಿ, ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಬೇಕು ಮತ್ತು “ಅಖಂಡ ಭಾರತ”ವನ್ನು ಸುತ್ತುವರಿಯುವಂತೆ ದೇಶದ ಗಡಿಗಳನ್ನು ವಿಸ್ತರಿಸಬೇಕು ಎಂದು ಒತ್ತಾಯಿಸಲಾಗಿತ್ತು. ಗೋಹತ್ಯೆಯನ್ನು ನಿಷೇಧಿಸುವ ರಾಷ್ಟ್ರೀಯ ಕಾನೂನು ಜಾರಿಗೆ ತರಬೇಕು, ಕ್ರೈಸ್ತ ಧರ್ಮಕ್ಕೆ ಮತಾಂತರವನ್ನು ತಡೆಯಬೇಕು, ಬಾಂಗ್ಲಾದೇಶದಿಂದ ಮುಸ್ಲಿಮರ “ನುಸುಳುವಿಕೆ”ಯನ್ನು ತಡೆಯಬೇಕು ಮತ್ತು ಕಾಶ್ಮೀರದಲ್ಲಿನ 370ನೇ ವಿಧಿಯನ್ನು ರದ್ದುಗೊಳಿಸಬೇಕು ಎಂದು ವಿಎಚ್‌ಪಿ ಪ್ರಚಾರ ನಡೆಸಿತು.

2007 ಮತ್ತು 2008ರಲ್ಲಿ ಒಡಿಶಾದ ಕಂಧಮಾಲ್‌ನಲ್ಲಿ ದಲಿತ ಮತ್ತು ಆದಿವಾಸಿ ಕ್ರೈಸ್ತರ ವಿರುದ್ಧ ನಡೆದ ಸಾಮೂಹಿಕ ಹಿಂಸಾಚಾರದಲ್ಲಿ ಮಧ್ಯಮ ವರ್ಗ ಮತ್ತು ಮಧ್ಯಮ ಜಾತಿಗಳಿಗೆ ಸೇರಿದ ಹಿಂದೂಗಳೂ ಭಾಗವಹಿಸಿದ್ದರು. ಅತ್ಯಾಚಾರ, ಅಂಗವಿಕಲಗೊಳಿಸುವಿಕೆ, ದರೋಡೆ ಮತ್ತು ಹತ್ಯೆಯಂತಹ ಹಿಂಸಾತ್ಮಕ ಕೃತ್ಯಗಳು ಇದರಲ್ಲಿ ಸೇರಿದ್ದವು. 2014ರಿಂದ 2024ರ ನಡುವೆ ಭಾರತದಲ್ಲಿ ಕ್ರೈಸ್ತ ಸಮುದಾಯದ ವಿರುದ್ಧದ ಹಿಂಸಾಚಾರದಲ್ಲಿ ಶೇ.500ರಷ್ಟು ಏರಿಕೆಯಾಗಿದೆ ಎಂದು ವರದಿಯಾಗಿದೆ.

2013ರ ವೇಳೆಗೆ, ಭಾರತದ ಬುಡಕಟ್ಟು ಪ್ರದೇಶಗಳ 52,000 ಗ್ರಾಮಗಳಲ್ಲಿ ಏಕಲ್ ವಿದ್ಯಾಲಯಗಳು (ಏಕಶಿಕ್ಷಕರ ಶಾಲೆಗಳು) ಕಾರ್ಯನಿರ್ವಹಿಸುತ್ತಿದ್ದವು ಎಂದು ವರದಿಯಾಗಿದೆ. ಅದೇ ವರ್ಷ ಉತ್ತರ ಪ್ರದೇಶದ ಮುಜಫ್ಫರ್‌ನಗರದಲ್ಲಿ ಸಂಘ ಪರಿವಾರದ ಕಾರ್ಯಕರ್ತರಿಂದ ಸಾಮೂಹಿಕ ಹಿಂಸಾಚಾರ ಭುಗಿಲೆದ್ದಿತು. 3.8 ಕೋಟಿ ಮುಸ್ಲಿಮರನ್ನು ಹೊಂದಿರುವ ಭಾರತದ ಅತಿದೊಡ್ಡ ರಾಜ್ಯವಾದ ಉತ್ತರ ಪ್ರದೇಶದಲ್ಲಿ ನಡೆದ ಈ ಹಿಂಸಾಚಾರದಲ್ಲಿ ಮುಸ್ಲಿಮರನ್ನು ಗುರಿಯಾಗಿಸಲಾಯಿತು. ಹಲವರು ಮೃತಪಟ್ಟರು, ಲೈಂಗಿಕ ಹಿಂಸಾಚಾರಕ್ಕೆ ಒಳಗಾದರು ಮತ್ತು ತಮ್ಮ ಮನೆಗಳಿಂದ ಸ್ಥಳಾಂತರಗೊಳ್ಳಬೇಕಾಯಿತು.

ಮುಂದಕ್ಕೆ: 2014 ಮತ್ತು ನಂತರ

2014ರ ಭರ್ಜರಿ ಗೆಲುವಿನೊಂದಿಗೆ, ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಮತ್ತೊಮ್ಮೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂತು. 2019 ಮತ್ತು 2024ರಲ್ಲಿಯೂ ಅದು ಮತ್ತೆ ಗೆಲುವು ಸಾಧಿಸಿತು. 2014ರ ಚುನಾವಣೆಯ ನಂತರ, 1925ರಿಂದಲೂ ಕಂಡುಬಂದಿರದಷ್ಟು ದೊಡ್ಡ ಪ್ರಮಾಣದಲ್ಲಿ ಆರ್‌ಎಸ್‌ಎಸ್‌ ವಿಸ್ತರಿಸಿತು. 2016ರ ವೇಳೆಗೆ 56,859 ಶಾಖೆಗಳು ಕಾರ್ಯನಿರ್ವಹಿಸುತ್ತಿದ್ದವು ಎಂದು ವರದಿಯಾಗಿದೆ. 2018ರಲ್ಲಿ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್, ಸಂಘವು ಮೂರು ದಿನಗಳಲ್ಲಿ ಸೇನೆಯೊಂದನ್ನು ಸಜ್ಜುಗೊಳಿಸುವ ಸಾಮರ್ಥ್ಯ ಹೊಂದಿದೆ ಎಂದು ಹೇಳಿಕೊಂಡರು.

ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಹಾಗೂ ಪ್ರಮುಖ ಹಿಂದೂ ರಾಷ್ಟ್ರೀಯವಾದಿ ನಾಯಕ ಯೋಗಿ ಆದಿತ್ಯನಾಥ್ 2017ರಲ್ಲಿ ಅಧಿಕಾರ ವಹಿಸಿಕೊಂಡ ನಂತರ, 2013ರ ಮುಜಫ್ಫರ್‌ನಗರ ಹಿಂಸಾಚಾರಕ್ಕೆ ಸಂಬಂಧಿಸಿದ ಆರೋಪಿಗಳ ವಿರುದ್ಧ ದಾಖಲಾಗಿದ್ದ 131 ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯುವ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ಆರಂಭಿಸಿತು. ಈ ಪ್ರಕರಣಗಳ ಆರೋಪಿಗಳು ಹಿಂದೂ ಹಿನ್ನೆಲೆಯವರಾಗಿದ್ದರು.

ಆದಿತ್ಯನಾಥ್ ಮುಸ್ಲಿಮರ ಹಕ್ಕುಗಳನ್ನು ಬದಿಗೊತ್ತುವ ಉದ್ದೇಶದ ಹಲವು ರಾಜಕೀಯ ಹಾಗೂ ಕಾನೂನುಬಾಹಿರ ಅಭಿಯಾನಗಳಿಗೆ ಬೆಂಬಲ ನೀಡಿದ್ದಾರೆ. ಇದರಿಂದ ಆರ್‌ಎಸ್‌ಎಸ್‌ನಂತಹ ಬಲಪಂಥೀಯ ಸಂಘಟನೆಗಳಿಗೆ ಮತ್ತಷ್ಟು ಧೈರ್ಯ ದೊರೆತಿದೆ. 2017ರಲ್ಲಿ ಉತ್ತರ ಪ್ರದೇಶದಲ್ಲಿ ಆರ್‌ಎಸ್‌ಎಸ್‌ 8,000 ಶಾಖೆಗಳನ್ನು ನಡೆಸುತ್ತಿತ್ತು ಎಂದು ವರದಿಯಾಗಿದೆ. 2017–2019ರ ಅವಧಿಯಲ್ಲಿ ರಾಜ್ಯದಲ್ಲಿ ಸಂಘಟಿತ/ರಾಜಕೀಯ ಹಿಂಸಾಚಾರದ 23,612 ಘಟನೆಗಳು ವರದಿಯಾಗಿವೆ.

ಹಿಂದೂ ರಾಷ್ಟ್ರೀಯವಾದಿಗಳ ಪ್ರೇರಣೆಯಿಂದ, 2019ರಿಂದ ಕಾಶ್ಮೀರದಲ್ಲಿ ಕಾನೂನಿನ ಆಳ್ವಿಕೆಯ ಪ್ರಸ್ತುತ ಅಮಾನತು, ಭಾರತದ ಇತರ ನಾಗರಿಕರು ಕಾಶ್ಮೀರದಲ್ಲಿ ಶಾಶ್ವತವಾಗಿ ನೆಲೆಸುವುದಕ್ಕೆ ಇದ್ದ ಕಾನೂನುಬದ್ಧ ನಿರ್ಬಂಧಗಳನ್ನು ತೆಗೆದುಹಾಕಿರುವುದರಿಂದ ಮತ್ತಷ್ಟು ಸಂಕೀರ್ಣಗೊಂಡಿದೆ. ಇದರಿಂದ ಕಾಶ್ಮೀರದ ಜನಸಂಖ್ಯಾ ಸ್ವರೂಪವನ್ನು ಮರುರಚಿಸಿ, ಕಾಶ್ಮೀರಿ ಮುಸ್ಲಿಮರನ್ನು ಅಲ್ಪಸಂಖ್ಯಾತರನ್ನಾಗಿ ಮಾಡುವ ಸಾಧ್ಯತೆ ಇದೆ. ಇದು ಅಸ್ತಿತ್ವವನ್ನೇ ಅಳಿಸುವಿಕೆ ಮತ್ತು ಹಕ್ಕುಗಳಿಂದ ವಂಚಿಸುವಿಕೆಯ ಹೊಸ ವಿಧಾನಗಳ ಉದಯವನ್ನು ಸೂಚಿಸುತ್ತದೆ.

ಪೂರ್ವೋತ್ತರ ಭಾರತದ ಅಸ್ಸಾಂನಲ್ಲಿ, 2019ರಲ್ಲಿ ಬಿಜೆಪಿ ನೇತೃತ್ವದಲ್ಲಿ ಜಾರಿಗೆ ತಂದ ಪೌರತ್ವ ತಿದ್ದುಪಡಿ ಕಾನೂನನ್ನು, ನಾಜಿ ಜರ್ಮನಿಯಲ್ಲಿ 1935ರ ಸೆಪ್ಟೆಂಬರ್‌ನಲ್ಲಿ ಜಾರಿಗೆ ತರಲಾದ ನ್ಯೂರೆಂಬರ್ಗ್ ಕಾನೂನುಗಳಿಗೆ ಹೋಲಿಸಲಾಗಿದೆ. ಈ ಕಾನೂನನ್ನು ಆರ್‌ಎಸ್‌ಎಸ್‌, ಪ್ರಬಲ ಬಹುಸಂಖ್ಯಾತ ಸಮುದಾಯವನ್ನು ಈ ನೆಲದ ಮೂಲನಿವಾಸಿಗಳೆಂದು ಹಾಗೂ ಮುತ್ತಿಗೆಗೆ ಒಳಗಾದ ಸಮುದಾಯವೆಂದು ಮರುಸ್ಥಾಪಿಸುವ ಸಾಧನವಾಗಿ ಸಮರ್ಥಿಸುತ್ತಿದೆ.

ಪೂರ್ವ ಭಾರತದ ಪಶ್ಚಿಮ ಬಂಗಾಳದಲ್ಲಿ, 2026ರಲ್ಲಿ ಹಿಂದೂ ರಾಷ್ಟ್ರೀಯವಾದಿ ಪಕ್ಷವು ಮೊದಲ ಬಾರಿಗೆ ರಾಜ್ಯ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಸಂದರ್ಭದಲ್ಲಿ, ಚುನಾವಣೆಗೆ ಮುನ್ನ ಮತದಾರರ ಪಟ್ಟಿಯಿಂದ 90 ಲಕ್ಷ ಹೆಸರುಗಳನ್ನು ತೆಗೆದುಹಾಕಲಾಯಿತು. ಅವರಲ್ಲಿ ಶೇ.34ಕ್ಕೂ ಹೆಚ್ಚು ಮಂದಿ ಮುಸ್ಲಿಂ ಮೂಲದವರು ಎಂದು ವರದಿಯಾಗಿದೆ. ಅರ್ಹ ಮತದಾರರ ಹೆಸರುಗಳನ್ನು ಅಳಿಸುವುದು ಚುನಾವಣಾ ಪ್ರಕ್ರಿಯೆಯನ್ನೇ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಒಂದು ಹೆಜ್ಜೆಯಾಗಿದೆ. ಈ ಕ್ರಮಗಳಿಗೆ ಆರ್‌ಎಸ್‌ಎಸ್‌ ಮತ್ತು ಇತರ ಹಿಂದೂ ರಾಷ್ಟ್ರೀಯವಾದಿ ಸಂಘಟನೆಗಳು ಬೆಂಬಲ ನೀಡಿದ್ದವು ಎಂದು ವರದಿಯಾಗಿದೆ.

ದಿ ಡೀಪರ್‌ ಸ್ಟೇಟ್

ಪ್ರಸ್ತುತ ಮೋದಿ ನೇತೃತ್ವದ ಸರ್ಕಾರಿ ವ್ಯವಸ್ಥೆಯು ಹಿಂದೂ ಬಲಪಂಥೀಯ ಕಾರ್ಯಕರ್ತರು ಮತ್ತು ಸಶಸ್ತ್ರ ಪಡೆಗಳು, ಸರ್ಕಾರಗಳು ಮತ್ತು ರಾಜ್ಯದ ಭದ್ರತಾ ಪಡೆಗಳ ನಡುವೆ ದೀರ್ಘಕಾಲಿಕ ಸಂಬಂಧಗಳನ್ನು ರೂಪಿಸಿದೆ. ಇದೇ ಅವಧಿಯಲ್ಲಿ, ಭಾರತದ ಹಿಂದೂ ರಾಷ್ಟ್ರೀಯವಾದಿ ನಾಯಕರು ಅಮೆರಿಕ ಮತ್ತು ಬ್ರಿಟನ್‌ನಲ್ಲಿರುವ ವಲಸಿಗ ಭಾರತೀಯ ಸಮುದಾಯಗಳಲ್ಲಿನ ಹಣ ಮತ್ತು ಅಧಿಕಾರದ ಕೇಂದ್ರಗಳೊಂದಿಗೆ ತಮ್ಮ ಹಿತಾಸಕ್ತಿಗೆ ಅನುಕೂಲಕರವಾದ ಸಂಬಂಧಗಳನ್ನು ಸ್ಥಾಪಿಸಿದ್ದಾರೆ.

ಹಿಂದೂತ್ವವು ದೇಶಭಕ್ತಿಯ ರೂಪದಲ್ಲಿ ಪ್ರತಿಷ್ಠಾಪಿಸುವ ಫ್ಯಾಸಿಸಂಮುಖಿ ರಾಷ್ಟ್ರೀಯವಾದವು, ಭಾರತವನ್ನು ಹಿಂದೂ ರಾಷ್ಟ್ರವೆಂಬ ಕಲ್ಪನೆಯನ್ನು ಈಗಾಗಲೇ ಸಾಕಾರಗೊಂಡ ವಾಸ್ತವವೆಂಬಂತೆ ಮುಂದಿಡುತ್ತದೆ. ಆದೇಶಗಳು, ಭಾಷಣಾತ್ಮಕ ಕೃತ್ಯಗಳು, ಆಪ್ತ ಬಂಡವಾಳಶಾಹಿ, ಆರ್ಥಿಕ ಕುಶಲತೆಗಳು, ಸ್ವಾಧೀನವಂಚನೆ ಮತ್ತು ನಿರಂತರ ಹಿಂಸಾಚಾರಗಳು ಸೇರಿಕೊಂಡು ಅಪರಾಧ ವಲಯಗಳು ಮತ್ತು ನಿಯಂತ್ರಿತ ಅರಾಜಕತೆಯನ್ನು ಒಳಗೊಂಡ “ಡೀಪರ್‌ ಸ್ಟೇಟ್”ವೊಂದನ್ನು ನಿರ್ಮಿಸಿವೆ. “ಬುಲ್ಡೋಜರ್ ನ್ಯಾಯ”, “ಲವ್ ಜಿಹಾದ್” ಮತ್ತು ಮತಾಂತರ ವಿರೋಧಿ ಅಭಿಯಾನಗಳು, ಹಿಂದೂಗಳಿಗೆ ವಿಶೇಷಾಧಿಕಾರ ನೀಡುವ ಪೂರ್ವಾಗ್ರಹಪೀಡಿತ ಪೌರತ್ವ ಪ್ರಯೋಗಗಳು, ಇಸ್ಲಾಂವಿರೋಧಿ ದ್ವೇಷದ ಪ್ರಸಾರ ಮತ್ತು ಮುಸ್ಲಿಮರನ್ನು ಜನಾಂಗೀಯ ವರ್ಗೀಕರಣಕ್ಕೆ ಒಳಪಡಿಸುವ ಪ್ರಕ್ರಿಯೆಗಳ ಮೂಲಕ, ರಾಜಕೀಯ ದೇಹವನ್ನು ಧ್ರುವೀಕರಿಸುವ ಹಾಗೂ ಧರ್ಮೀಕರಿಸುವ ದುರುದ್ದೇಶಪೂರಿತ ಕಾರ್ಯಾಚರಣೆಗಳ ಮೂಲಕ ಇದರ ಹೋರಾಟ ನಡೆಯುತ್ತಿದೆ.

ಇಂದು ಭಾರತ ಸರ್ಕಾರ ಮತ್ತು ಹಿಂದೂ ಬಲಪಂಥವೇ ಹಿಂಸಾಚಾರದ ಪ್ರಮುಖ ಕಾರ್ಯಗತಗೊಳಿಸುವ ಶಕ್ತಿಗಳಾಗಿವೆ. ಹಿಂದೂ ರಾಷ್ಟ್ರೀಯವಾದಿಗಳು ತಳಮಟ್ಟದ ಬೆಂಬಲಿಗರನ್ನು ಹಾಗೂ ತಟಸ್ಥವಾಗಿ ಉಳಿದವರನ್ನು ಪ್ರಚೋದಿಸಲು ದ್ವೇಷ ಭಾಷಣ ಮತ್ತು ವಿಷಪೂರಿತ ಪುರುಷತ್ವವನ್ನು (Toxic Masculinity) ಬಳಸುತ್ತಾರೆ. ವಿರೋಧಿಗಳು ಮತ್ತು ದುರ್ಬಲರನ್ನು ಕುಗ್ಗಿಸಲು ಅವರು ಪ್ರತಿಕೂಲ ಸಂದೇಶಗಳನ್ನು ಹರಡುತ್ತಾರೆ; ಅವರನ್ನು ಮಣಿಸಲು ರಾಜಕೀಯ ಹಿಂಸಾಚಾರವನ್ನು ಬಳಸುತ್ತಾರೆ ಮತ್ತು ನರಮೇಧದ ಸ್ವರೂಪದ ದಾಳಿಗಳಿಗೆ ಕರೆ ನೀಡುತ್ತಾರೆ. ಸಾಮಾಜಿಕ ಮಾಧ್ಯಮಗಳ ಮೂಲಕ ನಿರಂತರವಾಗಿ ಹರಡುವ ತಪ್ಪುಮಾಹಿತಿ ಮತ್ತು ರಾಜಿ ಮಾಡಿಕೊಂಡಿರುವ ಮಾಧ್ಯಮ ಪರಿಸರದಲ್ಲಿ ಅದರ ಪ್ರಚಾರವು ಭಯ ಮತ್ತು ದುರುದ್ದೇಶವನ್ನು ಮತ್ತಷ್ಟು ಹೆಚ್ಚಿಸಿ, ದೌರ್ಜನ್ಯ ಮತ್ತು ಅರಾಜಕತೆಗೆ ಇಂಧನ ನೀಡುತ್ತದೆ.

ಬೆದರಿಕೆಗೆ ಒಳಗಾದವರ ಪ್ರತಿರೋಧ ಹಾಗೂ ಸಾಮಾಜಿಕ ಚಳವಳಿಗಳ ಹೋರಾಟ—ಇದರಲ್ಲಿ ಪ್ರಸ್ತುತ ವ್ಯಾಪಕವಾಗಿ ನಡೆಯುತ್ತಿರುವ ವಿದ್ಯಾರ್ಥಿ ಮತ್ತು ಯುವಜನ ನೇತೃತ್ವದ ಭಿನ್ನಮತವೂ ಸೇರಿದೆ—ಸ್ವಾತಂತ್ರ್ಯಹೀನತೆಯ ಪರಿಸ್ಥಿತಿಗಳ ವಿರುದ್ಧ ಮೌನವಾಗಿರುವ ವಿಶಾಲ ಬಹುಸಂಖ್ಯಾತರನ್ನು ಪ್ರತಿಭಟಿಸಲು ಪ್ರೇರೇಪಿಸಬಲ್ಲ ಆಶಾಕಿರಣವಾಗಿದೆ.

ಭಾರತವನ್ನು ಒಗ್ಗೂಡಿಸಿ ಹಿಡಿದಿರುವ ಮಾನವೀಯ ಸಂಬಂಧಗಳು ದುರ್ಬಲವಾಗಿವೆ. ಬಹುತ್ವ, ವೈವಿಧ್ಯತೆ ಮತ್ತು ಪ್ರಜಾಪ್ರಭುತ್ವದ ಪ್ರಯೋಗಗಳು ವೇಗವಾಗಿ ವಿಕೃತಗೊಳ್ಳುತ್ತಿವೆ. ಹಿಂದೂ ಬಲಪಂಥವು ಉದ್ದೇಶಪೂರ್ವಕವಾಗಿ ಧರ್ಮವನ್ನು ರಾಜಕೀಯಗೊಳಿಸುತ್ತಿರುವುದು ಅಲ್ಪಸಂಖ್ಯಾತ ಸಮುದಾಯಗಳನ್ನು ಅಳಿಸಿಹಾಕುವ ಪ್ರಕ್ರಿಯೆಗೆ ನೆರವಾಗುತ್ತಿದೆ. ಈ ಸಮುದಾಯಗಳನ್ನು ಅತಿಯಾದ ಒತ್ತಡ, ಸ್ಥಳಾಂತರ, ಅದೃಶ್ಯಗೊಳಿಸುವಿಕೆ ಮತ್ತು ವ್ಯವಸ್ಥಿತ ಶಕ್ತಿಗಳ ಮೂಲಕ ನೆರಳಿಗೆ ತಳ್ಳಲಾಗುತ್ತಿದ್ದು, ಇವೆಲ್ಲವೂ ಅಂತಿಮ ವಿನಾಶದ ಮುನ್ಸೂಚನೆಯನ್ನು ನೀಡುತ್ತಿವೆ.

ಅಂಗನಾ ಪಿ. ಚಟರ್ಜಿ ಅವರು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ, ಬರ್ಕ್ಲಿಯ ರೇಸ್ ಅಂಡ್ ಜೆಂಡರ್ ಕೇಂದ್ರದ ರಾಜಕೀಯ ಸಂಘರ್ಷ, ಲಿಂಗ ಮತ್ತು ಜನರ ಹಕ್ಕುಗಳ ಯೋಜನೆಯ ಅಧ್ಯಕ್ಷರಾಗಿದ್ದಾರೆ. ಇವರ ಇತ್ತೀಚಿನ ಪ್ರಕಟಣೆಗಳು: BREAKING WORLDS: Religion, Law and Nationalism in Majoritarian India; The Story of Assam; ಮತ್ತು Majoritarian State: How Hindu Nationalism is Changing India 
ಇದು ದಿ ವೈರ್‌ನಲ್ಲಿ ಪ್ರಕಟವಾಗಿರುವ Fascism-Forward: Into the Shadows with Hindu Nationalism ಲೇಖನದ ಕನ್ನಡಾನುವಾದ

You cannot copy content of this page

Exit mobile version