ತನಗೆ ಮೋಸ ಮಾಡಿದ ಹಾಗೂ ತಮ್ಮ ಆಸ್ತಿ ಕಬಳಿಸಿದ ವ್ಯಕ್ತಿಗೆ ತಾನಿರುವ ಬಿಜೆಪಿ ಪಕ್ಷದ ಹಿರಿಯರು ಸಹಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ನಟಿ ಗೌತಮಿ ತಡಿಮಲ್ಲ ಬಿಜೆಪಿ ತೊರೆದಿದ್ದಾರೆ. ಆ ಮೂಲಕ ತನ್ನ 25 ವರ್ಷಗಳ ರಾಜಕೀಯ ಜೀವನಕ್ಕೆ ಸಾಕ್ಷಿಯಾಗಿದ್ದ ಬಿಜೆಪಿ ಪಕ್ಷಕ್ಕೆ ನಟಿ ಗೌತಮಿ ಗುಡ್ ಬೈ ಹೇಳಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ‘X’ನಲ್ಲಿ ಗೌತಮಿ, ʻತಾನು ಕಳೆದ 25 ವರ್ಷಗಳಿಂದ ಬಿಜೆಪಿಯ ಸದಸ್ಯೆಯಾಗಿದ್ದೆ ಮತ್ತು ಪ್ರಾಮಾಣಿಕ ಬದ್ಧತೆಯಿಂದ ಕೆಲಸ ಮಾಡಿದ್ದೇನೆ. ತುಂಬಾ ಭಾರವಾದ ಮನಸ್ಸಿನಿಂದ ಬಿಜೆಪಿ ತೊರೆಯುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
20 ವರ್ಷಗಳ ಹಿಂದೆ ಸಿ ಅಳಗಪ್ಪನ್ ಎಂಬ ವ್ಯಕ್ತಿ ತನ್ನೊಂದಿಗೆ ಸ್ನೇಹ ಬೆಳೆಸಿದ್ದಾಗಿ ಗೌತಮಿ ಹೇಳಿಕೊಂಡಿದ್ದಾರೆ. “ನನ್ನ ಜಮೀನುಗಳ ಮಾರಾಟವನ್ನು ನಾನು ಅವರಿಗೆ ವಹಿಸಿದೆ ಮತ್ತು ಅವರು ನನಗೆ ಅದೇ ರೀತಿ ವಂಚಿಸಿದ್ದಾರೆ ಎಂದು ನಾನು ಇತ್ತೀಚೆಗೆ ಕಂಡುಕೊಂಡೆʼ ಎಂದು ಗೌತಮಿ ಹೇಳಿದರು.
ಸುದೀರ್ಘ ಕಾನೂನು ಪ್ರಕ್ರಿಯೆ ನಡೆಯುತ್ತಿರುವಾಗ, ತನ್ನ ಪಕ್ಷವು ತನಗೆ ಬೆಂಬಲ ನೀಡಲಿಲ್ಲ ಮತ್ತು ಕೆಲವು ಹಿರಿಯ ಸದಸ್ಯರು ಅಳಗಪ್ಪನ್ಗೆ ಸಹಾಯ ಮಾಡುತ್ತಿದ್ದಾರೆ ಎಂದು ತಿಳಿದು ಮನಸ್ಸಿಗೆ ಘಾಸಿಯಾಗಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ.