Home ಬ್ರೇಕಿಂಗ್ ಸುದ್ದಿ ಸದಾ ಧನಾತ್ಮಕ ವಿಷಯಗಳತ್ತ ನಾವು ಗಮನ ಹರಿಸಬೇಕು – ಸಾಹಿತಿ ಬಾನು ಮುಷ್ತಾಕ್

ಸದಾ ಧನಾತ್ಮಕ ವಿಷಯಗಳತ್ತ ನಾವು ಗಮನ ಹರಿಸಬೇಕು – ಸಾಹಿತಿ ಬಾನು ಮುಷ್ತಾಕ್

ಹಾಸನ : ವಿದ್ಯಾರ್ಥಿಗಳು ಸಮಯಕ್ಕೆ ಆದ್ಯತೆ ನೀಡಬೇಕು. ಸಕಾರಾತ್ಮಕ ಚಿಂತನೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಉನ್ನತ ಗುರಿ ತಲುಪಬೇಕು ಎಂದು ಅಂತಾರಾಷ್ಟ್ರೀಯ ಬೂಕರ್‌ ಪ್ರಶಸ್ತಿ ವಿಜೇತ ಸಾಹಿತಿ ಬಾನು ಮುಷ್ತಾಕ್‌ ಅವರು ಸಲಹೆ ನೀಡಿದರು. ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಉನ್ನತಿ ಎಜುಕೇಷನ್‌ ಟ್ರಸ್ಟ್‌ನ ಎ.ಪಿ.ಜೆ. ಪಿಯು ಕಾಲೇಜಿನ ಆಡಳಿತ ಮಂಡಳಿಯಿಂದ ಪಿಯುಸಿ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ನವೋನ್ನತಿ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿ, ಮನುಷ್ಯ ತನ್ನ ಹೃದಯದಲ್ಲಿ ಮಾನವೀಯತೆಗೆ ಜಾಗ ಕೊಡಬೇಕು. ಸತ್ಕಾರ್ಯ, ಇನ್ನೊಬ್ಬರಿಗೆ ಒಳಿತು ಬಯಸುವ ಗುಣ ನಮ್ಮದಾಗಬೇಕೆಂದರೆ ಸದಾ ಧನಾತ್ಮಕ ವಿಷಯಗಳತ್ತ ಗಮನ ಹರಿಸಬೇಕು. ಆಧುನಿಕ ದಿನಗಳಲ್ಲಿ ಮೊಬೈಲ್‌ ಪ್ರಭಾವ ಹೆಚ್ಚಾಗುತ್ತಿದೆ. ಅದರಲ್ಲಿ ಒಳಿತು-ಕೆಡಕು ಎರಡೂ ಇರುತ್ತದೆ. ವಿದ್ಯಾರ್ಥಿಗಳು ತಮ್ಮ ಕಲಿಕೆಗೆ ಬೇಕಾದುದನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಕೆಂದರು.

ನಾವು ಯಾವ ಬೀಜ ಬಿತ್ತುತ್ತೇವೆಯೋ ಅದೇ ಫಲ ಸಿಗುತ್ತದೆ. ಇದನ್ನು ವಿದ್ಯಾರ್ಥಿಗಳು ಗಮನದಲ್ಲಿಟ್ಟುಕೊಳ್ಳಬೇಕು ಎಂದರು. ಸಂಪನ್ಮೂಲ ವ್ಯಕಿ ಡಾ. ರಾಹುಲ್‌ ದೇವರಾಜ್‌ ಅವರು ಮಾತನಾಡಿ, ಮಕ್ಕಳು ದೊಡ್ಡ ಕನಸುಗಳನ್ನು ಕಾಣಬೇಕು. ನಮ್ಮಿಂದ ಆಗುವುದಿಲ್ಲವೆಂಬ ಸಂಕುಚಿತ ಮನೋಭಾವದಿಂದ ಹೊರಬಂದು ಏನನ್ನಾದರೂ ಸಾಧಿಸುತ್ತೇನೆಂಬ ಛಲವಿದ್ದರೆ ಜೀವನದಲ್ಲಿ ಮುಂದೆ ಬರಬಹುದು. ಮಕ್ಕಳು ಪಠ್ಯಪುಸ್ತಕ ಅಧ್ಯಯನ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಈಗಿನಿಂದಲೇ ತಯಾರಿ ಮಾಡಿಕೊಳ್ಳಬೇಕೆಂದರು. ಮಹಾರಾಷ್ಟ್ರದಲ್ಲಿ ಐಫೋನ್‌ ಕೊಡಿಸಿ ಎಂದು ಯುವಕನೊಬ್ಬ ಪರ್ವತದಿಂದ ಬಿದ್ದ ಘಟನೆ ಮನಕಲುಕುತ್ತಿದೆ. ಮಗನನ್ನು ಉಳಿಸಲು ಬಂದ ತಂದೆ ಹಾಗು ತಾಯಿ ಇಬ್ಬರು ಪರ್ವತದಿಂದ ಜಿಗಿದು ಸಾವಿಗೆ ಶರಣಾಗಿದ್ದಾರೆ. ವಿದ್ಯಾರ್ಥಿಗಳು ಸರಳತೆ ಮೈಗೂಡಿಸಿಕೊಳ್ಳಬೇಕು. ಸ್ವಾಮಿ ವಿವೇಕಾನಂದರ ಸಂದೇಶದಂತೆ ಸರಳತೆ ಪಾಲಿಸಬೇಕು. ಜೀವನವನ್ನು ಬ್ರಾಂಡ್‌ ಮಾಡಿಕೊಳ್ಳಬೇಕೆ ಹೊರತು ಮೊಬೈಲ್‌ ಹಾಗು ಧರಿಸುವ ಬಟ್ಟೆಗಳಿಂದ ಅಲ್ಲವೆಂದು ಕಿವಿಮಾತು ಹೇಳಿದರು. 2025ರ ಸಾಲಿನ ಪಿಯುಸಿಯಲ್ಲಿ ರಾಜ್ಯಕ್ಕೆ 3ನೇ ರ್ಯಾಂಕ್‌, ಜಿಲ್ಲೆಗೆ ತೃತೀಯ ಸ್ಥಾನ ಹಾಗು ನೀಟ್‌ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿನಿ ಹೆಚ್‌.ಜಿ. ಅರ್ಪಿತಾ ಅವರಿಗೆ 1 ಲಕ್ಷ ರೂ. ನಗದು ಪುರಸ್ಕಾರವನ್ನು ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಸಿ.ಕೆ.ದೇವರಾಜ್‌,ಸಂಸ್ಥಾಪಕ -ನಿರ್ದೇಶಕ ರಾದ ಡಿ.ಮುರಳಿ ನೀಡಿದರು. ಪ್ರಾಂಶುಪಾಲ ರಾಮಣ್ಣ ಮಾತನಾಡಿದರು. ಕಾಲೇಜು ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ ಹಾಗು ವಿದ್ಯಾರ್ಥಿಗಳು ಭಾಗವಹಿಸಿದ್ದರು.

You cannot copy content of this page

Exit mobile version