“..ಜನ “ಗುಂಪು” ಆದಾಗ, ಆ ಗುಂಪಿಗೆ ಮೆದುಳು ಇರುವುದಿಲ್ಲ. ಅಲ್ಲಿ “ವಿವೇಕ” ಅಗತ್ಯವಿರುತ್ತದೆ. ಈ ವಿವೇಕವನ್ನು ಅಗತ್ಯ ಇರುವವರಿಗೆ ಕಲಿಸಬೇಕಿದೆ..” ಚಿಂತಕರಾದ ರಾಜಾರಾಂ ತಲ್ಲೂರು ಅವರ ಬರಹದಲ್ಲಿ
ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತದ ಸಾವುಗಳಲ್ಲಿ “ಯಾರದ್ದು ತಪ್ಪು” ಎಂಬ ಕರಟ ಹೆರೆಯುವ ಕೆಲಸವನ್ನು ರಾಜಕೀಯವಾಗಿ “ಸ್ಕೋರ್” ಆಗಬೇಕಿರುವ ಹಪಾಹಪಿಯವರೆಲ್ಲ ಮಾಡಿಕೊಳ್ಳಲಿ. ಈಗ ಕೋಟೆ ಬಾಗಿಲು ಸೂರೆ ಹೋದಮೇಲೆ, ಸರ್ಕಾರ ದೊಡ್ಡ ಗಾತ್ರದಲ್ಲಿ ಜನ ಸೇರಿದರೆ SoP ಏನಿರಬೇಕು ಎಂದು ನಿರ್ಧರಿಸುತ್ತೇವೆ ಎಂದು ಹೇಳಿಕೊಂಡಿದೆ. ಅದೂ ಸಂತೋಷವೇ.
ಇದೆಲ್ಲಕ್ಕಿಂತ ಮಿಗಿಲಾಗಿ ಆಗಬೇಕಿರುವ ಕೆಲಸವೊಂದಿದೆ. ಜನರ ಜೀವಗಳು ಅಮೂಲ್ಯ ಎಂಬುದು ಸರ್ಕಾರಕ್ಕೆ ಖಚಿತವಿದ್ದರೆ, ಸ್ವಲ್ಪ ಕಷ್ಟಪಟ್ಟಾದರೂ ಇದನ್ನು ಅವರು ಮಾಡಬೇಕು ಮತ್ತು ಮಾಡುವಂತೆ ಸಾರ್ವಜನಿಕರು ಸರ್ಕಾರದ, ಕಾರ್ಯಾಂಗದ ಮೇಲೆ ಒತ್ತಾಯ ತರಬೇಕು. ಇದು ಯಾಕೆ ಅಗತ್ಯ ಎಂದರೆ, ಬೆಂಗಳೂರಿನಲ್ಲಿ ಹೀಗೆ ಜನಜಂಗುಳಿ ನಿಯಂತ್ರಣ ತಪ್ಪುತ್ತಿರುವುದು ಇದೇ ಮೊದಲಲ್ಲ. ನಾನು ಈಗಾಗಲೇ ಹೇಳಿರುವಂತೆ ಜನ “ಗುಂಪು” ಆದಾಗ, ಆ ಗುಂಪಿಗೆ ಮೆದುಳು ಇರುವುದಿಲ್ಲ. ಅಲ್ಲಿ “ವಿವೇಕ” ಅಗತ್ಯವಿರುತ್ತದೆ. ಈ ವಿವೇಕವನ್ನು ಅಗತ್ಯ ಇರುವವರಿಗೆ ಕಲಿಸಬೇಕಿದೆ.
ಈ ಜನಜಂಗುಳಿಯಲ್ಲಿ “ಬಾರ್ಡರ್ಲೈನ್ ಪರ್ಸನಾಲಿಟಿ”ಗಳಿರುತ್ತವೆ. ಅವರು ಯಾರೆಂದು ಗುರುತಿಸುವುದು ಕಷ್ಟ. ಆದರೆ, ಜನ ಸೇರಿದಾಗ, ಗುಂಪಿನ ವಿವೇಕವನ್ನು ಅವರು ಹೈಜಾಕ್ ಮಾಡಿಬಿಟ್ಟಿರುತ್ತಾರೆ. ಇದನ್ನು ತಪ್ಪಿಸುವುದಕ್ಕೆ ಜನರಿಗೆ ತರಬೇತಿ ಅಗತ್ಯವಿದೆ. ಬೆಂಗಳೂರಿನಂತಹ ಅತಿಸಂದಣಿಯ ಮಹಾನಗರಗಳಲ್ಲಿಯಂತೂ ಇದು ಬಹಳ ಅಗತ್ಯ.
ಸರ್ಕಾರ ಏನು ಮಾಡಬಹುದೆಂದರೆ, ಇಂದು ಲಭ್ಯವಿರುವ ಟೆಕ್ನಾಲಜಿ ಬಳಸಿಕೊಂಡು, ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನೆರೆದಿರುವ ಪ್ರತಿಯೊಬ್ಬರನ್ನೂ ಅವರ ಮೊಬೈಲ್ ಫೋನ್ ನಂಬರ್ ಮೂಲಕ ಗುರುತಿಸುವುದು ಸಾಧ್ಯ ಇದೆ (ಅಲ್ಲಿ ಮೊಬೈಲ್ ಇಲ್ಲದೇ ಬಂದಿರುವವರ ಸಂಖ್ಯೆ ಬಹುತೇಕ ಇಲ್ಲವೇ ಇಲ್ಲ ಎಂಬಷ್ಟು ಕಡಿಮೆ!). GPS, ಟವರ್ ಡಂಪಿಂಗ್, ಇತ್ಯಾದಿ ಹತ್ತು ಹಲವು ತಂತ್ರಜ್ಞಾನಗಳು ಸರ್ಕಾರದ ಕೈಯೆಟುಕಿನಲ್ಲೇ ಲಭ್ಯವಿವೆ. ಇವುಗಳನ್ನು ಬಳಸಿಕೊಂಡು, ಅಲ್ಲಿ ಅಂದು ನೆರೆದಿದ್ದ 2 ಲಕ್ಷ ಮಂದಿಯನ್ನು ಗುರುತಿಸಬೇಕು ಮತ್ತು ಅವರನ್ನು ಎಲ್ಲರನ್ನೂ ಸಂಪರ್ಕಿಸಿ, ಅವರಿಗೆ ಅವರ ಉದ್ಯೋಗದ ಸ್ಥಳದಲ್ಲಿ, ಶಿಕ್ಷಣ ಸಂಸ್ಥೆಗಳಲ್ಲಿ, ಅಥವಾ ಇಂತಹ ಒಂದು ಕನ್ಸಿಡರೆಬಲ್ ಗುಂಪು ಲಭ್ಯವಾಗುವ ಯಾವುದೇ ಜಾಗದಲ್ಲಿ ಅವರಿಗೆ ಗುಂಪು ವರ್ತನೆಗಳ ಬಗ್ಗೆ ಕೌನ್ಸೆಲಿಂಗ್ ನೀಡಬೇಕು, ಸಾಮಾಜಿಕ ಜವಾಬ್ದಾರಿಗಳ ಬಗ್ಗೆ ಅರಿವು ಮೂಡಿಸಬೇಕು ಮತ್ತು ಅಪಾಯ ಸನ್ನಿವೇಶಗಳಲ್ಲಿ ಏನು ಪರಿಹಾರ ಕ್ರಮ ಕೈಗೊಳ್ಳಬೇಕೆಂಬ ಬಗ್ಗೆ ತಿಳಿವಳಿಕೆ ನೀಡಬೇಕು.
ಇನ್ನು ನನ್ನ ಕಣ್ಣಿಗೆ ಬಿದ್ದ ಕೆಲವು ವೀಡಿಯೊಗಳಲ್ಲೇ, ಚಿನ್ನಸ್ವಾಮಿ ಗೇಟನ್ನು ಮುರಿಯಲು ಪ್ರಯತ್ನಿಸುತ್ತಿರುವ, ಹೈಕೋರ್ಟ್ ಕಟ್ಟಡ ಹತ್ತಿರುವ, ಮರ ಹತ್ತಿರುವ, ಎತ್ತರದ ಕಂಪೌಂಡ್ ಗೋಡೆಗಳನ್ನು ಹತ್ತಿರುವ ಇತ್ಯಾದಿ ಅಸಹಜ ಸಾಮಾಜಿಕ ವರ್ತನೆ ತೋರಿರುವ ಹಲವರನ್ನು ಗುರುತಿಸುವಷ್ಟು ಸ್ಪಷ್ಟವಾದ ವೀಡಿಯೊಗಳು ಇವೆ. ಟೆಲಿವಿಷನ್ ಚಾನೆಲ್ಗಳಲ್ಲಿ, ಸಿಸಿಟಿವಿಗಳಲ್ಲಿ ಇವು ಲಭ್ಯವಿರಬಹುದು. ಇವರಲ್ಲಿ “ಬಾರ್ಡರ್ಲೈನ್ ಪರ್ಸನಾಲಿಟಿ”ಗಳನ್ನು ಅಥವಾ ಬೇರೆ ಮಾನಸಿಕ ಸಮಸ್ಯೆಗಳು, ಮದ್ಯ/ಮಾದಕ ವ್ಯಸನಿಗಳನ್ನು ಗುರುತಿಸಿ, ಅವರಿಗೆ ಅಗತ್ಯ ವೈದ್ಯಕೀಯ ನೆರವನ್ನು ಒದಗಿಸಬೇಕು.
ಸರ್ಕಾರ ಇಷ್ಟು ಮಾಡಿದರೆ, ಇನ್ನು ಮುಂದೆಯಾದರೂ ಬೆಂಗಳೂರಿನಲ್ಲಿ ಜನಸಂದಣಿ ಸೇರಿದಾಗ ಸಾಮಾನ್ಯ ನಾಗರಿಕರು ತಾವು ಸ್ವಲ್ಪ ಸುರಕ್ಷಿತ ಭಾವನೆ ತಳೆಯಬಹುದು.