“ದೈವಗಳಿಗೂ ಅವಘಡಗಳಿಗೂ ಸಂಬಂಧವಿಲ್ಲ. ಕರಾವಳಿಯ ಭೂತರಾಧನೆಯಲ್ಲಿ ದೈವಗಳು ಎಂದರೆ ನಮ್ಮನ್ನು ಪೊರೆಯುವ ಸತ್ಯೊಲುಗಳು ಮಾತ್ರ. ಮನುಷ್ಯನ ಮೇಲಿನ ಹಿಂಸೆ ಎನ್ನುವುದು ದೈವಗಳ ಆರಾಧನಾ ಪದ್ದತಿಯಲ್ಲೇ ಇಲ್ಲ..” ಪತ್ರಕರ್ತರಾದ ನವೀನ್ ಸೂರಿಂಜೆಯವರ ಬರಹದಲ್ಲಿ
ಕಾಂತಾರ-2 ಚಿತ್ರೀಕರಣದಲ್ಲಿ ನಡೆಯುವ ಅವಘಡ (ನಡೆದಿಲ್ಲ ಎಂದು ಚಿತ್ರತಂಡ ಹೇಳುತ್ತಿದೆ)ಗಳಿಗೆ ದೈವದ ಮುನಿಸು ಕಾರಣ ಎಂದು ಹಲವು ಮಾಧ್ಯಮಗಳಲ್ಲಿ ಗಂಟೆಗಟ್ಟಲೆ ಕಾರ್ಯಕ್ರಮ ಪ್ರಸಾರವಾಗುತ್ತಿದೆ. ದೈವಗಳಿಗೂ ಅವಘಡಗಳಿಗೂ ಸಂಬಂಧವಿಲ್ಲ. ಕರಾವಳಿಯ ಭೂತರಾಧನೆಯಲ್ಲಿ ದೈವಗಳು ಎಂದರೆ ನಮ್ಮನ್ನು ಪೊರೆಯುವ ಸತ್ಯೊಲುಗಳು ಮಾತ್ರ. ಮನುಷ್ಯನ ಮೇಲಿನ ಹಿಂಸೆ ಎನ್ನುವುದು ದೈವಗಳ ಆರಾಧನಾ ಪದ್ದತಿಯಲ್ಲೇ ಇಲ್ಲ. ಇತಿಹಾಸದಲ್ಲಿ ಹಿಂಸೆಯನ್ನು ಪ್ರತಿಭಟಿಸಿದವರಷ್ಟೇ ಕರಾವಳಿಯಲ್ಲಿ ದೈವ/ಭೂತಗಳಾಗಲು ಸಾಧ್ಯ !
ಕಾಂತಾರ ಚಿತ್ರತಂಡದ ಮೇಲೆ ದೈವಗಳ ಮುನಿಸು, ರಾಕೇಶ್ ಪೂಜಾರಿ ಸಾವಿಗೆ ಕಾಂತಾರ ದೈವ ಶಾಪ ಕಾರಣವೇ ? ಎಂಬಿತ್ಯಾದಿ ತಲೆಬರಹದಲ್ಲಿ ಸುದ್ದಿವಾಹಿನಿಗಳು ಸುದ್ದಿ ಪ್ರಸಾರ ಮಾಡುತ್ತಿವೆ. ಕಾಂತಾರ ಚಿತ್ರೀಕರಣದಲ್ಲೇನಾದರೂ ಅವಘಡಗಳು ನಡೆದಿದ್ದರೆ ಅದಕ್ಕೆ ದೈವಗಳು ಕಾರಣ ಎಂದು ಆರೋಪಿಸುವುದೇ ದೈವಗಳಿಗೆ ಮಾಡುವ ದೊಡ್ಡ ಅಪಚಾರ ! ಕಾಂತಾರ ಸಿನೇಮಾದಲ್ಲಿ ಹೊಟ್ಟೆಪಾಡಿಗಾಗಿ ದುಡಿಯುವ ಕಾರ್ಮಿಕರನ್ನು ದೈವ ಯಾಕೆ ಆಪೋಷಣ ತೆಗೆದುಕೊಳ್ಳುತ್ತದೆ ? ದೈವಕ್ಕೆ ಅಪಚಾರ ಬಿಡಿ, ಹಸಿವಿಗಾಗಿ ದೈವದ ಹುಂಡಿಯನ್ನೇ ಕಳ್ಳತನ ಮಾಡಿದರೂ ದೈವ ಶಿಕ್ಷಿಸುವುದಿಲ್ಲ ಎನ್ನುವುದಕ್ಕೆ ಉದಾಹರಣೆಗಳಿವೆ.
ಭೂತ ಸಾನ/ದೈವಸ್ಥಾನದ ಕಾಣಿಕೆ ಹುಂಡಿಯನ್ನೇ ಕಳ್ಳತನ ಮಾಡಿರುವ ಘಟನೆಗಳು ಕರಾವಳಿಯಲ್ಲಿ ಹಲವು ಬಾರಿ ನಡೆದಿದ್ದಿದೆ. ಆ ವರ್ಷ ನಡೆಯುವ ಕೋಲ/ನೇಮದಲ್ಲಿ ದೈವದ ಬಳಿ ದೈವಸ್ಥಾನದ ಮುಖ್ಯಸ್ಥರು ದೂರು ನೀಡುತ್ತಾರೆ. ‘ಇದು ಕಾರಣಿಕದ ನಿನ್ನ ನಡೆಯ ದೈವಸ್ಥಾನ. ಆದರೆ ನಿನ್ನ ದೈವಸ್ಥಾನದಲ್ಲೇ ಕಳ್ಳತನವಾಗಿದೆ. ನಾವು ಪೊಲೀಸರಿಗೆ ದೂರು ನೀಡಿದ್ದೇವೆ. ಆದರೆ ಕಳ್ಳ ಪತ್ತೆಯಾಗಿಲ್ಲ. ನೀನು ಕಳ್ಳನನ್ನು ಪತ್ತೆ ಹಚ್ಚಿ ಶಿಕ್ಷಿಸಬೇಕು’ ಎಂದು ಪ್ರಾರ್ಥಿಸುತ್ತಾರೆ. ದೈವವು ಅಷ್ಟೇ ಶಾಂತತೆಯಿಂದ ‘ನನ್ನ ದೈವಸ್ಥಾನದ ಹುಂಡಿಯನ್ನು ಕಳ್ಳತನ ಮಾಡಿದವನು ಹಸಿವಿನ ಕಾರಣಕ್ಕಾಗಿ ಮಾಡಿದ್ದಾನೋ, ನನ್ನ ಕಾರಣಿಕವನ್ನು ಪರೀಕ್ಷೆ ಮಾಡಲು ಮಾಡಿದ್ದಾನೋ ಎಂದು ನಾನು ಮಾಯದಲ್ಲಿ ತೀರ್ಮಾನಿಸಿ ಒಂದು ನಿರ್ಧಾರಕ್ಕೆ ಬರುತ್ತೇನೆ’ ಎಂದು ಹೇಳಿದ ಘಟನೆ ಹಲವು ಬಾರಿ ನಡೆದಿರುವುದನ್ನು ಹಿರಿಯರು ಹೇಳುತ್ತಾರೆ. ತನ್ನದೇ ದೈವಸ್ಥಾನದ ಹುಂಡಿ ಕಳವಾದಾಗಲೂ ಕಳ್ಳನನ್ನು ಶಪಿಸಿದೇ, ಬೆದರಿಸದೇ, ‘ಕಳ್ಳತನಕ್ಕೆ ಹಸಿವಿನ ಕಾರಣ ಇರಬಹುದೇ’ ಎಂದು ಕರಾವಳಿಯ ದೈವಗಳು ಯೋಚಿಸುತ್ತದೆ. ಹಾಗಾಗಿ ಯಾವುದಾದರೂ ಹರಕೆ ಬಾಕಿ ಇಟ್ಟರೂ ದೈವಗಳು ಶಾಪ ಕೊಡುವುದಿದೆ ಎಂದು ಯಾರಾದರೂ ಹೇಳಿದರೂ ನಂಬಬೇಕಿಲ್ಲ.
ಸಿನೇಮಾದಲ್ಲಿ ದೈವಗಳನ್ನು ತೋರಿಸುವುದು ದೈವಕ್ಕೆ ಮಾಡುವ ಅಪಚಾರವಲ್ಲ. ಆದರೆ ದೈವ ಸಂಬಂಧಿತ ಸಿನೇಮಾದ ಕತೆಯಲ್ಲಿ ಹಿಂದುಳಿದ, ದಲಿತ ಸಮುದಾಯಗಳನ್ನು ಕೀಳಂದಾಜಿಸುವ ರೀತಿಯಲ್ಲಿ ಚಿತ್ರಿಸುವುದು ದೈವಗಳಿಗೆ ಮಾಡುವ ನಿಜವಾದ ಅಪಚಾರವಾಗುತ್ತದೆ. ಯಾಕೆಂದರೆ ಮೇಲ್ವರ್ಗಗಳ ಹಿಂಸೆ, ದೌರ್ಜನ್ಯವನ್ನು ಪ್ರತಿಭಟಿಸಿದ ದಲಿತ-ಹಿಂದುಳಿದ ವರ್ಗದ ಶ್ರಮಿಕರೇ ಕೊಲೆಯಾಗಿ ದೈವಗಳೆಂದು ಆರಾಧಿಸಲ್ಪಡುತ್ತಿದ್ದಾರೆ. ಹಾಗಾಗಿ ಕತೆಯಲ್ಲಿ ದಲಿತ-ಹಿಂದುಳಿದ ವರ್ಗಗಳ ಸೂಕ್ಷ್ಮತೆಯನ್ನು ಮರೆಯುವುದು ದೈವಗಳಿಗೆ ಮಾಡುವ ಅಪಮಾನವಾಗುತ್ತದೆ.
ಕರಾವಳಿಯಲ್ಲಿ ದೈವಗಳನ್ನು ಅತಿ ಹೆಚ್ಚು ಅವಮಾನಿಸುವುದು ಮಧ್ಯಸ್ಥರು ! ಮಧು ಹೇಳುವ ಮಧ್ಯಸ್ಥರು ಕರಾವಳಿಯ ದೈವರಾಧನೆ ಪದ್ದತಿಯಲ್ಲಿ ಅನಗತ್ಯವಾಗಿ ವೈದಿಕ ದೇವರುಗಳನ್ನು ತುರುಕುತ್ತಿದ್ದಾರೆ. ‘ಪರಶುರಾಮ ಸೃಷ್ಟಿಯ ಪಂಚವರ್ಣದ ಮಣ್ಣು ಇದು’ ಎನ್ನುವುದು, ಶಿವನ ಗಣಗಳೆಂದೋ, ಬೆಮ್ಮೆರನ್ನು ಬ್ರಹ್ಮದೇವರೆಂದೂ, ಪುರಾಣದ ಕಲ್ಪನೆಯ ಕತೆಗಳಿಗೆ ಜನಪದರ ಇತಿಹಾಸವಾಗಿ, ನಮ್ಮ ಪೂರ್ವಜರೊಂದಿಗೆ ಬಾಳಿ ಬದುಕಿದ್ದ ದೈವಗಳನ್ನು ಜೋಡಿಸುವುದು ದೈವಗಳಿಗೆ ಮಾಡುವ ನಿಜವಾದ ಅವಮಾನ. ಕುಟುಂಬವನ್ನು ಒಟ್ಟು ಮಾಡುವ ಸಂದರ್ಭದಲ್ಲಿ ‘ಧರ್ಮಸ್ಥಳದ ಹೆಗ್ಗಡೆಯವರನ್ನು ಭೇಟಿ ಮಾಡಿ’ ಎಂದು ದೈವದ ಸಮ್ಮುಖದಲ್ಲೇ ಕುಟುಂಬಕ್ಕೆ ಸೂಚಿಸುವುದು ದೈವಕ್ಕೆ ಮಾಡುವ ಅವಮಾನವಲ್ಲದೇ ಇನ್ನೇನು ? ದೈವಕ್ಕಿಂತಲೂ ಹೆಗ್ಗಡೆ ದೊಡ್ಡದಾದರೆ, ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕೋಲ/ನೇಮ/ದರ್ಶನ ಮಾಡಿಸುವುದು ಯಾತಕ್ಕೆ ? ಎಂಬ ಪ್ರಶ್ನೆಯನ್ನು ಮಧ್ಯಸ್ಥನಿಗೋ, ದೈವಪಾತ್ರಿಗೋ ಕೇಳಬೇಕು. ಇನ್ನುಳಿದಂತೆ ದೈವಾರಾಧನೆಯನ್ನು ‘ಲಗಾಡಿ’ ತೆಗೆದಿದ್ದು, ದೈವಾರಾಧನೆಯಲ್ಲಿ ನುಸುಳಿರುವ ವೈದಿಕತೆ ಮತ್ತು ಕೋಮುವಾದ ! ದೈವಾರಾಧನೆ ಪರಂಪರೆಯನ್ನೇ ನಾಶ ಮಾಡುವ ಇಂತಹ ಅಪಾಯಕಾರಿಗಳನ್ನೇ ಶಿಕ್ಷಿಸದ ದೈವ ಬಡಪಾಯಿ ಕಲಾವಿದರನ್ನು ಶಿಕ್ಷಿಸುತ್ತಾ ?
ಮಾನವ ಹೆಸರಿನ ದೈವ/ಭೂತಗಳೆಲ್ಲವೂ ಒಂದು ಕಾಲದ ತುಳುನಾಡಿನ ಕ್ರಾಂತಿಕಾರಿಗಳು. ಸಮಾಜದ ಸಮಾನತೆ, ಸೌಹಾರ್ದತೆಗಾಗಿ ದುಡಿದು ಮಡಿದವರು ದೈವಗಳಾಗಿ ಕರಾವಳಿಯಲ್ಲಿ ಆರಾಧಿಸಲ್ಪಡುತ್ತಿದ್ದಾರೆ. ತಳ ಸಮುದಾಯದ ನಾಯಕರು ಯಾವ್ಯಾವುದೋ ಕಾಲದಲ್ಲಿ ಅಸ್ಪೃಶ್ಯತೆ, ಅಸಮಾನತೆ, ಯಜಮಾನಿಕೆಯನ್ನು ವಿರೋಧಿಸಿ ಕೊಲೆ/ಸಾವಿಗೀಡಾದ ಬಳಿಕ ಜನರು ಆತ/ಆಕೆಯನ್ನು ದೈವವೆಂದು ಆರಾಧಿಸಿರಬಹುದು. ಕೊರಗಜ್ಜ, ಕೋಟಿಚೆನ್ನಯ, ಕಲ್ಕುಡ, ಕಲ್ಲುರ್ಟಿ, ಸತ್ಯಪ್ಪೆ, ಅಣ್ಣಪ್ಪ, ಕೋಡ್ದಬ್ಬು, ತನ್ನಿಮಾನಿಗ, ಕಾನದ-ಕಟದರು, ಕೊರತಿ ಮುಂತಾದ ನೂರಾರು ದೈವಗಳು ಒಂದು ಕಾಲದಲ್ಲಿ ಮನುಷ್ಯರಾಗಿದ್ದ ಕ್ರಾಂತಿಕಾರಿ ಹೋರಾಟಗಾರರು, ಮೃತರಾದ ಬಳಿಕ ದೈವವಾದರು. ಹಾಗಾಗಿಯೇ ಭೂತಾರಾಧನೆಯನ್ನು ತನ್ನ ಎದುರಾಳಿಯನ್ನು ಹೆದರಿಸುವ, ಹಿಂಸಿಸುವ ಕ್ರಿಯೆಗೆ ಬಳಸಲಾಗುವುದಿಲ್ಲ. ಶತ್ರುವನ್ನು ಮಣಿಸಲು ಅಥವಾ ಮುಗಿಸಲು ವೈದಿಕರು ಶತ್ರುಸಂಹಾರ ಯಾಗ, ಹೋಮಗಳನ್ನು ಮಾಡುವಂತೆಯೋ, ಮಾಟ ಮಂತ್ರಗಳನ್ನು ಮಾಡುವಂತೆಯೋ ಭೂತಾರಾಧನೆಯಲ್ಲಿ ನಿರೀಕ್ಷಿಸುವಂತಿಲ್ಲ. ಭೂತಾರಾಧನೆಯೆಂದರೆ ಬುದ್ಧನಂತೆಯೋ, ತಾಯಿಯಂತೆಯೋ ಪ್ರೀತಿಯಿಂದ ನಂಬಿದ ಸಂಸಾರವನ್ನು ಕೈಹಿಡಿದು ಮುನ್ನಡೆಸುವ ದೈವಗಳಷ್ಟೆ… ದೈವಗಳ ಲೋಕದಲ್ಲಿ ಮನುಷ್ಯನ ಮೇಲಿನ ಹಿಂಸೆ, ಅಸಮಾನತೆ, ಜಾತಿ, ಧರ್ಮಗಳ ಬೇದಭಾವಗಳಿಗೆ ಸ್ಥಳವಿಲ್ಲ.